Advertisement

ಕೇಂದ್ರ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

09:20 PM Jul 05, 2019 | Lakshmi GovindaRaj |

ಚಾಮರಾಜನಗರ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಮಂಡಿಸಿರುವ ಕೇಂದ್ರ ಬಜೆಟ್‌ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಪಟ್ಟಣ ಪ್ರದೇಶದ ಮಧ್ಯಮ, ಶ್ರೀಮಂತ ವರ್ಗದವರಿಗೆ ಬಜೆಟ್‌ ಉತ್ತಮ ಎನಿಸಿದರೆ, ಗ್ರಾಮೀಣ ಪ್ರದೇಶದ ರೈತಾಪಿ ವರ್ಗ ಕೃಷಿ ವಲಯಕ್ಕೆ ಬಜೆಟ್‌ನಿಂದ ಯಾವ ಕೊಡುಗೆಯೂ ದೊರೆತಿಲ್ಲ ಎಂಬ ಅಸಮಾಧಾನವಿದೆ.

Advertisement

ಧನಾತ್ಮಕ: ಮಧ್ಯಮ ವರ್ಗದ ಜನರಿಗೆ ಕೊಂಚ ಸಮಾಧಾನ ತರುವ 7 ಲಕ್ಷ ರೂ.ಗಳವರೆಗಿನ ಗೃಹ ಸಾಲಕ್ಕೆ 15 ವರ್ಷಗಳ ಅವಧಿಗೆ ತೆರಿಗೆ ವಿನಾಯಿತಿ, ವಾರ್ಷಿಕ 5 ಲಕ್ಷ ಆದಾಯಕ್ಕಿಂತ ಇರುವವರಿಗೆ ತೆರಿಗೆ ವಿನಾಯಿತಿ, ಜಿಎಸ್‌ಟಿಯಿಂದ 17 ತೆರಿಗೆಗಳ ರದ್ದು, ನಾರಿ ಟು ನಾರಾಯಣಿ ಯೋಜನೆ ಮೂಲಕ ಗ್ರಾಮೀಣ ಪ್ರದೇಶಗಳ ಮಹಿಳೆಯರ ಪಾಲುದಾರಿಕೆಗೆ ಒತ್ತು, ರೈಲ್ವೆ ನಿಲ್ದಾಣಗಳ ಆಧುನೀಕರಣಕ್ಕೆ ಒತ್ತು, 60 ವರ್ಷ ಮೇಲ್ಪಟ್ಟವರಿಗೆ 3 ಸಾವಿರ ರೂ. ಮಾಸಿಕ ಪಿಂಚಣಿ, ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಐದು ವರ್ಷಗಳಲ್ಲಿ 1.25 ಲಕ್ಷ ಕಿ.ಮೀ. ರಸ್ತೆ ಅಭಿವೃದ್ಧಿ, ಶೂನ್ಯ ಬಂಡವಾಳ ಕೃಷಿಯನ್ನು ಉತ್ತೇಜಿಸುವುದು, 2024ರೊಳಗೆ ಎಲ್ಲ ಮನೆಗಳಿಗೂ ನೀರು ನೀಡುವ ಹರ್‌ ಘರ್‌ ಜಲ್‌, ಇತ್ಯಾದಿ ಯೋಜನೆಗಳು ಮಧ್ಯಮ ವರ್ಗದ ಜನರಿಗೆ ಸಂತಸ ಮೂಡಿಸಿವೆ.

ಋಣಾತ್ಮಕ: ಪೆಟ್ರೋಲ್‌ ಮತ್ತು ಡೀಸೆಲ್‌ಗೆ 1 ರೂ. ಸೆಸ್‌ ಏರಿಕೆ, ಚಿನ್ನದ ಮೇಲೆ ಈಗಿದ ಶೇ.10ರಷ್ಟು ಆಮದು ಸುಂಕ ಶೇ.12.5ಕ್ಕೆ ಏರಿಕೆ, ಪಿವಿಸಿ ಪೈಪ್‌, ಸಿಸಿ ಕ್ಯಾಮರಾ, ಡಿವಿಡಿ ಕ್ಯಾಮರಾ, ಮನೆ ನಿರ್ಮಾಣಕ್ಕೆ ಹಾಸುವ ಟೈಲ್ಸ್‌, ಆಟೋ ಬಿಡಿ ಭಾಗಗಳ ದರ ಏರಿಕೆ, ಕೃಷಿ ರಂಗಕ್ಕೆ ಹೆಚ್ಚಿನ ಆದ್ಯತೆ ನೀಡದಿರುವುದು, ರೈತರ ಕಲ್ಯಾಣಕ್ಕಾಗಿ ಹೊಸ ಯೋಜನೆಗಳನ್ನು ನೀಡದಿರುವುದು ಜನ ಸಾಮಾನ್ಯರಲ್ಲಿ ಮತ್ತು ರೈತರಲ್ಲಿ ಅತೃಪ್ತಿಗೂ ಕಾರಣವಾಗಿದೆ.

ಸರ್ಕಾರ ರೈತರ ಕಷ್ಟ ಗಮನಿಸಿಲ್ಲ: ಬೆಳೆಗಳಿಗೆ ನೀರು ದೊರಕುತ್ತಿಲ್ಲ. ಕಷ್ಟಪಟ್ಟು ಬೆಳೆ ಬೆಳೆದರೂ ಅದಕ್ಕೆ ನ್ಯಾಯಯುತ ಬೆಲೆ ದೊರಕುತ್ತಿಲ್ಲ. ಕನಿಷ್ಟ ಬೆಂಬಲ ಬೆಲೆಯನ್ನು ಬೆಳೆಗಳಿಗೆ ವೈಜ್ಞಾನಿಕವಾಗಿ ನಿಗದಿ ಮಾಡಿ ಅದಕ್ಕಿಂತ ಕಡಿಮೆ ಬೆಲೆಗೆ ರೈತರ ಬೆಳೆಗಳನ್ನು ಕೊಳ್ಳದಂತೆ ನಿರ್ಬಂಧ ಹೇರುವ ವ್ಯವಸ್ಥೆ ಜಾರಿಗೆ ಬರಬೇಕು. ಇಂಥ ಕಷ್ಟದ ಪರಿಸ್ಥಿತಿಯಲ್ಲಿ ರೈತ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಮಾಡಿ ಕೃಷಿ ಮಾಡಿದರೆ, ಬೆಳೆ ನಷ್ಟವಾಗುತ್ತಿದೆ. ಫ‌ಸಲು ಬಂದರೂ ಅದಕ್ಕೆ ಸರಿಯಾದ ಬೆಲೆ ದೊರಕುತ್ತಿಲ್ಲ. ಹಾಗಾಗಿ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಿಕೊಡಬೇಕೆಂಬುದು ರೈತರ ಹಕ್ಕೊತ್ತಾಯವಾಗಿದೆ. ಆದರೆ ಕೇಂದ್ರ ಈ ಬಗ್ಗೆ ಗಮನ ಹರಿಸಿಲ್ಲ.

ಬಜೆಟ್‌ನಲ್ಲಿ ಜಿಲ್ಲಾ ರೈಲ್ವೆ ಮಾರ್ಗಕ್ಕೆ ಅನುದಾನವಿಲ್ಲ: ಸಾಮಾನ್ಯವಾಗಿ ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಗಳಿಗೆ ಯೋಜನೆಗಳು ದೊರಕುವುದು ಅಪರೂಪ. ಆದರೆ, ಸಾಮಾನ್ಯ ಬಜೆಟ್‌ ಜೊತೆ ಈಗ ರೈಲ್ವೆ ಬಜೆಟ್‌ ಸಹ ಸೇರಿರುವುದರಿಂದ ಜಿಲ್ಲೆಗೆ ರೈಲ್ವೆ ಯೋಜನೆಯೇನಾದರೂ ದೊರೆತಿದೆಯೇ ಎಂಬ ಕುತೂಹಲ ಜನರಲ್ಲಿರುತ್ತದೆ. ಆದರೆ, ನಿರ್ಮಲಾ ಸೀತಾರಾಂ ಅವರ ಬಜೆಟ್‌ನಲ್ಲಿ ರೈಲ್ವೆ ವಲಯದಿಂದ ಜಿಲ್ಲೆಗೆ ಯಾವ ಕೊಡುಗೆಯೂ ದೊರೆತಿಲ್ಲ.

Advertisement

ಬೆಂಗಳೂರಿನ ಹೆಜ್ಜಾಲದಿಂದ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಮೂಲಕ ಚಾಮರಾಜನಗರ ತಲುಪುವ 129 ಕಿ.ಮೀ. ಉದ್ದದ, 1330 ಕೋಟಿ ರೂ. ವೆಚ್ಚದ ನೂತನ ರೈಲ್ವೆ ಮಾರ್ಗವನ್ನು ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ, ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದರು. ಅದಕ್ಕಾಗಿ ಪ್ರಥಮ ಹಂತವಾಗಿ 10 ಕೋಟಿ ರೂ.ಗಳನ್ನೂ ನೀಡಿದ್ದರು. ಅದಾದ ಬಳಿಕ ಇದಕ್ಕೆ ಕೇಂದ್ರ ಅನುದಾನ ನೀಡಿಲ್ಲ. ಈ ಬಾರಿಯೂ ಯಾವುದೇ ಅನುದಾನ ಘೋಷಿಸಿಲ್ಲ.

ರಾಜ್ಯದ ಕೊನೆ ರೈಲ್ವೆ ನಿಲ್ದಾಣ:ಚಾಮರಾಜನಗರವು ರಾಜ್ಯದ ಕೊನೆಯ ರೈಲ್ವೆ ನಿಲ್ದಾಣವಾಗಿದೆ. ಮೈಸೂರಿಗೆ ಬರುವ ಅನೇಕ ರೈಲುಗಳನ್ನು ಚಾಮರಾಜನಗರಕ್ಕೆ ವಿಸ್ತರಿಸಿದರೆ, ಪ್ರಯಾಣಿಕರಿಗೆ ಬಹಳ ಅನುಕೂಲವಾಗುತ್ತದೆ. ಮುಖ್ಯವಾಗಿ ಹುಬ್ಬಳ್ಳಿ-ಧಾರವಾಡದಿಂದ ಮೈಸೂರಿಗೆ ಬರುವ ಹಾಗೂ ಶಿವಮೊಗ್ಗದಿಂದ ಮೈಸೂರಿಗೆ ಬರುವ ರೈಲನ್ನು ಚಾಮರಾಜನಗರಕ್ಕೆ ವಿಸ್ತರಿಸಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿತ್ತು. ಈ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ.

ಚಾಮರಾಜನಗರದಿಂದ ನಂಜನಗೂಡಿಗೆ 35 ಕಿ.ಮೀ. ಅಂತರವಿದ್ದು, ಈ ಮಾರ್ಗದಲ್ಲಿ ಯಾವುದೇ ಕ್ರಾಸಿಂಗ್‌ ಪಾಯಿಂಟ್‌ ಇಲ್ಲ. ಹೀಗಾಗಿ ರೈಲು ತಡವಾಗಿ ಹೊರಟಾಗ, ರೈಲ್ವೆ ವ್ಯಾಗನ್‌ಗಳು ಸಂಚರಿಸಿದಾಗ ರೈಲುಗಳು ನಂಜನಗೂಡು ಅಥವಾ ನಗರದಲ್ಲೇ ತಡವಾಗಿ ಹೊರಡಬೇಕಾಗಿದೆ. ಕವಲಂದೆ, ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ರೈಲ್ವೆ ಕ್ರಾಸಿಂಗ್‌ ಪಾಯಿಂಟ್‌ ಮಾಡಿದರೆ ಬಹಳ ಅನುಕೂಲವಾಗಲಿದೆ ಎಂದು ಹಿಂದಿನ ಸಂಸದರು ಮನವಿ ಸಲ್ಲಿಸಿದ್ದರು.

ರೈಲುಗಳ ಸ್ವಚ್ಛತಾ ಘಟಕವೂ ಈಡೇರಿಲ್ಲ: ಮೈಸೂರಿನಲ್ಲಿರುವ ಸ್ವಚ್ಛತಾ ಘಟಕದಲ್ಲಿ ಈಗ ಹೆಚ್ಚು ಒತ್ತಡವಿದ್ದು, ಅನೇಕ ರೈಲುಗಳು ಅಲ್ಲೇ ನಿಲ್ಲಬೇಕಾಗಿದೆ. ಅದಕ್ಕೆ ಸ್ಥಳಾವಕಾಶವೂ ಇಲ್ಲದಂತಾಗಿದೆ. ಚಾ.ನಗರದಲ್ಲಿ ಸ್ವಚ್ಛತಾ ಘಟಕ ಸ್ಥಾಪಿಸಿದರೆ ಮೈಸೂರಿನಲ್ಲಿ ನಿಲ್ಲುವ ರೈಲುಗಳು ಚಾ.ನಗರಕ್ಕೆ ಬರುತ್ತವೆ. ಪ್ರಯಾಣಿಕರಿಗೂ ಇದರಿಂದ ಬಹಳ ಅನುಕೂಲವಾಗುತ್ತದೆ. ಅಲ್ಲದೇ ಇಲ್ಲಿನ ನಿಲ್ದಾಣದಲ್ಲಿ ರೈಲುಗಳೂ ತಂಗಲು ಅವಕಾಶವಾಗುತ್ತದೆ ಎಂಬ ಕಾರಣದಿಂದ ಚಾಮರಾಜನಗರದಲ್ಲಿ ರೈಲುಗಳ ಸ್ವಚ್ಛತಾ ಘಟಕ ಸ್ಥಾಪಿಸಬೇಕೆಂದು ಕೋರಲಾಗಿತ್ತು. ಇದಾವುದೂ ಈಡೇರಿಲ್ಲ.

ಸಂಶೋಧನಾ ಸಂಸ್ಥೆ ಕಾರ್ಯಗತವಾಗಿಲ್ಲ: ಕಳೆದ ಬಾರಿಯ ಬಜೆಟ್‌ನಲ್ಲಿ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು (ನೈಪರ್‌) ಬಜೆಟ್‌ನಲ್ಲಿ ಮಂಜೂರು ಮಾಡಿಕೊಡುವಂತೆ ಹಿಂದಿನ ಸಂಸದ ಆರ್‌. ಧ್ರುವನಾರಾಯಣ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಈ ಸಂಸ್ಥೆ ದೇಶದ 7 ರಾಜ್ಯಗಳಲ್ಲಿ ಸ್ಥಾಪಿತವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಇಲ್ಲ. ಅಭಿವೃದ್ಧಿ ಹೊಂದುತ್ತಿರುವ ಚಾಮರಾಜನಗರ ಜಿಲ್ಲೆಗೆ ಈ ಸಂಸ್ಥೆಯನ್ನು ಮಂಜೂರು ಮಾಡಿಕೊಡಬೇಕು ಎಂದು ಕೋರಿದ್ದರು. ಇದರ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಜಿಲ್ಲೆಗೆ ಇನ್ನೊಂದು ನವೋದಯ ವಿದ್ಯಾಲಯವನ್ನು ಮಂಜೂರು ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದ್ದರು ಅದು ಸಹ ಕಾರ್ಯಗತವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next