Advertisement

“ಕಲಾವಿದನಾಗದಿದ್ದರೆ ಪಾಠ ಹೇಳುವ ಶಿಕ್ಷಕನಾಗಿರುತ್ತಿದ್ದೆ’

10:35 PM Feb 23, 2020 | Sriram |

ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ. ಆಗಿನ ಪರಂಪರಾಗತ ಪದ್ಧತಿಗೂ ಈಗಿನ ಪ್ರಕಾರಕ್ಕೂ ವ್ಯತ್ಯಾಸವಿದೆ.ಬದಲಾವಣೆಯೊಂದಿಗೆ ಎಚ್ಚರವೂ ಅಗತ್ಯ. ಪ್ರಯೋಗಗಳು ತಪ್ಪಲ್ಲ. ಆದರೆ ಅದು ಅದಕ್ಕೊಂದು ಚೌಕಟ್ಟಿದ್ದರೆ ಚೆಂದ.

Advertisement

ಕುಂದಾಪುರ : ಚೆಂದದ ಶೈಲಿಯ ನಾಟ್ಯ, ಮೊಗಕ್ಕೊಪ್ಪುವ ವೇಷ, ಪಾತ್ರಕ್ಕೆ ತಕ್ಕುದಾದ ಅಭಿನಯ, ವಿಷಯವನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ಹೇಳುವ ಹಿತವಾದ ಮಾತುಗಾರಿಕೆಯಿಂದಲೇ ಯಕ್ಷರಂಗದಲ್ಲಿ ಮಿಂಚುತ್ತಿರುವವರು ಮಂಕಿ ಈಶ್ವರ ನಾಯ್ಕ. ಬಡಗುತಿಟ್ಟಿನ ಭರವಸೆಯ ಕಲಾವಿದರಾದ ಇವರ ಯಕ್ಷರಂಗದ ಪಯಣಕ್ಕೀಗ ಬೆಳ್ಳಿ ಹಬ್ಬದ ಸಂಭ್ರಮ. ಶನಿವಾರ ನಡೆದ ಕುಂದಾಪುರದ ಬೊಬ್ಬರ್ಯನಕಟ್ಟೆ ಎದುರು ಸಾಲಿಗ್ರಾಮ ಮೇಳದ ಯಕ್ಷಗಾನ ಬಯಲಾಟದ ವೇಳೆ ತನಗೆ ಹೆಜ್ಜೆಗಾರಿಕೆ ಕಲಿಸಿದ ಗುರುವಿಗೆ ಸಮ್ಮಾನವನ್ನು ಆಯೋಜಿಸಿದ್ದರು. ಈ ವೇಳೆ “ಉದಯವಾಣಿ’ಯೊಂದಿಗೆ ಮಾತಿಗೆ ಸಿಕ್ಕ ಅವರು, ತನ್ನ ಯಕ್ಷಯಾನದ ರಜತ ವರ್ಷಾಚರಣೆಯ ನೆನಪುಗಳನ್ನು ತೆರೆದಿಟ್ಟರು.

25 ವರ್ಷಗಳ ಯಕ್ಷ ಪಯಣದ ಬಗ್ಗೆ ಹೇಗನ್ನಿಸುತ್ತಿದೆ?
ಶಾಲಾ ದಿನಗಳಿಂದಲೇ ಯಕ್ಷಗಾನವೆಂದರೆ ತುಂಬಾ ಇಷ್ಟಪಟ್ಟು ನೋಡುತ್ತಿದ್ದೆ. ನಮ್ಮೂರಲ್ಲಿ ಆಟ ಇದ್ದರೆ, 15 ದಿನ ಮೊದಲೇ ಹಣ ಹೊಂದಿಸುತ್ತಿದ್ದೆ. ಇದರೊಂದಿಗೆ ಚಿಕ್ಕಂದಿನಿಂದಲೇ ನನಗೆ ಶಿಕ್ಷಕನಾಗಬೇಕು ಎನ್ನುವ ಕನಸಿತ್ತು. ಚೆನ್ನಾಗಿ ಓದುತ್ತಿದ್ದೆ. ಆದರೆ ಮನೆಯಲ್ಲಿ ಬಡತನ ಇದ್ದುದರಿಂದ ಪಿಯುಸಿಯಿಂದ ಮುಂದಕ್ಕೆ ಓದಲಾಗಲಿಲ್ಲ. ಇದೇ ವೇಳೆ ಕೆರೆಮೆನೆ ಕೇಂದ್ರದ ಯಕ್ಷ ಗಾನ ತರಬೇತಿಗೆ ಆಹ್ವಾನಿಸಿದ ಜಾಹೀರಾತನ್ನು ನೋಡಿದೆ. ಉಚಿತವಾಗಿ ಯಕ್ಷಗಾನ ಕಲಿಸುತ್ತಾರೆ. ಜತೆಗೆ 500 ರೂ. ಪ್ರೋತ್ಸಾಹಧನ ಸಿಗುತ್ತದೆ ಎಂದು ಕೊಂಡು ಅರ್ಜಿ ಹಾಕಿದೆ. ಸಂದರ್ಶನವೂ ಆಯಿತು. 90 ಕ್ಕೂ ಹೆಚ್ಚು ಮಂದಿ ಬಂದಿದ್ದರು. ನಾನು ಯಕ್ಷಗಾನ ನೋಡಿದ್ದು ಬಿಟ್ಟರೆ, ಯಾವುದೇ ಅಭ್ಯಾಸ ಮಾಡಿರಲಿಲ್ಲ. ಸೇಂಟ್‌ಥಾಮಸ್‌ದಲ್ಲಿ ಇಂಟರ್‌ವ್ಯೂ ಇತ್ತು. ನನಗೆ ಯಕ್ಷ ಗಾನದ ಹೆಜ್ಜೆ ಏನೂ ಗೊತ್ತಿರಲಿಲ್ಲ. ಅಲ್ಲಿ 2 ಪದ್ಯ ಹೇಳಿಸಿದರು. ಕೊನೆಯಲ್ಲಿ 15 ಜನರನ್ನು ಆಯ್ಕೆ ಮಾಡಿಕೊಂಡರು. ಆದರೆ ನನಗೆ ಆಯ್ಕೆ ಕಾರ್ಡ್‌ ಬಂದಿರಲಿಲ್ಲ. ಈ ವೇಳೆ ಆಯ್ಕೆಯಾಗಿದ್ದ ಕಾಸರಗೋಡಿನ ಇಬ್ಬರು ಅಲ್ಲಿಂದ ಬಿಟ್ಟು ಹೋಗಿದ್ದರು. ನನ್ನನ್ನು ಆ ಜಾಗಕ್ಕೆ ಕರೆಯಿಸಿಕೊಂಡರು. ಆದರೆ ಆ ವೇಳೆಗೆ ಅಭ್ಯಾಸ ಆರಂಭವಾಗಿದ್ದವು. ನನಗೆ ಏನೂ ಗೊತ್ತಿರಲಿಲ್ಲ. ಮುಂದಿನ ವರ್ಷ ಬರುತ್ತೇನೆ ಎಂದು ಹೇಳಿದೆ. ಆ ವೇಳೆ ಕೆರೆಮನೆ ಶಿವಾನಂದ ಹೆಗಡೆಯವರು ನಿನಗೆ ಆಗುವುದನ್ನು ಕಲಿತುಕೊಂಡು ಹೋಗು. ಒಂದು ತಿಂಗಳಲ್ಲಿಯೇ ನೀನು ಕಲಿಯುತ್ತೀಯ ಎಂದು ಆತ್ಮವಿಶ್ವಾಸ ತುಂಬಿದರು. ಅಲ್ಲಿಯೇ ಹೇರಂಜಾಲು ವೆಂಕಟರಮಣ ಗಾಣಿಗ ಹಾಗೂ ಹೇರಂಜಾಲು ಗೋಪಾಲ ಗಾಣಿಗ ಅವರಲ್ಲಿ ಅಭ್ಯಾಸಿಸಿದೆ.

ತುಂಬಾ ಖುಷಿ ಕೊಟ್ಟ ಪಾತ್ರ ಯಾವುದು? ಯಾವುದಾದರೂ
ಕ್ಲಿಷ್ಟಕರ ಪಾತ್ರ ಅಂತ ಅನ್ನಿಸಿದೆಯೇ?
ಶ್ರೀ ಕೃಷ್ಣ, ವಿಷ್ಣು, ಬಭುÅವಾಹನ, ಅಭಿಮನ್ಯು, ಚಂದ್ರಹಾಸ, ಸುಧನ್ವ ಹೀಗೆ ಮಾಡಿದ ಹೆಚ್ಚಿನ ಪಾತ್ರಗಳು ಖುಷಿ ಕೊಟ್ಟಿದೆ. ಮೊದಲಿಗೆ ಮಾಡುವ ಎಲ್ಲ ಪಾತ್ರಗಳು ಕೂಡ ಕ್ಲಿಷ್ಟಕರವಾಗಿಯೇ ಇರುತ್ತದೆ. 3-4 ಬಾರಿ ಅದೇ ಪಾತ್ರವನ್ನು ನಿರ್ವಹಿಸಿದಾಗ ಸುಲಭವಾಗುತ್ತದೆ. ಕೀಚಕನಂತಹ ಪಾತ್ರವನ್ನು ಮಾಡುವ ಅಭಿಲಾಷೆಯಿದೆ.

ಯಕ್ಷಗಾನವನ್ನು ಸಮಾಜಮುಖೀ ಯಾಗಿಸಬಹುದೇ?
ಖಂಡಿತ. ಕೇವಲ ಹಣದ ದೃಷ್ಟಿಯಿಂದ ನೋಡದೇ, ಕಲೆ, ಮನೋರಂಜನೆ ದೃಷ್ಟಿಯಿಂದಲೂ ಕಂಡಲ್ಲಿ ಯಕ್ಷಗಾನವು ಸಮಾಜಮುಖೀಯಾಗಬಹುದು.

Advertisement

ಯುವ ಪ್ರೇಕ್ಷಕರನ್ನು ಯಕ್ಷಗಾನದತ್ತ ಸೆಳೆಯಲು ಸಂಪ್ರದಾಯದ ಹೊರತಾಗಿ ಅಭಿನಯ, ಮಾತು, ಶೈಲಿ ಅಗತ್ಯ ಎಂದು ಅನ್ನಿಸಿದೆಯೇ?
ಹೌದು. ಯಕ್ಷಗಾನವೆಂದ ಮೇಲೆ ಎಲ್ಲವೂ ಮುಖ್ಯವಾಗುತ್ತದೆ. ನಾಟ್ಯ, ಮಾತು, ಅಭಿನಯ ಈಗ ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಹಾಗೆಯೇ ಎಲ್ಲ ಸಂದರ್ಭಗಳಲ್ಲಿಯೂ ಸಿನೆಮಾ ಶೈಲಿಯನ್ನು ಅನುಕರಣೆ ಮಾಡುವುದು ಸರಿಯಲ್ಲ. ಕೆಲ ಸಂದರ್ಭಗಳಲ್ಲಿ ಬಳಸಿದರೆ ತಪ್ಪಿಲ್ಲ.

ಯಕ್ಷಗಾನದಲ್ಲಿ ಈಗ ನಡೆಯುತ್ತಿರುವ ಪ್ರಯೋಗಗಳ ಬಗ್ಗೆ ನಿಮ್ಮ ಅಭಿಪ್ರಾಯ? ಸರಿಯಾದ ದಾರಿಯಲ್ಲಿ ಆಗುತ್ತಿದೆಯೇ?
ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ. ಆಗಿನ ಪರಂಪರಾಗತ ಪದ್ಧತಿಗೂ ಈಗಿನ ಪ್ರಕಾರಕ್ಕೂ ವ್ಯತ್ಯಾಸವಿದೆ. ಹಿಂದೆ ದೊಂದಿ ಬೆಳಕಿನಲ್ಲಿ ನಡೆಯುತ್ತಿತ್ತು. ಈ ವಿದ್ಯುತ್‌ ದೀಪ ಬಂದಿದೆ. ಮೈಕ್‌ ವ್ಯವಸ್ಥೆಯಿದೆ. ಸಣ್ಣ ಸಣ್ಣ ಸಂಗತಿಗಳನ್ನು ಕೂಡ ಪ್ರೇಕ್ಷಕರು ಕೂಲಂಕಷವಾಗಿ ಗುರುತಿಸುತ್ತಾರೆ. ಮುಖದಲ್ಲಿ ಒಂದು ಸಣ್ಣ ಗೆರೆ ಬಿದ್ದರೂ, ಅದು ಗೊತ್ತಾಗುತ್ತದೆ. ಬದಲಾವಣೆಯೊಂದಿಗೆ ಎಚ್ಚರವೂ ಅಗತ್ಯ. ಪ್ರಯೋಗಗಳು ತಪ್ಪಲ್ಲ. ಆದರೆ ಅದು ಅದಕ್ಕೊಂದು ಚೌಕಟ್ಟಿದ್ದರೆ ಚೆಂದ.

ಯುವ ಕಲಾವಿದರಿಗೆ ನಿಮ್ಮ ಕಿವಿಮಾತು?
ಯಕ್ಷರಂಗಕ್ಕೆ ಸಾಕಷ್ಟು ಯುವ ಕಲಾವಿದರು ಬರುತ್ತಿದ್ದರೂ, ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ. ಆರ್ಥಿಕ ಭದ್ರತೆ, ಸರಿಯಾದ ನಿದ್ದೆ ಸಿಗದ ಕಾರಣ ಯುವಕರು ಇದರತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಯುವ ಕಲಾವಿದರು ಕಠಿನ ಪರಿಶ್ರಮ, ಪ್ರಯತ್ನವಿದ್ದರೆ ಖಂಡಿತ ಇಲ್ಲಿ ಯಶಸ್ಸು ಗಳಿಸಬಹುದು. ಸ್ವಲ್ಪ ತಡವಾದರೂ, ನಿರಂತರ ಅಭ್ಯಾಸದಿಂದ ಸಾಧನೆ ಸಾಧ್ಯ.

ಪರಿಚಯ
ಈಶ್ವರ ನಾಯ್ಕ ಮೂಲತಃ ಹೊನ್ನಾವರದ ಮಂಕಿ ಗ್ರಾಮದ ದೊಡ್ಡಹಿತ್ಲುವಿನವರು. ತಂದೆ ಹನುಮಂತ ಹಾಗೂ ತಾಯಿ ಲಕ್ಷ್ಮೀ. ಈ ದಂಪತಿಯ ನಾಲ್ವರು ಪುತ್ರರಲ್ಲಿ ಎರಡನೇಯವರು. 1-4-1977 ರಲ್ಲಿ ಜನನ. ಪಿಯುಸಿವರೆಗೆ ವ್ಯಾಸಂಗ. ಬಡತನದಿಂದ ಶಿಕ್ಷಣ ಮೊಟಕು. ಚಿಕ್ಕಂದಿನಿಂದಲೇ ಯಕ್ಷಗಾನದ ಬಗ್ಗೆ ಅಪಾರ ಒಲವು ಬೆಳೆಸಿಕೊಂಡಿದ್ದ ಇವರು, 1993-94 ರಲ್ಲಿ ಕೆರೆಮನೆ ಯಕ್ಷ ಕೇಂದ್ರದಲ್ಲಿನ ತರಬೇತಿಯೊಂದಿಗೆ ಯಕ್ಷಯಾನದ ಪಯಣ ಆರಂಭ. 1997 ರಲ್ಲಿ ಗುಂಡುಬಾಳ ಮೇಳದಲ್ಲಿ ತಿರುಗಾಟ, 98 ರಲ್ಲಿ ಬಗ್ವಾಡಿ ಮೇಳ, 99-2000 ರಲ್ಲಿ ಮತ್ತೆ ಗುಂಡಬಾಳ ಮೆಳ, 2001-02 ರಲ್ಲಿ ಕೋಟ ಶ್ರೀ ಅಮೃತೇಶ್ವರಿ ಮೇಳ, 2002 ರಿಂದ 8 ವರ್ಷ ಸಾಲಿಗ್ರಾಮ ಮೇಳ, ಬಳಿಕ 3 ವರ್ಷ ಪೆರ್ಡೂರು ಮೇಳ, 1 ವರ್ಷ ನೀಲಾವರ ಮೇಳ, ಆ ಬಳಿಕ ಕಳೆದ 5-6 ವರ್ಷಗಳಿಂದ ಮತ್ತೆ ಸಾಲಿಗ್ರಾಮ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next