Advertisement

MLC Election: ಮೇಲ್ಮನೆಯಲ್ಲಿ ಏಳು ಸ್ಥಾನಗಳು ಕಾಂಗ್ರೆಸ್‌ನಲ್ಲಿ 70 ಆಕಾಂಕ್ಷಿಗಳು

11:45 PM May 25, 2024 | Team Udayavani |

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಜೂ. 13ರಂದು ನಡೆಯಲಿ ರುವ ಚುನಾವಣೆಗೆ ಸೋಮವಾರ ಅಧಿಸೂಚನೆ ಹೊರ ಬೀಳಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

Advertisement

ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್‌ಗೆ ವಿಧಾನಸಭೆಯಲ್ಲಿ ಹೊಂದಿರುವ ಸಂಖ್ಯಾಬಲದ (137) ಆಧಾರದ ಮೇಲೆ 11ರಲ್ಲಿ 7 ಸ್ಥಾನಗಳು ಸುಲಭ ವಾಗಿ ಲಭ್ಯವಾಗಲಿವೆ. ಹೀಗಾಗಿ ವಿಧಾನ ಪರಿಷತ್ತಿನ ಸ್ಥಾನದ ಮೇಲೆ ಹಾಲಿ ಸಚಿವ ಎನ್‌.ಎಸ್‌.ಬೋಸರಾಜ್‌ ಹಾಗೂ ಹಾಲಿ ಸದಸ್ಯರಾಗಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಸಹಿತ 70 ಮಂದಿ ಆಕಾಂಕ್ಷಿಗಳಿದ್ದಾರೆ. ಈ ಸಂಬಂಧ ಕೆಪಿಸಿಸಿ ಸಂಭನೀಯರ ಪಟ್ಟಿ ಸಿದ್ಧಪಡಿಸಿ ಈಗಾಗಲೇ ಎಐಸಿಸಿಗೆ ಕಳುಹಿಸಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ದಂಡು ಹೊಸದಿಲ್ಲಿಯಲ್ಲಿ ಬೀಡು ಬಿಟ್ಟಿದ್ದು, ಲಾಬಿ ಆರಂಭವಾಗಿದೆ.

ಸಂಭವನೀಯರ ಪಟ್ಟಿಯಲ್ಲಿ ಮಾಜಿ ಸಚಿವರು, ವಿಧಾನಸಭೆ, ವಿಧಾನ ಪರಿಷತ್‌, ರಾಜ್ಯಸಭೆಯ ಮಾಜಿ ಸದಸ್ಯರು, ಕೆಪಿಸಿಸಿ ಕಾರ್ಯಾಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು, ಮಾಜಿ ಪದಾಧಿಕಾರಿಗಳು, 20ಕ್ಕೂ ಹೆಚ್ಚು ಮಂದಿ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ, ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ, ಕೆಪಿಸಿಸಿ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು, ಪಕ್ಷದ ವಕ್ತಾರರು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿಗಳು ಇದ್ದಾರೆ. ಹಿರಿತನ, ಅನುಭವ, ಜಿಲ್ಲೆ, ಜಾತಿ, ಪಕ್ಷ ನಿಷ್ಠೆ ಜತೆಗೆ ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು ಆಕಾಂಕ್ಷಿಗಳಾಗಿದ್ದಾರೆ.

ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜ್‌ ಮತ್ತೆ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ| ಯತೀಂದ್ರ ಅವರ ಹೆಸರು ಮುಂಚೂಣಿಗೆ ಬಂದಿದ್ದು, ಒಂದು ವೇಳೆ ಅವರಿಗೂ ಅವಕಾಶ ದೊರೆತರೆ ಅಲ್ಲಿಗೆ ಹಿಂದುಳಿದ ವರ್ಗದಿಂದ ಇಬ್ಬರಿಗೆ ಅವಕಾಶ ನೀಡಿದಂತಾಗುತ್ತದೆ.

ಇನ್ನುಳಿದ 7 ಸ್ಥಾನಗಳಿಗೆ ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು, ಪರಿಶಿಷ್ಟ ಜಾತಿಯಲ್ಲಿ ಎಡಗೈ, ಬಲಗೈ, ಲಂಬಾಣಿ, ಕೊರಮ-ಕೊರಚ, ಅಲ್ಪಸಂಖ್ಯಾಕರ ಸಹಿತ ಇದುವರೆಗೆ ಯಾವುದೇ ರೀತಿಯ ರಾಜಕೀಯ ಪ್ರಾತಿನಿಧ್ಯ ದೊರೆಯದ ಸಣ್ಣಪುಟ್ಟ ಸಮಾಜಗಳಿಂದ ಹತ್ತಾರು ಮಂದಿ ಆಕಾಂಕ್ಷಿಗಳಿದ್ದಾರೆ. ಹೀಗಾಗಿ ವಿಧಾನ ಪರಿಷತ್ತಿನ ಅಭ್ಯರ್ಥಿಗಳ ಆಯ್ಕೆ ಈಗ ಕಾಂಗ್ರೆಸ್‌ ಹೈಕಮಾಂಡ್‌ಗೆ ಕಬ್ಬಿಣದ ಕಡಲೆಯಾಗಿದೆ.

Advertisement

ನಾಮಪತ್ರ ಸಲ್ಲಿಕೆಗೆ ಜೂ. 3 ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಹೊಸದಿಲ್ಲಿಯಲ್ಲಿ ಮೇ 28ಕ್ಕೆ ಸಭೆ ನಿಗದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಅಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮೇ 27 ಇಲ್ಲವೇ 28ರಂದು ಹೊಸದಿಲ್ಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುಜೇìವಾಲ ಮೇ 26ರಂದು ಬೆಂಗಳೂರಿಗೆ ಆಗಮಿಸಿ ಈ ಸಂಬಂಧ ಸಭೆ ನಡೆಸುವ ನಿರೀಕ್ಷೆ ಇತ್ತು. ಆದರೆ ಈಗ ಹೊಸದಿಲ್ಲಿಯಲ್ಲೇ ಸಭೆ ನಿಗದಿ ಆಗಿರುವುದರಿಂದ ಆಕಾಂಕ್ಷಿಗಳು ಹೊಸದಿಲ್ಲಿಯತ್ತ ಪ್ರಯಾಣ ಬೆಳೆಸಿದ್ದಾರೆ.

ರಾಹುಲ್‌ ಸೂಚನೆ ಏನು?:

ಮೇಲ್ಮನೆ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಅವಕಾಶ ಕೊಡಬೇಕು, ಈಗಾಗಲೇ ಅವಕಾಶ ದೊರೆತವರಿಗೆ ಮತ್ತೂಮ್ಮೆ ಅವಕಾಶ ಕೊಡುವ ಬದಲಿಗೆ ಹೊಸಬರಿಗೆ ಅವಕಾಶ ಕಲ್ಪಿಸಬೇಕು ಹಾಗೂ ವಿಧಾನ ಸಭೆ ಅಥವಾ ಮೇಲ್ಮನೆಯಲ್ಲಿ ಪ್ರಾತಿನಿಧ್ಯವೇ ಇಲ್ಲದ ಸಮಾಜಗಳಿಗೆ ಅವಕಾಶ ಕೊಡಬೇಕೆಂದು ರಾಹುಲ್‌ ಗಾಂಧಿ ಸೂಚಿಸಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಚರ್ಚೆ ಆಗುತ್ತಿರುವುದರಿಂದ ಈ ಬಾರಿ ಹೊಸ ಮುಖಗಳಿಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಹೆಚ್ಚಿದೆ.

ಜತೆಗೆ ಅಧಿಕಾರ ಅನುಭವಿಸುತ್ತಿರುವ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರಿಗೂ ಅವಕಾಶ ಕೊಡಬಾರದೆಂಬ ಕೂಗು ಕೂಡ ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಮೇಲ್ಮನೆ ಚುನಾವಣೆ ಬಂದಾಗಲೂ ಅವರ ಹೆಸರುಗಳು ಬರುತ್ತವೆ, ನಿಗಮ, ಮಂಡಳಿಗಳ ನೇಮಕಾತಿಯಲ್ಲಿಯೂ ಅವರೇ ಇರುತ್ತಾರೆ. ಹೀಗಾದರೆ ಹೊಸಬರಿಗೆ ಅವಕಾಶ ಸಿಗುವುದಿಲ್ಲ. ಈ ಸಲ ಅದಕ್ಕೆ ಅವಕಾಶ ಕೊಡಬಾರದೆಂಬ ಒತ್ತಡವೂ ಇದೆ.

ಯಾರ್ಯಾರು ಆಕಾಂಕ್ಷಿಗಳು?:

 ಹಾಲಿ ಸದಸ್ಯರು:

ಎನ್‌.ಎಸ್‌. ಬೋಸರಾಜು (ಸಣ್ಣ ನೀರಾವರಿ ಸಚಿವರು)

ಕೆ. ಗೋವಿಂದ ರಾಜು- ಸಿಎಂ ರಾಜಕೀಯ ಕಾರ್ಯದರ್ಶಿ

ಮಾಜಿ ಸಚಿವರು: ಡಾ| ಬಿ.ಎಲ್‌. ಶಂಕರ್‌, ಎಚ್‌.ಎಂ. ರೇವಣ್ಣ, ಆರ್‌. ಶಂಕರ್‌, ರಾಣಿ ಸತೀಶ್‌, ಕೆ. ಶಿವಮೂರ್ತಿ

ಮಾಜಿ ಶಾಸಕರು: ಡಾ| ಯತೀಂದ್ರ, ಡಿ.ಆರ್‌. ಪಾಟೀಲ್‌, ನಂಜಯ್ಯಮಠ

ಮಾಜಿ ಸದಸ್ಯರು: ವಿ.ಆರ್‌. ಸುದರ್ಶನ್‌, ಆರ್‌.ವಿ. ವೆಂಕಟೇಶ್‌, ಎಂ.ಸಿ. ವೇಣುಗೋಪಾಲ್‌, ಪಿ.ಆರ್‌. ರಮೇಶ್‌, ವಿ.ಎಸ್‌. ಉಗ್ರಪ್ಪ, ಜಲಜಾ ನಾಯಕ್‌, ಮಲ್ಲಾಜಮ್ಮ, ಎಂ. ನಾರಾಯಣಸ್ವಾಮಿ, ಐವನ್‌ ಡಿ’ಸೋಜಾ, ಧರ್ಮಸೇನ.

ಕೆಪಿಸಿಸಿ ಪದಾಧಿಕಾರಿಗಳು:  ವಸಂತಕುಮಾರ್‌, ಡಾ| ಎಲ್‌. ಹನುಮಂತಯ್ಯ, ವಿನಯ್‌ ಕಾರ್ತಿಕ್‌, ವಿಜಯ್‌ ಮುಳುಗುಂದ್‌, ರಘುನಂದನ್‌ ರಾಮಣ್ಣ, ಕೆ.ಎಂ. ಮಂಜುನಾಥ ಗೌಡ, ಮದನ್‌ ಪಟೇಲ್‌, ಡಾ| ಸಿ.ಎಸ್‌. ದ್ವಾರಕನಾಥ್‌, ಎಸ್‌.ಎ. ಹುಸೇನ್‌, ರಾಮಚಂದ್ರಪ್ಪ, ಜಿ.ಎ. ಬಾವಾ, ಎಂ. ವೆಂಕಟೇಶ್‌, ಡಾ| ಆನಂದ್‌ಕುಮಾರ್‌, ಎ.ಎಸ್‌. ಜಯಸಿಂಹ, ಭವ್ಯಾ ನರಸಿಂಹಮೂರ್ತಿ, ಕುಸುಮಾ ಹನುಮಂತರಾಯಪ್ಪ, ಐಶ್ವರ್ಯಾ ಮಹದೇವ್‌, ವೀಣಾ ಕಾಶಪ್ಪನವರ್‌, ಡಾ| ಆರತಿ ಕೃಷ್ಣ, ಬಿ.ವಿ. ಶ್ರೀನಿವಾಸ್‌, ಪುಷ್ಪಾ ಅಮರ್‌ನಾಥ್‌.

ಬಸವನಗೌಡ ಬಾದರ್ಲಿ, ಸದಾನಂದ ದಂಗಣ್ಣನವರ್‌, ಮುರಳೀಧರ ಹಾಲಪ್ಪ, ಓಬೇದುಲ್ಲಾ ಷರೀಪ್‌, ಸಯ್ಯದ್‌ ಅಹ್ಮದ್‌, ಷಫಿವುಲ್ಲಾ, ಮಂಜುಳ ನಾಯ್ಡು, ರತ್ನಪ್ರಭಾ, ಕಾಂತನಾಯಕ್‌.

ಪಕ್ಷಕ್ಕಾಗಿ ಕೆಲಸ  ಮಾಡಿದ ಬಹಳಷ್ಟು

ಜನರಿದ್ದಾರೆ. ಅವರಿಗೆಲ್ಲ ಅವಕಾಶ ಸಿಗಬೇಕು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮೈಸೂರು, ಮಂಗಳೂರು ಹೀಗೆ ಪ್ರಾಂತ ವಾರು ಅವಕಾಶ ಕೊಡಬೇಕು. ಪರಿಷತ್‌ ಸದಸ್ಯತ್ವ ಬರೀ ಬೆಂಗಳೂರಿಗೆ ಸೀಮಿತ ಆಗಬಾರದು.ಸತೀಶ್‌ ಜಾರಕಿಹೊಳಿ, ಲೋಕೋಪಯೋಗಿ ಸಚಿವ

ಚುನಾವಣೆ ಸಂಬಂಧ ನನ್ನನ್ನೂ ಹಲವರು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬಳಿ ಮಾತನಾಡುತ್ತೇನೆ. ಏಳು ಸ್ಥಾನಕ್ಕೆ 70 ಆಕಾಂಕ್ಷಿಗಳಿದ್ದಾರೆ. ನಮ್ಮ ಪಕ್ಷವೇ ಆಡಳಿತದಲ್ಲಿ ಇರುವುದರಿಂದ ಎಲ್ಲರಿಗೂ ಆಕಾಂಕ್ಷೆ ಸಹಜ. ಆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ.ಡಾ| ಪರಮೇಶ್ವರ್‌, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next