Advertisement

Manipur: ಮಣಿಪುರ ಸಂಘರ್ಷಕ್ಕೆ ಶೀಘ್ರ ಅಂತ್ಯ ಕಾಣಿಸಬೇಕು

11:58 PM Sep 12, 2023 | Team Udayavani |

ಕಳೆದ ನಾಲ್ಕೂವರೆ ತಿಂಗಳಿನಿಂದ ದೇಶದ ಈಶಾನ್ಯ ರಾಜ್ಯವಾದ ಮಣಿ ಪುರದಲ್ಲಿ ನಿರಂತರವಾಗಿ ನಡೆಯುತ್ತ ಬಂದಿರುವ ಜನಾಂಗೀಯ ಸಂಘರ್ಷ ಇನ್ನೂ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ಬಹುಸಂಖ್ಯಾಕ ಮೈತೇಯಿ ಸಮುದಾಯ ಮತ್ತು ಬುಡಕಟ್ಟು ಸಮು ದಾಯಗಳ ನಡುವೆ ಮೇ 3ರಂದು ಆರಂಭಗೊಂಡಿದ್ದ ಈ ಜನಾಂಗೀಯ ಹಿಂಸಾಚಾರದ ನಡುವೆಯೇ ನಿಷೇಧಿತ ಉಗ್ರಗಾಮಿ ಸಂಘ ಟನೆಗಳು ಕೂಡ ಗುಡ್ಡಗಾಡು ಪ್ರದೇಶದಲ್ಲಿನ ತಮ್ಮ ಚಟುವಟಿಕೆ ಗಳನ್ನು ತೀವ್ರಗೊಳಿಸಿರುವುದು ರಾಜ್ಯ ಮತ್ತು ಕೇಂದ್ರ ಸರಕಾರದ ಪಾಲಿಗೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿದೆ.

Advertisement

ಮಂಗಳವಾರದಂದು ಕಾಂಗ್‌ಪೋಕ್ಪಿ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಸ್ಥಳೀಯ ಬುಡಕಟ್ಟು ಕುಕಿ-ಝೊ ಸಮುದಾಯದ ಮೂವರನ್ನು ನಿಷೇಧಿತ ಉಗ್ರಗಾಮಿ ಸಂಘಟನೆಯ ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ತೆಂಗೌ°ಪಾಲ್‌ ಜಿಲ್ಲೆ ಯಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರು ಹತ್ಯೆಗೀಡಾಗಿದ್ದರು. ಮಣಿಪುರದಲ್ಲಿ ಬಹುಸಂಖ್ಯಾಕರಾಗಿರುವ ಮೈತೇಯಿ ಸಮುದಾಯವನ್ನು ಪರಿ ಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಪ್ರಸ್ತಾವಕ್ಕೆ ಬುಡಕಟ್ಟು ಪಂಗಡಕ್ಕೆ ಸೇರಿದ ಕುಕಿ ಮತ್ತು ನಾಗಾ ಸಮುದಾಯಗಳು ತೀವ್ರ ವಿರೋಧ ವ್ಯಕ್ತ ಪಡಿಸಿವೆ. ಇದೇ ವಿಚಾರವಾಗಿ ರಾಜ್ಯದಲ್ಲಿ ತೀವ್ರ ಹಿಂಸಾಚಾರ ನಡೆಯುತ್ತಿದ್ದು ಈವರೆಗೆ 160ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಕುಕಿ ಮತ್ತು ಝೊ ಸಮುದಾಯಕ್ಕೆ ಪ್ರತ್ಯೇಕ ಆಡಳಿತದ ವ್ಯವಸ್ಥೆಯನ್ನು ಮಾಡಬೇಕೆಂಬ ನಾಗರಿಕ ಸಂಘಟನೆಯಾದ “ಯೂತ್‌ ಆಫ್ ಮಣಿಪುರ’ದ ಬೇಡಿಕೆ ಯನ್ನು ಸರಕಾರ ತಳ್ಳಿಹಾಕಿದೆ.

ಈ ಜನಾಂಗೀಯ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರಲು ರಾಜ್ಯ ಮತ್ತು ಕೇಂದ್ರ ಸರಕಾರ ನಿರಂತರ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿವೆ. ಹೆಚ್ಚುವರಿ ಪಡೆಗಳನ್ನು ಗಲಭೆ ಪೀಡಿತ ಪ್ರದೇಶಗಳು ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆಯಲ್ಲದೆ ಉಗ್ರ ಮತ್ತು ಬಂಡುಕೋರ ಸಂಘ ಟನೆ ಗಳನ್ನು ಮಟ್ಟ ಹಾಕಲು ಭದ್ರತಾ ಪಡೆಗಳು ಕಾರ್ಯಾ ಚರಣೆ ಯನ್ನು ತೀವ್ರಗೊಳಿಸಿವೆ. ಈ ಎಲ್ಲ ಕ್ರಮಗಳ ಹೊರತಾಗಿಯೂ ರಾಜ್ಯದಲ್ಲಿ ಪರಿಸ್ಥಿತಿ ಇನ್ನೂ ಸಹಜಸ್ಥಿತಿಗೆ ಮರಳಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರಕಾರಗಳು ಮಣಿಪುರ ಸಮಸ್ಯೆಯನ್ನು ನಿರ್ಲಕ್ಷಿಸಿದ್ದು ಎಲ್ಲದಕ್ಕೂ ಬಲಪ್ರಯೋಗವೇ ಪರಿಹಾರ ಎಂಬ ಧೋರಣೆಯನ್ನು ತಳೆದಿರುವುದು ಮತ್ತು ಆಡಳಿತ ಪಕ್ಷ ಬಹುಸಂಖ್ಯಾಕರ ಪರವಾಗಿರುವುದೇ ಸಮಸ್ಯೆ ಇಷ್ಟೊಂದು ಉಲ್ಬಣ ಗೊಳ್ಳಲು ಕಾರಣ ಎಂಬುದು ವಿಪಕ್ಷಗಳ ಆರೋಪ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಣಿಪುರ ಹಿಂಸಾಚಾರವನ್ನು ನಿಯಂ ತ್ರಣಕ್ಕೆ ತರುವ ನಿಟ್ಟಿನಲ್ಲಿ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಸಂಘರ್ಷದಲ್ಲಿ ನಿರತವಾಗಿರುವ ಜನಾಂಗಗಳ ಮುಖಂಡರು ಮತ್ತು ವಿವಿಧ ಸಂಘಟನೆಗಳ ಮುಖಂಡರ ಜತೆ ಸಮಾಲೋಚನೆ ನಡೆಸಿ ಈ ಸಂಘರ್ಷಕ್ಕೆ ಶೀಘ್ರ ಅಂತ್ಯ ಹಾಡಬೇಕು. ಈ ಸಂಘರ್ಷದ ಲಾಭ ಪಡೆದು ಉಗ್ರಗಾಮಿ ಸಂಘಟನೆಗಳು ರಾಜ್ಯದಲ್ಲಿ ಮತ್ತೆ ಚಿಗಿತುಕೊಳ್ಳಲು ಅವಕಾಶ ನೀಡಬಾರದು. ಅಷ್ಟು ಮಾತ್ರವಲ್ಲದೆ ಪ್ರತ್ಯೇಕತಾ ವಾದ, ಭಯೋತ್ಪಾದನೆಯಂಥ ದೇಶದ್ರೋಹಿ ಚಟುವಟಿಕೆ ಗಳಿಗೆ ಆಸ್ಪದ ನೀಡಬಾರದು. ಸಾರ್ವಜನಿಕರ ಪ್ರಾಣ, ಆಸ್ತಿ-ಪಾಸ್ತಿಯ ರಕ್ಷಣೆ ಸರಕಾರದ ಪ್ರಾಥಮಿಕ ಹೊಣೆಗಾರಿಕೆಯಾಗಿರುವುದರಿಂದ ಸರಕಾರ ಅತ್ಯಂತ ಸಮಚಿತ್ತದಿಂದ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next