Advertisement

ಕಪ್ಪತಗುಡ್ಡಕ್ಕೆ ಗಣಿಗಾರಿಕೆ ಗುಮ್ಮ?

08:04 AM May 26, 2020 | Suhan S |

ಹುಬ್ಬಳ್ಳಿ: ಸಹ್ಯಾದ್ರಿಯ ಸೆರಗಿನಂತಿರುವ, ಅತ್ಯಮೂಲ್ಯ ಔಷಧಿ ಸಸ್ಯಗಳನ್ನು ಹೊಂದಿರುವ ಗದುಗಿನ ಕಪ್ಪತಗುಡ್ಡದ ಮೇಲೆ ಮತ್ತೆ, ಮತ್ತೆ ಗಣಿಗಾರಿಕೆ ಗುಮ್ಮ ಕಾಡುತ್ತಿದೆ. ವಿಶೇಷವಾಗಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೊಮ್ಮೆ ಇದು ವಿಜೃಂಭಿಸುತ್ತದೆಯೇ ಎಂಬ ಶಂಕೆ ವ್ಯಕ್ತವಾಗತೊಡಗಿದೆ.

Advertisement

ಕಪ್ಪತಗುಡ್ಡ ಉತ್ತರ ಕರ್ನಾಟಕದ ಪ್ರಮುಖ ತಾಣವಾಗಿದ್ದು, ದೇಶದಲ್ಲಿ ಕೆಲ ವಿರಳ ಔಷಧಿ ಸಸ್ಯಗಳನ್ನು ಹೊಂದಿದ ಕೆಲವೇ ತಾಣಗಳಲ್ಲಿ ಒಂದಾಗಿದೆ. ಆದರೆ ಗಣಿಗಾರಿಕೆ ಬಯಸುವವರು ಮಾತ್ರ ಇದೊಂದು ಅಷ್ಟೊಂದು ಮಹತ್ವ ಅಲ್ಲದ ಕುರುಚಲು ಗುಡ್ಡ ಎಂದೇ ಬಿಂಬಿಸುವ ಯತ್ನಕ್ಕೆ ಮುಂದಾಗುತ್ತಿದ್ದು, ಹಲವು ಸರಕಾರಗಳು ಇದಕ್ಕೆ ಕಾಲ ಕಾಲಕ್ಕೆ ತಮ್ಮ ಬೆಂಬಲ ಸೂಚಿಸುತ್ತ ಬಂದಿವೆ.

ಈ ಹಿಂದೆ ಕಪ್ಪತಗುಡ್ಡಕ್ಕೆ ಬಂದೆರಗಿದ್ದ ಕಾರ್ಮೋಡವನ್ನು ಹೋರಾಟದ ಮೂಲಕ ಹೋಗಲಾಡಿಸ ಲಾಗಿತ್ತಾದರೂ, ಇದೀಗ ಕೋವಿಡ್ ಸಂಕಷ್ಟ ಸಂದರ್ಭದಲ್ಲೇ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ರಾಕ್ಷಸ ಮತ್ತೆ ಕೇಕೆ ಹಾಕಲು ಮುಂದಾಗುತ್ತಿದ್ದಾನೆಂಬ ಸುದ್ದಿ ಹರಿದಾಡುತ್ತಿರುವುದು ಆ ಭಾಗದ ಜನರಲ್ಲಿ ಆತಂಕ ಮೂಡಿಸುವಂತಾಗಿದೆ.

ಬಲ್ಡೋಟಾ ಸದ್ದು: ಈ ಹಿಂದೆ ದಕ್ಷಿಣ ಕೊರಿಯಾದ ಗಣಿಗಾರಿಕೆ ಕಂಪೆನಿ ಪೋಸ್ಕೊ ಕಪ್ಪತಗುಡ್ಡವನ್ನು ಕೇಂದ್ರೀಕರಿಸಿಕೊಂಡೇ ಹಳ್ಳಿಗುಡಿಯ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಮುಂದಾಗಿದ್ದರು. ಜನರನ್ನು ಮರಳು ಮಾಡಿ ಜಮೀನು ಖರೀದಿ ಪ್ರಕ್ರಿಯೆ ಕೈಗೊಂಡಿದ್ದರು. ಅಂದಿನ ಬಿಜೆಪಿ ಸರಕಾರ ಇದಕ್ಕೆ ತನ್ನ ಸಮ್ಮತಿ ನೀಡಿತ್ತಷ್ಟೇ ಅಲ್ಲದೇ, ಬಲವಾಗಿ ಸಮರ್ಥಿಸಿಕೊಂಡಿತ್ತು ಕೂಡ. ಗದಗ ತೋಂಟದಾರ್ಯ ಮಠದ ಡಾ|ಸಿದ್ಧಲಿಂಗ ತೋಂಟದಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಹೋರಾಟ ತೀವ್ರಗೊಂಡಿತ್ತು. ಈ ಹೋರಾಟ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿತ್ತು. ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಸೇರಿದಂತೆ ಅನೇಕ ಹೋರಾಟಗಾರರು ಪಾಲ್ಗೊಂಡಿದ್ದರು. ರಾಜಕೀಯವಾಗಿಯೂ ಇದು ತನ್ನದೇ ಮಹತ್ವ ಪಡೆದು, ಬಿಜೆಪಿಯೇತರ ಪಕ್ಷಗಳು ಇದರ ವಿರುದ್ಧ ಹೋರಾಟಕ್ಕಿಳಿದಿದ್ದವು. ಏನೆಲ್ಲಾ ಗಿಮಿಕ್‌, ಒಡೆದಾಳುವ ತಂತ್ರಗಾರಿಕೆ, ಒತ್ತಡ, ಗಣಿಗಾರಿಕೆ ಪರವಾದ ವಾದ, ಹೋರಾಟ, ಸರಕಾರದ ಮುಂದೆ ಮತ ಪ್ರದರ್ಶನದಂತಹ ಸರ್ಕಸ್‌ ನಂತರವೂ ಸರಕಾರ ಜನ ಹೋರಾಟಕ್ಕೆ ಮಣಿದು ಅಂತಿಮವಾಗಿ ಗಣಿಗಾರಿಕೆಗೆ ನೀಡಿದ್ದ ಒಪ್ಪಿಗೆ ಹಿಂಪಡೆದಿತ್ತು.

ಪೋಸ್ಕೋ ಹೋರಾಟದಲ್ಲಿ ಪರೋಕ್ಷ ರೀತಿಯಲ್ಲಿ ಬೆಂಬಲದಂತಿದ್ದ ಬಲ್ಡೋಟಾ ಕಂಪೆನಿ ಪೋಸ್ಕೊ ಗದುಗಿನಿಂದ ಕಾಲು ಕೀಳುತ್ತಿದ್ದಂತೆಯೇ, ಚಿನ್ನದ ಗಣಿಗಾರಿಕೆಗೆಂದು ತಾನು ಗುರುತಿಸಿದ್ದ ಜಾಗದಲ್ಲಿ ಒಂದೊಂದೇ ರೀತಿಯ ಬಲೆ ಹೆಣೆಯುವ ಕಾರ್ಯಕ್ಕೆ ಮುಂದಾಗಿತ್ತು. ಬಲ್ಡೋಟಾ ಕಂಪೆನಿ ಚಿನ್ನದ ಗಣಿಗಾರಿಕೆಗೆಂದು ಈಗಾಗಲೇ ಕಪ್ಪತಗುಡ್ಡದ ಸೆರಗಿನಲ್ಲಿಯೇ ಭೂಮಿ ಖರೀದಿಸಿದ್ದು, ಜನರಿಗೆ ಸ್ವರ್ಗವನ್ನೇ ತಂದಿಡುವ ಭರವಸೆಗಳನ್ನು ನೀಡಿದೆ. ಜನರಿಗೆ ಉದ್ಯೋಗ, ಶುದ್ಧ ಕುಡಿಯುವ ನೀರು, ಶಾಲೆಗಳ ನಿರ್ಮಾಣ, ಪರಿಸರ ಕಾಳಜಿ, ಸಾಮಾಜಿಕ ಸೇವೆ ಏನೆಲ್ಲಾ ಭರವಸೆಗಳೊಂದಿಗೆ ನಂಬಿಸುವ ಕಾರ್ಯ ಮಾಡಿತ್ತಾದರೂ, ಚಿನ್ನದ ಗಣಿಗಾರಿಕೆಯಿಂದ ಆಗಬಹುದಾದ ಅಪಾಯ ಅರಿತಿದ್ದ ಅನೇಕರು ಇದರ ವಿರುದ್ಧ ಹೋರಾಟ ಕೈಗೊಂಡಿದ್ದರು.

Advertisement

ಬಲ್ಡೋಟಾ ಕಂಪೆನಿ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ, ದಿಲ್ಲಿ ಮಟ್ಟದಲ್ಲೂ ರಾಜಕೀಯವಾಗಿ ತನ್ನದೇ ಪ್ರಭಾವ ಹೊಂದಿದ್ದು, ಇದನ್ನು ಬಳಸಿಕೊಂಡು ಈ ಹಿಂದೆ ಗಣಿಗಾರಿಕೆ ಆರಂಭಕ್ಕೆ ಯತ್ನ ಮಾಡಿದ್ದು, ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಆಗಂತ ಕಂಪೆನಿ ಸುಮ್ಮನೆ ಕುಳಿತಿಲ್ಲ.ಬದಲಾಗಿ ನಿರಂತರ ಯತ್ನ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಕಪ್ಪತಗುಡ್ಡಕ್ಕಿದ್ದ ಸಂರಕ್ಷಿತ ಅರಣ್ಯ ಪ್ರದೇಶ ಮಾನ್ಯತೆ ಹಿಂಪಡೆದಾಗಲೂ ಜನರ ವಿರೋಧ ವ್ಯಕ್ತವಾಗಿತ್ತು. ನಂತರ ಅದಕ್ಕೆ ವನ್ಯಧಾಮ ಸ್ಥಾನ ನೀಡಲಾಗಿದ್ದು, ಇದನ್ನು ಹಿಂಪಡೆಯುವಂತೆ ಮಾಡಲು ಅನೇಕ ಶಕ್ತಿಗಳು ಯತ್ನಿಸುತ್ತಿವೆ. ಇದರ ನಡುವೆ ಇದೀಗ ಕಪ್ಪತಗುಡ್ಡದಲ್ಲಿ ಮತ್ತೆ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತಿದೆ ಎಂಬ ಸುದ್ದಿ ಜನರನ್ನು, ಹೋರಾಟಗಾರರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಕಪ್ಪತಗುಡ್ಡದಲ್ಲಿ ಮತ್ತೆ ಗಣಿಗಾರಿಕೆಗೆ ಅವಕಾಶ ನೀಡುವ ಯತ್ನಗಳು ಸರಕಾರ ಮಟ್ಟದಲ್ಲಿ ನಡೆಯುತ್ತಿವೆ ಎಂಬ ಸಣ್ಣ ಸುಳಿವು ಗದಗ ಜಿಲ್ಲೆಯಲ್ಲಿ ಸುಳಿದಾಡತೊಡಗಿದೆ. ಬಲ್ಡೋಟಾ ಕಂಪೆನಿಗೆ ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತದೆಯೋ ಅಥವಾ ಇನ್ನಾವುದಾದರೂ ಕಂಪೆನಿಗೆ ಗಣಿಗಾರಿಕೆಗೆ ನೀಡಲಾಗುತ್ತದೆಯೋ ಎಂಬ ಅನುಮಾನ ಜನರಲ್ಲಿ ಮೂಡಿದೆ. ಇದಕ್ಕೆ ಪೂರಕ ಎನ್ನುವಂತೆ ಬಲ್ಡೋಟಾ ಕಂಪೆನಿಯವರು ಇತ್ತೀಚೆಗಷ್ಟೇ ಈಗಾಗಲೇ ಖರೀದಿಸಿರುವ ಕಪ್ಪತಗುಡ್ಡದ ಬಳಿಯ ಜಮೀನು ಪರಿಶೀಲನೆ ಇನ್ನಿತರ ಕಾರ್ಯಕ್ಕೆ ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.

ಕೋವಿಡ್ ವರದಾನವಾಗಿಸುವ ಯತ್ನ: ಕೋವಿಡ್ ಸಂಕಷ್ಟ ಇಡೀ ಜಗತ್ತನ್ನೇ ಕಾಡುತ್ತಿದ್ದರೆ, ಕೆಲವರು ಅದನ್ನು ತಮ್ಮ ವರದಾನವಾಗಿಸುವ ಯತ್ನಕ್ಕೆ ಮುಂದಾಗಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಕೋವಿಡ್ ಸಂಕಷ್ಟದಲ್ಲಿ ಜನರಿಗೆ ಉದ್ಯೋಗ ನೀಡುವ ಮೂಗಿನ ತುದಿಯ ತುಪ್ಪವನ್ನೇ ಬಂಡವಾಳವಾಗಿಸಿಕೊಂಡು, ಗಣಿಗಾರಿಕೆ ನಡೆದಲ್ಲಿ ಜನರಿಗೆ ಉದ್ಯೋಗ ದೊರೆಯಲಿದೆ, ಸರಕಾರಕ್ಕೆ ಆದಾಯ ಬರಲಿದೆ ಎಂದು ನಂಬಿಸುವ ಯತ್ನಗಳು ನಡೆಯುತ್ತಿವೆ. ಕೋವಿಡ್ ಸಂದಿಗ್ಧ ಸ್ಥಿತಿಯಲ್ಲಿ ಇಂತಹ ಯತ್ನಗಳನ್ನು ಕೈಗೊಂಡರೆ ದೊಡ್ಡ ಪ್ರತಿರೋಧ ಎದುರಾಗಲಿಕ್ಕಿಲ್ಲ ಎಂಬ ಚಿಂತನೆಯೂ ಇದ್ದಿರಬಹುದಾಗಿದೆ ಎಂದು ಹೇಳಲಾಗುತ್ತಿದೆ. ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ. ಒಂದು ವೇಳೆ ಸರಕಾರ ಅಂತಹ ಯತ್ನಕ್ಕೆ ಮುಂದಾದರೆ ಜನ ಹೋರಾಟಕ್ಕಿಳಿಯುವುದಾಗಿ ಗದಗ ತೋಂಟದಾರ್ಯ ಮಠದ ಡಾ| ಸಿದ್ಧರಾಮ ತೋಂಟದಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದು, ಪರಿಸರ ಹೋರಾಟಗಾರ ಎಸ್‌.ಆರ್‌.ಹಿರೇಮಠ ಇನ್ನಿತರರು ಕಪ್ಪತಗುಡ್ಡ ಉಳಿವಿಗೆ ಮತ್ತೂಂದು ಹಂತದ ಹೋರಾಟಕ್ಕೆ ಕಂಕಣ ತೊಟ್ಟಿದ್ದಾರೆ.

ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವ ಮಾತೇ ಇಲ್ಲ. ಪ್ರಾಣ ಹೋದರೂ ಚಿಂತೆ ಇಲ್ಲ. ಕಪ್ಪತಗುಡ್ಡ ಉಳಿಸಿಕೊಳ್ಳುವ ಹೋರಾಟ ಮಾಡುತ್ತೇವೆ. ಸರಕಾರ ವನ್ಯಧಾಮ ಎಂದು ಘೋಷಣೆ ಮಾಡಿದೆಯಾದರೂ, ಇಲ್ಲಿ ಔಷಧಿ ಸಸ್ಯಗಳ ಬೆಳೆಸುವ ನಿಟ್ಟಿನಲ್ಲಿ ಸಮರ್ಪಕ ರೀತಿಯ ಕ್ರಮ ಕೈಗೊಳ್ಳದಿರುವುದು ಹಾಗೂ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತಿದೆ ಎಂಬ ಸುದ್ದಿ ಹಲವು ಅನುಮಾನಕ್ಕೆ ಕಾರಣವಾಗಿದೆ. -ಚಂದ್ರಕಾಂತ ಚವ್ಹಾಣ, ಕಪ್ಪತಗುಡ್ಡ ಸಂರಕ್ಷಣೆ ಹೋರಾಟಗಾರ

 

­– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next