Advertisement

Mangaluru: ರೈಲು ಹಳಿಯಲ್ಲಿ ಕಲ್ಲಿರಿಸಿದ ಕಿಡಿಗೇಡಿಗಳು: ಭಾರೀ ಶಬ್ದಕ್ಕೆ ಬೆಚ್ಚಿದ ಸ್ಥಳೀಯರು

12:49 AM Oct 20, 2024 | Team Udayavani |

ಉಳ್ಳಾಲ: ತೊಕ್ಕೊಟ್ಟು ಓವರ್‌ಬ್ರಿಡ್ಜ್ ಗಣೇಶ್‌ ನಗರ ಬಳಿಯ ರೈಲು ಹಳಿಯಲ್ಲಿ ಕಿಡಿಗೇಡಿಗಳು ಜಲ್ಲಿಕಲ್ಲು ಇಟ್ಟ ಘಟನೆ ಶನಿವಾರ ರಾತ್ರಿ ನಡೆದಿದ್ದು, ರೈಲು ಸಂಚರಿಸಿದಾಗ ಆದ ಶಬ್ದಕ್ಕೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

Advertisement

ಗಣೇಶ್‌ ನಗರ ಮತ್ತು ಕಾಪಿಕಾಡು ನಡುವಿನ ಹಳಿಯಲ್ಲಿ ಈ ಘಟನೆ ನಡೆದಿದೆ. ಮಂಗಳೂರಿನಿಂದ ಕೇರಳ ಕಡೆಗೆ ರೈಲು ಸಾಗಿದಾಗ ಸಣ್ಣ ಸದ್ದು ಕೇಳಿಸಿದ್ದು, ಕೇರಳದಿಂದ ಮಂಗಳೂರು ಕಡೆಗೆ ಸಂಚರಿಸಿದ ಸಂದರ್ಭದಲ್ಲಿ ಉಂಟಾದ ದೊಡ್ಡ ಸದ್ದಿನಿಂದ ಸ್ಥಳೀಯ ಮನೆಗಳಲ್ಲಿ ಕಂಪನ ಉಂಟಾಗಿದೆ. ಜನ ಬೆಚ್ಚಿ ಬಿದ್ದು ಟಾರ್ಚ್‌ಲೈಟ್‌ ಹಿಡಿದು ಹಳಿ ಸಮೀಪ ಬಂದು ನೋಡಿದಾಗ ಜಲ್ಲಿ ಕಲ್ಲು ಹುಡಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕಲ್ಲು ಸಾಲಾಗಿ ಜೋಡಣೆ:
ಎರಡೂ ಹಳಿಯಲ್ಲಿ ಜಲ್ಲಿಕಲ್ಲನ್ನು ಸಾಲಾಗಿ ಜೋಡಿಸಿದ್ದರು. 40 ವರುಷಗಳಿಂದ ಪ್ರಥಮ ಬಾರಿಗೆ ಇಷ್ಟು ದೊಡ್ಡ ಸದ್ದು ಕೇಳಿರುವ ಅನುಭವ ಆಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಪದ್ಮ. ರಾತ್ರಿ 8 ಗಂಟೆ ಸುಮಾರಿಗೆ ಕೊರಗಜ್ಜನ ಅಗೆಲು ಮುಗಿಸಿ ಮರಳುತ್ತಿದ್ದ ಮಹಿಳೆಯರು ಹಳಿಯಲ್ಲಿ ಇಬ್ಬರು ಆಗಂತುಕರನ್ನು ಕಂಡಿದ್ದರು. ಅವರದೇ ಕೃತ್ಯ ಇದಾಗಿರಬೇಕು ಎಂದು ಶಂಕಿಸಲಾಗಿದೆ.

ಸ್ಥಳೀಯ ನಿವಾಸಿ ರಾಜೇಶ್‌ ಅವರು ರೈಲ್ವೇ ಸಲಹಾ ಸಮಿತಿ ಸದಸ್ಯರಾದ ಆನಂದ ಶೆಟ್ಟಿ ಭಟ್ನಗರ ಮತ್ತು ಗೋಪಿನಾಥ್‌ ಬಗಂಬಿಲ ಅವರಿಗೆ ಮಾಹಿತಿ ನೀಡಿದ್ದು, ರೈಲ್ವೇ ಸಲಹಾ ಸಮಿತಿ ಸದಸ್ಯರ ದೂರಿನಂತೆ ಉಳ್ಳಾಲ ಪೊಲೀಸರು ಮತ್ತು ರೈಲ್ವೇ ಸಿಬಂದಿ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next