Advertisement

ಶಾಲಾರಾಂಭ ಹಿನ್ನೆಲೆಯಲ್ಲಿ ಪಾಲಕ- ಪೋಷಕರ ಸಹಕಾರ ಕೋರಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

03:27 PM Dec 20, 2020 | keerthan |

ಬೆಂಗಳೂರು: ಮಕ್ಕಳ ಶೈಕ್ಷಣಿಕ ಹಿತದೃಷ್ಡಿಯಿಂದ ಜ.1ರಿಂದ ಶಾಲೆ ಹಾಗೂ ವಿದ್ಯಾಗಮ ಆರಂಭದ ಮಹತ್ವದ ನಿರ್ಧಾರ ಸರ್ಕಾರ ತೆಗೆದುಕೊಂಡಿದ್ದು, ಈ ಕಾರ್ಯ ಯಶಸ್ವಿಯಾಗಬೇಕೆಂದರೆ ಪೋಷಕರ, ಶಾಲಾ ಅಭಿವೃದ್ಧಿ ಸಮಿತಿ ಗಳ ಮತ್ತು ಶಿಕ್ಷಕರ ಸಮನ್ವಯ ಮತ್ತು ಪೂರ್ಣ ಸಹಕಾರ ಅಗತ್ಯ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

Advertisement

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಒಮ್ಮೆ ಯೋಚಿಸಿ ಶಾಲೆಗಳಿಗೆ ಮಕ್ಕಳನ್ನು ಕಳಿಸಬೇಕೆಂದು ಆಗ್ರಹಿಸಿದ್ದಾರೆ.

2020ರ ಎಸ್ ಎಸ್ಎಲ್ ಸಿ ಪರೀಕ್ಷೆಯ ಪರೀಕ್ಷಾ ಕೇಂದ್ರಗಳಿಂದ ಹೇಗೆ ಸೋಂಕು ಹರಡದಂತೆ ನೋಡಿಕೊಂಡಿದ್ದೆವೋ,  ಅದೇ ರೀತಿ ಈಗ ಶಾಲೆಗಳಿಂದ ಸೋಂಕು ಬರದಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಇದಕ್ಕಾಗಿ ಸರ್ಕಾರದ ವಿವಿಧ ಇಲಾಖೆಗಳ ಸಹಕಾರ ನಮಗಿದೆ. ಎಸ್ ಎಸ್ಎಲ್ ಸಿ ಪರೀಕ್ಷಾ ಸಂದರ್ಭದಲ್ಲಿ ಆ ನಮ್ಮ ವಿದ್ಯಾರ್ಥಿಗಳು ನಡೆದುಕೊಂಡ ರೀತಿ ಇಡೀ ರಾಜ್ಯಕ್ಕೇ ಮಾದರಿಯಾಗಿತ್ತು. ಅದೇ ರೀತಿ ಈಗ ನಮ್ಮ ಎಸ್ ಎಸ್ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ವರ್ತಿಸುವ ಅಗತ್ಯವಿದೆ ಎಂದಿದ್ದಾರೆ.

ಇದನ್ನೂ ಓದಿ:ಈ ಬಿಕ್ಕಟ್ಟಿಗೆ ಸಿಎಂ ಯಡಿಯೂರಪ್ಪ, ಸಚಿವ ಸುರೇಶ್ ಕುಮಾರ್ ಹೊಣೆ: ಸಿದ್ದರಾಮಯ್ಯ

ಎಸ್ ಎಸ್ಎಲ್ ಸಿ ಮತ್ತು ಎರಡನೇ ಪಿಯುಸಿ ವಿದ್ಯಾರ್ಥಿಗಳಿಗೆ ಯಾವುದೇ ಹೊರೆಯಾಗದಂತೆ, ಯಾವುದೇ ಒತ್ತಡ ಅವರ ಮೇಲೆ ಬೀಳದಂತೆ, ಆದರೆ ಅವರ ಕಲಿಕೆಗೆ ಲೋಪವಾಗದಂತೆ ಸಿಲಬಸ್ (Syllabus) ರಚಿಸಿ ಇನ್ನು ಒಂದು ವಾರದ ಒಳಗೆ ಪ್ರಕಟ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

Advertisement

ಶಾಲೆಗಳನ್ನು ಆರಂಭಿಸುತ್ತಿರುವುದು ಒಂದು ದೊಡ್ಡ ಸವಾಲು. ಕಳೆದ ಜೂನ್ – ಜುಲೈ ತಿಂಗಳುಗಳಲ್ಲಿ ನಡೆದ ಎಸ್ ಎಸ್ಎಲ್ ಸಿ ಪರೀಕ್ಷೆಗಳೂ ಒಂದು ದೊಡ್ಡ ಸವಾಲಾಗಿದ್ದವು. ಆದರೆ ಆಗ ನಮ್ಮ ಎಲ್ಲ ಜನಪ್ರತಿನಿಧಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ನೀಡಿದ ಸಹಕಾರದಿಂದ ದೊಡ್ಡ ಸವಾಲನ್ನು ಎದುರಿಸಲು ಸಾಧ್ಯವಾಯಿತು.  ಅದೇ ರೀತಿ ಈಗಿನ ಶಾಲೆಗಳನ್ನು ನಡೆಸುವ ಸವಾಲನ್ನೂ ಸಹ ಯಶಸ್ವಿಯಾಗಿ ಎದುರಿಸಲು ಜನಪ್ರತಿನಿಧಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ಎಲ್ಲಾ ಸಹಕಾರ ನೀಡುತ್ತಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಎಸ್ ಎಸ್ಎಲ್ ಸಿ ಪರೀಕ್ಷೆಗಳು ನಡೆದಾಗ ನಾಡಿನ ಎಲ್ಲಾ ಪತ್ರಿಕೆಗಳು ಹಾಗೂ ಸುದ್ದಿ ಚಾನೆಲ್ ಗಳು ನೀಡಿದ ಬೆಂಬಲ ಮರೆಯುವಂತಿಲ್ಲ. ನಮ್ಮ ಮಕ್ಕಳ ಆರೋಗ್ಯ ಹಾಗೂ ಅವರ ಶೈಕ್ಷಣಿಕ ಭವಿಷ್ಯ ಎರಡನ್ನು ಜೊತೆಜೊತೆಯಾಗಿ ಇಂದು ಜೋಪಾನವಾಗಿ ಗಮನಿಸಿ ಅಗತ್ಯ ವ್ಯವಸ್ಥೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ಕಾರ್ಯ ಯಶಸ್ವಿಯಾಗಲು ಎಲ್ಲರ ಸಹಕಾರ ಸಹಾಯ ಕೋರುತ್ತೇನೆ ಎಂದು ಸುರೇಶ್ ಕುಮಾರ್ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next