Advertisement

Photographers: ನೆನಪಿನ ನಾವಿಕರಿಗೆ ಸಲಾಂ…

11:30 AM Apr 21, 2024 | Team Udayavani |

ಹೆಲೋ..ಸ್ವಲ್ಪ ಈ ಕಡೆ ನೋಡಿ ಮೇಡಂ. ಸ್ಮೈಲ್‌ ಪ್ಲೀಸ್‌, ಚಿನ್‌ ಅಪ್‌ ಅಂತೆಲ್ಲಾ ಹೇಳ್ತಾ ನಮ್ಮ ಜೀವನದ ಸುಂದರ ಕ್ಷಣಗಳನ್ನು ಬಚ್ಚಿಡುವವರು ಛಾಯಾಗ್ರಾಹಕರು. ಇವರು ದೃಶ್ಯಗಳಿಗೆ ಜೀವ ತುಂಬುವ ಕಲೆಗಾರರೂ ಹೌದು. ಯಾವಾಗಲೋ ನಡೆದ ಸುಂದರ ಸಂಗತಿಗಳನ್ನು ಮತ್ತೆ ನೆನಪಿಸಿ ಅವುಗಳನ್ನು ಮೆಲುಕು ಹಾಕುವಂತೆ ಮಾಡುವ ಅದ್ಭುತ ಶಕ್ತಿ ಇರುವುದು ಇವರಿಗೆ ಮಾತ್ರ.

Advertisement

ಈಗಿನ ಕಾಲದಲ್ಲಂತೂ ಫೋಟೋಗ್ರಾಫ‌ರ್ಸ್‌ ಇಲ್ಲದೆ ಸಮಾರಂಭಗಳು ಪೂರ್ಣವಾಗುವುದು ಕಷ್ಟಸಾಧ್ಯ. ಮುಂಚೆ ಅಪರೂಪಕ್ಕೊಬ್ಬ ಛಾಯಾಗ್ರಾಹಕನಿದ್ದ. ಆ ದಿನಗಳಲ್ಲಿ ಸಮಾರಂಭಕ್ಕೆ ಬಂದ ಒಬ್ಬನೇ ಒಬ್ಬ  ಫೋಟೋಗ್ರಾಫ‌ರ್‌ ಕೈಯಿಂದ ಫೋಟೋ ತೆಗೆಸಿಕೊಳ್ಳುವುದೆಂದರೆ ಹೇಳತೀರದ ಸಂತೋಷ.

ಹಾಗೆ ಫೋಟೋಗಳನ್ನು ತೆಗೆಸಿಕೊಂಡರೂ ನಮಗೆ ಆ ಫೋಟೋಗಳು ಕಾಣಲು ಸಿಗುತ್ತಿದ್ದದ್ದು ಆಲ್ಬಮ್‌ ಆಗಿ ಬಂದ ನಂತರವೇ. ಈಗಿನಂತೆ ತತ್‌ಕ್ಷಣ ಮೊಬೈಲ್‌ ಗೆ ಶೇರ್‌ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಆಲ್ಬಂ ನಲ್ಲಿ ನಮ್ಮ ಫೋಟೋಗಳನ್ನು ಹುಡುಕಿ ಸಾವಿರ ಬಾರಿ ನೋಡುತ್ತಾ ಸಂಭ್ರಮಿಸುತ್ತಿದ್ದ ಆ ದಿನಗಳು ಮತ್ತೆ ಬಾರದು.

ತಂತ್ರಜ್ಞಾನಗಳು ಮುಂದುವರಿದಂತೆ ಪ್ರತಿಯೊಬ್ಬರ ಕೈಯ್ಯಲ್ಲೂ ಕೆಮೆರಾ.. ಇಲ್ಲವಾದರೆ  ಅಟ್ಲೀಸ್ಟ್‌ ಒಂದು ಸ್ಮಾರ್ಟ್‌ ಫೋನ್‌ ಆದ್ರೂ ಇದ್ದೇ ಇರುತ್ತದೆ. ಹಾಗಾಗಿ ಇಂದು ನಾವು ತೆಗಿಸಿಕೊಂಡ ಫೋಟೋಗಳಿಗಾಗಿ ದಿನಗಟ್ಟಲೆ ಕಾಯಬೇಕಾದ ಆವಶ್ಯಕತೆ ಇಂದಿಲ್ಲ. ಅಂತೆಯೇ ಫೋಟೋ ತೆಗೆಯಲು ಪ್ರೊಫೆಶನಲ್‌ ಛಾಯಾಗ್ರಾಹಕರೇ ಬೇಕೆಂದಿಲ್ಲ. ಫೋಟೋ ಕ್ಲಿಕ್ಕಿಸಿಕೊಂಡ ತತ್‌ಕ್ಷಣವೇ ನಮ್ಮ ಇನ್ಸ್ಟಾಗ್ರಾಮ್, ವಾಟ್ಸ್‌ಆ್ಯಪ್‌ ಖಾತೆಗಳಲ್ಲಿ ಪೋಸ್ಟ್‌ ಆಗಿಯೇ  ಬಿಡುತ್ತದೆ.

ಮದುವೆ ಅಥವಾ ಇತರ  ಸಭೆ ಸಮಾರಂಭಗಳಲ್ಲಿ ಛಾಯಾಗ್ರಾಹಕರು ತೆಗೆದ ಫೋಟೋಗಳು ಆ ದಿನವೇ ನಮ್ಮ ಕೈ ಸೇರುತ್ತದೆ. ಅಷ್ಟೇ ಅಲ್ಲದೆ ಛಾಯಾಗ್ರಾಹಕರು ಫೋಟೋಗಳಲ್ಲಿ ನಮ್ಮ ಅಂದವನ್ನು ದ್ವಿಗುಣಗೊಳಿಸಿಯೂ ಇರುತ್ತಾರೆ. ನಮ್ಮ ಛಾಯಾಚಿತ್ರಗಳನ್ನು ನೋಡಿದಾಗ  ನಾವಿಷ್ಟು ಅಂದವಾಗಿದ್ದೇವಾ ಎನ್ನುವ ಅನುಮಾನವೂ ನಮ್ಮಲ್ಲಿ ಮೂಡುವುದು ಸಹಜ.

Advertisement

ಇಂದು ಮದುವೆ ಮಾಡಲು ಭಟ್ರಾ ಎಷ್ಟು ಪ್ರಾಮುಖ್ಯವೋ ಛಾಯಾಗ್ರಾಹಕರೂ ಅಷ್ಟೇ ಮುಖ್ಯ. ಭಟ್ರಾ ಇಲ್ಲದಿದ್ದರೂ ಒಂದು ವೇಳೆ ವಿವಾಹ ಕಾರ್ಯ ಪೂರ್ಣವಾಗಬಹುದು ಆದರೆ ಛಾಯಾಗ್ರಾಹಕರಿಲ್ಲದೆ ಮದುವೆ ಸಂಪೂರ್ಣವಾಗಲು ಸಾಧ್ಯವೇ ಇಲ್ಲ.

ಎಲ್ಲ ಕೆಲಸದಂತೆ ಛಾಯಾಗ್ರಹಣವೂ ಒಂದು ಕಷ್ಟದ ಕೆಲಸ. ಅದರೊಳಗೆ ಇಳಿದಷ್ಟು ಆಳಕ್ಕೆ ಅದು ನಮ್ಮನ್ನು ಕೊಂಡೊಯ್ಯುತ್ತದೆ. ಛಾಯಾಗ್ರಹಣದಲ್ಲಿ ಕಲಿಕೆ ಬಹಳಷ್ಟಿದೆ. ಇಂದು ಫೋಟೋಗಳನ್ನು ತೆಗೆಯುವುದಕ್ಕಿಂತ ಅವನೆಷ್ಟು ಕ್ರಿಯೇಟಿವ್‌ ಆಗಿ ಫೋಟೋ ಕ್ಲಿಕ್ಕಿಸುತ್ತಾನೆ ಎಂಬುದರ ಮೇಲೆ ಛಾಯಾಗ್ರಾಹಕನ ಸಾಮರ್ಥ್ಯ ನಿರ್ಧಾರವಾಗುತ್ತದೆ. ಇದು ಛಾಯಾಗ್ರಾಹಕನಿಗಿರುವ ದೊಡ್ಡ ಸವಾಲು.

ಫೋಟೋದಲ್ಲಿ ಅಂದವಾಗಿ ಕಾಣಿಸಬೇಕೆಂಬ ಜನರ ಬಯಕೆಯನ್ನು ಛಾಯಾಗ್ರಾಹಕನಾದವನು ಈಡೇರಿಸುವಲ್ಲಿ ಕಾರ್ಯನಿರತನಾಗಲೇಬೇಕಾಗುತ್ತದೆ. ಅವನಿಗೆಷ್ಟೇ ನೋವಿರಲಿ, ಒತ್ತಡಗಳಿರಲಿ, ಅವನ ಜೀವನದಲ್ಲಿ ನಗುವೇ ಇಲ್ಲದಿರಲಿ ಆದ್ರೆ ಅವನು ತನ್ನ ಮುಂದಿರುವವರನ್ನು ನಗಿಸಲೇಬೇಕು, ಅವರ ಸುಂದರ ಕ್ಷಣಗಳನ್ನು ತನ್ನ ಕ್ಯಾಮರಾ ಕಣ್ಣಿಂದ ಸಂಗ್ರಹಿಸಲೇಬೇಕು.

ನಮ್ಮೆಲ್ಲರ ಜೀವನದ ಸುಂದರ ಕ್ಷಣಗಳನ್ನು ಕಲೆ ಹಾಕುತ್ತಾ, ಕಳೆದಂತಹ ಸುಮಧುರ ಸಮಯವನ್ನು ಮತ್ತೆ ನೆನಪಿಸುವಂತೆ ಮಾಡುವ, ಕೆಲವೊಮ್ಮೆ ಆ ಚಿತ್ರಗಳ ಮೂಲಕ ನಮ್ಮ ಕಣ್ಣಲ್ಲಿ ಆನಂದಭಾಷ್ಪವನ್ನು ತರಿಸುವ,  ನಮಗೆ ತಿಳಿಯದಂತೆ ನಮ್ಮ ಫೋಟೋ ತೆಗೆದು ನಮ್ಮನ್ನು ಸಂತೋಷದಿಂದ ಹಿಗ್ಗುವಂತೆ ಮಾಡುವ  ಎಲ್ಲ ಛಾಯಾಗ್ರಾಹಕರಿಗೆ ನನ್ನದೊಂದು ಸಲಾಂ.

-ಲಾವಣ್ಯ ಎಸ್‌.

ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next