Advertisement

ಕೊರೊನಾ ಸೋಂಕಿತರಿಗೆ ಶಾಸಕರ ಅಭಯ

06:30 PM May 25, 2021 | Team Udayavani |

ವರದಿ: ಕೇಶವ ಆದಿ

Advertisement

ಬೆಳಗಾವಿ: ಕೊರೊನಾ ಎರಡನೇ ಅಲೆ ನಿಯಂತ್ರಣದಲ್ಲಿ ಜನಪ್ರತಿನಿಧಿಗಳ ಪಾತ್ರ ಬಹಳ ಮುಖ್ಯ. ಆಯಾ ಕ್ಷೇತ್ರದ ಶಾಸಕರು ಈ ನಿಯಂತ್ರಣ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಎಷ್ಟೋ ಸಮಸ್ಯೆಗಳು ಹಗುರವಾಗಿ ಕರಗಿ ಹೋಗುತ್ತವೆ. ಸುಲಭವಾಗಿ ಪರಿಹಾರ ಸಿಗುತ್ತದೆ. ಸೋಂಕಿತರು, ಅವರ ಕುಟುಂಬ ಸದಸ್ಯರಲ್ಲಿ ಕೊರೊನಾ ಗೆದ್ದು ಬರುವ ವಿಶ್ವಾಸ ಮೂಡುತ್ತದೆ. ಇದಕ್ಕೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಒಳ್ಳೆಯ ಉದಾಹರಣೆ.

ಕೊರೊನಾದ ಮೊದಲ ಅಲೆ ಸಂದರ್ಭದಲ್ಲಿ ಜನರ ನೆರವಿಗೆ ನಿಂತಿದ್ದ ಅಭಯ ಪಾಟೀಲ ಈ ಬಾರಿ ಇನ್ನೂ ಹೆಚ್ಚಿನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮದೇ ಆದ ತಂಡ ಕಟ್ಟಿಕೊಂಡು ಜಿಲ್ಲಾಡಳಿತ, ಕೊರೊನಾ ಸೋಂಕಿತರು ಮತ್ತು ಅವರ ಕುಟುಂಬದ ಸದಸ್ಯರ ನೆರವಿಗೆ ಮುಂದಾಗಿದ್ದಾರೆ. ಜನರ ಸೇವಾ ಕಾರ್ಯದಲ್ಲಿ ಮೊದಲಿಂದಲೂ ವಿಭಿನ್ನವಾಗಿ ಕಾಣಿಸಿಕೊಳ್ಳುವ ಶಾಸಕ ಅಭಯ ಪಾಟೀಲ ಕೊರೊನಾ ನಿಯಂತ್ರಣ ಸಂಬಂಧ ಕೇವಲ ಅಧಿಕಾರಿಗಳ, ವೈದ್ಯರ, ಆಸ್ಪತ್ರೆಗಳ ಹಾಗೂ ತಮ್ಮ ಪಕ್ಷದ ಕಾರ್ಯಕರ್ತರ ಸಭೆ ಮಾತ್ರ ಮಾಡಿಲ್ಲ. ಸಭೆಯ ಜತೆಗೆ ತಾವು ಕೈಗೊಂಡ ನಿರ್ಧಾರಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುವಂತೆ ನೋಡಿಕೊಂಡಿದ್ದಾರೆ.

ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಉತ್ತರ ಶಾಸಕ ಅನಿಲ ಬೆನಕೆ ಅವರ ಸಮಯೋಜಿತ ಕ್ರಮ ಹಾಗೂ ಕಠಿಣ ನಿರ್ದೇಶನ ಪರಿಣಾಮ ನಗರದಲ್ಲಿ ಇವತ್ತು ರೆಮ್‌ಡೆಸಿವಿಯರ್‌ ಇಂಜಕ್ಷನ್ ಗಾಗಿ ಹಾಹಾಕಾರ ಅಥವಾ ರೋಗಿಗಳ ಪರದಾಟ ನಿಂತಿದೆ. ಖಾಸಗಿ ಆಸ್ಪತ್ರೆಗಳ ದುರಾಸೆಗೆ ಕಡಿವಾಣ ಬಿದ್ದಿದೆ. ಸೋಂಕಿತರಿಗೆ ಸರಕಾರ ನಿಗದಿ ಪಡಿಸಿದ ದರದಲ್ಲಿ ಈ ಇಂಜೆಕ್ಷನ್‌ ಸಿಗುತ್ತಿದೆ.

ಕೋವಿಡ್‌ ಕಿಟ್‌ ವಿತರಣೆ: ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಶಾಸಕ ಅಭಯ ಪಾಟೀಲ ಕಳೆದೆರಡು ತಿಂಗಳಿಂದ ಹಲವಾರು ಕಾರ್ಯಕ್ರಮ ಮಾಡಿದ್ದಾರೆ. ಮುಖ್ಯವಾಗಿ ಲೋಕಸಭೆ ಉಪ ಚುನಾವಣೆ ಮುಗಿಯುತ್ತಿದ್ದಂತೆ ತಮ್ಮ ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳಲ್ಲಿ 1.42 ಲಕ್ಷ ಮಾಸ್ಕ್ ಹಂಚಿದ್ದಾರೆ. 13 ಸಾವಿರ ಸ್ಯಾನಿಟೈಸರ್‌ ಬಾಟಲಿ ನೀಡಿದ್ದಾರೆ. ಈಗ ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತರ ಮೂಲಕ ಐದು ಸಾವಿರ ಕೋವಿಡ್‌ ಕಿಟ್‌ ಮನೆ-ಮನೆಗೆ ಹಂಚುವ ಕಾರ್ಯ ನಡೆದಿದೆ. ಎರಡನೇ ಹಂತದಲ್ಲಿ ಸಹ ಇಷ್ಟೇ ಮೆಡಿಕಲ್‌ ಕಿಟ್‌ ವಿತರಿಸುವ ಯೋಜನೆ ಶಾಸಕರು ಹಾಕಿಕೊಂಡಿದ್ದಾರೆ. ಇದಕ್ಕಾಗಿ ಒಟ್ಟು 31ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಇದಲ್ಲದೆ ಮಹಾರಾಷ್ಟ್ರದ ಕನೇರಿ ಮಠದಿಂದ ನೀಡ ಲಾಗಿರುವ ಹೋಮಿಯೋಪಥಿ ಔಷಧ ಸಾರ್ವಜನಿಕರಿಗೆ ವಿತರಿಸುವ ಕಾರ್ಯವನ್ನೂ ಶಾಸಕರು ಕೈಗೊಂಡಿದ್ದಾರೆ. ಒಟ್ಟು 50 ಸಾವಿರ ಬಾಟಲ್‌ ಹಂಚುವ ಗುರಿ ಹಾಕಿಕೊಂಡಿದ್ದು ಈಗಾಗಲೇ 20 ಸಾವಿರ ಔಷಧ ಬಾಟಲ್‌ ವಿತರಿಸಲಾಗಿದೆ. ಇದರ ಜತೆ ಮಿನರಲ್‌ ನೀರಿನ ಬಾಟಲಿಗಳನ್ನು ನೀಡಲಾಗುತ್ತಿದ್ದು ಇದಕ್ಕೆ ಖಾಸಗಿ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

Advertisement

ಸಾರ್ವಜನಿಕರಿಗೆ ಕೊರೊನಾ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮ ಜತೆಗೆ ಅವರಿಗೆ ಅಗತ್ಯ ಔಷಧ ಹಾಗೂ ಆಸ್ಪತ್ರೆಗಳ ಸಹಾಯ ನೀಡುತ್ತಿರುವ ಶಾಸಕ ಅಭಯ ಪಾಟೀಲ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಜತೆಗೂಡಿ ಮಹಾನಗರ ಪಾಲಿಕೆ ವತಿಯಿಂದ ಸುಭಾಷನಗರ, ಕುಮಾರಸ್ವಾಮಿ ಬಡಾವಣೆ, ರಾಮತೀರ್ಥ ನಗರದಲ್ಲಿ ಆರಂಭಿಸಿರುವ ಕೋವಿಡ್‌ ಕೇಂದ್ರಗಳಿಗೆ ಆಕ್ಸಿಜನ್‌ ಯಂತ್ರಗಳನ್ನು ನೀಡಿದ್ದಾರೆ. ಕೋವಿಡ್‌ ಸೋಂಕಿತರ ನೆರವಿಗಾಗಿ ಆಂಬ್ಯುಲೆನ್ಸ್‌ ಸೌಲಭ್ಯ ಒದಗಿಸಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಂಕಿನಿಂದ ಗುಣಮುಖರಾದವರಿಗೆ ಕೆಲ ದಿನಗಳವರೆಗೆ ಬೇಕಾಗುವ ಆಕ್ಸಿಜನ್‌ ಸರಬರಾಜು ಮಾಡಲು ಶಾಸಕರು ಕ್ರಮ ಕೈಗೊಂಡಿದ್ದಾರೆ. ಇದರ ಜತೆಗೆ ಜಿಲ್ಲಾಸ್ಪತ್ರೆಯಲ್ಲಿ 350 ಜನರಿಗೆ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಮಾಡುವ ಮೂಲಕ ಶಾಸಕ ಅಭಯ ಪಾಟೀಲ ತಮ್ಮ ಸೇವಾ ಮನೋಭಾವ ಪರಿಚಯಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ಈಗಾಗಲೇ ನಾಲ್ಕು ಬಾರಿ ಭೇಟಿ ನೀಡಿ ವೈದ್ಯರ ಸಭೆ ನಡೆಸಿರುವ ಅಭಯ ಪಾಟೀಲ ಆಸ್ಪತ್ರೆ ಆವರಣದಲ್ಲಿ ಸರ್ಕಾರದಿಂದ ಒಂದು ಹಾಗೂ ಖಾಸಗಿ ಕಂಪನಿ ಸಹಭಾಗಿತ್ವದಲ್ಲಿ 700 ಲೀ. ಸಾಮರ್ಥ್ಯದ ಒಂದು ಆಕ್ಸಿಜನ್‌ ನಿರ್ಮಾಣ ಘಟಕ ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಆಯುಷ್ಮಾನ ಭಾರತ್‌ ಯೋಜನೆ ಫಲಾನುಭವಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ನಿಯಮಾನುಸಾರ ಚಿಕಿತ್ಸೆ ದೊರೆಯುವಂತೆ ಶಾಸಕರು ನೋಡಿಕೊಂಡಿದ್ದಾರೆ. ಶಾಸಕರ ಪ್ರಯತ್ನದ ಫಲವಾಗಿ ಯೋಜನೆ ಫಲಾನುಭವಿಗಳ ವೈದ್ಯಕೀಯ ವೆಚ್ಚದಲ್ಲಿ 18 ಲಕ್ಷ ರೂ. ಕಡಿಮೆಯಾಗಿದೆ. ತಮ್ಮ ಬಳಿ ನೆರವು ಕೇಳಿಕೊಂಡು ಬಂದವರಿಗೆ ಆಯುಷ್ಮಾನ್‌ ಯೋಜನೆ ಲಾಭ ದೊರಕಿಸಿಕೊಡಲು ಒಬ್ಬ ಸಿಬ್ಬಂದಿ ನೇಮಕ ಮಾಡಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ವೆಚ್ಚ ದುಬಾರಿಯಾಗುತ್ತಿದೆ ಎಂಬ ದೂರುಗಳು ಬಂದಾಗ ಅದಕ್ಕೆ ಸ್ಪಂದಿಸಿದ ಶಾಸಕರು ತಕ್ಷಣ ಜಿಲ್ಲಾಧಿಕಾರಿಗಳು, ಆಸ್ಪತ್ರೆಗಳ ಮುಖ್ಯಸ್ಥರು, ಭಾರತೀಯ ವೈದ್ಯಕೀಯ ಸಂಸ್ಥೆ ಪದಾಧಿಕಾರಿಗಳ ಜತೆ ಸಭೆ ನಡೆಸಿ ಅದಕ್ಕೆ ಪರಿಹಾರ ದೊರಕಿಸಿಕೊಟ್ಟಿದ್ದಾರೆ. ಕೊರೊನಾ ಅಲೆ ನಿಯಂತ್ರಣಕ್ಕೆ ವಾತಾವರಣ ಶುದ್ಧೀಕರಣ ಮಾಡುವುದು ಸಹ ಅತ್ಯಗತ್ಯ ಎಂಬುದನ್ನು ಮನಗಂಡ ಶಾಸಕರು ತಮ್ಮ ಮತ ಕ್ಷೇತ್ರದ ಗಲ್ಲಿ-ಗಲ್ಲಿಗಳಲ್ಲಿ, ಯುವಕ ಮಂಡಳಗಳ, ಸ್ಥಳೀಯ ಪ್ರಮುಖರ ಜತೆ ಕೂಡಿಕೊಂಡು ಹೋಮ-ಹವನ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಕಾರ್ಯ 15 ದಿನಗಳ ಕಾಲ ನಡೆಸುವ ಯೋಚನೆ ಶಾಸಕರದು.

Advertisement

Udayavani is now on Telegram. Click here to join our channel and stay updated with the latest news.

Next