Advertisement

ಮೇರೆ ಪಾಸ್‌ ”ಮಾರ್ಕ್ಸ್ ಹೈ

12:30 AM Mar 05, 2019 | |

ಪರೀಕ್ಷೆ ಸಮೀಪಿಸುತ್ತಿದ್ದಂತೆ ಪೋಷಕರಲ್ಲಿ ಅನೇಕರು ತಮ್ಮ ಮಕ್ಕಳ ಬಗ್ಗೆ ಅಪಾರ ನಿರೀಕ್ಷೆಗಳನ್ನಿಟ್ಟುಕೊಂಡು, ಇಲ್ಲದ ಒತ್ತಡ ಹೇರಲು ಪ್ರಾರಂಭಿಸುತ್ತಾರೆ. ಇದರಿಂದ ಮಕ್ಕಳ ಮೇಲಾಗುವ ಪರಿಣಾಮವನ್ನು ಕೆಲವರು ಯೋಚಿಸುವುದಿಲ್ಲ…

Advertisement

ಲಬ್‌ ಡಬ್‌ ಲಬ್‌ ಡಬ್‌! ಅಯ್ಯೋ, ಪರೀಕ್ಷೆ…! ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ, ಪೋಷಕರಲ್ಲಿ ಏನೋ ಒಂದು ಉದ್ವೇಗ, ನಿರೀಕ್ಷೆ, ಹತಾಶೆ. ಮೇಲೆ ಹೇಳಿದ ಪ್ರತಿಯೊಬ್ಬರ ಮನಸ್ಸಿನಲ್ಲೂ ಪರೀಕ್ಷೆಯ ಫ‌ಲಿತಾಂಶದ ಬಗ್ಗೆಯೇ ಯೋಚನೆ. ಶಿಕ್ಷಕರು ಕೊನೆಯ ಹಂತದ ಎಲ್ಲಾ ಬಾಣಗಳನ್ನೂ ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸಿ, ಫ‌ಲಿತಾಂಶ ಉತ್ತಮಪಡಿಸಲು ಪ್ರಯತ್ನಿಸಿದರೆ, ಅನೇಕ ವಿದ್ಯಾರ್ಥಿಗಳು ಇಲ್ಲಿಯವರೆಗಿನ ತುಂಟಾಟ, ತರಲೆಗಳನ್ನು ಬದಿಗೊತ್ತಿ, ಸ್ವಲ್ಪ ಸೀರಿಯಸ್‌ ಆಗಿ ಓದಲು ಪ್ರಾರಂಭಿಸುತ್ತಾರೆ. ಇನ್ನು ಪರೀಕ್ಷೆ ಸಮೀಪಿಸುತ್ತಿದ್ದಂತೆ ಪೋಷಕರಲ್ಲಿ ಅನೇಕರು ತಮ್ಮ ಮಕ್ಕಳ ಬಗ್ಗೆ ಅಪಾರ ನಿರೀಕ್ಷೆಗಳನ್ನಿಟ್ಟುಕೊಂಡು, ಇಲ್ಲದ ಒತ್ತಡ ಹೇರಲು ಪ್ರಾರಂಭಿಸುತ್ತಾರೆ. ಇದರಿಂದ ಮಕ್ಕಳ ಮೇಲಾಗುವ ಪರಿಣಾಮವನ್ನು ಕೆಲವರು ಯೋಚಿಸುವುದಿಲ್ಲ. 

ಅಯ್ಯೋ, ಮಾರ್ಕ್ಸ್ ಬರಲೇ ಇಲ್ಲ..!
ನಮ್ಮ ಶಾಲೆಯಲ್ಲಿ ಮೊದಲ ಪೂರ್ವಸಿದ್ಧತಾ ಪರೀಕ್ಷೆ ಮುಗಿದು, ಮೌಲ್ಯಮಾಪನವೂ ಆಯಿತು. ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಚೆನ್ನಾಗಿ ಬರೆದಿದ್ದರು. ಆದರೆ, ತುಂಬಾ ನಿರೀಕ್ಷೆ ಹಾಗೂ ಭರವಸೆ ಇಟ್ಟುಕೊಂಡಿದ್ದ ಕೆಲವು ವಿದ್ಯಾರ್ಥಿಗಳು ನನ್ನ ನಿರೀಕ್ಷೆ ಸಂಪೂರ್ಣ ಹುಸಿಯಾಗುವಂತೆ ಪರೀಕ್ಷೆ ಬರೆದಿದ್ದರು. ಬೇರೆ ವಿಷಯಗಳ ಶಿಕ್ಷಕರನ್ನು ವಿಚಾರಿಸಿದಾಗ ಅಲ್ಲೂ ಅದೇ ಉತ್ತರ! ಆಶ್ಚರ್ಯವಾಯಿತು. ಆ ವಿದ್ಯಾರ್ಥಿಗಳಿಗೆಲ್ಲ ತಮ್ಮ ಪೋಷಕರನ್ನು ಕರೆದುಕೊಂಡು ಬರುವಂತೆ ಸೂಚಿಸಿದ್ದೆ.

ಅವರಲ್ಲಿ ಯಾವಾಗಲೂ ಚಟುವಟಿಕೆಯಿಂದ ಇರುತ್ತಿದ್ದ, ಓದಿನಲ್ಲೂ ಬೇರೆಯವರಿಗಿಂತ ತುಂಬಾ ಮುಂದಿದ್ದ ಒಬ್ಬ ವಿದ್ಯಾರ್ಥಿನಿ ಕೆಲವು ದಿನಗಳಿಂದ ತುಂಬಾ ನರ್ವಸ್‌ ಆಗಿದ್ದಳು. ಅಂಕಗಳೂ ಪರೀಕ್ಷೆಯಲ್ಲಿ ನಾವಂದುಕೊಂಡದ್ದಕ್ಕಿಂತ ತೀರಾ ಕಡಿಮೆ ಬಂದಿದ್ದವು. ಆ ವಿದ್ಯಾರ್ಥಿನಿಯ ಬಗ್ಗೆ ಅವಳ ಪೋಷಕರಲ್ಲಿ ವಿಚಾರಿಸಿದಾಗ, ಉತ್ತರ ಕೇಳಿ ಒಂದು ಕ್ಷಣ ಶಾಕ್‌ ಆದೆ. ಅವರ ಮನೆಯಲ್ಲಿ ಅವರಪ್ಪ, ಅಮ್ಮ, ತಮ್ಮ ಮತ್ತು ಈ ವಿದ್ಯಾರ್ಥಿನಿ, ಒಟ್ಟು ನಾಲ್ಕು ಜನ. ಇವಳ ಮೇಲೆ ಮನೆಯವರಿಗೂ ತುಂಬಾ ನಿರೀಕ್ಷೆ ಇತ್ತು. ಫ‌ಸ್ಟ್‌ ಬಂದೇ ಬರುತ್ತಾಳೆಂಬ ಕಾನ್ಫಿಡೆನ್ಸು. ಅದರಲ್ಲೂ ಅವರಪ್ಪ ಒಂದು ಹೆಜ್ಜೆ ಮುಂದೆ ಹೋಗಿ, “ನೀನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸದಿದ್ದರೆ, ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಸಾಯುತ್ತೇನೆ’ ಎಂದುಬಿಟ್ಟಿದ್ದಾರೆ. ಅಷ್ಟೇ, ಉಲ್ಲಾಸದ ಚಿಲುಮೆಯಂತಿದ್ದ ಹುಡುಗಿ ಆವತ್ತಿನಿಂದ ಉಡುಗಿ ಹೋಗಿದ್ದಾಳೆ. 

ಅವಳು ಓದುತ್ತಿದ್ದ ರೀತಿಗೆ, ಅವಳಲ್ಲಿರುವ ಜ್ಞಾನಕ್ಕೆ, ವಿನಯತೆಗೆ ಮತ್ತು ಶಿಸ್ತಿಗೆ ಶಾಲೆಗೇ ಪ್ರಥಮ ಸ್ಥಾನ ಗಳಿಸುವ ಎಲ್ಲಾ ಅರ್ಹತೆಯೂ ಇತ್ತು. ಆ ಹುಡುಗಿಗೆ ಅವರಪ್ಪನ ಈ ಮಾತು ಇಲ್ಲದ ಒತ್ತಡ ಮತ್ತು ಭಯವನ್ನು ತುಂಬಿ, ಓದಿನಿಂದ ವಿಮುಖವಾಗುವಂತೆ ಮಾಡಿತು. ಹಸಿ ಗೋಡೆಯಂಥ ಮನಸ್ಸಿನ ಮಕ್ಕಳು ಇಂಥ ವಿಷಯಗಳನ್ನು ತುಂಬಾ ಬೇಗ ತಲೆಗೆ ಹಚ್ಚಿಕೊಳ್ಳುತ್ತಾರೆ. ಹಾಗಾಗಿ ಪರೀಕ್ಷೆಗೆ ತಯಾರಾಗುವ ಬದಲು, ತಾನು ಪ್ರಥಮ ಸ್ಥಾನ ಗಳಿಸದಿದ್ದರೆ ತಂದೆಗೆ ಏನಾದರೂ ಆಗಬಹುದು ಎಂಬ ಚಿಂತೆಯಲ್ಲಿಯೇ ಕಳೆಯುತ್ತಾ, ಓದಿನ ಕಡೆ ಗಮನ ನೀಡಲು ಸಾಧ್ಯವಾಗಿರಲಿಲ್ಲ. ಹಾಗೂ ಅದೇ ಒತ್ತಡದಲ್ಲಿ ವಿಪರೀತ ತಲೆನೋವಿನಿಂದ ಬಳಲಲು ಪ್ರಾರಂಭಿಸಿದ್ದಳು. ಜೊತೆಗೆ ಪ್ರತಿದಿನವೂ ಮನೆಯಿಂದ ಬೆಳಗ್ಗೆ ಬರುವಾಗ ಊಟ- ತಿಂಡಿಯನ್ನೂ ಮಾಡದೆ ಬರುತ್ತಿದ್ದಳು. ತಕ್ಷಣವೇ ಆ ವಿದ್ಯಾರ್ಥಿನಿಯ ತಂದೆಯನ್ನು ಕರೆಸಿ, ಅವಳ ಬಗ್ಗೆ ತಿಳಿಸಿ, ವಿದ್ಯಾರ್ಥಿನಿಗೆ ತಾನು ಯಾವ ಅನಾಹುತವನ್ನೂ ಮಾಡಿಕೊಳ್ಳುವುದಿಲ್ಲ. ಚೆನ್ನಾಗಿ ಓದು ಅಷ್ಟೇ ಎಂದು ಅವರಪ್ಪನೇ ನಮ್ಮೆದುರು ಹೇಳಿದ ನಂತರದಿಂದ ಹುಮ್ಮಸ್ಸಿನಿಂದ ಮೊದಲಿನಂತೆ ಓದಲು ಪ್ರಾರಂಭಿಸಿದಳು.

Advertisement

ಮಕ್ಕಳಿಗೆ ಧೈರ್ಯ ತುಂಬಿ…
ಪರೀಕ್ಷೆ ಸಮಯದಲ್ಲಿ ಮಕ್ಕಳ ಆಸ್ಥೆ ವಹಿಸಬೇಕು ನಿಜ. ಅದರಿಂದ ಅವರಿಗೆ ಪರೀಕ್ಷೆಯ ಭಯವಾಗದಂತೆ ಧೈರ್ಯ ನೀಡಿ, ಹುರಿದುಂಬಿಸಬೇಕು. ಆದರೆ, ಧೈರ್ಯ ತುಂಬಬೇಕಾದ ಅದೇ ಪೋಷಕರು ಭಯ ಹುಟ್ಟಿಸಿದರೆ ಮಕ್ಕಳು ಮುರುಟಿ ಹೋಗುತ್ತಾರೆ. ಹೆತ್ತವರು ಎಚ್ಚೆತ್ತುಕೊಂಡು ಪ್ರಥಮ ಸ್ಥಾನದ ಹಿಂದೆ ಬೀಳುವ ಬದಲು, ಮಕ್ಕಳಿಗೆ ಪೋ›ತ್ಸಾಹ ನೀಡುವ ಮನಸ್ಸು ಮಾಡಲಿ. ಒತ್ತಡರಹಿತವಾಗಿ ಪ್ರಯತ್ನ ಮಾಡಿದರೆ ಪ್ರಥಮ ಸ್ಥಾನ ಬಂದೇ ಬರುತ್ತದೆ.

ಹಿಡಿದ ಪ್ರಯತ್ನವನ್ನು ಯಾವತ್ತೂ ಕೈಬಿಡಬಾರದು ಮತ್ತು ತೊಂದರೆ ಯಾವತ್ತೂ ನಮ್ಮನ್ನು ಸೋಲಿಸಲು ಬಿಡಬಾರದು.
– ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ, ವಿಜ್ಞಾನಿ

ಅಗತ್ಯವಿರುವುದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ, ನಿರುಪಯುಕ್ತ ಎನಿಸಿದ್ದನ್ನು ಗಾಳಿಗೆ ತೂರಿ.
– ಬ್ರೂಸ್‌ ಲೀ, ಕರಾಟೆ ಪಟು, ಸಿನಿಮಾ ತಾರೆ

ನಿರಂತರ ಅಭ್ಯಾಸವೇ ವ್ಯಕ್ತಿಯೊಬ್ಬನನ್ನು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಲ್ಲದು.
– ಡೇವಿಡ್‌ ಬೆಕ್‌ಹ್ಯಾಂ, ಫ‌ುಟ್‌ಬಾಲ್‌ ಆಟಗಾರ

– ರಾಘವೇಂದ್ರ ಈ. ಹೊರಬೈಲು, ಶಿಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next