Advertisement

ಸೋಂಕಿತರ ಶವ ಸಂಸ್ಕಾರದಲ್ಲೂ ಎಡವಟ್ಟು

03:18 PM Jul 17, 2020 | Suhan S |

ಬೆಂಗಳೂರು: ಸೋಂಕಿನಿಂದ ಮೃತಪಟ್ಟವರು ಹಾಗೂ ಇತರೆ ಸಮಸ್ಯೆಯಿಂದ ಸಾವನ್ನಪ್ಪಿದವರು. ಇವರಿಬ್ಬರ ಅಂತ್ಯಸಂಸ್ಕಾರ ಒಂದೇ ಕಡೆ ನಡೆಯುತ್ತಿದ್ದು, ಇದು ಮತ್ತಷ್ಟು ಸೋಂಕು ಹರಡುವ ಆತಂಕ ಸೃಷ್ಟಿಸಿದೆ.

Advertisement

ಕೋವಿಡ್ ಸೋಂಕಿನಿಂದ ಮೃತಪಟ್ಟ ಶವ ಸಂಸ್ಕಾರದ ವೇಳೆ ಅವರ ಕುಟುಂಬಸ್ಥರು ಗುಂಪು ಸೇರುತ್ತಿದ್ದು, ಇದೇ ವೇಳೆ ಕೊರೊನೇತರದಿಂದ ಮೃತಪಟ್ಟವರ ಸಂಬಂಧಿಕರೂ ಒಂದೇ ಜಾಗದಲ್ಲಿ ಏಕಕಾಲಕ್ಕೆ ಸೇರುತ್ತಿದ್ದಾರೆ. ಕೋವಿಡ್ ಮತ್ತು ಕೋವಿಡೇತರದಿಂದ ಮೃತಪಟ್ಟವರ ಶವವನ್ನೂ ಕೆಲವು ನಿಮಿಷಗಳ ಅಂತರದಲ್ಲಿ ಸುಡಲಾಗುತ್ತಿದೆ. ಅಲ್ಲದೆ, ಚಿತಾಗಾರ ಮತ್ತು ಚಿತಾಗಾರದ ಸುತ್ತ ಸಂಪೂರ್ಣ ಸ್ಯಾನಿಟೈಸ್‌ ಪ್ರತಿಬಾರಿ ಆಗುತ್ತಿಲ್ಲ. ಕೇವಲ ಹೆಸರಿಗಷ್ಟೇ ನಿರ್ದಿಷ್ಟ ಪ್ರದೇಶದಲ್ಲಿ ಸ್ಯಾನಿಟೈಸ್‌ ಮಾಡಲಾಗುತ್ತಿದೆ. ನಗರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಡುವವರ ಸಂಖ್ಯೆ ಕಡಿಮೆ ಇದ್ದ ವೇಳೆ ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಎಲ್ಲ ವ್ಯವಸ್ಥೆ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸೋಂಕಿತರ ಸಿಬ್ಬಂದಿಯೂ ಪಿಪಿಇ ಕಿಟ್‌ ಧರಿಸಿ ಶವಾಗಾರದ ಬಳಿ ಬಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಗರದಲ್ಲಿ ಸೋಂಕಿನಿಂದ ಮೃತಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವಾಗಲೇ ಕಂಡುಬರುತ್ತಿರುವ ಈ ಉದಾಸೀನ ಜನರಲ್ಲಿ ಆತಂಕ ಸೃಷ್ಟಿಸಿದೆ. ಬೇಡದ ದಾಖಲೆ ಕೇಳುವುದು, ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಚಿತಾಗಾರ ವ್ಯವಸ್ಥೆಯ ಕೂಗು ಕೇಳಿಬರುತ್ತಿದೆ.

ನಗರದ ಸುಮ್ಮನಹಳ್ಳಿ, ಪೀಣ್ಯ ಹಾಗೂ ಹೆಬ್ಟಾಳದ ಚಿತಾಗಾರದಲ್ಲಿ ಕೋವಿಡ್‌ ಸೋಂಕಿನಿಂದ ಮೃತ ಪಟ್ಟವರ ಶವ, ಅನಾರೋಗ್ಯ ಹಾಗೂ ವಯೋಸಹಜ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಒಂದೇ ಚಿತಾಗಾರದಲ್ಲಿ ಶವಸಂಸ್ಕಾರ ಮಾಡಲಾಗುತ್ತಿದೆ. ನಗರದಲ್ಲಿ ಸೋಂಕಿನಿಂದ ಮೃತಪಡುವವರ ಶವ ಸಂಸ್ಕಾರಕ್ಕೆ ಪ್ರತ್ಯೇಕ ಚಿತಾಗಾರವನ್ನು ಮೀಸಲಿಡುವಂತೆ ಪಾಲಿಕೆಯ ಮಾಜಿ ಆಡಳಿತ ಪಕ್ಷದ ನಾಯಕ ಎಂ. ಶಿವರಾಜ್‌ ಸೇರಿದಂತೆ ಹಲವು ಪಾಲಿಕೆ ಸದಸ್ಯರು ಮನವಿ ಮಾಡಿದ್ದರು. ಆದರೆ, ಈ ನಿಟ್ಟಿನಲ್ಲಿ ಪಾಲಿಕೆ ಯಾವುದೇ ಯೋಜನೆ ರೂಪಿಸಿಕೊಂಡಿಲ್ಲ. ಇದು ಸ್ಥಳೀಯರಲ್ಲೂ ಬೇಸರ ಹಾಗೂ ಭೀತಿ ಉಂಟುಮಾಡಿದೆ. ಸಿಬ್ಬಂದಿ ಕೊರತೆ: ಕೊರೊನಾದಿಂದ ಸಾವಿಗೀಡಾದ ಶವ ಸಾಗಿಸಲು ಸಿಬ್ಬಂದಿ ಕೊರತೆಯೂ ಉಂಟಾಗುತ್ತಿದೆ.

ಇತ್ತೀಚೆಗೆ ಮಲ್ಲಸಂದ್ರದ ವಾರ್ಡ್‌ನ ಪಾರ್ಕ್‌ವೊಂದ ರಲ್ಲಿನ ಅನಾಥ ಶವವನ್ನು ಪಿಪಿಇ ಕಿಟ್‌ ಧರಿಸಿ ಸ್ವತಃ ಪಾಲಿಕೆ ಸದಸ್ಯ ಎನ್‌. ಲೋಕೇಶ್‌ ಆ್ಯಂಬು ಲೆನ್ಸ್‌ ಮೂಲಕ ಸಾಗಿಸಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ” ಕೋವಿಡ್ ಭೀತಿಯಿಂದ ಸಿಬ್ಬಂದಿ ಕೊರತೆ ಸೃಷ್ಟಿ ಯಾಗುತ್ತಿದೆ. ಶವ ಸಾಗಿಸಲು ಸಿಬ್ಬಂದಿ ಕೊರತೆ ಇದೆ. ಆ್ಯಂಬುಲೆನ್ಸ್‌ ಚಾಲಕ ಒಬ್ಬರೇ ಇದ್ದ ಹಿನ್ನೆಲೆಯಲ್ಲಿ ನಾನೇ ಶವ ಸಾಗಿಸಲು ಸಹಕರಿಸಿದೆ’ ಎಂದು ವಿವರಿಸಿದರು.

ಬುಕಿಂಗ್‌ ಸಮಯ ವಿಸ್ತರಣೆ: ನಗರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಡುವವರ ಶವವನ್ನು ಚಿತಾಗಾರಕ್ಕೆ ತೆಗೆದುಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಗೆ ನಿಲ್ಲಿಸಲಾಗುತ್ತಿದ್ದ ಆನ್‌ಲೈನ್‌ ಬುಕಿಂಗ್‌ ವ್ಯವಸ್ಥೆಯನ್ನು ರಾತ್ರಿ 10ರವರೆಗೆ ವಿಸ್ತರಿಸಲಾಗಿದೆ ಎಂದು ಪಾಲಿಕೆ ಸದಸ್ಯ ಎಂ. ಶಿವರಾಜು ಹೇಳಿದರು. ಪ್ರತಿ

Advertisement

ಚಿತಾಗಾರಕ್ಕೂ ನಿತ್ಯ ಅಂದಾಜು 8ರಿಂದ 10 ಕೋವಿಡೇತರ ಸಮಸ್ಯೆಯಿಂದ ಮೃತಪಡುವವರ ಶವಗಳು ಬರುತ್ತವೆ. ಈಗ ಕೋವಿಡ್ ಸೋಂಕಿನಿಂದ ಮೃತಪಡುವವರನ್ನೂ ಇಲ್ಲೇ ಭಸ್ಮ ಮಾಡುತ್ತಿರುವುದರಿಂದ ಹೊರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸ್ಯಾನಿಟೈಸರ್‌ ಹಾಗೂ ಸ್ವಚ್ಛತೆ ನಿಯಮವನ್ನು ಸಂಪೂರ್ಣವಾಗಿ ಪಾಲಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ಆರು ತಿಂಗಳಿಂದ ವೇತನ ಇಲ್ಲ  : ಚಿತಾಗಾರದ ಸಿಬ್ಬಂದಿ ಹಣ ಕೇಳುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದರಲ್ಲಿ ಪಾಲಿಕೆ ತಪ್ಪೂ ಇದೆ. ಏಕೆಂದರೆ ಬಿಬಿಎಂಪಿ ಚಿತಾಗಾರ ಹಾಗೂ ರುದ್ರಭೂಮಿಯ ಹಲವು ಸಿಬ್ಬಂದಿಗೆ ಕಳೆದ ಅಕ್ಟೋಬರ್‌ನಿಂದ ವೇತನ ಪಾವತಿಸಿಲ್ಲ. ಬಿಬಿಎಂಪಿಯ ವ್ಯಾಪ್ತಿಯಲ್ಲಿ ಒಟ್ಟು ಹತ್ತು ವಿದ್ಯುತ್‌ ಚಿತಾಗಾರ ಹಾಗೂ 52 ರುದ್ರಭೂಮಿಗಳಿವೆ. ಇದರಲ್ಲಿ ಬಹುತೇಕ ಸಿಬ್ಬಂದಿಗೆ ಕಳೆದ ಅಕ್ಟೋಬರ್‌ ನಿಂದ ಸಂಬಳವಾಗಿಲ್ಲ.

ಕೋವಿಡ್ ಪರೀಕ್ಷೆ ಮಾಡಿಸಿಲ್ಲ : ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವವನ್ನು ಇಲ್ಲಿಯೇ (ಹೆಬ್ಟಾಳ ಚಿತಾಗಾರ) ತರಲಾಗುತ್ತಿದೆ. ಆದರೆ, ಚಿತಾಗಾರದ ಸಿಬ್ಬಂದಿಗೆ ಸೋಂಕು ಪರೀಕ್ಷೆ ಮಾಡಿಸಿಲ್ಲ. ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಹೆಬ್ಟಾಳ ಚಿತಾಗಾರದ ಸಿಬ್ಬಂದಿ ಎಂ.ಡಿ. ಚಂದ್ರು ದೂರಿದರು. ಅಕ್ಟೋಬರ್‌ ನಿಂದ ನಮಗೆ ವೇತನ ನೀಡಿಲ್ಲ, ಗುರುತಿನ ಚೀಟಿ ಕೊಟ್ಟಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಆರೋಗ್ಯದ ಬಗ್ಗೆ ಕನಿಷ್ಠ ಕಾಳಜಿಯನ್ನೂ ಪಾಲಿಕೆಯ ಅಧಿಕಾರಿಗಳು ತೋರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಗರದ ಚಿತಾಗಾರ ಹಾಗೂ ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಆರೋಗ್ಯ ಕಾಳಜಿ ವಹಿಸುವಂತೆ ಹಾಗೂ ಸೋಂಕಿತರ ಶವ ಸಂಸ್ಕಾರಕ್ಕೆ ಹೆಚ್ಚು ಭತ್ಯೆ ನೀಡುವಂತೆ ನಿರ್ದೇಶನ ನೀಡಲಾಗಿದೆ. ಅವ್ಯವಸ್ಥೆಯ ಬಗ್ಗೆ ಪರಿಶೀಲಿಸಲಾಗುವುದು. ಜಗದೀಶ್‌ ಹಿರೇಮನಿ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ

 

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next