Advertisement

ನಿವೃತ್ತ ಅಧಿಕಾರಿಗಳಿಗೆ ಭಾರೀ ಡಿಮ್ಯಾಂಡ್‌

06:05 AM Aug 11, 2018 | |

ಬೆಂಗಳೂರು: ಹಿತಕರ ವಾತಾವರಣದ ಕಾರಣದಿಂದ ನಿವೃತ್ತರ ಸ್ವರ್ಗ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರಿನ ಸರ್ಕಾರಿ ಕಚೇರಿಗಳು ಕೂಡ ಈಗ ನಿವೃತ್ತ ನೌಕರರ ಪಾಲಿಗೆ ಸ್ವರ್ಗವಾಗುತ್ತಿದೆ. ಅನುಭವಿ ಮತ್ತು ಕೆಲಸದಲ್ಲಿ ನೈಪುಣ್ಯತೆ ಹೊಂದಿರುವ ನೌಕರರು ಅದರಲ್ಲೂ ಮುಖ್ಯವಾಗಿ ಅಧಿಕಾರಿಗಳ ಕೊರತೆ ಉಂಟಾಗಿರುವುದರಿಂದ ಸಮಸ್ಯೆ ಬಗೆಹರಿಸಿಕೊಳ್ಳಲು ಸರ್ಕಾರ ನಿವೃತ್ತ ನೌಕರರ ಮೊರೆ ಹೋಗುತ್ತಿದೆ.

Advertisement

ಸರ್ಕಾರದ ಪ್ರಮುಖ ಇಲಾಖೆಗಳು ಮಾತ್ರವಲ್ಲದೆ, ಮುಖ್ಯಮಂತ್ರಿ, ಸಚಿವರ ಸುತ್ತಮುತ್ತ ಇರುವ ಅಧಿಕಾರಿಗಳಲ್ಲೂ ನಿವೃತ್ತ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ಸಂಪುಟ ಸಭೆಯಲ್ಲೂ ನಿವೃತ್ತ ಅಧಿಕಾರಿಗಳನ್ನು ಗುತ್ತಿದೆ ಆಧಾರದ ಮೇಲೆ ಮುಂದುವರಿಸುವ ಕುರಿತು ತೀರ್ಮಾನ ಕೈಗೊಳ್ಳುವುದು ಸಾಮಾನ್ಯ ಎನ್ನುವಂತಾಗಿದೆ.

ಆಡಳಿತ ಸುಧಾರಣಾ ಆಯೋಗದ ವರದಿ ನಂತರ ಸರ್ಕಾರಿ ನೌಕರರ ನೇಮಕಕ್ಕೆ ಸಾಕಷ್ಟು ಕಡಿವಾಣ ಬಿದ್ದಿದೆ. ಇದರ ಪರಿಣಾಮ ಪ್ರಸ್ತುತ ಆಯಕಟ್ಟಿನ ಹುದ್ದೆಗಳಲ್ಲಿ ಹೆಚ್ಚು ಜವಾಬ್ದಾರಿಯ ಕೆಲಸಗಳನ್ನು ನಿರ್ವಹಿಸಲು ನಿಪುಣ ನೌಕರರ ಸಮಸ್ಯೆ ತಲೆದೋರಿದೆ. ಆದರೆ, ಆಡಳಿತ ವ್ಯವಸ್ಥೆಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಅಂತಹ ಹುದ್ದೆಗಳಿಂದ ನಿವೃತ್ತಿಗೊಂಡವರನ್ನು ಗುತ್ತಿಗೆ ಆಧಾರದ ಮೇಲೆ ನಿಯೋಜಿಸಲಾಗುತ್ತಿದೆ.

ಪ್ರಸ್ತುತ ಆಯಕಟ್ಟಿನ ಸ್ಥಳಗಳು ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ನಿವೃತ್ತ ನೌಕರರ ಸಂಖ್ಯೆ ಹೆಚ್ಚಾಗಿದ್ದು, ಸಾವಿರದ ಗಡಿ ತಲುಪುತ್ತಿದೆ. ಕೌಶಲ್ಯ ಹೊಂದಿರುವ ಅನುಭವಿ ನೌಕರರು ಸಿಗದ ಕಾರಣ, ಅದರಲ್ಲೂ ಮುಖ್ಯವಾಗಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಅಗತ್ಯ ಸಿಬ್ಬಂದಿ ನಿಯುಕ್ತಿಗೊಳ್ಳುವವರೆಗೆ ನಿವೃತ್ತರ ನೇಮಕ ಅನಿವಾರ್ಯ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಇತ್ತೀಚಿನ ವರ್ಷಗಳಲ್ಲಿ ನಿವೃತ್ತಿಯ ನಂತರವೂ ಕೆಲಸ ಮಾಡಲು ಆಸಕ್ತಿ ಹೊಂದಿದ್ದ ನೌಕರರು ಕಾರ್ಪೋರೇಟ್‌ ಕಂಪನಿಗಳ ಮೊರೆ ಹೋಗುತ್ತಿದ್ದರು. ಅದರಲ್ಲೂ ಆಯಕಟ್ಟಿನ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಈ ಕಂಪೆನಿಗಳು ಕೈ ಬೀಸಿ ಕರೆಯುತ್ತಿದ್ದವು. ದೊಡ್ಡ ಮೊತ್ತದ ವೇತನವನ್ನೂ ನೀಡುತ್ತಿದ್ದವು. ಆದರೆ, ಇದೀಗ ಸರ್ಕಾರವೇ ನಿವೃತ್ತ ನೌಕರರಿಗೆ ಮಣೆ ಹಾಕುತ್ತಿದೆ. ಕಳೆದ ಎರಡು ವರ್ಷಗಳಿಂದ ನಿವೃತ್ತ ನೌಕರರನ್ನು ಸೇವೆಯಲ್ಲಿ ಮುಂದುವರಿಸುವ ಪ್ರಕ್ರಿಯೆ ಹೆಚ್ಚಾಗಿದ್ದು, ಸಾಕಷ್ಟು ಮಂದಿ ನಿವೃತ್ತ ನೌಕರರು ಪ್ರಮುಖ ಕೆಲಸಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇಲ್ಲಿ ಕೆಲಸದ ಒತ್ತಡ ಕಡಿಮೆ ಇರುವುದರಿಂದ ನಿವೃತ್ತ ಅಧಿಕಾರಿಗಳೂ ಸರ್ಕಾರಿ ಕೆಲಸದ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ.

Advertisement

ವಿಶೇಷ ಎಂದರೆ ನಿವೃತ್ತ ಅಧಿಕಾರಿಗಳ ನೇಮಕಾತಿ ಆಯಾ ಸರ್ಕಾರದಲ್ಲಿ ಅಧಿಕಾರದಲ್ಲಿರುವವರಿಗೆ ಹತ್ತಿರವಾದ ಅಧಿಕಾರಿಗಳಿಗೆ ಸೀಮಿತವಾಗುತ್ತಿದೆ. ನಿವೃತ್ತ ಅಧಿಕಾರಿಗಳಲ್ಲಿ ತಮಗೆ ಯಾರು ಬೇಕೋ ಅವರನ್ನು ನೇಮಿಸಿಕೊಳ್ಳಲಾಗುತ್ತದೆ. ಹೀಗಾಗಿ ಹಿಂದಿನ ಸರ್ಕಾರದಲ್ಲಿ ನೇಮಕಗೊಂಡ ಕೆಲವು ಅಧಿಕಾರಿಗಳು ಈಗಾಗಲೇ ಮನೆಗೆ ತೆರಳಿದ್ದು, ಅವರ ಸ್ಥಾನಕ್ಕೆ ಹೊಸ ನಿವೃತ್ತ ಅಧಿಕಾರಿಗಳು ಬರುತ್ತಿದ್ದಾರೆ. ಆದರೆ, ಇಲಾಖೆಗಳಲ್ಲಿ ಈ ಹಿಂದಿನ ಸರ್ಕಾರದಲ್ಲಿ ನೇಮಕಗೊಂಡವರೇ ಮುಂದುವರಿದಿದ್ದಾರೆ.

ಸುತ್ತೋಲೆ ನಂತರ ಹೆಚ್ಚಿದ ನೇಮಕ:
ರಾಜ್ಯದಲ್ಲಿ ನಿವೃತ್ತ ನೌಕರರ ನೇಮಕ ಹೆಚ್ಚಾಗುತ್ತಿರುವುದರಿಂದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಮೇಲಾಗಿ ಈ ರೀತಿ ನಿವೃತ್ತ ನೌಕರರನನ್ನು ಪ್ರಮುಖ ಹುದ್ದೆಗಳಲ್ಲಿ ಮುಂದುವರಿಸುವುದು ನಿಯಮಾವಳಿಗೆ ವಿರುದ್ಧ ಎಂಬ ಕಾರಣಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 2016ರ ಫೆಬ್ರವರಿಯಲ್ಲಿ ಎಲ್ಲಾ ಇಲಾಖೆಗಳಿಗೆ ಸುತ್ತೋಲೆಯೊಂದನ್ನು ಹೊರಡಿಸಿ, ನಿವೃತ್ತಿ ಹೊಂದಿದ ನೌಕರರನ್ನು ಮರುನೇಮಕ ಮಾಡಿಕೊಳ್ಳುವಂತಿಲ್ಲ. ಅದೇ ರೀತಿ ನಿವೃತ್ತಿ ನಂತರ ಪುನರ್‌ ನೇಮಕದ ಆಧಾರದಲ್ಲಿ ಸೇವೆಯಲ್ಲಿ ಮುಂದುವರಿಯುವ ನೌಕರರನ್ನು ಅವಶ್ಯಕತೆ ಇಲ್ಲದಿದ್ದರೆ ತಕ್ಷಣ ಸೇವೆಯಿಂದ ಮುಕ್ತಗೊಳಿಸಬೇಕು. ಖಾಲಿ ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ತುಂಬಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು. ಆದರೆ, ಈ ಸುತ್ತೋಲೆ ನಂತರ ನಿವೃತ್ತ ನೌಕರರ ನೇಮಕಾತಿ ಹೆಚ್ಚಾಗಿದೆ.

ನಿವೃತ್ತರ ನೇಮಕಕ್ಕೆ ಕಾರಣಗಳು
– ರಾಜ್ಯ ಸರ್ಕಾರದಲ್ಲಿ ಒಟ್ಟು 84 ಇಲಾಖೆಗಳಿದ್ದು, 6,96,242 ಮಂಜೂರಾದ ಹುದ್ದೆಗಳಿವೆ. ಇದರಲ್ಲಿ ಸುಮಾರು 2.2 ಲಕ್ಷ ಹುದ್ದೆಗಳು ಖಾಲಿ ಇವೆ. ಇವು ಭರ್ತಿಯಾಗದೆ ಎಲ್ಲಾ ಕಡೆ ಸಿಬ್ಬಂದಿ ಕೊರತೆ ಇದೆ.
– ಹಲವು ವರ್ಷಗಳಿಂದ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ನೇಮಕಾತಿ ಸರಿಯಾಗದೆ ಆಯಕಟ್ಟಿನ ಹುದ್ದೆಗಳು ಖಾಲಿ ಇವೆ. ಈ ಕೆಲಸಗಳನ್ನು ಹೊರಗುತ್ತಿಗೆ ಸಿಬ್ಬಂದಿಯಿಂದ ಮಾಡಿಸಲು ಸಾಧ್ಯವಿಲ್ಲ.
– ನಿವೃತ್ತ ನೌಕರರಿಗೆ ನಿಗದಿಪಡಿಸುವ ವೇತನದಲ್ಲಿ ಅವರ ಪಿಂಚಣಿ ಕಳೆದು ಉಳಿದ ಮೊತ್ತವನ್ನು ಪಾವತಿಸಬೇಕು. ಹೀಗಾಗಿ ಸರ್ಕಾರಕ್ಕೆ ಆರ್ಥಿಕವಾಗಿಯೂ ಲಾಭವಾಗುತ್ತದೆ ಮತ್ತು ಅನುಭವಿ ಅಧಿಕಾರಿಗಳು ಸಿಗುತ್ತಾರೆ.

ಅನುಭವಿಗಳ ಕೊರತೆ
ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಎಂಬುದಕ್ಕಿಂತಲೂ ಅನುಭವಿ ಮತ್ತು ಕೆಲಸದ ನೈಪುಣ್ಯತೆ ಹೊಂದಿರುವ ಸಿಬ್ಬಂದಿ ಸಮಸ್ಯೆ ಇದೆ. ಕೆಲವು ಹುದ್ದೆಗಳಲ್ಲಿ ದೈಹಿಕ ಶ್ರಮಕ್ಕಿಂತ ಬುದ್ಧಿಗೆ ಸಂಬಂಧಿಸಿದ ಕೆಲಸಗಳು ಹೆಚ್ಚು. ಇಂತಹ ಹುದ್ದೆಗಳಿಗೆ ನಿವೃತ್ತರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆಯೇ ಹೊರತು ಬೇರೆ ಯಾವುದೇ ಕಾರಣ ಇಲ್ಲ ಎನ್ನುತ್ತಾರೆ ಇಲಾಖೆಯೊಂದರ ಪ್ರಧಾನ ಕಾರ್ಯದರ್ಶಿಯವರು.

– ಎಂ. ಪ್ರದೀಪ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next