Advertisement

ಕಸ ಎಸೆತ ತಡೆಯಲು ಮಿನಿ ಗಾರ್ಡನ್‌

10:25 PM Oct 11, 2021 | Team Udayavani |

ಉಡುಪಿ: ತ್ಯಾಜ್ಯಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ನಗರಸಭೆ ಕಳೆದ ಹಲವು ವರ್ಷಗಳಿಂದ ಪ್ರಯತ್ನಿಸುತ್ತಾ ಬರುತ್ತಿದ್ದರೂ ಅಷ್ಟಾಗಿ ಯಶಸ್ಸು ಕಾಣುವಲ್ಲಿ ವಿಫ‌ಲವಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದು, ಕಸ ಎಸೆಯುವ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಮಿನಿ ಗಾರ್ಡನ್‌ ನಿರ್ಮಿಸಲು ಮುಂದಾಗಿದೆ.

Advertisement

ನಗರ ವ್ಯಾಪ್ತಿಯಲ್ಲಿ ಈ ಹಿಂದೆ 35 ವಾರ್ಡ್‌ ಗಳಲ್ಲಿ 500ಕ್ಕೂ ಅಧಿಕ ಬ್ಲ್ಯಾಕ್‌ ಸ್ಪಾಟ್‌ಗಳು ಇದ್ದವು. ನಿರಂತರವಾದ ಸ್ವಚ್ಛತೆ ಹಾಗೂ ದಂಡ ಅನುಷ್ಠಾನದಿಂದ ಇದೀಗ ಕಸ ಎಸೆಯುವ ತಾಣಗಳ ಸಂಖ್ಯೆ 150ಕ್ಕೆ ಇಳಿಕೆಯಾಗಿದೆ. ಬ್ಲ್ಯಾಕ್‌ ಸ್ಪಾಟ್‌ಗಳನ್ನು ಶೂನ್ಯಕ್ಕೆ ತಲುಪಿಸಲು ನಗರಸಭೆ ಕೆಲವು ತಿಂಗಳಿನಿಂದ ಸುಹಾಸ್‌ ಸಂಸ್ಥೆಯೊಂದಿಗೆ ವಾರ್ಡ್‌ ವ್ಯಾಪ್ತಿಯಲ್ಲಿ ಬ್ಲ್ಯಾಕ್‌ ಸ್ಪಾಟ್‌ ಸ್ಥಳ ಗುರುತಿಸಿ, ಮಿನಿಗಾರ್ಡನ್‌ ನಿರ್ಮಾಣಕ್ಕೆ ಮುಂದಾಗಿದೆ.

ಕಸದ ಕೊಂಪೆ ಕೈದೋಟ
ಪ್ರಸ್ತುತ ತ್ಯಾಜ್ಯ ಎಸೆಯುವ ಜಾಗಗಳನ್ನು ಗುರುತಿಸಿ, ಅಲ್ಲಿನ ಪ್ರದೇಶವನ್ನು ಸ್ವಚ್ಛ ಗೊಳಿಸಲಾಗುತ್ತದೆ. ತದನಂತರ ಆ ಪ್ರದೇಶದಲ್ಲಿ ಅನುಪಯುಕ್ತ ವಸ್ತುಗಳಾದ ಟೈಯರ್‌ ಹಾಗೂ ಇತರ ವಸ್ತುಗಳಲ್ಲಿ ಸುಂದರವಾಗಿ ಹೂವಿನ ಮತ್ತು ಆಲಂಕಾರಿಕ ಗಿಡಗಳನ್ನು ನೆಡಲಾಗಿದೆ. ಜತೆಗೆ ಈ ಗಿಡಗಳ ರಕ್ಷಣೆಗೆ ಹಗ್ಗ ಹಾಗೂ ಬಿದಿರನ್ನು ಬಳಸಿಕೊಂಡು ತಡಬೇಲಿಯನ್ನು ನಿರ್ಮಿಸಲಾಗುತ್ತಿದೆ. ಆ ಮೂಲಕ ಗಿಡಗಳನ್ನು ಹಸುಗಳು ತಿನ್ನದಂತೆ ಎಚ್ಚರವಹಿಸಲಾಗುತ್ತಿದೆ.

ಮೂರು ಕಡೆ ಯಶಸ್ವಿ
ನಗರ ವ್ಯಾಪ್ತಿಯಲ್ಲಿ ಈಗಾಗಲೇ ಮೂರು ಕಡೆಯಲ್ಲಿ ಕೈದೋಟ ನಿರ್ಮಿಸಲಾಗಿದೆ. ಚಿಟ್ಪಾಡಿ, ಅಂಬಲಪಾಡಿ ಸಂದೀಪ್‌ ನಗರ, ಮಲ್ಪೆ ಪೊಲೀಸ್‌ ಠಾಣೆಯ ಸಮೀಪದಲ್ಲಿ ಕೈದೋಟವನ್ನು ನಿರ್ಮಿಸಲಾಗಿದೆ. ಈ ಹಿಂದೆ ನಗರಸಭೆಯಿಂದ ಎಚ್ಚರಿಕೆ ಬೋರ್ಡ್‌ ಹಾಕಿದರೂ, ಜನರು ಕಸ ಎಸೆಯುವುದನ್ನು ಮಾತ್ರ ಕಡಿಮೆ ಮಾಡಿರಲಿಲ್ಲ. ಇದೀಗ ಈ ಪ್ರದೇಶದಲ್ಲಿ ಸುಂದರವಾದ ಕೈತೋಟ ನಿರ್ಮಾಣವಾಗಿರುವುದರಿಂದ ಸಾರ್ವ ಜನಿಕರು ಕಸ ಎಸೆಯುವುದನ್ನು ನಿಲ್ಲಿಸಿರುವು ದಾಗಿ ನಗರಸಭೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಕಮಲ್‌ ಪುತ್ರ ಬಕುಲ್‌ನಾಥ್‌ ವಿರುದ್ಧ ಹೊಸ ಸಾಕ್ಷ್ಯ ಬಿಚ್ಚಿಟ್ಟ “ಪಂಡೊರಾ’

Advertisement

ದಂಡದ ಬಿಸಿ
ನಗರಸಭೆ ವ್ಯಾಪ್ತಿಯ ರಾ.ಹೆ. ಸೇರಿದಂತೆ ನಗರ ವ್ಯಾಪ್ತಿಯ ರಸ್ತೆ, ಖಾಲಿ ನಿವೇಶನದಲ್ಲಿ ಕಸ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ನಗರಸಭೆ ದಂಡ ಅನುಷ್ಠಾನಗೊಳಿಸಿದೆ.

ಕಸ ಎಸೆಯುವವರಿಂದ 100ರಿಂದ 25,000 ರೂ. ವರೆಗೆ ದಂಡ ವಿಧಿಸಲಾಗುತ್ತಿದೆ. ಇಲ್ಲಿಯವರೆಗೆ 217 ಪ್ರಕರಣದಲ್ಲಿ 3.75 ಲ.ರೂ. ದಂಡವನ್ನು ಸಂಗ್ರಹಿಸಲಾಗಿದೆ. ರಸ್ತೆಯಲ್ಲಿ ಎಸೆದ ಕಸದಲ್ಲಿ ಸಿಕ್ಕಿರುವ ಬಿಲ್‌ ಹಾಗೂ ಇತರ ಮಾಹಿತಿಯನ್ನು ಹಿಡಿದುಕೊಂಡು ಕಸ ಎಸೆಯುವವರನ್ನು ಪತ್ತೆ ಹಚ್ಚಿ ದಂಡದ ಬಿಲ್‌ ಮನೆಗೆ ತಲುಪಿಸಿ, ಎಚ್ಚರಿಕೆ ನೀಡಲಾಗಿದೆ.

ಮಾಹಿತಿ ನೀಡಿ!
ಸಾರ್ವಜನಿಕ ಸ್ಥಳ, ವಾಹನದಲ್ಲಿ ರಸ್ತೆಯ ಸಮೀಪದ ನದಿಗಳಿಗೆ ಕಸ ಎಸೆಯುವವರು ಮಾಹಿತಿಯನ್ನು ಸಾರ್ವಜನಿಕರು ನಗರ ಸಭೆಯ ಅಧಿಕಾರಿಗಳಿಗೆ ನೀಡಬಹುದಾಗಿದೆ. ಮಾಹಿತಿದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ. ವಾಹನದಲ್ಲಿ ಕಸ ಎಸೆಯುವವರ ವಾಹನ ಸಂಖ್ಯೆ ನೀಡಿದರೆ ಅವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತದೆ. ದೂರವಾಣಿ ಸಂಖ್ಯೆ: 0820 2520306 ಅನ್ನು ಸಂಪರ್ಕಿಸಬಹುದು.

ಸಾರ್ವಜನಿಕರ ಜವಾಬ್ದಾರಿ ಏನು?
-ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯಬೇಡಿ.
– ಕಸ ಎಸೆಯುವವರ ಮಾಹಿತಿ ನೀಡಿ
– ಮಿನಿ ಗಾರ್ಡನ್‌ ನಿರ್ವಹಣೆಗೆ ಮುಂದಾಗಿ

ಕೈದೋಟ ನಿರ್ಮಾಣ
ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯುವ ಪ್ರದೇಶವನ್ನು ಗುರುತಿಸಿದ್ದು, ಎಸೆಯುವವರಿಗೆ ದಂಡ ವಿಧಿಸಲಾಗುತ್ತಿದೆ. ಜತೆ ಅತಿಯಾಗಿ ಕಸ ಎಸೆಯುವ ಪ್ರದೇಶವನ್ನು ಸ್ವಚ್ಛಗೊಳಿಸಿ, ಕೈದೋಟವನ್ನು ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಆ ಪ್ರದೇಶದಲ್ಲಿ ಕಸ ಎಸೆಯುವುದು ಕಡಿಮೆಯಾಗುತ್ತಿದೆ. ಇದನ್ನು ಸಮೀಪದ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳ ಸಹಕಾರದಿಂದ ನಿರ್ವಹಣೆ ಮಾಡಲಾಗುತ್ತದೆ.
ಕರುಣಾಕರ್‌, ಆರೋಗ್ಯಾಧಿಕಾರಿ
ನಗರಸಭೆ ಉಡುಪಿ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next