ಚೆನ್ನೈ: ಡಿಎಂಕೆ ಮುಖ್ಯಸ್ಥ ಮುತ್ತುವೇಲು ಕರುಣಾನಿಧಿ (94)ಅವರಿಗೆ ಕಾವೇರಿ ಆಸ್ಪತ್ರೆಯಲ್ಲಿ ಐದನೇ ದಿನವಾದ ಬುಧವಾರವೂ ಚಿಕಿತ್ಸೆ ಮುಂದುವರಿದಿದೆ. ಈ ನಡುವೆ ಪಕ್ಷದ ನಾಯಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಆಘಾತಗೊಂಡು 21 ಮಂದಿ ಕಾರ್ಯಕರ್ತರು ಅಸುನೀಗಿದ್ದಾರೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಇದರಿಂದ ತಮಗೆ ಆಘಾತ ಉಂಟಾಗಿದೆ ಎಂದು ಹೇಳಿದ್ದಾರೆ. ಆದರೆ ಅಸುನೀಗಿದ ಕಾರ್ಯಕರ್ತರ ವಿವರಗಳನ್ನು ಸ್ಟಾಲಿನ್ ನೀಡಲಿಲ್ಲ. ತಂದೆ ಕರುಣಾನಿಧಿ ಆರೋಗ್ಯದ ಬಗ್ಗೆ ಮಾತನಾಡಿದ ಸ್ಟಾಲಿನ್, ನುರಿತ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಹೀಗಾಗಿ, ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ. ಪಕ್ಷದ ಕಾರ್ಯಕರ್ತರ ಸಾವು ಆಘಾತ ತಂದಿದೆ. ಕರುಣಾನಿಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಕಾರಣಕ್ಕೆ ಯಾರೂ ಕೂಡ ಅತಿರೇಕದ ನಿರ್ಧಾರ ಕೈಗೊಳ್ಳಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಅಣ್ಣಾದೊರೈ ಪಾಲಿಸಿದ ಕರ್ತವ್ಯ, ಘನತೆಯನ್ನು ತಂದೆ ಅನುಸರಿಸಿದ್ದಾರೆ ಎಂದಿದ್ದಾರೆ ಸ್ಟಾಲಿನ್