Advertisement

Memories: ನೆನಪುಗಳಷ್ಟೇ ಶಾಶ್ವತ…..

03:31 PM Mar 02, 2024 | Team Udayavani |

“ಅಮ್ಮಾ… ನನ್ನ ಗೊಂಬೆ ಕೀ ಚೈನ್‌ ಎಲ್ಲಿ? ಕಾಣಿಸ್ತಿಲ್ಲ?’ ಹಾಸಿಗೆ ಕೆಳಗೆ ಹುಡುಕುತ್ತಾ ಕೇಳಿದಳು. “ಡ್ರಾಯರ್‌ಅಲ್ಲಿದೆ ನೋಡು’ ಎಂದ ಅಮ್ಮನ ಮಾತಿಗೆ  ಡ್ರಾಯರ್‌ ತೆರೆದು ಹುಡುಕಲು ಪ್ರಾರಂಭಿಸಿದವಳಿಗೆ  ತನ್ನದೇ ಸ್ಕೂಲ್‌ ಡೈರಿ ಸಿಕ್ಕಿತ್ತು.

Advertisement

ಡೈರಿಯನ್ನು ಸವರಿದವಳ ಮನ ವರುಷಗಳ ಹಿಂದೆ ಓಡಿತ್ತು. ನೆನಪುಗಳೆಲ್ಲ ಮನದ ಕದ ತಟ್ಟಲು ಶುರುಮಾ ಡಿದ್ದವು. ಪುಸ್ತಕದ ಪುಟಗಳನ್ನು ತಿರುವುತ್ತಾ ಹೋದವಳಿಗೆ ತೀರಾ ಹಳೆಯದಾಗಿದ್ದ ನೂರರ ನೋಟೊಂದು ಪುಟಕ್ಕಂಟಿಕೊಂಡು ಕೂತದ್ದು ನೋಡಿ, ತಾನು ಹುಡುಕುತ್ತಿದ್ದ ವಸ್ತುವನ್ನೇ ಮರೆತವಳ ಮನ ಹಳೆಯ ನೆನಪಿನಂಗಳಕ್ಕೆ ಕಾಲಿಡಲು ತಯಾರಾಗಿತ್ತು.

“ಮಲ್ಕೋ ಪುಟ್ಟ, ನಾಳೆ ಬೇಗ ಎದ್ದೇಳ್ಬೇಕು. ಊರಿಗೆ ಹೋಗ್ಬೇಕಲ್ವಾ. ಬಸ್‌ ಮಿಸ್ಸಾದ್ರೆ ಕಷ್ಟ ಆಗುತ್ತೆ’ ಪಕ್ಕದಲ್ಲಿ ಮಲಗಿದ್ದ ಅಮ್ಮನ ಮಾತಿಗೆ ಸುಮ್ಮನೆ ಕಣ್ಮುಚ್ಚಿದರೂ ತಲೆಯ ತುಂಬಾ ನಾಳೆ ಊರಿಗೆ ಹೋಗುವ ವಿಷಯವೇ ತುಂಬಿಕೊಂಡಿತ್ತು.

“ಅಜ್ಜಿ ಊರು ಹೇಗಿಬೋìದು? ಅಲ್ಲಿ ಎಲ್ಲರೂ ನಮ್‌ ಥರಾನೇ ಇದ್ದಾರ? ಅಜ್ಜಿ ಫೋನ್‌ ಮಾಡಿದಾಗಲೆಲ್ಲಾ ಅವ್ರು ಮಾತಾಡೋ ರೀತಿನೇ ಬೇರೆ. ಅಮ್ಮ ಹೇಳ್ತಿದ್ರು ನಾನು ಹುಟ್ಟಿದಾಗ ಅಜ್ಜಿನೇ ನನ್ನ ನೋಡ್ಕೊಂಡಿದ್ದು ಅಂತ. ಆದ್ರೆ ನಂಗೆ ಅವೆಲ್ಲ ನೆನಪಿಲ್ಲ. ನಾನು ಸ್ಕೂಲ್‌ಗೆ ಜಾಯಿನ್‌ ಆದ್ಮೇಲೆ ಅಜ್ಜಿನ ನೋಡೇ ಇಲ್ಲ. ಅದ್ಕೆ ನಾಳೆ ಅವ್ರನ್ನ ನೋಡೋದಕ್ಕೆ ಅಂತ ಹೋಗ್ತಾ ಇದ್ದೀವಿ, ಆ ಖುಷಿಗೆ ನಿದ್ದೇನೆ ಬರ್ತಿಲ್ಲ’ ಹೀಗೆ ಮನದಲ್ಲೇ ಇಷ್ಟೆಲ್ಲಾ ಸಂಗತಿಗಳ ಬಗ್ಗೆ ಯೋಚನೆ ಮಾಡುತ್ತಿದ್ದ ಆ ಪುಟ್ಟ ತಲೆಗೆ ಅದಾವ ಮಾಯೆಯಲ್ಲಿ ನಿದ್ದೆ ಬಂದಿತ್ತೋ, ಮತ್ತೆ ಎಚ್ಚರವಾದದ್ದು “ಎದ್ದೇಳು ಪುಟ್ಟ’ ಎಂಬ ಅಮ್ಮನ ಕೂಗಿಗೆ.

ಎದ್ದವಳು ಎಂದಿಗಿಂತ ತುಸು ಬೇಗನೇ ತಯಾರಾಗಿದ್ದಳು. ಮನೆಯಿಂದ  ಹೊರ ಬಂದು ಕಾರ್‌ಡೋರ್‌ತೆಗೆಯ ಹೊರಟವಳನ್ನು  ಅವಳಮ್ಮ “ಅಲ್ಲಿಗೆ ಕಾರು ಹೋಗಲ್ಲ ಪುಟ್ಟ, ಬಸ್‌ ಅಲ್ಲೇ ಹೋಗ್ಬೇಕು’ ಎಂದು ಹೇಳಿ ತಡೆದಿದ್ದರು.

Advertisement

ಅಂತೂ ಇಂತೂ ಬಸ್‌ ಸ್ಟಾಂಡ್‌ ತಲುಪಿದರೂ ಕೂಡ ಎಲ್ಲವೂ ಹೊಸದೇ ಆಕೆಗೆ. ವಿಂಡೋ ಸೀಟ್‌ನಲ್ಲಿ ಕೂತು ಕಿಟಕಿಯ ಹೊರಗಡೆ ಕಣ್ಣು ಹಾಯಿಸಿದವಳಿಗೆ ಎಲ್ಲವೂ ವಿಸ್ಮಯವೇ. ಕೇವಲ ವಾಹನ ಮತ್ತು ಗಗನದಂಚಿನವರೆಗಿದ್ದ ಕಟ್ಟಡ ಕಂಡ ಆ ಪುಟ್ಟ ಕಂಗಳಿಗೆ ಮನ ಮುದಗೊಳಿಸುವ ನಿಸರ್ಗದ ದರ್ಶನವಾಗಿತ್ತು. ಟಾರ್‌ನೆಲದಲ್ಲಿ ನಡೆದಿದ್ದ ಆ ಪುಟ್ಟ ಪಾದಗಳಿಗೆ ಮಣ್ಣಿನ ಸ್ಪರ್ಶ ದೊರಕಿತ್ತು.

ಊರು ತಲುಪಿದ ಅನಂತರ ದಾರಿಯುದ್ದಕ್ಕೂ ತೀರಾ  ಪರಿಚಯದವರೆಂಬಂತೆ ಮಾತಾಡುತ್ತಿದ್ದ ಜನರನ್ನು ಕಂಡು ಕಣ್ಣರಳಿಸಿದ್ದಳು. ಪಾರ್ಕ್‌ಗಳಲ್ಲಿ ವಾಕ್‌ ಮಾಡುವ ನಾಯಿಗಳನ್ನು  ನೋಡಿದ್ದ ಆಕೆಗೆ ಹಸು ತೊಳೆಯುತ್ತಿದ್ದವರನ್ನು ಕಂಡು ಅಚ್ಚರಿಯಾಗಿತ್ತು! ಅಲ್ಲೇ ಕೆರೆಯಲ್ಲಿ ಯಾವ ಭಯವಿಲ್ಲದೆ ಈಜಾಡುತ್ತಿದ್ದ ಮಕ್ಕಳನ್ನು ಕಂಡವಳು ತನ್ನಮ್ಮನ ಬಳಿ “ಅಮ್ಮಾ ಅದು ಸ್ವಿಮ್ಮಿಂಗ್‌ ಪೂಲ್‌ ಅಲ್ವಾ?’  ಎಂದು ಕೇಳಿದಾಗ ಮಗಳ ಮಾತಿಗೆ ನಸು ನಗುತ್ತಲೇ “ಹೌದು’ ಎಂದಿದ್ದರು. ಅಲ್ಲಿಂದ ಅಜ್ಜಿಮನೆಯೆದುರು ಬಂದು ನಿಂತಾಗ ಹೊಸ ಲೋಕಕ್ಕೆ ಕಾಲಿಟ್ಟ ಅನುಭವ. ಆ ಮನೆಯ ಕಂಬಗಳೆಲ್ಲವೂ ಏನನ್ನೋ ಪಿಸುಗುಡುವಂತೆ, ಗೋಡೆಗಳಿಗೆ ತಟ್ಟಿದ್ದ ಬೆರಣಿಯೂ ತನ್ನ ಕರೆದಂತೆ, ಮಣ್ಣಿನ ಘಮಲಿಗೆ ಎಲ್ಲವೂ ಮರೆತಂತೆ, ಕೂಗುತ್ತಿರುವ ಕೋಳಿಗಳು ಕತೆ ಹೇಳುವಂತೆ ಭಾಸವಾಗಿತ್ತು ಆ ಪುಟ್ಟ ಹುಡುಗಿಗೆ.

“ಅರೆ! ನನ್‌ ಕೂಸು ಎಷ್ಟುದ್ದ ಆಗಿºಟ್ಟಿದೆ’ ಎನ್ನುತ್ತಾ ಅವಳನ್ನಪ್ಪಿಕೊಂಡ  ಅಜ್ಜಿಯ ಅಪ್ಪುಗೆಯಲ್ಲಿ ಪ್ರೀತಿ ಮಮತೆ ಕಾಳಜಿ ವಾತ್ಸಲ್ಯವೆಲ್ಲ ತುಂಬಿ ತುಳುಕುತ್ತಿತ್ತು. ಊರಿನಲ್ಲಿರುವ ತೋಟ, ಬೆಟ್ಟ – ಗುಡ್ಡಗಳನ್ನೆಲ್ಲಾ ಸುತ್ತುತ್ತಾ, ಹೊಸದಾಗಿ ಪರಿಚಯವಾದ ಗೆಳೆಯ-ಗೆಳತಿಯರ ಜತೆಗೂಡಿ ಆಟವಾಡುತ್ತಾ, ಅಲ್ಲೆಲ್ಲೋ ಆಟವಾಡಿ ಬಿದ್ದು ಮಾಡಿಕೊಂಡ ಗಾಯ ಮಾಗುವ ಮುನ್ನವೇ ರಜೆ ಕಳೆದು, ಮತ್ತೆ ಮಾಯನಗರಿಗೆ ತೆರಳುವ ಘಳಿಗೆಯೂ ಬಂದಿತ್ತು. ಬಹಳ ಬೇಸರವಾಗಿದ್ದವಳಿಗೆ “ಮತ್ತೆ ರಜೆ ಸಿಕ್ಕಾಗ ಬಾ ಕೂಸೇ’ ಎನ್ನುತ್ತಾ ಸೆರಗಿನಂಚಿನಲ್ಲಿ ಬಚ್ಚಿಟ್ಟಿದ್ದ ನೂರರ ನೋಟೊಂದನ್ನು  ಕೈಗೆ ತುರುಕಿ  “ಅಮ್ಮಂಗೆ ಹೇಳ್ಬೇಡ, ಏನಾದ್ರು  ತಿಂಡಿ ತಗೊಂಡು ತಿನ್ನು ಆಯ್ತಾ’  ಎಂದ ಅಜ್ಜಿಯನ್ನು ಅಪ್ಪಿಕೊಂಡು ಕಂಬನಿ ಮಿಡಿದವಳನ್ನು ಮತ್ತವಳಪ್ಪ  ಹೊತ್ತುಕೊಂಡು ಹೋಗಬೇಕಾಗಿ ಬಂದಿತ್ತು. ಅಜ್ಜಿ ಕೊಟ್ಟ ನೂರರ ನೋಟು ಹದಿನೈದು ವರುಷಗಳ ಅನಂತರವೂ ಕೈಯಲ್ಲೇ ಇದೆ, ಆದರೆ ನೋಟು ಕೊಟ್ಟವರೇ ಇಲ್ಲ!.

ಮತ್ತೆ ಅಂಗೈಯೊಳಗಡೆ ಬೆಚ್ಚಗೆ ಹುದುಗಿಹೋಗಿದ್ದ  ನೋಟು ಕಂಡವಳಿಗೆ ಅನಿಸಿದ್ದೊಂದೇ “ನೆನಪುಗಳಷ್ಟೇ ಶಾಶ್ವತ’.

-ಚೈತ್ರಾ

ಕೈಕಂಬ

Advertisement

Udayavani is now on Telegram. Click here to join our channel and stay updated with the latest news.

Next