Advertisement

ಮೇಕೆದಾಟು: ರಾಜ್ಯದ ಹಿತ ಕಾಯುವ ನಿರ್ಧಾರ ಬರಲಿ

12:37 AM Mar 12, 2022 | Team Udayavani |

ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಸರಕಾರದ ಅಡ್ಡಿ ಮತ್ತು ಕೇಂದ್ರ ಸರಕಾರದಿಂದ ಸಿಗದ ಪರಿಸರ ಅನುಮತಿ ಕುರಿತಂತೆ ಮುಂದಿನ ವಾರ ಸರ್ವಪಕ್ಷಗಳ ಸಭೆ ಕರೆಯಲು ರಾಜ್ಯ ಸರಕಾರ ಮುಂದಾಗಿರುವ ಕ್ರಮ ಸ್ವಾಗತಾರ್ಹವಾಗಿದೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಹಿಂದಿನ ಸರಕಾರಗಳೇ ಡಿಪಿಆರ್‌ ಸಿದ್ಧಪಡಿಸಿದ್ದು, ಕೇಂದ್ರ ಸರಕಾರದ ಒಪ್ಪಿಗೆ ಬೇಕಿದೆ. ಅಲ್ಲದೆ ಕೇಂದ್ರ ಪರಿಸರ ಇಲಾಖೆಯೂ ಇದಕ್ಕೆ ಒಪ್ಪಿಗೆ ನೀಡಬೇಕು.

Advertisement

ಮೊದಲಿನಿಂದಲೂ ಕಾವೇರಿ ಎಂದರೆ, ತಮಿಳುನಾಡು ಸರಕಾರಗಳಿಗೆ ಜಮೀನು ಮತ್ತು ಕುಡಿಯುವ ನೀರು ಒದಗಿಸುವ ಇರುವ ಜೀವ ಜಲ ಎಂಬುದಕ್ಕಿಂತ ಹೆಚ್ಚಾಗಿ ಹಕ್ಕು ಸಾಧಿಸುವುದು ಮತ್ತು ವಿವಾದ ಮಾಡುವುದೇ ಕಾಯಕವಾಗಿದೆ. ಕರ್ನಾಟಕದ ಕಡೆಯಿಂದ ಕಾವೇರಿ ಕುರಿತಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೊರಟರೂ, ತಮಿಳುನಾಡು ರಾಜಕಾರಣಿಗಳು ನಿದ್ದೆಯಲ್ಲಿ ಕೆಟ್ಟ ಕನಸು ಬಿದ್ದವರಂತೆ ಗಾಬರಿಗೊಂಡವರಂತೆ ಆಡುತ್ತಾರೆ. ಇದು ತೀರಾ ಉತ್ಪ್ರೇಕ್ಷೆಯೇನಲ್ಲ. ಇತಿಹಾಸವನ್ನು ಒಮ್ಮೆ ತಿರುಗಿಸಿ ನೋಡಿದರೆ ಇದು ತಿಳಿಯುತ್ತದೆ.

ಈಗಂತೂ ಕರ್ನಾಟಕದ ಸರಕಾರಗಳು ಮೇಕೆದಾಟು ಯೋಜನೆಯನ್ನು ರೂಪಿಸಿರುವುದೇ ಬೆಂಗಳೂರು ಜನತೆಗೆ ಕುಡಿಯುವ ನೀರು ಒದಗಿಸುವ ಸಲುವಾಗಿ. ಇದನ್ನು ಹಿಂದಿನಿಂದಲೂ ತಮಿಳುನಾಡು ಮುಂದೆ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿಕೊಂಡೇ ಬಂದಿವೆ. ಆದರೆ ಇದುವರೆಗೂ ತಮಿಳುನಾಡಿಗೆ ಇದು ಅರ್ಥವಾಗಿಲ್ಲ. ಅಲ್ಲದೆ ಅಲ್ಲಿನ ರಾಜಕಾರಣಿಗಳಂತೂ, ಕಾವೇರಿ ವಿಚಾರದಲ್ಲಿ ಒಂದಾದಷ್ಟು ಬೇರೆ ಯಾವುದೇ ವಿಚಾರದಲ್ಲಿ ಒಂದಾಗುವುದಿಲ್ಲ.

ಈಗ ರಾಜ್ಯ ಸರಕಾರ ಮುಂದಿನ ವಾರ ಮೇಕೆದಾಟು ವಿಚಾರದಲ್ಲಿ ಸರ್ವಪಕ್ಷಗಳ ಸಭೆ ಕರೆಯಲು ಹೊರಟಿರುವುದು ಸಕಾಲಿಕ ಮತ್ತು ತೀರಾ ಅಗತ್ಯವಿರುವ ಸಂಗತಿ. ಇಲ್ಲಿ ಆಡಳಿತ ಪಕ್ಷವೊಂದೇ ಏನನ್ನೂ ಮಾಡಲು ಸಾಧ್ಯವಿಲ್ಲ. ಅಲ್ಲದೆ ಕಾವೇರಿ ವಿಷಯದಲ್ಲಿ ಎಲ್ಲ ಪಕ್ಷಗಳ ಸಹಕಾರವೂ ಅತ್ಯಗತ್ಯವಾಗಿರುತ್ತದೆ. ಇದಕ್ಕೆ ಬಲವಾದ ಕಾರಣವೂ ಇದೆ. ಹಿಂದಿನಿಂದಲೂ ಅಧಿಕಾರ ಮಾಡಿಕೊಂಡು ಬಂದಿರುವ ಮತ್ತು ಈಗ ವಿಪಕ್ಷದಲ್ಲಿ ಕುಳಿತಿರುವ ಪಕ್ಷಗಳಿಗೂ ಕಾವೇರಿ ಕುರಿತ ನೋವಿನ ಬಗ್ಗೆ ಅರಿವಿದೆ. ಹಾಗೆಯೇ ಎಲ್ಲರೂ ಒಂದಿಲ್ಲೊಂದು ವಿಚಾರದಲ್ಲಿ ಕೋರ್ಟ್‌ ಮುಂದೆಯೂ ಎಲ್ಲ ಸರಕಾರಗಳು ಕಾವೇರಿ ಕುರಿತಾಗಿ ವಾದ ಮಂಡಿಸಿವೆ.

ಈಗಲೂ ಅಷ್ಟೇ ರಾಜ್ಯ ಸರಕಾರ, ಮೇಕೆದಾಟು ಯೋಜನೆ ಜಾರಿ ಸಂಬಂಧ ವಿಪಕ್ಷಗಳಿಂದ ಅಗತ್ಯ ಸಲಹೆ ಸೂಚನೆ ಪಡೆಯಬೇಕು. ಇದುವರೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡದಿರುವುದು ಮತ್ತು ಇತ್ತೀಚೆಗಷ್ಟೇ ಕೇಂದ್ರದ ಜಲಶಕ್ತಿ ಸಚಿವರು ಮೇಕೆದಾಟು ವಿವಾದ ಸಂಬಂಧ ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳ ಮಧ್ಯೆ ಮಾತುಕತೆಗೆ ವೇದಿಕೆ ಸೃಷ್ಟಿಸುತ್ತೇನೆ ಎಂದಿರುವುದು ಬೇರೆಯದ್ದೇ ರಾಜಕೀಯ ವಾಸನೆ ತೋರಿಸಿದಂತಿದೆ. ಅಂದರೆ ಈಗಾಗಲೇ ಕೇಂದ್ರದ ಮುಂದೆ ತಮಿಳುನಾಡು ಕರ್ನಾಟಕದ ಬಗ್ಗೆ ದೂರು ಹೇಳಿರುವ ಸಾಧ್ಯತೆಗಳಿವೆ. ಇದನ್ನು ಮನಗಂಡೇ ಒಂದು ಸರ್ವಸಮ್ಮತ ನಿರ್ಧಾರ ತೆಗೆದುಕೊಂಡು, ಒಟ್ಟಾಗಿಯೇ ದಿಲ್ಲಿಗೆ ಹೋಗಿ ಕೇಂದ್ರ ಸರಕಾರದ ಮನವೊಲಿಕೆ ಮಾಡಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next