Advertisement

Railway: ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ವಿಜಯಪುರ ರೈಲು ಸಂಚಾರಕ್ಕೆ ಸಚಿವರ ಸಲಹೆ

09:02 PM Aug 27, 2024 | Team Udayavani |

ಬೆಂಗಳೂರು: ರೈಲ್ವೆ ಜತೆ ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೊಂಡಿರುವ ರಾಜ್ಯದ ಗದಗ- ವಾಡಿ, ಧಾರವಾಡ-ಬೆಳಗಾವಿ, ತುಮಕೂರು- ದಾವಣಗೆರೆ, ತುಮಕೂರು-ರಾಯದುರ್ಗ ಸೇರಿದಂತೆ ಹಲವಾರು ರೈಲ್ವೆ ಯೋಜನೆಗಳಿಗೆ ಎದುರಾಗಿರುವ ಭೂಸ್ವಾಧೀನ ಅಡೆತಡೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮತ್ತು ಯೋಜನೆಗಳ ತ್ವರಿತ ಕಾಮಗಾರಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಮಂಗಳವಾರ ಇಲ್ಲಿ ನೈರುತ್ಯ ರೈಲ್ವೆ ಅಧಿಕಾರಿಗಳ ಜತೆ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

Advertisement

ಈ ಸಭೆಯಲ್ಲಿ ಅವರು ಸಚಿವರಾದ ಪ್ರಿಯಾಂಕ್ ಖರ್ಗೆ, ದಾವಣಗೆರೆ, ಕಲ್ಬುರ್ಗಿ ಮತ್ತು ಹಾವೇರಿ ಜಿಲ್ಲಾಧಿಕಾರಿಗಳು, ಕೃಷ್ಣಾ ಭಾಗ್ಯ ಜಲನಿಗಮದ ಉನ್ನತಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ತಂತಮ್ಮ ಜಿಲ್ಲೆಯಲ್ಲಿ ಹಾದು ಹೋಗುವ ರೈಲ್ವೆ ಯೋಜನೆಗಳಿಗೆ ತೊಡಕಾಗಿರುವ ಸಮಸ್ಯೆಗಳನ್ನು ಕ್ಷಿಪ್ರವಾಗಿ ಬಗೆಹರಿಸಿ, ಸಹಕರಿಸುವಂತೆ ಮನವಿ ಮಾಡಿದರು. ಜತೆಗೆ, ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಅವರೊಂದಿಗೆ ಸದ್ಯದಲ್ಲೇ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು- ವಿಜಯಪುರ ನಡುವೆ 10 ಗಂಟೆ ಪಯಣ

ಗದಗ- ಹುಟಗಿ ನಡುವೆ 242 ಕಿ.ಮೀ. ನಡುವಿನ ಜೋಡಿ ಹಳಿ ಅಭಿವೃದ್ಧಿ ಕಾರ್ಯ ಬಹುತೇಕ ಮುಗಿದಿದೆ. ಆದರೆ, ಬಾಗಲಕೋಟೆ- ವಂಡಾಲ್ ನಡುವೆ 45 ಕಿ.ಮೀ ಜೋಡಿ ರೈಲು ಕಾಮಗಾರಿ ಬಾಕಿ‌ ಇದೆ. ಈ ಕಾಮಗಾರಿ ಡಿಸೆಂಬರ್ ವೇಳೆಗೆ ಮುಗಿಯಬೇಕು. ವಿಳಂಬ ಅಂದರೂ ಮಾರ್ಚ್ ಹೊತ್ತಿಗೆ ಮುಗಿಯಲಿದೆ. ಜತೆಗೆ ಆಲಮಟ್ಟಿ ಪ್ರದೇಶದಲ್ಲಿ ಕೂಡ ಕೆಲವು ಕಿರು ಸೇತುವೆಗಳ ನಿರ್ಮಾಣ ಬಾಕಿ‌ ಇದೆ. ಇದರಿಂದಾಗಿ ಬೆಂಗಳೂರು- ವಿಜಯಪುರ ರೈಲು ಪಯಣಕ್ಕೆ ಈಗ 14-15 ಗಂಟೆ ಹಿಡಿಯುತ್ತಿದೆ. ಈ ಸಮಸ್ಯೆಯಿಂದಾಗಿ ವಂದೇ ಭಾರತ್ ಎಕ್ಸ್ ಪ್ರೆಸ್ ಸೇವೆ ಆರಂಭಕ್ಕೂ ವಿಘ್ನ ಎದುರಾಗಿದೆ. ಇದನ್ನು ಸರಿಪಡಿಸಿದರೆ ಬೆಂಗಳೂರು- ವಿಜಯಪುರ ಪಯಣ 10-11 ಗಂಟೆಗಳಿಗೆ ಇಳಿಯಲಿದೆ. ಈ ನಿಟ್ಟಿನಲ್ಲಿ ತ್ವರಿತವಾಗಿ ಕಾಮಗಾರಿ ಮುಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬೈಪಾಸ್ ಮೂಲಕ ಸಂಚರಿಸಲಿ:

ಈಗ ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಬರುತ್ತಿರುವ ಗೂಡ್ಸ್ ರೈಲುಗಳು ಹುಬ್ಬಳ್ಳಿ ದಕ್ಷಿಣ ನಿಲ್ದಾಣದ ಸಮೀಪದ ಬೈಪಾಸ್ ಮೂಲಕ ಗದಗದ ಕಡೆಗೆ ತಿರುಗುತ್ತಿವೆ. ಅಲ್ಲೂ ಸಹ ಗದಗ ಮುಖ್ಯ ನಿಲ್ದಾಣಕ್ಕೆ ಹೋಗದೆ ಬೈಪಾಸ್ ನಲ್ಲೇ ವಿಜಯಪುರ, ಸೊಲ್ಲಾಪುರದ ಕಡೆಗೆ ಹೋಗುತ್ತಿವೆ. ಹುಬ್ಬಳ್ಳಿ ದಕ್ಷಿಣ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದರಿಂದ ಪ್ರಯಾಣಿಕ ರೈಲುಗಳು ಈಗ ಹುಬ್ಬಳ್ಳಿ ಮುಖ್ಯ ನಿಲ್ದಾಣಕ್ಕೆ ಹೋಗಿ, ಎಂಜಿನ್ ಬದಲಿಸಿಕೊಂಡು ಬರುತ್ತಿವೆ. ಇದರಿಂದಾಗಿ ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತಿವೆ. ಆದ್ದರಿಂದ ನೈರುತ್ಯ ರೈಲ್ವೆಯು ಹುಬ್ಬಳ್ಳಿ ದಕ್ಷಿಣ ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿಯಾಗಿ ಆದಷ್ಟು ಬೇಗ ಅಭಿವೃದ್ಧಿಪಡಿಸಿ, ವಿಜಯಪುರ ಕಡೆ‌ ಹೋಗುವ ರೈಲುಗಳನ್ನು ಅಲ್ಲಿಂದಲೇ ಗದಗದ ಕಡೆ ತಿರುಗಿಸುವ ಕೆಲಸ ಆಗಬೇಕು. ಅದೇ ರೀತಿ ಗದಗದಲ್ಲಿಯೂ ಬೈಪಾಸ್ ಮೂಲಕ ವಿಜಯಪುರದ ಕಡೆಗೆ ಹೋಗುವ ಹಾಗೆ ಆಗಬೇಕು.‌ ಇದರಿಂದ ಸಾಕಷ್ಟು ಸಮಯವನ್ನು ಉಳಿಸಬಹುದು ಎಂದು ಸಚಿವರು ರೈಲ್ವೆ ಅಧಿಕಾರಿಗಳ ಗಮನ ಸೆಳೆದರು. ಇದಕ್ಕೆ ಸಕಾರಾತ್ಮಕ ಸ್ಪಂದಿಸಿದ ಸಚಿವರು ತಮ್ಮ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಗದಗ-ವಾಡಿ ಯೋಜನೆಯಲ್ಲಿ ಶಹಾಪುರ-ಬಿರಾಲ್ ಬುಜೂರು ಬಳಿ ಇರುವ ಹಳಕಟ್ಟಾ ಬಳಿ 11 ಎಕರೆ ಭೂಸ್ವಾಧೀನದ ಸಮಸ್ಯೆ ಎದುರಾಗಿದೆ. ಇದರಿಂದಾಗಿ 26 ಕಿ.ಮೀ. ಕಾಮಗಾರಿ ನಿಂತಿದೆ. ಹಿಂದೆಯೇ ಕಲಬುರಗಿ ಜಿಲ್ಲಾಧಿಕಾರಿಗೆ ಇದನ್ನು ಗಮನಕ್ಕೆ ತರಲಾಗಿತ್ತು. ಆದರೂ ಸಮಸ್ಯೆ ಹಾಗೆಯೇ ಇದೆ. ಈ ಕಾಮಗಾರಿಯನ್ನು 2025ರ ಜೂನ್ ಒಳಗೆ ಮುಗಿಸಬೇಕು ಎಂದು ಸಚಿವರು ಹೇಳಿದರು. ಜತೆಗೆ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಭೂಸ್ವಾಧೀನಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಮನದಟ್ಟು ಮಾಡಿಕೊಟ್ಟರು.

ಗದಗ-ವಾಡಿ ಯೋಜನೆ 2028ರೊಳಗೆ, ಬಾಗಲಕೋಟೆ-ಕುಡಚಿ ಯೋಜನೆ 2026ರ ಡಿಸೆಂಬರ್ ಹೊತ್ತಿಗೆ ಪೂರ್ಣವಾಗಬೇಕು. ತುಮಕೂರು- ದಾವಣಗೆರೆ ಯೋಜನೆಯಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ 300 ಎಕರೆ ಕೊಡಬೇಕಾಗಿದೆ. ಜತೆಗೆ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಗ್ಯಾಸ್ ಪೈಪ್ ಲೈನ್, ವಿದ್ಯುತ್ ಕಂಬಗಳು ಎಲ್ಲವನ್ನೂ ಬದಲಿಸಬೇಕಾಗಿದೆ ಎಂದು ಅವರು ಮಾಹಿತಿ ನೀಡಿದರು. ಜೊತೆಗೆ ಕೃಷ್ಣಾ ಭಾಗ್ಯ ಜಲ ನಿಗಮದ ಉನ್ನತಾಧಿಕಾರಿ ಮೋಹನರಾಜ್ ಮತ್ತು ದಾವಣಗೆರೆ ಜಿಲ್ಲಾಧಿಕಾರಿಗೆ ಅವರು ಅಗತ್ಯ ಸೂಚನೆ ನೀಡಿದರು.

ತುಮಕೂರು- ರಾಯದುರ್ಗ ಯೋಜನೆ

ಗಿಣಿಗೇರಾ-ರಾಯಚೂರು ಯೋಜನೆ 2027ರ ಫೆಬ್ರವರಿ ಹೊತ್ತಿಗೆ ಸಂಪೂರ್ಣವಾಗಬೇಕು. ತುಮಕೂರು- ರಾಯದುರ್ಗ ಯೋಜನೆಗೆ ಈಗ ವೇಗ ಬಂದಿದೆ. ಕೊರಟಗರೆ- ಮಧುಗಿರಿ ನಡುವಿನ ಕಾಮಗಾರಿಗೆ ಈ ತಿಂಗಳಲ್ಲಿ ಟೆಂಡರ್ ಕರೆಯಲಾಗಿದೆ. ಮಧುಗಿರಿ-ಮಡಕಶಿರಾ ನಡುವಿನ ಕಾಮಗಾರಿಗೆ ಸೆಪ್ಟೆಂಬರಿನಲ್ಲಿ ಟೆಂಡರ್ ಕರೆಯಲಾಗುವುದು. ತುಮಕೂರು- ಕೊರಟಗೆರೆ ನಡುವಿನ 29 ಕಿ.ಮೀ. ಕಾಮಗಾರಿಗೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಇದು ಅಂತರರಾಜ್ಯ ಯೋಜನೆಯಾಗಿದ್ದು, 2027ರ ಜನವರಿಗೆ ಮುಕ್ತಾಯವಾಗಬೇಕು. ಮಧುಗಿರಿ-ಮಡಕಶಿರಾ ನಡುವೆ 63 ಎಕರೆ, ಕೊರಟಗೆರೆ-ಮಧುಗಿರಿ ಮಧ್ಯೆ 43 ಎಕರೆ ಮಾತ್ರ ಭೂಸ್ವಾಧೀನ ಬಾಕಿ ಇದೆ. ಆದ್ದರಿಂದ ಕಾಮಗಾರಿ ಚುರುಕಾಗಿ ನಡೆಯಬೇಕು ಎಂದು ಪಾಟೀಲ ನಿರ್ದೇಶಿಸಿದರು.

ಚಿಕ್ಕಮಗಳೂರು-ಹಾಡಿಹಳ್ಳಿ, ಹಾಡಿಹಳ್ಳಿ-ಬೇಲೂರು ಯೋಜನೆಗೆ ನೂರಕ್ಕೆ ನೂರರಷ್ಟು ಭೂಸ್ವಾಧೀನವಾಗಿದೆ. ಈ ಪೈಕಿ ಚಿಕ್ಕಮಗಳೂರು-ಹಾಡಿಹಳ್ಳಿ ನಡುವೆ ಕಾಮಗಾರಿ ಮುಗಿದಿದೆ. ಹಾಡಿಹಳ್ಳಿ-ಬೇಲೂರು ನಡುವಿನ 12 ಕಿ.ಮೀ. ಯೋಜನೆ ಒಂದು ವರ್ಷದಲ್ಲಿ ಮುಗಿಯಬೇಕು. ಹಾಗೆಯೇ ಹಾಸನ-ಬೇಲೂರು ಯೋಜನೆಗೆ 509 ಎಕರೆ ಬೇಕಾಗಿದೆ. ಭೂಸ್ವಾಧೀನ ಮುಗಿಸಿ, ತ್ವರಿತವಾಗಿ ಟೆಂಡರ್ ಕರೆಯಬೇಕು. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಮುಗಿಸಲಾಗಿದೆ. ಆದರೆ, ರೈಲ್ವೆ ಇಲಾಖೆಗೆ ದಾಖಲಾತಿ ಹಸ್ತಾಂತರವಾಗದೆ ಸಮಸ್ಯೆಯಾಗಿದೆ. ಇದನ್ನು ಕೂಡಲೇ ಬಗೆಹರಿಸಬೇಕು ಎಂದು ಹಾವೇರಿ ಜಿಲ್ಲಾಧಿಕಾರಿಗೆ ಸೂಚಿಸಿದರು.

ಧಾರವಾಡ-ಬೆಳಗಾವಿ ಯೋಜನೆ

ಈಗ ಧಾರವಾಡ-ಬೆಳಗಾವಿ ನಡುವೆ ಈಗಿನ ರೈಲು ಪಯಣ ಈಗ ಪ್ರಯಾಸಕರವಾಗಿದೆ. ಇದನ್ನು ನಾವು ಸುಗಮಗೊಳಿಸಬೇಕಿದೆ. ಇದಕ್ಕಾಗಿ 888 ಎಕರೆ ಭೂಮಿ ಬೇಕಾಗಿದೆ. ಇದು ಮುಗಿಯದೆ ಕಾಮಗಾರಿ ಆರಂಭ ಸಾಧ್ಯವಿಲ್ಲ. ಭೂಮಿ ಹಸ್ತಾಂತರವಾದರೆ 2027ರ ಕೊನೆಯ ವೇಳೆಗೆ ಕಾಮಗಾರಿ ಮುಗಿಸಬಹುದು ಎಂದು ಪಾಟೀಲ ನುಡಿದರು. ಈ ಸಂಬಂಧ ಅವರು ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ ಮತ್ತು ಸಂತೋಷ್ ಲಾಡ್ ಇಬ್ಬರನ್ನೂ ಸೇರಿಸಿಕೊಂಡು ಸಭೆ ನಡೆಸಲು ಸಚಿವರು ಸಲಹೆ ನೀಡಿದರು.

ಸಭೆಯಲ್ಲಿ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮಂಜುಳಾ, ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶ್ರೀಧರ ಮೂರ್ತಿ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ನೈರುತ್ಯ ರೈಲ್ವೆಯ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಅಜಯ ಶರ್ಮಾ, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಮೂರ್ತಿರಾಜು ಸೇರಿದಂತೆ ನೈರುತ್ಯ ರೈಲ್ವೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next