Advertisement

ಇಂದು ರಾಮನಗರಕ್ಕೆ ಶಾಸಕ ಗಣೇಶ್‌

10:23 AM Feb 21, 2019 | Team Udayavani |

ರಾಮನಗರ: ತಾಲೂಕಿನ ಬಿಡದಿ ಬಳಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ಜ.19ರ ರಾತ್ರಿ ವಿಜಯನಗರ ಶಾಸಕ ಆನಂದ್‌ಸಿಂಗ್‌ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್‌ ಅವರನ್ನು ಜಿಲ್ಲಾ ಪೊಲೀಸರು ಗುಜರಾತ್‌ನ ಸೋಮನಾಥದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಗೆ ಬಂಧಿಸಿದ್ದು, ರಾತ್ರಿ ರಾಮನಗರಕ್ಕೆ ಬರುವ ಸಾಧ್ಯತೆ ಎಂದು ಎಸ್ಪಿ ಬಿ.ರಮೇಶ್‌ ತಿಳಿಸಿದ್ದಾರೆ.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪೊಲೀಸರ ತಂಡಕ್ಕೆ ಸಿಕ್ಕಿ ಬಿದ್ದಿರುವ ಆರೋಪಿ ಶಾಸಕ ಗಣೇಶ್‌ರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರನ್ನು ಸಿವಿಲ್‌ ಏವಿಯೇಷನ್‌ ಅನುಮತಿ ಸಿಕ್ಕರೆ ವಿಮಾನದಲ್ಲಿ ಅಥವಾ ರಸ್ತೆ ಮೂಲಕವೇ ಕರೆತರುವ ಸಾಧ್ಯತೆಗಳಿವೆ. ಗಣೇಶ್‌ ಅವರನ್ನು 24 ಗಂಟೆಗೂ ಮುನ್ನ ರಾಮನಗರದ ಸಿಜಿಎಂ ನ್ಯಾಯಾಲಯದಲ್ಲಿ ಹಾಜರು ಪಡಿಸಬೇಕಾಗಿದೆ. ಕರೆತರುವಲ್ಲಿ ವಿಳಂಬವಾದರೆ ಅಲ್ಲಿನ ಸ್ಥಳೀಯ ನ್ಯಾಯಾಧೀಶರ ಮುಂದೆ ಅವರನ್ನು ಹಾಜರು ಪಡಿಸಿ ಕರೆತರಲಾಗುತ್ತದೆ ಎಂದು ಎಸ್ಪಿ ಪ್ರತಿಕ್ರಿಯಿಸಿದ ಅವರು, ಬಂಧನದ ಕಾರ್ಯ ವಿಧಾನಗಳನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದರು.

ಪೊಲೀಸರಿಗೆ ಗೊತ್ತಾಗಿದ್ದು ಯಾವಾಗ?: ಮೂರು ದಿನಗಳ ಹಿಂದೆ ಆರೋಪಿ ಶಾಸಕ ಗಣೇಶ್‌ ಅವರು ಗುಜುರಾತ್‌ನ ಸೋಮನಾಥದಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದರಿಂದ 2 ಸಿಪಿಐಗಳು 2 ಎಸ್‌ಐ ಹಾಗೂ 12 ಮಂದಿ ಸಿಬ್ಬಂದಿ ಗುಜರಾತ್‌ಗೆ ತೆರಳಿದ್ದರು. ಬುಧವಾರ ಮಧ್ಯಾಹ್ನ 2 ಗಂಟೆಗೆ ಸೋಮನಾಥ ದೇವಾಲಯಕ್ಕೆ ಕಾರಿನಲ್ಲಿ ಹೋಗುವ ವೇಳೆ ಅಲ್ಲಿದ್ದ ಸುಖಸಾಗರ ಹೋಟೆಲ್‌ನಲ್ಲಿ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ. 

ಗಣೇಶ್‌ ಜೊತೆ ಮೂವರು ಇದ್ದರು: ಶಾಸಕ ಗಣೇಶ್‌ ಜೊತೆಯಲ್ಲಿ ಅವರ ಸ್ನೇಹಿತರು ಎನ್ನಲಾದ ಕರ್ನಾಟದವರು ಇಬ್ಬರು ಹಾಗೂ ಸೋಮನಾಥದ ಸ್ಥಳೀಯ ರೊಬ್ಬರು ಚಾಲಕನ ಜೊತೆಯಲ್ಲಿದ್ದರು. ಅವರನ್ನೂ ರಾಮನಗರಕ್ಕೆ ಕರೆತರಲಾಗುತ್ತಿದೆ. ಆ ಮೂವರ ವಿವರಗಳು ತಮಗೂ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಗಣೇಶ್‌ ವಿಚಾರಣೆ ವೇಳೆ ತನಿಖಾಧಿಕಾರಿಗೆ ಬೇಕಾದ ಎಲ್ಲಾ ಮಾಹಿತಿಗಳು ಲಭ್ಯವಾದರೆ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳುವುದಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದರು. ಸದ್ಯ ಗಣೇಶ್‌ ಪೊಲೀಸರೊಂದಿಗೆ ಸಹಕರಿಸುತ್ತಿದ್ದಾರೆ ಎಂದು ವಿವರಿಸಿದರು.

ಮುಂಬೈ ಪೊಲೀಸರು ಸಹಕರಿಸಲಿಲ್ಲ: ಗಣೇಶ್‌ ಮುಂಬೈನಲ್ಲಿ ಇದ್ದ ವೇಳೆ ಬಂಧಿಸುವ ಸಾಧ್ಯತೆ ಇತ್ತಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂಬೈನಲ್ಲಿ ಅಲ್ಲಿನ ಸ್ಥಳೀಯ ಪೊಲೀಸರ ಸಹಕಾರ ದೊರೆಯಲಿಲ್ಲ ಎಂದರು. 

Advertisement

ರಾಜಕೀಯ ಒತ್ತಡವೂ ಜಿಲ್ಲಾ ಪೊಲೀಸರ ಮೇಲೆ ಇರಲಿಲ್ಲ. ಆದರೆ, ಶಾಸಕ ಗಣೇಶ್‌ ಬೇರೆ ಬೇರೆ ಕಡೆ ಇದ್ದ ಬಗ್ಗೆ ಮಾಹಿತಿ ಲಭ್ಯವಾಗುತ್ತಿತ್ತು. ಮಹಾರಾಷ್ಟ್ರ, ತಮಿಳುನಾಡು, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಿಗೆ ನಮ್ಮ ತಂಡಗಳು ಭೇಟಿ ನೀಡಿವೆ ಎಂದರು.

ಶಾಸಕ ಗಣೇಶ್‌ ಅವರು ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಆಂಟಿಸಿಪೇಟರಿ ಬೇಲ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರು ಅದನ್ನು ವಾಪಸ್ಸು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಬಿಡದಿ ಪೊಲೀಸ್‌ ಠಾಣೆ ರಾಮನಗರ ಸಿಜಿಎಂ ನ್ಯಾಯಾಲಯದ ವ್ಯಾಪ್ತಿಗೆ ಬರುವುದರಿಂದ ಬಂಧಿತ ಗಣೇಶ್‌ರನ್ನು ಇಲ್ಲೆ ಹಾಜರು ಪಡಿಸಲಾಗುತ್ತಿದೆ ಎಂದು ವಿವರಿಸಿದರು.

ಶಾಸಕನ ಬಂಧನದ ಹಿನ್ನೆಲೆ ಏನು? ಈಗಲ್ಟನ್‌ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರು ವಾಸ್ತವ್ಯವಿದ್ದ ವೇಳೆ ಜ.19ರ ರಾತ್ರಿ ಶಾಸಕ ಆನಂದ್‌ಸಿಂಗ್‌ ಮತ್ತು ಶಾಸಕ ಗಣೇಶ್‌ ನಡುವೆ ಗಲಾಟೆಯಾಗಿತ್ತು. ಈ ವೇಳೆ ಶಾಸಕ ಗಣೇಶ್‌ ಆನಂದ್‌ ಸಿಂಗ್‌ರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಾಸಕ ಆನಂದ್‌ ಸಿಂಗ್‌, ಬೆಂಗಳೂರಿನ ಅಪಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಜ.21ರಂದು ಅಪಲೋ ಆಸ್ಪತ್ರೆಯಲ್ಲೇ ಪೊಲೀಸರಿಗೆ ಅವರು ಹೇಳಿಕೆ ನೀಡಿದ್ದರು. ಹೇಳಿಕೆ ಪಡೆದ ಬಿಡದಿ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಕಲಂ 323, 324, 307, 504, 506, 504, 506 ಅನ್ವಯ ಎಫ್ಐಆರ್‌ ದಾಖಲಿಸಿದ್ದರು. ದೂರು ದಾಖಲಾದ ಬೆನ್ನಲ್ಲೆ ಆರೋಪಿ ಶಾಸಕ ಕಂಪ್ಲಿ ಗಣೇಶ್‌ ತಲೆ ಮೆರೆಸಿಕೊಂಡಿದ್ದರು. ಜಿಲ್ಲಾ ಪೊಲೀಸರು 4 ತಂಡಗಳನ್ನು ರಚಿಸಿಕೊಂಡು ಆರೋಪಿ ಶಾಸಕರಿಗಾಗಿ ಹುಡುಕಾಟ ನಡೆಸಿದ್ದರು. ತಮಿಳುನಾಡು, ಅಂಡಮಾನ್‌ ಮತ್ತು ನಿಕೋಬರ್‌ ದ್ವೀಪಗಳು, ಮುಂಬೈ ಮುಂತಾದ ಸ್ಥಳಗಳಲ್ಲಿ ವಿವಿಧ ಮಾಹಿತಿಗಳನ್ನಾಧರಿಸಿ ಹುಡುಕಾಟ ನಡೆಸಿದ್ದರು. ಆದರೆ, ಆರೋಪಿ ಶಾಸಕರು ಲಭ್ಯವಾಗಿರಲಿಲ್ಲ.  

Advertisement

Udayavani is now on Telegram. Click here to join our channel and stay updated with the latest news.

Next