Advertisement

ಮಂಗಳೂರು ವಿಶ್ವವಿದ್ಯಾನಿಲಯ: ಆರನೇ ಸೆಮಿಸ್ಟರ್‌ ಅಂಕಪಟ್ಟಿ ಡೌನ್‌ಲೋಡ್‌ಗೆ ಅವಕಾಶ

11:55 PM Dec 15, 2022 | Team Udayavani |

ಮಂಗಳೂರು : ಪದವಿ 6ನೇ ಸೆಮಿಸ್ಟರ್‌ನ ಫಲಿತಾಂಶವನ್ನು ಈಗಾಗಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಂಕಪಟ್ಟಿ ನೀಡುವ ಕಾರ್ಯ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಅಂಕಪಟ್ಟಿ ತುರ್ತಾಗಿ ಬೇಕಿದ್ದರೆ ವೆಬ್‌ಸೈಟ್‌ ಮೂಲಕವೇ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ| ಪಿ.ಎಸ್‌. ಯಡಪಡಿತ್ತಾಯ ಹೇಳಿದರು.

Advertisement

ಗುರುವಾರ ನಡೆದ ಶೈಕ್ಷಣಿಕ ಮಂಡಳಿಯ 2022-23ನೇ ಸಾಲಿನ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

136 ವಿದೇಶಿ ವಿದ್ಯಾರ್ಥಿಗಳು
ಆಫ್ಘಾನಿಸ್ಥಾನ, ಚೀನ, ಶ್ರೀಲಂಕಾ, ಸಿರಿಯಾ ಸಹಿತ 22 ದೇಶಗಳ ಒಟ್ಟು 136 ವಿದೇಶಿ ವಿದ್ಯಾರ್ಥಿಗಳು 2022-23ರಲ್ಲಿ ಮಂಗಳೂರು ವಿ.ವಿ.ಯಲ್ಲಿ ಪ್ರವೇಶ ಪಡೆದಿದ್ದಾರೆ. ಈ ಪೈಕಿ 25 ಯುಜಿ, 23 ಪಿಜಿ ಹಾಗೂ 88 ಮಂದಿ ಪಿಎಚ್‌ಡಿಗೆ ಪ್ರವೇಶಾತಿ ಬಯಸಿದ್ದಾರೆ ಎಂದು ಕುಲಪತಿಗಳು ತಿಳಿಸಿದರು. ಕುಲಸಚಿವರು (ಆಡಳಿತ)ಡಾ| ಕಿಶೋರ್‌ ಕುಮಾರ್‌ ಸಿ.ಕೆ., ಹಣಕಾಸು ಅಧಿಕಾರಿ ಪ್ರೊ| ಸಂಗಪ್ಪ ಉಪಸ್ಥಿತರಿದ್ದರು.

ವಿದ್ಯಾರ್ಥಿವೇತನ ಸಮಸ್ಯೆ: ಪರಿಹಾರ ಸೂತ್ರಕ್ಕೆ ಗಮನ
ಎನ್‌ಇಪಿ ಪದವಿ ವಿದ್ಯಾರ್ಥಿಗಳ ಫಲಿತಾಂಶ ವಿಳಂಬ ಹಾಗೂ ಅಂಕಪಟ್ಟಿ ಸಿಗದ ಕಾರಣದಿಂದ ವಿದ್ಯಾರ್ಥಿವೇತನವೇ ಕೈತಪ್ಪುವ ಭೀತಿ ಎದುರಾಗಿದೆ ಎಂಬ ವಿಚಾರ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. “ಇನ್ನೂ ಕೈ ಸೇರದ ಪದವಿ ಅಂಕಪಟ್ಟಿ; ವಿದ್ಯಾರ್ಥಿವೇತನ ಕೈ ತಪ್ಪುವ ಭೀತಿ’ ಎಂಬ ಶೀರ್ಷಿಕೆಯಲ್ಲಿ “ಉದಯವಾಣಿ’ ಡಿ. 15ರಂದು ವಿಶೇಷ ವರದಿ ಮೂಲಕ ಗಮನಸೆಳೆದಿತ್ತು.

ಕುಲಪತಿ ಡಾ| ಯಡಪಡಿತ್ತಾಯ ಅವರು ವಿಷಯ ಪ್ರಸ್ತಾವಿಸಿ, “ಅಂಕಪಟ್ಟಿ ಸಿಗದೆ ವಿದ್ಯಾರ್ಥಿವೇತನಕ್ಕೆ ಸಮಸ್ಯೆ ಆಗುತ್ತಿರುವುದು ಗಂಭೀರ ವಿಚಾರ. ಅದಕ್ಕೆ ಅವಕಾಶ ಕೊಡಬಾರದು. ಪರ್ಯಾಯ ಸೂತ್ರಗಳ ಬಗ್ಗೆ ಪರಾಮರ್ಶಿಸಬೇಕು’ ಎಂದು ಹೇಳಿದರು.

Advertisement

ಕುಲಸಚಿವ (ಪರೀಕ್ಷಾಂಗ) ಪ್ರೊ| ಪಿ.ಎಲ್‌. ಧರ್ಮ ಅವರು ಮಾತನಾಡಿ, “ಯುಯುಸಿಎಂಎಸ್‌ನ ತಾಂತ್ರಿಕ ಕಾರಣದಿಂದ ಫಲಿತಾಂಶ ತಡವಾಗಿದೆ. ಇದು ಮಂಗಳೂರಿಗೆ ಮಾತ್ರ ಅಲ್ಲ; ಉಳಿದ ವಿಶ್ವವಿದ್ಯಾನಿಲಯಗಳಲ್ಲಿಯೂ ಇಂತಹ ಪರಿಸ್ಥಿತಿ ಇದೆ. ಹೀಗಾಗಿ ಫಲಿತಾಂಶ ಬಂದಿಲ್ಲ – ಅಂಕಪಟ್ಟಿ ಕೈಸೇರಿಲ್ಲ ಎಂಬ ನೆಪದಿಂದ ವಿದ್ಯಾರ್ಥಿವೇತನಕ್ಕೆ ತಡೆ ಆಗದಂತೆ ವಿಶೇಷ ಕಾಳಜಿ ವಹಿಸುವಂತೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಉನ್ನತ ಶಿಕ್ಷಣ ಸಚಿವರು ಹಾಗೂ ಇಲಾಖಾ ಪ್ರಮುಖರಿಗೆ ಮನವಿ ಸಲ್ಲಿಸಲಾಗುವುದು. ದಿನಾಂಕ ವಿಸ್ತರಣೆಗೆ ಕೋರಲಾಗುವುದು’ ಎಂದು ತಿಳಿಸಿದರು.

ಅನುಮೋದನೆಗೊಂಡ ವಿಷಯಗಳು
– ಬಿಎಚ್‌ಎಂ ಪದವಿಯ ಮೊದಲ, ದ್ವಿತೀಯ ಸೆಮಿಸ್ಟರ್‌ ಪರಿಷ್ಕೃತ ಪಠ್ಯಕ್ರಮ
– ಕೌಶಲವರ್ಧಕ ಕೋರ್ಸ್‌ನಡಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಕೋರ್ಸ್‌ನ ಪರಿಷ್ಕೃತ ಪಠ್ಯಕ್ರಮ
– ಬಿಎಸ್ಸಿ (ಫುಡ್‌ ಟೆಕ್ನಾಲಜಿ) ಪದವಿಯ 3, 4ನೇ ಸೆಮಿಸ್ಟರ್‌ ಪಠ್ಯ
– ವಿ.ವಿ. ಅಧೀನದ ಸ್ವಾಯತ್ತ ಕಾಲೇಜು ಗಳ ನಿರ್ವಹಿಸುವ ಅನುಶಾಸನ ತಿದ್ದುಪಡಿ
– ವಿ.ವಿ. ಉದ್ಯೋಗಿಗಳ ವರ್ಗೀಕರಣ, ನಿಯಂತ್ರಣ ಮೇಲ್ಮನವಿ ನಿಯಮ ಪರಿನಿಯಮಕ್ಕೆ ತಿದ್ದುಪಡಿ
– ಬಿವಿಎ ಪದವಿಯ 1, 2ನೇ ಸೆಮಿಸ್ಟರ್‌ ಪರಿಷ್ಕೃತ ಪಠ್ಯಕ್ರಮ

“ಫಲಿತಾಂಶ ವಿಳಂಬ’ ಚರ್ಚೆ
ಫಲಿತಾಂಶ ವಿಳಂಬ ಮತ್ತು ಅಂಕಪಟ್ಟಿ ಸಿಗದಿರುವ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಯಿತು. ಎನ್‌ಇಪಿಯ ಯುಯುಸಿಎಂಎಸ್‌ ತಂತ್ರಾಂಶವು ಫಲಿತಾಂಶ ಅಪ್‌ಡೇಟ್‌ಗೆ ಹೊಂದಿಕೊಳ್ಳದ ಕಾರಣದಿಂದ ವಿಳಂಬವಾಗಿದೆ. ವಿವಿಧ ಕಾಲೇಜಿನವರು ಡೇಟಾ ಅಪ್‌ಡೇಟ್‌ ಮಾಡುವಾಗ ಆದ ಲೋಪದಿಂದಲೂ ಸಮಸ್ಯೆ ಉಂಟಾಗಿದೆ.

ಎನ್‌ಇಪಿ ಮೊದಲ ಸೆಮಿಸ್ಟರ್‌ನ ಮೌಲ್ಯಮಾಪನ ಈಗಾಗಲೇ ಪೂರ್ಣವಾಗಿದೆ. ಆದರೆ ಯುಯುಸಿಎಂಎಸ್‌ ತಂತ್ರಾಂಶಕ್ಕೆ ಅಪ್‌ಲೋಡ್‌ ಮಾಡುವ ಸಂದರ್ಭ ಎದುರಾದ
ತಾಂತ್ರಿಕ ಎಡವಟ್ಟುಗಳಿಂದಾಗಿ ಫಲಿತಾಂಶ ನೀಡಲು ಸಾಧ್ಯವಾಗಿಲ್ಲ. ಈ ತಿಂಗಳಾಂತ್ಯದ ಒಳಗೆ ಫಲಿತಾಂಶ ನೀಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. 4ನೇ ಸೆಮಿಸ್ಟರ್‌ ಮೌಲ್ಯಮಾಪನ ಈಗಾಗಲೇ ಕೊನೆಯ ಹಂತದಲ್ಲಿದ್ದು, ಅದನ್ನು ಕೂಡ ಇದೇ ವೇಳೆಗೆ ನೀಡಲಾಗುವುದು ಎಂದು ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ|ಪಿ.ಎಲ್‌. ಧರ್ಮ ಉತ್ತರಿಸಿದರು.
2ನೇ ಸೆಮಿಸ್ಟರ್‌ ಮೌಲ್ಯಮಾಪನ ಈಗ ನಡೆಯುತ್ತಿದೆ. ಮೌಲ್ಯಮಾಪನವಾದ ಬಳಿಕ ತಂತ್ರಾಂಶದಲ್ಲಿ ಮಾರ್ಕ್‌ ಲಿಸ್ಟನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡುವುದನ್ನು ಹಾಗೂ ಡಿಕೋಡಿಂಗ್‌ ಮಾಡುವುದನ್ನು ಕೈಬಿಡುವಂತೆ ಈಗಾಗಲೇ ಇಲಾಖೆಯನ್ನು ಕೋರಲಾಗಿದೆ. ಇದು ಸಾಧ್ಯವಾದರೆ ಫಲಿತಾಂಶ ತುರ್ತಾಗಿ ನೀಡಲು ಸಾಧ್ಯವಾಗಲಿದೆ ಎಂದರು.

4 ಹೊಸ ವಿಭಾಗ ಆರಂಭ
ಮಂಗಳೂರು: ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಮತ್ತು ಉದ್ಯೋಗ ಕ್ಷೇತ್ರದ ಬೇಡಿಕೆ ಆಧರಿಸಿ ಮಂಗಳೂರು ವಿಶ್ವವಿದ್ಯಾನಿಲಯ 4 ಸ್ನಾತಕೋತ್ತರ ಹೊಸ ಅಧ್ಯಯನ ವಿಭಾಗಗಳನ್ನು ಪ್ರಾರಂಭಿಸಲಿದೆ.

ಮಾಲೆಕ್ಯುಲಾರ್‌ ಬಯಾಲಜಿ, ಜೈವಿಕ ತಂತ್ರಜ್ಞಾನ ಅಧ್ಯಯನ -ಸಂಶೋಧನೆ, ಪ್ರಾಚೀನ ಇತಿಹಾಸ ಮತ್ತು ಪುರಾತಣ್ತೀ ಶಾಸ್ತ್ರ, ಫುಡ್‌ ಸೈನ್ಸ್‌-ನ್ಯೂಟ್ರಿಷಿಯನ್‌ ಅಧ್ಯಯನ-ಸಂಶೋಧನೆ ವಿಭಾಗಗಳು. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಕೌಶಲವರ್ಧಕ ಕೋರ್ಸ್‌, ಪರಿಸರ ಅಧ್ಯಯನ ಎಬಿಲಿಟಿ ಎನ್‌ಹ್ಯಾನ್ಸ್‌ಮೆಂಟ್‌ ಕಂಪಲ್ಸರಿ ಕೋರ್ಸಿನ ಉಪನ್ಯಾಸಕರ ವಿದ್ಯಾರ್ಹತೆ ನಿಗದಿಗೆ ಶೈಕ್ಷಣಿಕ ಮಂಡಳಿ ಒಪ್ಪಿಗೆ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next