Advertisement

ಆಟವಾಡುತ್ತಾ ದಾರಿ ತಪ್ಪಿದ ಪುಟಾಣಿ ಮಗು! ವಾಟ್ಸ್‌ ಆ್ಯಪ್‌ನಿಂದ ಪಾಲಕರ ಮಡಿಲು ಸೇರಿತು

04:08 PM Sep 23, 2020 | sudhir |

ಅಥಣಿ: ಮನೆ ಎದುರು ರಸ್ತೆಯಲ್ಲಿ ಆಟ ಆಡುತ್ತ ದಾರಿ ತಪ್ಪಿ ಅಳುತ್ತಾ ನಿಂತಿದ್ದ ಪುಟಾಣಿ ಬಾಲಕ ಸ್ಥಳೀಯ ಸಮಾಜ ಸೇವಕ ಗಜಾನನ ಮಂಗಸೂಳಿಯವರ ನೆರವಿನಿಂದ ಪಾಲಕರ ಮಡಿಲು ಸೇರಿದ ಘಟನೆ ಸೋಮವಾರ ನಡೆದಿದೆ.

Advertisement

ಪಟ್ಟಣದ ಸ್ಟೇಟ್‌ ಬ್ಯಾಂಕ್‌ ಆಪ್‌ ಇಂಡಿಯಾ ಬಳಿಯ ತಮ್ಮ ನೆ ರಸ್ತೆಯಲ್ಲಿ ಪುಟ್ಟ ಮಗು ಅಳುತ್ತಿರುವುದನ್ನು ನೋಡಿದ ಗಜಾನನ ಮಂಗಸೂಳಿ, ಮಗುವನ್ನು ಹೆಸರು, ಮನೆಯ ಬಗ್ಗೆ ಕೇಳಿದ್ದಾರೆ. ಆದರೆ ಮಗುವಿಗೆ ಏನೂ ಹೇಳಲು ಬಂದಿಲ್ಲ. ಹೀಗಾಗಿ ವಾರ್ಡ್ ನಲ್ಲಿ ಸಂಚರಿಸಿ ಮಗುವಿನ ಬಗ್ಗೆ ವಿಚಾರಿಸಿದ್ದಾರೆ, ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಆದರೆ ಈ ಸಲಹೆಯಿಂದ ತೃಪ್ತರಾಗದ ಗಜಾನನ ಮಂಗಸೂಳಿ ಮಗುವಿನ ಫೋಟೋವನ್ನು ಪಟ್ಟಣದ ಗ್ರೂಪ್ ಗಳಿಗೆ ಹಾಕಿದ್ದಾರೆ. ಆ ವಾಟ್ಸ್‌ ಆ್ಯಪ್‌ ಸಂದೇಶ ತಮ್ಮ ಮಗುವನ್ನು ಹುಡುಕುತ್ತಿದ್ದ ಪಾಲಕರ ಗಮನಕ್ಕೂ ಬಂದಿದೆ. ಕೂಡಲೇ ಅವರು ಗಜಾನನ ಮಂಗಸೂಳಿ ಅವರನ್ನು ಸಂಪರ್ಕಿಸಿದ್ದಾರೆ. ಈ ಮಗು ಪಟ್ಟಣದ ಝಾರೆ ಗಲ್ಲಿಯ ಸಂಬಂಧಿಕರ ಮನೆಗೆ ಬಂದಿದ್ದ ಮಹಾರಾಷ್ಟ್ರದ ದಂಪತಿಗೆ ಸೇರಿದ್ದು ಎಂಬುದು ದೃಢಪಟ್ಟಿದೆ.

ಬಳಿಕ ಗಜಾನನ ಮಂಗಸೂಳಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಿಬ್ಬಂದಿ ನೆರವಿನಿಂದ ಮಗುವನ್ನು ಪಾಲಕರಿಗೆ ಹಸ್ತಾಂತರಿಸಿದ್ದಾರೆ. ಗಜಾನನ ಮಂಗಸೂಳಿ ಅವರ ಕಾರ್ಯಕ್ಕೆ ಪಟ್ಟಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next