Advertisement

ಸ್ವಚ್ಛತೆ ಕಾಪಾಡಲು ಶಾಸಕರ ಸೂಚನೆ

05:52 PM Apr 24, 2020 | Naveen |

ಮಾಯಕೊಂಡ: ದಾವಣಗೆರೆ ಜಿಲ್ಲೆ ಕೋವಿಡ್  ನಿಂದ ಮುಕ್ತವಾಗಿರುವುದು ಸಂತಸ ತಂದಿದೆ ಎಂದು ಶಾಸಕ ಪ್ರೊ| ಲಿಂಗಣ್ಣ ಹೇಳಿದರು. ಇಲ್ಲಿನ ಗ್ರಾಮ ಪಂಚಾಯತ್‌ ಕಚೇರಿಯಲ್ಲಿ ನಡೆದ ಕೋವಿಡ್  ಜಾಗೃತಿ ಕಾರ್ಯಕ್ರಮದಲ್ಲಿ ಮಾಸ್ಕ್ ವಿತರಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಸ್ವತ್ಛತೆ ಇರಬೇಕು. ರಸ್ತೆ ಬದಿಯಲ್ಲಿ ತಿಪ್ಪೆಗಳು, ಚರಂಡಿಯಲ್ಲಿ ಹೂಳು ತೆಗೆಸಬೇಕು. ಬೇಸಿಗೆ ಕಾಲವಾಗಿರುವುದರಿಂದ ಕುಡಿಯುವ ನೀರಿಗೆ ತೊಂದರೆ ಆಗಬಾರದು. ಈ ನಿಟ್ಟಿನಲ್ಲಿ ಕೆಲಸ ಆಗಬೇಕು ಎಂದು ಪಿಡಿಒಗೆ ಸೂಚಿಸಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವರು ಕ್ಷೇತ್ರಕ್ಕೆ 5 ಲಕ್ಷ ರೂ. ನೀಡಿದ್ದು, ಅದರಲ್ಲಿ ಮಾಸ್ಕ್ ನೀಡುತ್ತಿದ್ದೇವೆ. ಶಾಸಕರ ನಿಧಿಯಿಂದ ಅನುದಾನ ಬಿಡುಗಡೆಯಾಗುತ್ತಿದ್ದು ಅದರಲ್ಲಿ ಸ್ಯಾನಿಟೈಸರ್‌, ಮಾಸ್ಕ್ ವಿತರಿಸಲಾಗುವುದು ಎಂದರು. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯದಿಂದ ಇರಬೇಕು ಎಂದರು. ಬಾಲರಾಜ್‌ ಮಾತನಾಡಿ, ಕಳೆದ ಸಭೆಯಲ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ವೈದ್ಯರನ್ನು ನೇಮಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಿರಿ. ಇಷ್ಟು ದಿನ ಕಳೆದರೂ ಕೆಲಸ ಆಗಿಲ್ಲ. ದಾವಣಗೆರೆಗೆ ಬಡವರು ಹೋಗಲಾಗುತ್ತಿಲ್ಲ. ಏನು ಮಾಡಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿಲು ಆರೋಗ್ಯ ಕೇಂದ್ರಕ್ಕೆ ಮತ್ತೋರ್ವ ವೈದ್ಯರನ್ನು ನೇಮಿಸಬೇಕು ಎಂದು ದೂರವಾಣಿ ಮೂಲಕ ಡಿಎಚ್‌ಒ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಈ ಬಗ್ಗೆ ಆರೋಗ್ಯ ಸಚಿವರ ಬಳಿ ಮಾತನಾಡುವುದಾಗಿ ತಿಳಿಸಿದರು. ರೈತ ಮುಖಂಡ ಬಲ್ಲೂರು ರವಿಕುಮಾರ್‌ ಮಾತನಾಡಿ, ಸರ್ಕಾರ ಎರಡು ಲಕ್ಷ ಟನ್‌ ಮೆಕ್ಕೆಜೋಳ ಖರೀದಿಸುವುದಾಗಿ ಹೇಳಿತ್ತು. ಆದರೆ ಕೊರೊನಾದಿಂದ ನಿಂತಿದೆ. ಈಗ ತರಕಾರಿ ಕೆಡುತ್ತಿದೆ. ಆದ್ದರಿಂದ ನಮ್ಮ ತಾಲೂಕಿನ ರೈತರ ಭತ್ತ ಮೆಕ್ಕೆಜೋಳ ಖರೀದಿಸುವ ಮೂಲಕ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು. ಗ್ರಾಪಂ ಅಧ್ಯಕ್ಷೆ ರೂಪಾ ರಘುರಾಮ್‌, ಸದಸ್ಯರಾದ ರಾಜಶೇಖರ್‌, ಗಂಗಾಧರಪ್ಪ, ಪರಶುರಾಮ್‌, ಜಯಪ್ಪ, ಪಿಎಸ್‌ಐ ವೀರಭದ್ರಪ್ಪ, ಪಿಡಿಒ ಸುಮಲತಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next