Advertisement

ಎನ್‌ಆರ್‌ಬಿಸಿ 5ಎಗೆ ಮುಕ್ತಿ ಕೊಡುವರೇ ಸಿಎಂ?

01:32 PM Jun 26, 2019 | Naveen |

ಉಮೇಶ್ವರಯ್ಯ ಬಿದನೂರಮಠ
ಮಸ್ಕಿ:
ನಾರಾಯಣಪುರ ಬಲದಂಡೆ ಕಾಲುವೆಯ ಉಪಕಾಲುವೆ 5ಎ ಪಾಮನಕೆಲ್ಲೂರು ಶಾಖಾ ಕಾಲುವೆ ಯೋಜನೆ ಅನುಷ್ಠಾನ ನನೆಗುದಿಗೆ ಬಿದ್ದು, ಈ ಭಾಗದ ರೈತರ ಬದುಕು ಅತಂತ್ರಗೊಂಡಿದೆ. ವಾಸ್ತವ್ಯಕ್ಕೆಂದು ಜಿಲ್ಲೆಗೆ ಬರುತ್ತಿರುವ ನಾಡಿನ ದೊರೆ ಈ ಬಾರಿಯಾದರೂ ಈ ಯೋಜನೆಯತ್ತ ದೃಷ್ಟಿ ಹರಿಸುವರೇ ಎಂದು ಚಾತಕ ಪಕ್ಷಿಗಳಂತೆ ಕಾದಿದ್ದಾರೆ ರೈತರು.

Advertisement

ಈ ಕುರಿತು ಎನ್‌ಆರ್‌ಬಿಸಿ 5ಎ ಪಾಮನಕೆಲ್ಲೂರು ಶಾಖಾ ಕಾಲುವೆ ವ್ಯಾಪ್ತಿಯ ರೈತರ ಹೋರಾಟ ಸಮಿತಿಯಿಂದ ದಶಕಕ್ಕೂ ಹೆಚ್ಚು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಅನೇಕ ಮನವಿಗಳನ್ನು ಸಲ್ಲಿಸಿ ಸೋತು ಹೋಗಿದ್ದಾರೆ. ಕೊನೆ ಪ್ರಯತ್ನ ಎನ್ನುವಂತೆ ಸಿಎಂ ಗ್ರಾಮ ವಾಸ್ತವ್ಯದ ಕರೇಗುಡ್ಡಕ್ಕೆ ತೆರಳಿ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ತಮ್ಮದು ರೈತ ಪರ ಸರಕಾರ ಎನ್ನುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಶಕಗಳ ಬೇಡಿಕೆಯಾದ 5ಎ ಕಾಲುವೆ ಯೋಜನೆ ಅನುಷ್ಠಾನಕ್ಕೆ ಹಸಿರು ನಿಶಾನೆ ತೋರುವ ಮೂಲಕ ತಮ್ಮ ಕಾಳಜಿ ಪ್ರದರ್ಶಿಸಬೇಕಿದೆ.

2008ರಿಂದ ಈವರೆಗೆ ನಾನಾ ರೀತಿಯ ಹೋರಾಟಗಳನ್ನು ಮಾಡಿಕೊಂಡು ಬರಲಾಗಿದೆ. ಇದು ಈ ಭಾಗದ ಪ್ರಮುಖ ಯೋಜನೆಯಾಗಿದ್ದು, ಅನುಷ್ಠಾನಗೊಂಡಲ್ಲಿ ಜಿಲ್ಲೆಯ 5 ತಾಲೂಕುಗಳ ನೂರಾರು ಹಳ್ಳಿಗಳ 1,16,660 ಎಕರೆ ಕೃಷಿ ಭೂಮಿ ನೀರಾವರಿಗೆ ಒಳಪಡಲಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ರೈತರು ಉದ್ಯೋಗಕ್ಕಾಗಿ ಗುಳೆ ಹೋಗುವುದು ತಪ್ಪಲಿದೆ.

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಜಾರಿಗೆ ಅಂದಿನಿಂದಲೂ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ, ಯೋಜನೆಗೆ ಕೆಲ ತಾಂತ್ರಿಕ ಕಾರಣಗಳ ನೆಪ ಹೇಳಿ ರೈತರ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂಬುದು ನಾಲಾ ಹೋರಾಟ ಸಮಿತಿಯ ರೈತರ ಆರೋಪ.

ಮಸ್ಕಿಯಲ್ಲಿ ಜರುಗಿದ ನೀರಾವರಿ ವಂಚಿತ ರೈತರ ಸಮಾವೇಶದಲ್ಲಿ ಮನವಿ ಪತ್ರ ಸ್ವೀಕರಿಸಲು ಆಗಮಿಸಿದ್ದ ಅಂದಿನ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ, ನಾರಾಯಣಪುರ ನೀರಾವರಿ ಇಲಾಖೆಯ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಯೋಜನೆಯ ಅಂದಾಜು ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ನಾರಾಯಣಪುರ ನೀರಾವರಿ ಇಲಾಖೆಯ ಇಂಜಿನೀಯರ್‌ಗಳು 1,825 ಕೋಟಿ ರೂ. ಖರ್ಚಾಗಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

Advertisement

ಅಲ್ಲದೆ 2017ರ ಮೇನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಯೋಜನೆಯ ಮಾಹಿತಿ ನೀಡಲಾಗಿತ್ತು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. 2018ರ ಮಾರ್ಚ್‌ 18ರಂದು ಮಸ್ಕಿಯಲ್ಲಿ ನಡೆದ ಜೆಡಿಎಸ್‌ ಸಮಾವೇಶ ಹಾಗೂ ರೈತರ ಸಂವಾದ ಕಾರ್ಯಕ್ರಮದಲ್ಲಿ ರೈತರು ಯೋಜನೆಯ ಜಾರಿಗಾಗಿ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿಯಾದ ನಂತರ ಸಿಂಧನೂರಿನಲ್ಲಿ ಪಶುಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದಾಗಲೂ ಈ ಕುರಿತು ಗಮನ ಸೆಳೆಯಲಾಗಿತ್ತು. ಆದರೂ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತಾಳುತ್ತಿಲ್ಲ.

ಜಿಲ್ಲೆಯ ಸಮಸ್ಯೆ ಆಲಿಸಲೆಂದೇ ವಾಸ್ತವ್ಯ ಹೂಡುವುದಾಗಿ ಹೇಳಿಕೊಂಡಿರುವ ಸಿಎಂ, ಬಹುವರ್ಷಗಳ ಬೇಡಿಕೆಯನ್ನು ಇನ್ನಾದರೂ ಈಡೇರಿಸುವರೇ ಎಂಬುದು ರೈತರ ಪ್ರಶ್ನೆ.

ಈಗಾಗಲೇ ನಾವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದೇವೆ. 5ಎ ಕಾಲುವೆ ಅನುಷ್ಠಾನಗೊಂಡರೆ ಜಿಲ್ಲೆಯ ರೈತರ ಬದುಕೇ ಬದಲಾಗಿ ಹೋಗಲಿದೆ. ಕೊನೆ ಪ್ರಯತ್ನ ಎಂಬಂತೆ ಸಿಎಂಗೆ ಮತ್ತೂಮ್ಮೆ ಮನವಿ ಕೊಡಲು ನಿರ್ಧರಿಸಿದ್ದೇವೆ. ಇದೇ ವೇಳೆ ಜಿಲ್ಲೆಯ ಜನಪ್ರತಿನಿಧಿಗಳು ಕೂಡ ನಮ್ಮ ಬೇಡಿಕೆಗೆ ದನಿಗೂಡಿಸಬೇಕು.
ಬಸವರಾಜಪ್ಪ ಗೌಡ ಹರ್ವಾಪುರ,
5ಎ ಕಾಲುವೆ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next