Advertisement

Mekedatu: ಕಾವೇರಿ ಸಂಕಷ್ಟಕ್ಕೆ ಮೇಕೆದಾಟು ಅಣೆಕಟ್ಟು ಪರಿಹಾರ

12:08 PM Sep 21, 2023 | Team Udayavani |

ರಾಮನಗರ: ರಾಜ್ಯ ಬರಗಾಲಕ್ಕೆ ತುತ್ತಾದಾಗಲೆಲ್ಲಾ ಕಾವೇರಿ ವಿವಾದ ಗರಿಗೆದರುತ್ತದೆ. ಮಳೆ ಕೊರತೆ ಯಿಂದ ರಾಜ್ಯದಲ್ಲಿ ಒಂದೆಡೆ ನೀರಿನ ಬಿಕ್ಕಟ್ಟು ಎದುರಾದರೆ, ಅತ್ತ ತಮಿಳುನಾಡು ನೀರಿಗಾಗಿ ಪಟ್ಟಾಕುತ್ತದೆ. ಇಂತಹ ಸಂದರ್ಭದಲ್ಲಿ ಮೇಕೆದಾಟು ಅಣೇಕಟ್ಟು ನಿರ್ಮಾಣಗೊಂಡಿದ್ದರೆ ಎರಡೂ ರಾಜ್ಯದ ಜಲ ಸಮಸ್ಯೆಗೆ ಪರಿಹಾರ ವಾಗುತಿತ್ತಾ..? ಇಂತಹುದೊಂದು ಚರ್ಚೆ ಇದೀಗ ಕಾವೇರಿ ಕೊಳ್ಳದಲ್ಲಿ ವ್ಯಾಪಕವಾಗಿದೆ.

Advertisement

ಹೌದು.., 1991ರಲ್ಲಿ ಕಾವೇರಿ ನ್ಯಾಯಾಧೀಕರಣ ಮಧ್ಯಂತರ ತೀರ್ಪು ನೀಡಿದ ಬಳಿಕ ರಾಜ್ಯದಲ್ಲಿ ಬರಗಾಲ ಎದುರಾದಾಗಲೆಲ್ಲಾ ಕಾವೇರಿ ಸಮಸ್ಯೆ ಉಲ್ಬಣಿಸುತ್ತಲೇ ಬಂದಿದೆ. ಕೆಲ ವರ್ಷಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿದು ಹೋಗಿದೆಯಾದರೂ, ಜಲವಿವಾದ ಎದುರಾಗುವುದು ಮಳೆ ಕೊರತೆಯಾದ ವರ್ಷಗಳಲ್ಲೇ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಮೇಕೆದಾಟು ಸಮತೋಲನ ಅಣೇಕಟ್ಟು ನಿರ್ಮಾಣ ವಾದರೆ, ಹೆಚ್ಚುವರಿ ನೀರನ್ನು ಸಂಗ್ರಹಿಸಿ ಸಂಕಷ್ಟದ ಸಮಯದಲ್ಲಿ ಎರಡೂ ರಾಜ್ಯಗಳು ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ.

ಪ್ರತಿಷ್ಟೆಗಾಗಿ ಖ್ಯಾತಿ: ಮೇಕೆದಾಟು ಅಣೇಕಟ್ಟೆ ನಿರ್ಮಾಣದ ವಿಚಾರದಲ್ಲಿ ಕೇಂದ್ರ ಸರ್ಕಾರದ್ದಾಗಲಿ, ತಮಿಳುನಾಡು ಸರ್ಕಾರದ್ದಾಗಲಿ ಒಂದೇ ಒಂದು ನಯಾಪೈಸೆ ಹಣ ಖರ್ಚಾಗುವುದಿಲ್ಲ. ಇನ್ನು ಭೂಮಿ ಸಹ ನಮ್ಮ ರಾಜ್ಯದ್ದೇ ಬಳಕೆಯಾಗಲಿದೆ. ಯೋಜನೆ ಜಾರಿಗೆ ಬಂದಿದ್ದೇ ಆದಲ್ಲಿ ಹೆಚ್ಚು ಮಳೆ ಸುರಿದ ಸಮಯದಲ್ಲಿ 66ಟಿಎಂಸಿಯಷ್ಟು ನೀರನ್ನು ಹೆಚ್ಚುವರಿ ಯಾಗಿ ಶೇಖರಣೆ ಮಾಡಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಸಂಕಷ್ಟ ಸಮಯದಲ್ಲಿ ಬಳಕೆಯಾಗುವ ಜೊತೆಗೆ ಬೆಂಗಳೂರು ಹಾಗೂ ವಿವಿಧ ಗ್ರಾಮ ಮತ್ತು ಪಟ್ಟಣಗಳಿಗೆ ಕುಡಿಯುವ ನೀರು ಸಿಗಲಿದೆ. ಯೋಜನೆಯ ಮಹತ್ವ ಹಾಗೂ ಅಗತ್ಯತೆಯನ್ನು ತಿಳಿಯದ ತಮಿಳುನಾಡು ಸುಖಾ ಸುಮ್ಮನೆ ಖ್ಯಾತೆ ತೆಗೆಯುತ್ತಿದ್ದರೆ, ಅತ್ತ ಕೇಂದ್ರಸರ್ಕಾರ ತಮಿಳುನಾಡಿನ ಆಕ್ಷೇಪಕ್ಕೆ ಮನ್ನಣೆ ನೀಡುತ್ತಾ ಬಂದಿರುವುದು ವಿಷಾದನೀಯ.

ಅಗತ್ಯಕ್ಕಿಂತ ಹೆಚ್ಚು ನೀರು ಹರಿದಿದೆ: 1975 ರಿಂದ ತಮಿಳುನಾಡಿಗೆ ಹರಿದಿರುವ ನೀರಿನ ಪ್ರಮಾಣವನ್ನು ಪರಿಗಣಿಸಿದರೆ, ಬರ ಪೀಡತ ವರ್‌ಷಗಳನ್ನು ಹೊರತು ಪಡಿಸಿ ಉಳಿದ ಸಮಯದಲೆಲ್ಲಾ ರಾಜ್ಯದಿಂದ ನಿಗಧಿತ ಪ್ರಮಾಣಕ್ಕಿಂತ ಹೆಚ್ಚು ನೀರು ಹರಿದಿದೆ. ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕ ತಮಿಳುನಾಡಿಗೆ ಪ್ರತಿವರ್ಷ 177.25. ಟಿಎಂಸಿ ನೀರನ್ನು ಬಿಡಬೇಕು. ಇಷ್ಟು ವರ್ಷಗಳಲ್ಲಿ ಏಳೆಂಟು ವರ್ಷ ಹೊರತು ಪಡಿಸಿದರೆ, ಉಳಿದೆಲ್ಲಾ ವರ್ಷಗಳಲ್ಲಿ ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಹರಿದಿದೆ. ಕಳೆ ವರ್ಷ ರಾಜ್ಯದಲ್ಲಿ ಅತಿಹೆಚ್ಚು ಮಳೆ ಸುರಿದ ಪರಿಣಾಮ 665 ಟಿಎಂಸಿ ಯಷ್ಟು ನೀರು ತಮಿಳುನಾಡಿಗೆ ಹರಿದಿದೆ. ಆದರೆ, ಹೆಚ್ಚುವರಿ ನೀರನ್ನು ಅವರೂ ಸದ್ಬಳಕೆ ಮಾಡಿ ಕೊಳ್ಳಲು ಸಾಧ್ಯವಿಲ್ಲ. ಕಳೆದ 40ವರ್ಷಗಳ ಅವಧಿಯಲ್ಲಿ ಕಾವೇರಿ ನದಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ನೀರುಗಳು ಸರಾಸರಿ ಮಳೆ ಬಿದ್ದಾಗ ತಮಿಳುನಾಡಿಗೆ ಹರಿದು ಹೋಗಿದೆ. ಇದಕ್ಕೆ ಕಾರಣ ಕಾವೇರಿ ನದಿಗೆ ಅಡ್ಡಲಾಗಿ ಕೆಆರ್‌ ಎಸ್‌ ಹೊರತು ಪಡಿಸಿದರೆ ಬೇರೆ ಯಾವುದೇ ಜಲಾಶಯ ಇಲ್ಲದಿರುವುದು.

ಮೇಕೆದಾಟಿನ ಅಗತ್ಯತೆ: ಕಾವೇರಿ ನದಿ 802 ಕಿಮೀ ಉದ್ದ ಹರಿಯುತ್ತದೆಯಾದರೂ, ಕರ್ನಾಟಕದಲ್ಲಿ ನದಿ ಹರಿಯುವುದು 381 ಕಿ.ಮೀ. ಇದರಲ್ಲೂ 64 ಕಿ.ಮೀ ಉದ್ದ ತಮಿಳುನಾಡು ಮತ್ತು ಕರ್ನಾಟಕದ ಗಡಿಭಾಗದಲ್ಲಿ ಹರಿಯುತ್ತದೆ. ಕಾವೇರಿ ಜಲಾನಯನ ಪ್ರದೇಶ( ಕ್ಯಾಚ್‌ಮೆಂಟ್‌ ಏರಿಯಾ)81555 ಚದರ ಕಿಮೀ ಇದ್ದು ಇದರಲ್ಲಿ ಕರ್ನಾಟಕದ ಒಟ್ಟು ಜಲಾನಯನ ಪ್ರದೇಶ 34273 ಚದರ ಕಿಮೀ ನಷ್ಟು ಹೊಂದಿದೆ. ಕೆಆರ್‌ ಎಸ್‌ ಜಲಾಶಯದ ಬಳಿಕ ಕಾವೇರಿ ಜಲಾನಯನ ಪ್ರದೇಶ23231 ಚದರ ಕಿಮೀ ಇದ್ದು ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಸಂಗ್ರಹವಾಗುವ ನೀರನ್ನು ಬಳಕೆ ಮಾಡಿಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲದಿದ್ದು, ಈ ಪ್ರದೇಶದಲ್ಲಿ ಸುರಿಯುವ ಮಳೆಯ ನೀರು ಕಾವೇರಿ ನದಿಗೆ ಸೇರಿ ತಮಿಳುನಾಡಿಗೆ ಸೇರುತ್ತದೆ. ಹೆಚ್ಚು ಮಳೆ ಸುರಿದಾಗ ತಮಿಳುನಾಡು ಸಹ ಬಳಕೆ ಮಾಡಿಕೊಳ್ಳದೆ ಸಮುದ್ರಕ್ಕೆ ನೀರು ಬಿಡುತ್ತದೆ. ಒಂದು ವೇಳೆ ಮೇಕೆದಾಟು ಅಣೇಕಟ್ಟು ನಿರ್ಮಾಣವಾಗಿದ್ದೇ ಆದಲ್ಲಿ 66 ಟಿಎಂಸಿಯಷ್ಟು ನೀರನ್ನು ಸಂಗ್ರಹಣೆ ಮಾಡಿ ಕಾವೇರಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಅವಕಾಶ ಸಿಗುತಿತ್ತು.

Advertisement

ಕಾವೇರಿ ಕೊಳ್ಳದಲ್ಲಿ ಮಳೆ ಕೊರತೆ: ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಈವರ್‌ಷ ತೀವ್ರ ಮಳೆ ಕೊರತೆ ಎದುರಾಗಿದೆ. ಕಾವೇರಿ ನದಿಗೆ ಪ್ರಮುಖ ನೀರಿನ ಮೂಲ ಎನಿಸಿರುವುದು ಪಶ್ಚಿಮ ಘಟ್ಟ. ಕೊಡಗು ಜಿಲ್ಲೆಯಲ್ಲಿ ಈಬಾರಿಯ ಮಾನ್ಸೂನ್‌ ಅವಧಿಯಲ್ಲಿ 12156 ಮಿಮೀ ಮಳೆ ಬಿದ್ದಿದೆ. ವಾಡಿಕೆ ಮಳೆ 2119 ಇತ್ತು. ಮಡಿಕೇರಿ ಜಿಲ್ಲೆಯಲ್ಲೇ ಶೇ. 43 ರಷ್ಟು ಮಳೆ ಕೊರತೆಯಾಗಿದೆ. ಇನ್ನು ಕಬಿನಿಗೆ ಪ್ರಮುಖ ನೀರಿನ ಮೂಲವಾದ ಕೇರಳದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ 1829 ಮಿಮೀ ವಾಡಿಕೆ ಮಳೆಗೆ 991ಮಿಮೀ ಮಳೆ ಸುರಿದಿದ್ದು ಶೇ52 ರಷ್ಟು ಮಳೆ ಕೊರತೆಯಾಗಿದೆ. ಇನ್ನು ಹೇಮಾವತಿ ನದಿಯ ಪ್ರಮುಖ ನೀರಿನ ಮೂಲವಾಗಿರುವ ಸಕಲೇಶಪುರ ಭಾಗದಲ್ಲಿ ಮಾನ್ಸೂನ್‌ ಅವಧಿಯಲ್ಲಿ 1727 ರಷ್ಟು ಮಳೆ ಸುರಿಯ ಬೇಕಿತ್ತು. ಆದರೆ ಈಬಾರಿ ಸುರಿದಿರುವುದು ಕೇವಲ 1215 ಮಿಮೀ. ಈ ಭಾಗದಲ್ಲಿ ಶೇ.22 ರಷ್ಟು ಮಳೆ ಕೊರತೆಯಾಗಿದೆ. ತೀವ್ರ ಮಳೆ ಕೊರತೆಯಿಂದಾಗಿ ಕಾವೇರಿ ವ್ಯಾಪ್ತಿಯ ಜಲಾಶಯಗಳು ಬರಿದಾಗುವಂತೆ ಮಾಡಿದೆ.

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next