Advertisement

ಮುಖವರ್ಣಿಕೆ-ನಾಟ್ಯ ತರಬೇತಿ ಸಮಾರೋಪ

09:20 AM Jan 11, 2019 | Team Udayavani |

ಮಂಜೇಶ್ವರ : ಕರಾವಳಿಯ ಹೆಮ್ಮೆಯ ಕಲಾ ಪ್ರಕಾರವಾದ ಯಕ್ಷಗಾನದ ವಿವಿಧ ಆಯಾಮಗಳ ಆಳ ಅಧ್ಯಯನವು ಪರಂಪರೆಯನ್ನು ಬೆಳೆಸುವ, ಮುನ್ನಡೆಸುವ ನಿಟ್ಟಿನಲ್ಲಿ ಅತ್ಯಗತ್ಯವಾಗಿದೆ. ಆಧುನಿಕತೆಗೆ ಒಗ್ಗಿಕೊಳ್ಳುವ ವೇಗದಲ್ಲಿ ಮೂಲ ಪರಂಪರೆಯನ್ನು ಅಲಕ್ಷಿಸುವುದು ಹಾನಿಕಾರಕವಾಗಿದ್ದು, ಈ ನಿಟ್ಟಿನಲ್ಲಿ ತರಬೇತಿ, ಪ್ರಾತ್ಯಕ್ಷಿಕೆಗಳು ಪೂರಕ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ದಾಮೋದರ ಶೆಟ್ಟಿ ತಿಳಿಸಿದರು.

Advertisement

ಕೋಳ್ಯೂರು ಶಂಕರನಾರಾಯಣ ದೇವಸ್ಥಾನದ ಸಭಾಭವನದಲ್ಲಿ ಒಂದು ತಿಂಗಳುಗಳ ಕಾಲ ಆಯೋಜಿಸಲಾಗಿದ್ದ ಮುಖವರ್ಣಿಕೆ ಮತ್ತು ನಾಟ್ಯತರಗತಿಗಳ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿರಿಯ ವೈದಿಕ ವಿದ್ವಾಂಸ ಬೋಳಂತಕೋಡಿ ರಾಮ ಭಟ್ ಅವರು ಆಶೀರ್ವಚನಗೈದು ಮಾತನಾಡಿ, ವೇದ-ಪುರಾಣ ಅರ್ಥ ವಿಸ್ತಾರತೆಯನ್ನು ಜನಸಾಮಾನ್ಯರಿಗೆ ತಲಪಿಸುವಲ್ಲಿ ಯಕ್ಷಗಾನದಂತಹ ಶಾಸ್ತ್ರೀಯ ಕಲಾ ಪ್ರಕಾರಗಳು ಗಣನೀಯ ಕೊಡುಗೆ ನೀಡುತ್ತಿದೆ. ಆದರೆ ಹೊಸ ತಲೆಮಾರು ಯಕ್ಷಗಾನದ ಮೂಲ ಚೌಕಟ್ಟನ್ನು ಅಭ್ಯಸಿಸಿದರಷ್ಟೇ ನೀಡುವ ಪ್ರದರ್ಶನಗಳು ಅರ್ಥವ್ಯಾಪಕತೆ ಪಡೆಯುತ್ತದೆ. ವೈಜ್ಞಾನಿಕ, ಮನೋವಿಕಾಸದ ಹಿನ್ನೆಲೆಯ ಭಾರತೀಯ ನಾಟ್ಯ ಶಾಸ್ತ್ರದ ಅಂಶಗಳು ಅಡಕವಾಗಿರುವ ಯಕ್ಷಗಾನ ನಾಟ್ಯ ಮತ್ತು ಬೆಳಕು ಮತ್ತು ಮನಸ್ಸಿನ ಸಂಬಂಧಗಳಿಂದ ಕೂಡಿದ ಬಣ್ಣಗಾರಿಕೆಯ ಆಳವಾದ ಅನುಭವ ಕಲಾವಿದರಾಗುವವರಲ್ಲಿ ಇದ್ದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ಭಟ್ ಮೊಗಸಾಲೆ, ತಿಮ್ಮಣ್ಣ ಭಟ್ ಕೊಮ್ಮೆ, ವರ್ಕಾಡಿ ಸಂತೋಷ ತಂತ್ರಿ ಉಪಸ್ಥಿತರಿದ್ದರು. ನಾಟ್ಯ – ಮುಖವರ್ಣಿಕೆ ತರಗತಿಗಳನ್ನು ನಡೆಸಿಕೊಟ್ಟ ಗುರುಗಳಾದ ಕೊಮ್ಮೆ ಮಹಾಬಲೇಶ್ವರ ಭಟ್ ಮತ್ತು ಅಶ್ವತ್ಥ್ ಮಂಜನಾಡಿ ಅವರನ್ನು ಗೌರವಿಸಲಾಯಿತು.

ಬಳಿಕ ಹೊಸಮೂಲೆ ಗಣೇಶ ಭಟ್, ಪಾರೆಕೋಡಿ ಗಣಪತಿ ಭಟ್, ರಾಜ ಭಟ್ ಬರೆಮನೆ, ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ, ಕುದ್ರೆಕೋಡ್ಲು ರಾಮಮೂರ್ತಿ, ಭಾರ್ಗವ ಬಲಿಪಗುಳಿ ಅವರ ಹಿಮ್ಮೇಳದಲ್ಲಿ ಶಿಬಿರಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ ಯಜ್ಞ ಸಂರಕ್ಷಣೆ-ಇಂದ್ರಜಿತು ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next