Advertisement

ಮನೋಜ್ಞ ನೃತ್ಯಾಭಿವಂದನಾ

02:33 PM Oct 06, 2017 | |

ಮಂಗಳೂರು ಪುರಭವನದಲ್ಲಿ ಇತ್ತೀಚೆಗೆ ನಾಟ್ಯಾರಾಧನಾ ಕಲಾಕೇಂದ್ರ (ರಿ.) ಹಮ್ಮಿಕೊಂಡ ನೇಹಾ ವೈ. ದೇವಾಡಿಗ, ಸ್ಪಂದನಾ ಭಟ್‌, ಧವಳಾ ಮತ್ತು ಅನಘಾ ರಾವ್‌ ಎಂಬ ತನ್ನ ನಾಲ್ವರು ವಿದ್ಯಾರ್ಥಿನಿಯರ “ನೃತ್ಯಾಭಿವಂದನಾ’ ಮನೋಜ್ಞವಾಗಿತ್ತು.

Advertisement

ತಿಲಂಗ್‌ ರಾಗ, ಆದಿತಾಳದ ಪುಷ್ಪಾಂಜಲಿಗೆ ಹೆಜ್ಜೆ ಹಾಕುತ್ತಾ ಕಾರ್ಯಕ್ರಮವನ್ನು ಆರಂಭಿಸಿದ ನೇಹಾ, ಧವಳಾ ಮತ್ತು ಅನಘಾ ಸುಂದರವಾದ ಅಡವುಗಳಿಂದ ಸಂಯೋಜಿಸಲ್ಪಟ್ಟ ನೃತ್ಯ ಪ್ರಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಶುಭ ನಾಂದಿಯನ್ನು ಹಾಡಿದರು. ವಿ| ಸುಮಂಗಲಾ ರತ್ನಾಕರ್‌ ರಚನೆಯ ಈ ನೃತ್ಯ ಸೃಜನಶೀಲವಾಗಿದ್ದು, ದೇವ-ಗುರು-ಸಭೆಯ ವಂದನೆಯ ಸಂದರ್ಭದಲ್ಲಿ ಬಳಸಿದ ಗದ್ಯಭಾಗ ಆಕರ್ಷಕವಾಗಿತ್ತು. ಬಳಿಕ ಅವರದೇ ರಚನೆಯ ಶ್ರೀದೇವಿ ಮಹಾತ್ಮೆಯ ಕಥೆಯನ್ನಾಧರಿಸಿದ ಭಕ್ತಿರಸ ಪ್ರಧಾನ ಶಬ್ದಂ ರಾಗ ಮಾಲಿಕೆ- ಮಿಶ್ರಛಾಪು ತಾಳದಲ್ಲಿ ನೇಹಾ ಮತ್ತು ಧವಳಾ ಅವರಿಂದ ಸೊಗಸಾಗಿ ಹೊರಹೊಮ್ಮಿತು. ಇಲ್ಲಿ ಪ್ರಸ್ತುತಗೊಂಡ ಮಹಿಷ-ದೇವಿ ಭಾಗದ ವಿಸ್ತೃತ ಅಭಿನಯ ಪರಿಣಾಮಕಾರಿಯಾಗಿತ್ತು.

ಕಾರ್ಯಕ್ರಮದ ಪ್ರಧಾನ ಪ್ರಸ್ತುತಿ ಪದವರ್ಣ. ಇಲ್ಲಿ ವಿರಹೋತ್ಕಂಠಿತಾ ಅವಸ್ಥೆಯ ನಾಯಿಕೆಯ ಅಭಿನಯಕ್ಕೆ ವಿ| ಸುಮಂಗಲಾ ರತ್ನಾಕರ್‌ ರಚನೆಯ ಅಷ್ಟರಾಗ ಮಾಲಿಕೆ -ಆದಿತಾಳದ ಕಾಂತನ ಕರೆ ತಾರೆಯನ್ನು ಆರಿಸಲಾಗಿತ್ತು ನೇಹಾ, ಧವಳಾ ಹಾಗೂ ಅನಘಾ ಪ್ರಸ್ತುತಪಡಿಸಿದ ಈ ನೃತ್ಯದಲ್ಲಿ ತನ್ನ ನಾಯಕನನ್ನು ವರ್ಣಿಸುವ ಭಾಗ, ಕೃಷ್ಣನ ವೇಣುನಾದಕ್ಕೆ ಮನಸೋತೆನೆಂಬ ಮೋಹನ ರಾಗದ ಸಂಚಾರಿ ಭಾವ ಹಾಗೂ ಉತ್ತರಾರ್ಧದಲ್ಲಿ ಅಮೃತವರ್ಷಿಣಿ ರಾಗಕ್ಕೆ ಅಳವಡಿಸಲ್ಪಟ್ಟ ವಿರಹಿಣಿಯ ಭಾವನೆಗಳು ಮನತಟ್ಟಿದವು. ಕನ್ನಡ ಭಾಷೆಯ ಸಾಹಿತ್ಯವಿದ್ದ ಪದವರ್ಣ ಸಭಿಕರಿಗೆ ಆಸ್ವಾದಿಸಲು ಅನುಕೂಲ ಮಾಡಿಕೊಟ್ಟಿತು. ಸಾಹಿತ್ಯವು ರಾಗಮುದ್ರಿಕೆಯಿಂದ ಕೂಡಿ ಅರ್ಥಪೂರ್ಣವಾಗಿತ್ತು. ವಿಶೇಷವಾಗಿ ಅಮೃತವರ್ಷಿಣಿ ರಾಗ ವಿಸ್ತಾರದ ಗಾಯನ ಅದ್ಭುತವಾಗಿತ್ತು.

ಮುಂದೆ ಸೇರಿದಂತೆ ನಾಲ್ವರೂ ಜತೆಯಾಗಿ ಪ್ರಸ್ತುತ ಪಡಿಸಿದ್ದು ತಂಜಾವೂರು ಶಂಕರಯ್ಯ ಅವರ ರೇವತಿ ರಾಗ-ಆದಿತಾಳದ “ಮಹಾದೇವ ಶಿವಶಂಭೋ’ ಕೃತಿ. ಇಲ್ಲಿ ಅಳವಡಿಸಲ್ಪಟ್ಟ ಶಿವನ ಭಂಗಿಗಳು, ಚುರುಕಾದ ಲಯ ದೊಂದಿಗೆ ಅಚ್ಚುಕಟ್ಟಾಗಿ ಪ್ರಸ್ತುತಗೊಂಡ ನೃತ್ಯ ಮಕ್ಕಳ ಭದ್ರ ಅಡಿಪಾಯದ ಅಂಗಶುದ್ಧಿಯನ್ನು ತೆರೆದಿಟ್ಟಿತು.

ಕಾರìಕ್ರಮದ ಉತ್ತರಾರ್ಧದಲ್ಲಿ ಎಸ್‌. ಷಡಕ್ಷರಿ ಅವರ ರಾಗಮಾಲಿಕೆ ಆದಿತಾಳದ ತ್ರಿಮಾತಾ ಕೌತ್ವಂನ್ನು ಚುಟುಕಾಗಿ ನಾಲ್ವರು ಕಲಾವಿದೆಯರು ಪ್ರಸ್ತುತಪಡಿಸಿ ದರು. ಬಳಿಕ ಗುರು ಸುಮಂಗಲಾ ರತ್ನಾಕರ್‌ ರಚನೆಯ ರಾಮನ ಕುರಿತಾದ ರಾಗಮಾಲಿಕೆ- ಆದಿತಾಳದ ದೇವರ ನಾಮವನ್ನು ಸ್ಪಂದನಾ ಹಾಗೂ ಅನಘಾ ಸೊಗಸಾಗಿ ಅಭಿನಯಿಸಿದರು. ಶಬರಿ- ರಾಮನ ಭಾಗದಲ್ಲಿನ ಅಭಿನಯ ಮಕ್ಕಳ ಪಾತ್ರ ತಲ್ಲೀನತೆಗೆ ಸಾಕ್ಷಿಯಾಯಿತು. ಮುಂದೆ ಸ್ಪಂದನಾ ತನಿಯಾಗಿ ಪ್ರದರ್ಶಿಸಿದ ವಿ| ಸುಮಂಗಲಾ ರತ್ನಾಕರ್‌ ರಚನೆಯ ಪ್ರೋಷಿತ ಭತೃìಕಾ ಅವಸ್ಥೆಯ ಎನ್ನ ಮರೆತನೊ ಜಾವಳಿ ಕಲಾವಿದೆಯ ಅಭಿನಯ ಫೌಡಿಮೆಗೆ ಕನ್ನಡಿಯಾಯಿತು.

Advertisement

ಚುರುಕಾದ ಲಯಪಕ್ವತೆಯಿಂದ ಕೂಡಿದ ದ್ವಾರಕೀಕೃಷ್ಣಸ್ವಾಮಿ ರಚಿಸಿದ ವಲಚಿ ರಾಗ -ಆದಿತಾಳದ ತಿಲ್ಲಾನ, ಮಂಗಲಂ ನೃತ್ಯದೊಂದಿಗೆ ಕಾರ್ಯಕ್ರಮ ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಕೊನೆಗೊಂಡಿತು. 
ಪ್ರತಿಭಾನ್ವಿತೆಯರಾದ ನಾಲ್ವರೂ ಸತತ ಅಭ್ಯಾಸವನ್ನು ಮುಂದುವರಿಸಿದಲ್ಲಿ ಪರಿಪಕ್ವ ಕಲಾವಿದೆಯರಾಗಿ ಬೆಳಗುವು ದರಲ್ಲಿ ಸಂದೇಹವಿಲ್ಲ. ನೃತ್ಯಕ್ಕೆ ಬಳಸಿದ ಸಾಹಿತ್ಯವೆಲ್ಲವೂ ಕನ್ನಡ ಹಾಗೂ ಕನ್ನಡದಲ್ಲಿಯೂ ಕನ್ನಡವಾಗಿ ಬಳಸುವ ಸಂಸ್ಕೃತ ಮೂಲ ಶಬ್ದಗಳಿಂದ ಕೂಡಿದ್ದು ವಿಶೇಷವಾಗಿತ್ತು.

ನಟುವಾಂಗ ಮತ್ತು ನೃತ್ಯ ನಿರ್ದೇಶನದ ಜತೆಗೆ ಸಾಹಿತ್ಯ ರಚನೆಯ ಮೂಲಕ ಗುರು ವಿ| ಸುಮಂಗಲಾ ರತ್ನಾಕರ್‌ ತಮ್ಮ ಸಾಮರ್ಥ್ಯವನ್ನು ಪ್ರಚುರ ಪಡಿಸಿದರು. ಹಾಡುಗಾರಿಕೆಯಲ್ಲಿ ವಿ| ಶೀಲಾ ದಿವಾಕರ್‌ ತಮ್ಮ ಸುಶ್ರಾವ್ಯ ಕಂಠ ಮತ್ತು ಭಾವಪೂರ್ಣ ಗಾಯನದೊಂದಿಗೆ ಪ್ರೇಕ್ಷಕ ರನ್ನು ಸೆರೆಹಿಡಿದರು. ಮೃದಂಗದಲ್ಲಿ ವಿ| ಪಯ್ಯನ್ನೂರು ರಾಜನ್‌, ಕೊಳಲಿನಲ್ಲಿ ವಿ| ಮುರಳೀಧರ ಆಚಾರ್ಯ, ಉಡುಪಿ, ಖಂಜಿರ ಹಾಗೂ ಮೋರ್ಸಿಂಗ್‌ನಲ್ಲಿ ಕೃಷ್ಣ ಗೋಪಾಲ್‌ ಪುಂಜಾಲಕಟ್ಟೆ ಭಾವಕ್ಕನುಗುಣವಾದ ನುಡಿತ ದೊಂದಿಗೆ ತಮ್ಮ ಕಲಾಕೌಶಲವನ್ನು ಪ್ರತಿಬಿಂಬಿಸಿದರು.

ಕಾರ್ಯಕ್ರಮ ಸಂಘಟಿಸಿದ ನಾಟ್ಯಾರಾಧನಾ ಕಲಾಕೇಂದ್ರ ಹಾಗೂ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿರುವ ವಿದ್ಯಾರ್ಥಿನಿಯರ ಹೆತ್ತವರ ಶ್ರಮ ಪ್ರಶಂಸನೀಯ. ಮಿತ ವ್ಯಯದ ದೃಷ್ಟಿಯಲ್ಲಿ ಹೀಗೆ ಕೆಲವು ಮಕ್ಕಳು ಸೇರಿ ರಂಗ ಪ್ರವೇಶದಂಥ ಕಾರ್ಯಕ್ರಮ ನೀಡುವುದು ಅನುಸರಣೀಯ.

ವಿ| ವಿದ್ಯಾ ಮನೋಜ್‌

Advertisement

Udayavani is now on Telegram. Click here to join our channel and stay updated with the latest news.

Next