Advertisement

ಮೆಗಾ ವಿಲೀನ: ಸುಧಾರಣೆಯಾಗುವುದೇ ಬ್ಯಾಂಕಿಂಗ್‌?

02:06 AM Aug 31, 2019 | sudhir |

ಮೆಗಾ ವಿಲೀನ ಅಥವಾ ಮಹಾ ವಿಲೀನವೆಂದು ಕರೆಸಿಕೊಳ್ಳುತ್ತಿರುವ ಬ್ಯಾಂಕುಗಳ ಮತ್ತೂಂದು ಸುತ್ತಿನ ವಿಲೀನ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು ದೇಶದೆಲ್ಲೆಡೆ ಚರ್ಚೆ ಆರಂಭಗೊಂಡಿದೆ. ಕನ್ನಡಿಗರೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಸಿಂಡಿಕೇಟ್‌, ಕೆನರಾ ಮತ್ತು ಕಾರ್ಪೊರೇಷನ್‌ ಬ್ಯಾಂಕ್‌ಗಳೂ ವಿಲೀನಕ್ಕೆ ಒಳಪಡಲು ಸಜ್ಜಾಗಿರುವ ಈ ಹೊತ್ತಲ್ಲಿ, ಅವುಗಳು ಬೆಳೆ ದುಬಂದ ಕಥಾನಕ ನಿಮ್ಮ ಮುಂದೆ…

Advertisement

ಮನೆ, ಮನೆಯಿಂದ ಅಕ್ಕಿ ಕೂಡಿಸಿ ಕಟ್ಟಿದ ಕೆನರಾ ಬ್ಯಾಂಕ್‌
ಬ್ಯಾಂಕ್‌ಗಳ ತವರೂರು ಎಂದೇ ಕರೆಸಿಕೊಂಡಿರುವ ಮಂಗಳೂರಿನಲ್ಲಿ 1906ರ ಜು.1ರಂದು ಪ್ರತಿಷ್ಟಿತ ಕೆನರಾ ಬ್ಯಾಂಕ್‌ ಹುಟ್ಟು ಪಡೆದಿದೆ. ಇದರ ಸ್ಥಾಪಕರು ಅಮ್ಮೆಂಬಳ ಸುಬ್ಬರಾವ್‌ ಪೈ. ಮದ್ರಾಸ್‌ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದ ಅಮ್ಮೆಂಬಳ ಸುಬ್ಬರಾವ್‌ ಪೈ ಅವರಿಗೆ ಜನತೆಯ ಉಳಿತಾಯ ಮತ್ತು ಆಪತ್ತಿನ ಕಾಲಕ್ಕೆ ಬೇಕಾದ ಹಣಕಾಸಿನ ವಿಚಾರವನ್ನು ಯೋಚಿಸಿ ನಾವೇ ಏಕೆ ಒಂದು ಬ್ಯಾಂಕಿಂಗ್‌ ಸಂಸ್ಥೆಯನ್ನು ಪ್ರಾರಂಭಿಸಬಾರದು ಎಂಬ ವಿಚಾರ ಬಂದಿತು. ಇದಕ್ಕಾಗಿ ಮನೆ, ಮನೆಗೆ ತೆರಳಿ ಅಕ್ಕಿ ಸಂಗ್ರಹಿಸಿ ಅದನ್ನು ಮಾರಿ ಬಂದ ಹಣದಲ್ಲಿ ಅವರು 1906 ಜು.1ರಂದು “ಕೆನರಾ ಹಿಂದೂ ಪರ್ಮನೆಂಟ್‌ ಫಂಡ್‌ ಲಿಮಿಟೆಡ್‌’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆ ಮುಂದೆ “ಕೆನರಾ ಬ್ಯಾಂಕ್‌’ ಎಂದು ಬೃಹದಾಕಾರವಾಗಿ ಬೆಳೆಯಿತು. ಇದರಲ್ಲಿ ಪ್ರಾರಂಭದಲ್ಲಿ 18 ಜನ ಡೈರೆಕ್ಟರ್‌ಗಳು ಇದ್ದರು. ಅವರಲ್ಲಿ ಪ್ರಮುಖರು ಮದ್ರಾಸ್‌ ಹೈಕೋರ್ಟ್‌ನ ವಕೀಲರು, ಪ್ರಮುಖ ವ್ಯಾಪಾರಿಗಳು ಮತ್ತು ಜಮೀನುದಾರರು.

ದಿ ಕೆನರಾ ಹಿಂದೂ ಪರ್ಮನೆಂಟ್‌ ಫಂಡ್‌ ಲಿ. ಸಂಸ್ಥೆಯು ತಿಂಗಳಿಗೆ 120 ರೂ.ಗಳ ಬಾಡಿಗೆಯ ಕರಾರಿನ ಮೇಲೆ ತೆಗೆದುಕೊಂಡ ಒಂದು ಕೊಠಡಿಯಲ್ಲಿ ಪ್ರಾರಂಭವಾಯಿತು. ಮಂಗಳೂರಿನ ಡೊಂಗರಕೇರಿಯಲ್ಲಿ ಈ ಕೊಠಡಿಯಿತ್ತು. ಕಾರ್ಯದರ್ಶಿಗಳು, ಒಬ್ಬ ಗುಮಾಸ್ತ, ಇಬ್ಬರು ಬಿಲ್‌ ಕಲೆಕ್ಟರ್‌ಗಳು ಈ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂಸ್ಥೆಯನ್ನು 1910ರಲ್ಲಿ “ಕೆನರಾ ಬ್ಯಾಂಕ್‌ ಲಿಮಿಟೆಡ್‌’ ಎಂದು ಪುನಾರಚಿಸಲಾಯಿತು. 1915ನೇ ಇಸವಿಯಲ್ಲಿ ಯಶಸ್ವಿಯಾಗಿ ಆರ್ಥಿಕ ಸಾಧನೆ ತೋರಿದ ಕೆನರಾ ಬ್ಯಾಂಕ್‌ ಜತೆಗೆ 1961 ಹಾಗೂ 1963ರಲ್ಲಿ ಹಲವು ಸಣ್ಣ ಬ್ಯಾಂಕ್‌ಗಳು ವಿಲೀನಗೊಂಡಿದ್ದವು.

ಕೆನರಾ ಹಿಂದೂ ಪರ್ಮನೆಂಟ್‌ ಫಂಡ್‌ ಸಂಸ್ಥೆಗೆ “ಕೆನರಾ ಬ್ಯಾಂಕ್‌’ ಎಂದು ಮರುನಾಮಕರಣ ಮಾಡಲಾಯಿತು. ಬೆಂಗಳೂರು ನಗರದಲ್ಲಿ ಮೊದಲನೆಯ ಶಾಖೆಯನ್ನು ಸ್ಥಾಪಿಸಲಾಯಿತು. ಬ್ಯಾಂಕಿನ ಠೇವಣಿಯು 1 ಕೋ. ರೂ.ವರೆಗೆ ಬೆಳೆಯಿತು. ಮಹಾಪ್ರಬಂಧಕರ ಕಚೇರಿಯನ್ನು ಮಂಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಮೊತ್ತಮೊದಲ ಬಾರಿಗೆ ಮಂಗಳೂರು, ಮದ್ರಾಸು ಮತ್ತು ಮುಂಬಯಿ ನಗರಗಳ ಕಚೇರಿಗಳಿಗೆ ವಿಭಾಗ ವ್ಯವಸ್ಥಾಪಕ ರನ್ನು ನೇಮಿಸ‌ಲಾಯಿತು. ಬ್ಯಾಂಕಿನ ಆಡಳಿತ ವರ್ಗ ಮೆಸರ್ಸ್‌ ಇಬ್ಕಾನ್‌ ಎಂಬ ಸಂಸ್ಥೆಯ ಸೇವೆಯನ್ನು ಬಳಸಿ ಕೊಂಡು ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿತು. ವಿದೇಶಿ ವಿನಿಮಯ ಶಾಖೆಯನ್ನು ತೆರೆಯಲು ಪರವಾನಗಿ ಪಡೆದು 1953ರಲ್ಲಿ ಮೊದಲ ವಿದೇಶಿ ಖಾತೆ ತೆರೆಯಲಾಯಿತು.

1969ರಲ್ಲಿ ಕೆನರಾ ಬ್ಯಾಂಕ್‌ ಇತರ 13 ಬ್ಯಾಂಕ್‌ಗ ಳೊಂದಿಗೆ ರಾಷ್ಟ್ರೀಕರಣಗೊಂಡಿತು. ಪೂರ್ಣಪ್ರಮಾಣದಲ್ಲಿ ಅಂತಾರಾಷ್ಟ್ರೀಯ ವಿಭಾಗವನ್ನು ಮುಂಬಯಿ ಮತ್ತು ಕರ್ನಾಟಕದ ಬಸವಕಲ್ಯಾಣದಲ್ಲಿ ಸಾವಿರದ ಶಾಖೆಯನ್ನು ಸ್ಥಾಪಿಸಲಾಯಿತು. ಬ್ಯಾಂಕು 1980ರ ದಶಕದಲ್ಲಿ ಕೆಲವು ಏರುಪೇರುಗಳನ್ನು ಕಂಡರೂ ಶೀಘ್ರವಾಗಿ ಚೇತರಿಸಿಕೊಂಡು ಮುನ್ನಡೆಯತೊಡಗಿತು.

Advertisement

ಬ್ಯಾಂಕಿನಲ್ಲಿ ಪೂರ್ಣಮಟ್ಟದ ಗಣಕದ ಸೇವೆಯನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮೊದಲನೆಯ ಸಂಸ್ಥೆಯಾಗಿ ಪ್ರಾರಂಭವಾಯಿತು. 1995-96ರಲ್ಲಿ ಐ.ಎಸ್‌.ಓ 9002 ಪ್ರಮಾಣಪತ್ರವು ಕೆನರಾಬ್ಯಾಂಕಿನ ಬೆಂಗಳೂರಿನ ಒಂದು ಶಾಖೆಗೆ ಲಭಿಸಿತು. 1996-97ರಲ್ಲಿ ಬ್ಯಾಂಕಿನ ಮೊದಲ ಎಟಿಎಂ ಯಂತ್ರವನ್ನು ಅನೇಕ ನಗರಗಳ ಶಾಖೆಗಳೊಂದಿಗೆ ಸ್ಥಾಪಿಸಲಾಯಿತು. 2001- 02ರಲ್ಲಿ ಮೊದಲ ಮಹಿಳಾ ಶಾಖೆ ಪ್ರಾರಂಭವಾಯಿತು. ಆಯ್ದ ಪ್ರಮುಖ 180 ಶಾಖೆಗಳಲ್ಲಿ ಯಾವ ಶಾಖೆಯಲ್ಲಿ ಬೇಕಾದರೂ ವ್ಯವಹರಿಸುವ ಸರ್ವಸ್ಥಳ ಸೇವೆ ಆರಂಭ ವಾಯಿತು. ಮುಖ್ಯ ಪಟ್ಟಣಗಳಲ್ಲಿ 38 ಸ್ಥಳೀಯ ಕಚೇರಿ, ವಲಯ ಕಚೇರಿಗಳಿರುವ ಊರುಗಳಲ್ಲಿ ಸಿಬ್ಬಂದಿ ತರಬೇತಿಯ ಮಹಾವಿದ್ಯಾಲಯಗಳನ್ನೂ ಹೊಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದುವರೆಗೆ ಬ್ಯಾಂಕು 8 ಗ್ರಾಮೀಣ ಬ್ಯಾಂಕುಗಳನ್ನು ಪ್ರಾಯೋಜಿಸಿದೆ.

113 ವರ್ಷಗಳ ಇತಿಹಾಸದ ಕಾರ್ಪೊರೇಶನ್‌ ಬ್ಯಾಂಕ್‌
ಉಡುಪಿಯ ದಂತಕತೆ ಎನಿಸಿದ ಖಾನ್‌ ಬಹಾದ್ದೂರ್‌ ಹಾಜಿ ಅಬ್ದುಲ್ಲಾ ಹಾಜಿ ಖಾಸಿಂ ಸಾಹೇಬ್‌ ಅವರು 1906 ಮಾರ್ಚ್‌ 12ರಂದು ಉಡುಪಿಯಲ್ಲಿ ಕಾರ್ಪೊರೇಶನ್‌ ಬ್ಯಾಂಕ್‌ನ್ನು ಸ್ಥಾಪಿಸಿದರು. ಈ ಬ್ಯಾಂಕ್‌ಗೆ 113 ವರ್ಷಗಳ ಭವ್ಯ ಇತಿಹಾಸವಿದೆ.

ಪ್ರಸ್ತುತ ಬ್ಯಾಂಕ್‌ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಸುಮಾರು 2,600 ಸಿಬಿಎಸ್‌ ಶಾಖೆಗಳು, 4,724 ಶಾಖೆಗಳು, 3,040 ಎಟಿಎಂಗಳನ್ನು ಹೊಂದಿದೆ. ಈಗಿನ ಪ್ರಧಾನ ಕಚೇರಿ ಮಂಗಳೂರಿನಲ್ಲಿದೆ.
ಇ – ಬ್ಯಾಂಕಿಂಗ್‌, ಕನ್ಸೂಮರ್‌ ಬ್ಯಾಂಕಿಂಗ್‌, ಕಾರ್ಪೊರೇಟ್‌ ಬ್ಯಾಂಕಿಂಗ್‌, ವಿಮೆ, ಇನ್ವೆಸ್ಟ್‌ಮೆಂಟ್‌ ಬ್ಯಾಂಕಿಂಗ್‌, ಅಸೆಟ್‌ ಮೆನೇಜೆ¾ಂಟ್‌, ವೆಲ್ತ್‌ ಮೆನೇಜೆ¾ಂಟ್‌, ಕ್ರೆಡಿಟ್‌ ಕಾರ್ಡ್‌ ಇತ್ಯಾದಿ ಸೇವೆಗಳನ್ನು ಹೊಂದಿದೆ.
17,494 ಕೋ.ರೂ. ಆದಾಯ ಇರುವ ಬ್ಯಾಂಕ್‌ನ ನಿರ್ವಹಣೆ ಆದಾಯ 3,894 ಕೋ.ರೂ., 2.21 ಲ.ಕೋ.ರೂ. ಆಸ್ತಿಯನ್ನು ಹೊಂದಿದೆ.

ಸ್ಥಾಪಕ ಅಧ್ಯಕ್ಷರ ಸವಿನೆನಪಿಗಾಗಿ ಬ್ಯಾಂಕ್‌, ಅವರ ಸ್ವಂತ ಮನೆಯನ್ನೇ ನಾಣ್ಯಗಳ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಿ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಟ್ಟಿದೆ. ಇಲ್ಲಿ ಕ್ರಿಸ್ತ ಪೂರ್ವ 400ನೇ ಇಸವಿ (ಸುಮಾರು 2400 ವರ್ಷಗಳ ಹಿಂದಿನ) ಗಾಂಧಾರ ಜನಪದದಲ್ಲಿ ಬಳಕೆಯಲ್ಲಿದ್ದ ನಾಣ್ಯಗಳಿಂದ ಹಿಡಿದು ಭಾರತೀಯ ರಿಸರ್ವ್‌ ಬ್ಯಾಂಕು ತೀರಾ ಇತ್ತೀಚೆಗಿನವರೆಗೆ ಬಿಡುಗಡೆ ಮಾಡಿರುವ ಸೀಸ, ತಾಮ್ರ, ಬೆಳ್ಳಿ, ಬಂಗಾರ ಹಾಗೂ ಇನ್ನಿತರ ಮಿಶ್ರ ಲೋಹಗಳಿಂದ ತಯಾರಿಸಲಾದ ನಾಣ್ಯಗಳು, ಅಪರೂಪದ ಅಂಚೆ ಚೀಟಿಗಳು ವೀಕ್ಷಣೆಗೆ ಲಭ್ಯವಿದ್ದು ನೂರಾರು ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಈ ಕೇಂದ್ರಕ್ಕೆ ಹೊಸ ಹೊಸ ಅಂಚೆ ಚೀಟಿಗಳು, ಅಂಚೆ ವಿಶೇಷ ಲಕೋಟೆಗಳು, ನಾಣ್ಯಗಳು ಬರುತ್ತಿವೆ.

ಪಿಗ್ಮಿ ಯೋಜನೆಯ ರೂವಾರಿ ಸಿಂಡಿಕೇಟ್‌ ಬ್ಯಾಂಕ್‌
ಸಿಂಡಿಕೇಟ್‌ ಬ್ಯಾಂಕ್‌ 1925ರಲ್ಲಿ ಡಾ| ಟಿ.ಎಂ.ಎ. ಪೈ, ಉಪೇಂದ್ರ ಪೈ ಮತ್ತು ವಾಮನ ಕುಡ್ವ ಅವರಿಂದ ಸ್ಥಾಪನೆಗೊಂಡಿತು. ಆಗ ಹೂಡಿದ ಬಂಡವಾಳ 8,000 ರೂ. ಆಗ ಪ್ರಥಮ ಶಾಖೆಯನ್ನು ಉಡುಪಿಯ ಮುಕುಂದ ನಿವಾಸದಲ್ಲಿ ತೆರೆಯಲಾಯಿತು. 1937ರಲ್ಲಿ ಮುಂಬಯಿ ಯಲ್ಲಿ ಕ್ಲಿಯರಿಂಗ್‌ ಹೌಸ್‌ನ್ನು ಸ್ಥಾಪಿಸಲಾಯಿತು. ಇದರ ಮೊದಲ ಹೆಸರು ಕೆನರಾ ಇಂಡಸ್ಟ್ರಿಯಲ್‌ ಆ್ಯಂಡ್‌ ಬ್ಯಾಂಕಿಂಗ್‌ ಸಿಂಡಿಕೇಟ್‌ ಲಿ. 1964ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಲಿ. ಎಂದು ಹೆಸರು ಬದಲಾಯಿಸಿ ಕೇಂದ್ರ ಕಚೇರಿಯನ್ನು ಮಣಿಪಾಲಕ್ಕೆ ಸ್ಥಳಾಂತರಿಸಲಾಯಿತು. ಪ್ರಸ್ತುತ ಭಾರತದ ಪ್ರಮುಖ ವಾಣಿಜ್ಯ ಬ್ಯಾಂಕುಗಳಲ್ಲಿ ಒಂದಾಗಿದೆ. ಭಾರತ ಸರಕಾರ 1969ರ ಜುಲೈ 19ರಂದು ರಾಷ್ಟ್ರೀಕರಣ ಮಾಡಿದ 13 ಪ್ರಮುಖ ಬ್ಯಾಂಕುಗಳಲ್ಲಿ ಇದೂ ಒಂದು.

ಜನರಲ್ಲಿ ಉಳಿತಾಯ ಪ್ರವೃತ್ತಿ ಬೆಳೆಯಲು ಪಿಗ್ಮಿ ಯೋಜನೆಯನ್ನು ಆರಂಭಿಸಿದ ಮೊತ್ತ ಮೊದಲ ಬ್ಯಾಂಕ್‌ ಸಿಂಡಿಕೇಟ್‌ ಬ್ಯಾಂಕ್‌. ಅನಂತರ ಕಾಲಘಟ್ಟಗಳಲ್ಲಿ ಎಲ್ಲ ಹಣಕಾಸು ಸಂಸ್ಥೆಗಳೂ ಈ ಯೋಜನೆಯನ್ನು ಅಳವಡಿಸಿಕೊಂಡವು. ದೇಶದಲ್ಲಿ ಪ್ರಥಮ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ನ್ನು ಪ್ರಾಯೋಜಿಸಿದ ಕೀರ್ತಿ ಸಿಂಡಿಕೇಟ್‌ ಬ್ಯಾಂಕ್‌ಗೆ ಇದೆ. ಇದು ಉತ್ತರ ಪ್ರದೇಶದ ಮೊರಾದಾಬಾದ್‌ ಜಿಲ್ಲೆಯಲ್ಲಿ ಆರಂಭಿಸಿದ ಪ್ರಥಮ ಬ್ಯಾಂಕ್‌ (1975ರ ಅಕ್ಟೋಬರ್‌ 2ರಂದು). ಪ್ರಸ್ತುತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಮತ್ತು ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್‌ನ್ನು ಪ್ರಾಯೋಜಿಸುತ್ತಿದೆ. ಕೆನರಾ ಬ್ಯಾಂಕ್‌, ಧರ್ಮಸ್ಥಳ ಗ್ರಾಮೀಣ ಸಂಸ್ಥೆಯೊಂದಿಗೆ ಸೇರಿ ರುಡ್‌ಸೆಟ್‌ ಸಂಸ್ಥೆಯನ್ನೂ ನಡೆಸುತ್ತಿದೆ. ಸ್ವ ಉದ್ಯೋಗ ಕೈಗೊಳ್ಳುವವರಿಗೆ ತರಬೇತಿ ನೀಡುವ ಈ ಸಂಸ್ಥೆಯ ಸಾಧನೆಗಾಗಿ ಬ್ಯಾಂಕ್‌ಗೆ ಶ್ರೇಷ್ಠ ಬ್ಯಾಂಕ್‌ ಪ್ರಶಸ್ತಿಯೂ ಕೇಂದ್ರ ಸರಕಾರದಿಂದ ಬಂದಿದೆ. ಬ್ಯಾಂಕ್‌ ಸ್ವಂತವಾಗಿ ಸಿಂಡ್‌ ಆರ್‌ಸೆಟಿಯನ್ನು ಆರಂಭಿಸಿದ್ದು ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಿದೆ.

ಶಾಖಾ ಜಾಲ
ಬ್ಯಾಂಕ್‌ ಪ್ರಸ್ತುತ ಮಣಿಪಾಲ, ಮುಂಬೈ, ಬೆಂಗಳೂರು, ಚೆನ್ನೈ, ದಿಲ್ಲಿ, ಎರ್ನಾಕುಳಂ, ಹೈದರಾಬಾದ್‌, ಕೋಲ್ಕತ್ತ, ಲಖನೌ ಹೀಗೆ ಒಂಭತ್ತು ವಲಯ ಕಚೇರಿಗಳನ್ನು ಮತ್ತು 95 ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಬ್ಯಾಂಕ್‌ ಒಟ್ಟು 4,063 ಶಾಖೆಗಳನ್ನು ಹೊಂದಿದೆ. ಲಂಡನ್‌ನಲ್ಲಿ ಸಾಗರೋತ್ತರ ಶಾಖೆ ಇದೆ. ಸುಮಾರು 4,300 ಎಟಿಎಂಗಳನ್ನು ಹೊಂದಿದೆ. ಒಟ್ಟು ಉದ್ಯೋಗಿಗಳ ಸಂಖ್ಯೆ ಸುಮಾರು 35,000. ಠೇವಣಿ ಮತ್ತು ಸಾಲ ಸೇರಿ ಒಟ್ಟು ವ್ಯವಹಾರ 4.5 ಲ.ಕೋ.ರೂ.

ಈ ವಿಲೀನದ ಉದ್ದೇಶ ಏನು
– ಅಂತಾರಾಷ್ಟ್ರೀಯ ಬ್ಯಾಂಕುಗಳಿಗೆ ಹೋಲಿಸಿದರೆ ಭಾರತೀಯ ಬ್ಯಾಂಕುಗಳ ಕ್ಯಾಪಿಟಲ್‌ ತುಂಬಾ ಕಡಿಮೆ ಇದ್ದು, ವಿದೇಶಿ ಬ್ಯಾಂಕುಗಳು ಭಾರತೀಯ ಬ್ಯಾಂಕುಗಳ ಸಂಗಡ ಅರ್ಥಿಕ ವ್ಯವಹಾರ ನಡೆಸಲು ಹಿಂದೇಟು ಹಾಕುತ್ತಿವೆ. ಈ ವಿಲೀನದಿಂದ ಬ್ಯಾಂಕುಗಳ ಕ್ಯಾಪಿಟಲ್‌ ಹೆಚ್ಚುತ್ತಿದ್ದು, ಬ್ಯಾಂಕುಗಳು ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಹಿನ್ನಡೆ ಅನುಭವಿಸಬೇಕಿಲ್ಲ.

– ದೊಡ್ಡ ಪ್ರಮಾಣದ ಸಾಲದ ಬೇಡಿಕೆಯನ್ನು ಇನ್ನೊಂದು ಬ್ಯಾಂಕಿನ ಸಹಾಯವಿಲ್ಲದೇ ಏಕಾಂಗಿಯಾಗಿ ಪೂರೈಸಬಹುದು.

– ವಿಲೀನದಿಂದ ಬ್ಯಾಂಕುಗಳ ನಿರ್ವಹಣಾ ವೆಚ್ಚದಲ್ಲಿ ಭಾರೀ ಕಡಿತವಾಗುತ್ತಿದ್ದು, ಬ್ಯಾಂಕಿನ ನಿವ್ವಳ ಲಾಭದಲ್ಲಿ ಹೆಚ್ಚಳವಾಗುತ್ತದೆ. ಇದು ಬ್ಯಾಂಕುಗಳ ಅನುತ್ಪಾದಕ ಸಾಲವನ್ನು ನಿಯಂತ್ರಿಸಲು ಸಹಾಯ ಮಾಡು ತ್ತ ದೆ.

– ಬ್ಯಾಂಕುಗಳ ವಿಲೀನ ಯಾವುದೇ ಅಡಚಣೆ ಮತ್ತು ಅತಂಕವಿಲ್ಲದೇ ನಡೆದಿದ್ದು ಮತ್ತು 2024ಕ್ಕೆ 5 ಟ್ರಿಲಿಯನ್‌ ಡಾಲರ್‌ ಅರ್ಥಿಕ ವ್ಯವಸ್ಥೆಗೆ ಮುನ್ನುಡಿಯಾಗಿ ಈ ವಿಲೀನ ಇಂಬು ಕೊಡುತ್ತಿದೆ. ಬ್ಯಾಂಕಿಂಗ್‌ ವ್ಯವಸ್ಥೆಯ ಸುಧಾರಣೆಯ ಮುಖ್ಯ ಅಂಗವಾದ ವಿಲೀನ 2024ರ ಆರ್ಥಿಕ ಗುರಿಯನ್ನು ತಲುಪಲು ದಾಪುಗಾಲು ಎನ್ನಬಹುದು.

– ಪ್ರತಿ ವರ್ಷವೂ ಬ್ಯಾಂಕುಗಳಿಗೆ ಕ್ಯಾಪಿಟಲ್‌ ಪೂರೈಸುವ ಅನಿವಾರ್ಯ ತೆಯಿಂದ ಸರ್ಕಾರ ಬಚಾವಾಗಬಹುದು. ಮತ್ತು ಈ ಮೊತ್ತವನ್ನು ಬೇರೆ ಉದ್ದೇಶಕ್ಕೆ ಬಳಸಬಹುದು. ಈ ವರ್ಷ ಸರ್ಕಾರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ 70,000 ಕೋಟಿ ಕ್ಯಾಪಿಟಲ್‌ ನೀಡಿದೆ. ಈ ವಿಲೀನ ಬ್ಯಾಂಕಿಂಗ್‌ ಉದ್ಯಮವನ್ನು ಉಳಿಸಿ ಬೆಳೆಸುವ ಸರ್ಕಾರದ ದೂರಗಾಮಿ ಪರಿಣಾಮದ ಹೆಜ್ಜೆ ಎಂದು ಹೇಳಬಹುದು.

ಸಾರ್ವಜನಿಕರ ಮೇಲೆ ಪರಿಣಾಮಗಳು
1. ಆಯಾ ಬ್ಯಾಂಕ್‌ಗಳ ಗ್ರಾಹಕರು ಹೊಂದಿರುವ ಚೆಕ್‌ ಪುಸ್ತಕ ಮುಂದಿನ ಆದೇಶ ಪ್ರಕಟವಾಗುವವರೆಗೆ ಬಳಕೆಯಲ್ಲಿ ಇರಲಿವೆ. ಬಳಿಕ ವಿಲೀನ ಹೊಂದಿದ ಬಳಿಕ ರಚನೆಯಾಗುವ ಏಕೀಕೃತ ಬ್ಯಾಂಕ್‌ ನೀಡುವ ಚೆಕ್‌ ಪುಸ್ತಕ ಬಳಕೆ.

2. ವಿವಿಧ ಉದ್ದೇಶಗಳಿಗಾಗಿ ನೀಡಿರುವ ಬ್ಯಾಂಕ್‌ ವಿವರಗಳು ಅಂದರೆ- ಗೃಹ, ವಾಹನ ಸಾಲ ಸ್ವಯಂಚಾಲಿತವಾಗಿ ಮಾಸಿಕ ಕಂತುಗಳು ಕಡಿತಗೊಳ್ಳುವುದಕ್ಕೆ, ಬಿಲ್‌ ಪಾವತಿಗೆ ನೀಡಿದ ವಿವರಗಳು ಮುಂದಿನ ಹಂತಗಳಲ್ಲಿ ಬದಲಾವಣೆಯಾಗಲಿವೆ. ಅದಕ್ಕಾಗಿ ಗ್ರಾಹಕರಿಗೆ ಪರಿಷ್ಕೃತ ವಿವರಗಳನ್ನು ನೀಡಬೇಕು. ಈ ಸಂದರ್ಭದಲ್ಲಿ ಐಎಫ್ಎಸ್‌ಸಿ ಕೋಡ್‌ ಬದಲಾವಣೆಯಾದಲ್ಲಿ ನೀಡಬೇಕು. ಎಸ್‌ಬಿಐನ ಸಹವರ್ತಿ ಬ್ಯಾಂಕ್‌ಗಳು ವಿಲೀನಗೊಂಡಿದ್ದಾಗ 1,300 ಶಾಖೆಗಳ ಐಎಫ್ಎಸ್‌ಸಿ ಕೋಡ್‌ ಮತ್ತು ಹೆಸರು ಬದಲಾವಣೆಯಾಗಿತ್ತು.

3. ಆಯಾ ಬ್ಯಾಂಕ್‌ಗಳು ಈಗಾಗಲೇ ನೀಡಿರುವ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳೂ ಬದಲಾವಣೆಯಾಗಲಿವೆ. ಏಕೀಕೃತ ಬ್ಯಾಂಕ್‌ ಆಗಿ ಘೋಷಣೆಯಾಗುವವರೆಗೆ ಹಾಲಿ ಇರುವ ವ್ಯವಸ್ಥೆ ಮುಂದುವರಿಸಬಹುದು.

4. ಬ್ಯಾಂಕ್‌ಗಳು ವಿಲೀನಗೊಂಡ ಹಿನ್ನೆಲೆಯಲ್ಲಿ ನಿಗದಿತ ಠೇವಣಿಗೆ ಸಂಬಂಧಿಸಿದಂತೆ ಇರುವ ದಾಖಲೆ ಬದಲಾವಣೆಗೆ ಕೊಂಚ ಕೆಲಸವಾದೀತು. ಅದು ಪೂರ್ತಿಯಾದ ಬಳಿಕ ವಿಲೀನಗೊಂಡ ನಂತರ ಅಸ್ತಿತ್ವಕ್ಕೆ ಬರುವ ಬ್ಯಾಂಕ್‌ಗೆ ವರ್ಗಾವಣೆಯಾಗುತ್ತದೆ.

5. ಸದ್ಯ ಅಸ್ತಿತ್ವದಲ್ಲಿ ಇರುವ ಬ್ಯಾಂಕ್‌ಗಳಿಂದ ಪಡೆದ ಸಾಲಗಳ ಮೇಲೆ ಇರುವ ಬಡ್ಡಿ ದರ ಏನಾಗಲಿದೆ ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಏಕೆಂದರೆ ಎಂಸಿಎಲ್‌ಆರ್‌ (ಕನಿಷ್ಠ ಬಡ್ಡಿದರ ವಿಧಿಸುವ ಮಿತಿ)ಮಿತಿ ಬ್ಯಾಂಕ್‌ಗಳಿಗೆ ಅನುಸಾರವಾಗಿ ಬೇರೆ ಬೇರೆಯಾಗಿದೆ.

6. ವಿಲೀನಗೊಳ್ಳಲಿರುವ ಬ್ಯಾಂಕ್‌ಗಳ ಷೇರುಗಳನ್ನು ಹೊಂದಿದವರಿಗೆ ಅಡಚಣೆಯಾಗಲಿದೆ. ಆಯಾ ಬ್ಯಾಂಕ್‌ಗಳು ಹೊಂದಲಿರುವ ಪಾಲು ಬಂಡವಾಳ ಮಿತಿ ನಿರ್ಧಾರವಾದಾಗ ಆ ಪರಿಸ್ಥಿತಿ ತಿಳಿಯಾಗಲಿದೆ.

7. ಇದರಿಂದಾಗಿ ಉಂಟಾಗುವ ಮತ್ತೂಂದು ಪ್ರಧಾನ ಧನಾತ್ಮಕ ಅಂಶಗಳೆಂದರೆ ವಿಲೀನಗೊಂಡ ಮತ್ತು ಮೂಲ ಬ್ಯಾಂಕ್‌ಗಳ ಶಾಖೆಗಳ ಸೇವೆಗಳು ಗ್ರಾಹಕರಿಗೆ ಸಿಗಲಿವೆ. ಆದರೆ ಬ್ಯಾಂಕ್‌ಗಳ ಶಾಖೆಗಳನ್ನು ಮುಚ್ಚುವ ನಿರ್ಧಾರ ಕೈಗೊಂಡರೆ, ಈ ಉದ್ದೇಶ ಈಡೇರದು.

8. ಬ್ಯಾಂಕ್‌ ಆಫ್ ಇಂಡಿಯಾ, ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ ಬ್ಯಾಂಕ್‌ ಗ್ರಾಹಕರಿಗೆ ತೊಂದರೆಯಾಗುವುದಿಲ್ಲ. ಏಕೆಂದರೆ ಘೋಷಣೆ ಮಾಡಲಾಗಿರುವ ವಿಲೀನ ಪ್ರಕ್ರಿಯೆಯಲ್ಲಿ ಅವುಗಳನ್ನು ಮುಟ್ಟಲಾಗಿಲ್ಲ. ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಯುಕೋ ಬ್ಯಾಂಕ್‌, ಬ್ಯಾಂಕ್‌ ಆಫ್ ಮಹಾರಾಷ್ಟ್ರ ಮತ್ತು ಪಂಜಾಬ್‌ ಮತ್ತು ಸಿಂಧ್‌ ಬ್ಯಾಂಕ್‌ನ ಗ್ರಾಹಕರಿಗೂ ನಿರ್ಧಾರದ ಪ್ರಭಾವ ತಟ್ಟುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next