Advertisement

ಕಾಂಗ್ರೆಸ್‌ನ ಹಲವು ನಾಯಕರು ಶೀಘ್ರ ಬಿಜೆಪಿಗೆ

03:04 PM May 11, 2022 | Team Udayavani |

ಬಳ್ಳಾರಿ: ಕಾಂಗ್ರೆಸ್‌ನ ಹಲವು ನಾಯಕರು ಬಿಜೆಪಿ ಸೇರಲು ದುಂಬಾಲು ಬಿದ್ದಿದ್ದಾರೆ. ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ಕೊಟ್ಟ ಮೇಲೆ ಅವರ ಸೇರ್ಪಡೆಗೆ ಕ್ರಮವಹಿಸಲಾಗುವುದು ಎಂದು ಸಾರಿಗೆ, ಎಸ್‌ಟಿ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಬಾಂಬ್‌ ಸಿಡಿಸಿದ್ದಾರೆ.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕರು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬರಲು ಸಂಪರ್ಕ ಮಾಡ್ತಾ ಇದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಮಂದಿ ರಾಜಕೀಯ ಮುತ್ಸದ್ದಿಗಳು, ಹಾಲಿ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಮಧ್ಯವರ್ತಿಗಳನ್ನ ನನ್ನ ಬಳಿ ಕಳಿಸಿ ಅಣ್ಣಾವರೇ ನಾನು ಪಾರ್ಟಿ ಸೇರಬೇಕು ಅಂತಾ ದುಂಬಾಲು ಬಿದ್ದಿದ್ದಾರೆ ಎಂದರು. ಹಾಲಿ ನಮ್ಮ ಸಂಪರ್ಕದಲ್ಲಿ ಹಲವು ನಾಯಕರು ಇದ್ದಾರೆ. ಸಮಯ ಬಂದಾಗ ನಾನು ಅವರ ಹೆಸರನ್ನು ಹೇಳುವೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವವರ ಕುರಿತು ಈಗಾಗಲೇ ಸಿಎಂ ಸೇರಿದಂತೆ ಹಲವು ವರಿಷ್ಠರ ಗಮನಕ್ಕೆ ತಂದಿರುವೆ. ಹೈಕಮಾಂಡ್‌ ಗ್ರಿನ್‌ ಸಿಗ್ನಲ್‌ ಕೊಟ್ಟ ಬಳಿಕ ಎಲ್ಲರನ್ನೂ ಬಿಜೆಪಿಗೆ ಕರೆತರುವೆ ಎಂದು ಅವರು ತಿಳಿಸಿದರು.

2023ರ ಚುನಾವಣೆಯನ್ನು ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮಾಡುತ್ತೇವೆ. ಬಿಜೆಪಿಯ ಮಿಷನ್‌-150ಗೆ ನಾವು ಕಲ್ಯಾಣ ಕರ್ನಾಟಕದಿಂದ ಅತಿ ಹೆಚ್ಚು ಕೊಡುಗೆ ನೀಡಲು ತಯಾರಿಮಾಡಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಸಂಸದೆ ಸುಮಲತಾ ಬಿಜೆಪಿ ಸೇರುವ ವಿಚಾರ ನನಗೆ ತಿಳಿದಿಲ್ಲ. ಒಂದು ವೇಳೆ ಅವರು ಬಂದರೆ ನಮಗೆ ದೊಡ್ಡ ಶಕ್ತಿ ಬರಲಿದೆ. ಸುಮಲತಾ ಅಂಬರೀಶ್‌ ಒಬ್ಬ ಕಲಾವಿದೆ. ರಾಜಕೀಯ ಹಿನ್ನೆಲೆ ಹೊಂದಿದವರು. ಅವರು ಬಿಜೆಪಿಗೆ ಬರುವುದರಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬರಲಿದೆ ಎಂದರು. ಸಚಿವ ಸಂಪುಟ ಪುನರ್‌ ರಚನೆ ಕುರಿತು ಕೇಳಿದ ಪ್ರಶ್ನೆಗೆ ನನಗೆ ಮಾಹಿತಿ ಇಲ್ಲ ಎಂದಷ್ಟೇ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next