Advertisement

ರಾ. ಹೆ. 66 ಕತ್ತಲ ಸಂಚಾರಕ್ಕೆ ಹೆಸರುವಾಸಿ!

11:47 AM Oct 15, 2018 | Team Udayavani |

ಕಾಪು: ಮಂಗಳೂರು- ಕುಂದಾಪುರ ನಡುವಿನ ರಾ. ಹೆದ್ದಾರಿಯಲ್ಲಿ ಬರುವ ಪಟ್ಟಣಗಳ ಡಿವೈಡರ್‌ಗಳಲ್ಲಿ ಅಪಘಾತ-ಅಪರಾಧಗಳನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುವ ದಾರಿದೀಪಗಳಲ್ಲಿ ಸುಮಾರು ಅರ್ಧ ಪ್ರಮಾಣದಷ್ಟು ಬೆಳಗುತ್ತಿಲ್ಲ.

Advertisement

ಇದು ಸಣ್ಣ ಸಂಗತಿ ಎನಿಸಿದರೂ ಪರಿಣಾಮ ದೊಡ್ಡದು. ರಾ.ಹೆ. 66ರಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ದಾರಿದೀಪಗಳು ಉರಿಯದಿರು ವುದೂ ಕಾರಣ. ಮಂಗಳೂರಿನ ನಂತೂರು ಜಂಕ್ಷನ್‌ನಿಂದ ಕುಂದಾಪುರ ಪಾರಿಜಾತ್‌ ಸರ್ಕಲ್‌ವರೆಗೆ ಡಿವೈಡರ್‌ಗಳಲ್ಲಿ 1, 860 ದೀಪಗಳಿವೆ. “ಉದಯವಾಣಿ’ ಪ್ರತಿನಿಧಿ ಮಂಗಳೂರಿನಿಂದ ಕುಂದಾ
ಪುರದವರೆಗೆ ಸಮೀಕ್ಷೆ ನಡೆಸಿದಾಗ, ಈ ಪೈಕಿ ಶೇ. 40ರಿಂದ 50ರಷ್ಟು ಉರಿಯುತ್ತಿರಲಿಲ್ಲ. ಕೆಲವೆಡೆ ರಾತ್ರಿ 9 ಗಂಟೆಯಾಗುತ್ತಲೇ ಆರುತ್ತವೆ.

ಜಂಕ್ಷನ್‌ಗಳಲ್ಲೇ ಕತ್ತಲು 
ನಂತೂರು-ಕುಂದಾಪುರ ಮಧ್ಯೆ ಗ್ರಾಮೀಣ ಒಳ ರಸ್ತೆಗಳು ಬಂದು ಸೇರುವ 30ಕ್ಕೂ ಅಧಿಕ ಜಂಕ್ಷನ್‌ಗಳಿವೆ. ಇಲ್ಲೂ ದೀಪಗಳಿಲ್ಲ. ಬೆಳಕು ಇಲ್ಲದೆ, ಡಿವೈಡರ್‌ ಕೂಡ ಸಮರ್ಪಕ ಇರದೆ ಸವಾರರು ಗೊಂದಲಗೊಂಡು ಅಪಘಾತಗಳು ಘಟಿಸುತ್ತಿವೆ.

ಕಾರಣವೇನು?
ನಿರ್ವಹಣೆಯ ಕೊರತೆಯೇ ಕತ್ತಲು ಬೆಳಕಿನ ಆಟಕ್ಕೆ ಕಾರಣ. ತಲಪಾಡಿಯಿಂದ ಸುರತ್ಕಲ್‌, ಕುಂದಾಪುರದವರೆಗಿನ ದಾರಿ ದೀಪ ನಿರ್ವಹಣೆ ಹೊಣೆ ನವಯುಗ ಕಂಪೆನಿಯದು ಎನ್ನುತ್ತಿವೆ ರಾ.ಹೆ. ಪ್ರಾಧಿ ಕಾರದ ಮೂಲಗಳು. ಗುತ್ತಿಗೆದಾರ ಕಂಪೆನಿ, ತಲಪಾಡಿಯಿಂದ ನಂತೂರು ಮತ್ತು ಸುರತ್ಕಲ್‌ನಿಂದ ಕುಂದಾಪುರದ ವರೆಗಿನ ಹೊಣೆ ತನ್ನದು. ನಂತೂರು- ಸುರತ್ಕಲ್‌ ನಡುವಿನ ಜವಾಬ್ದಾರಿ ಇಲಾಖೆಯದು ಎಂದಿದೆ. ಆದರೆ, ಸುರತ್ಕಲ್‌ನಿಂದ ಕುಂದಾಪುರದ ವರೆಗಿನ ಪ್ರದೇಶದಲ್ಲೂ ಎಲ್ಲ ದೀಪಗಳು ಉರಿಯುತ್ತಿಲ್ಲ!

ಎಂಟು ವರ್ಷ, 2500 ಸಾವು
ರಾ. ಹೆ. ಚತುಷ್ಪಥ ಕಾಮಗಾರಿ ಆರಂಭವಾದ 2010ರಿಂದ ಇಲ್ಲಿಯ ವರೆಗೆ ತಲಪಾಡಿ- ಕುಂದಾಪುರ ನಡುವೆ ಅಪಘಾತಗಳಲ್ಲಿ 2,500 ಮಂದಿ ಸಾವಿಗೀಡಾಗಿದ್ದಾರೆ. 4,000 ಮಂದಿ ಗಾಯ ಗೊಂಡಿದ್ದಾರೆ ಎನ್ನುತ್ತದೆ ಪೊಲೀಸ್‌ ಮಾಹಿತಿ. 

Advertisement

ಮಿನಿ ಪೇಟೆ: ದೀಪವಿಲ್ಲ, ಅಪರಾಧ, ಅಪಘಾತ ಹೆಚ್ಚು
ನಂತೂರು ಜಂಕ್ಷನ್‌ನಿಂದ ಸುರತ್ಕಲ್‌ ತನಕ 680 ದೀಪಗಳಿದ್ದು, ಶೇ. 60ಕ್ಕೂ ಹೆಚ್ಚು ಉರಿಯುತ್ತಿಲ್ಲ. ಸುರತ್ಕಲ್‌ನಿಂದ ಹೆಜಮಾಡಿ ಟೋಲ್‌ ತನಕ 370 ದೀಪಗಳಿವೆ, ಶೇ.30ರಷ್ಟು ಕೆಟ್ಟಿವೆ. ಹೆಜಮಾಡಿ ಟೋಲ್‌ನಿಂದ ಸಾಸ್ತಾನ ಟೋಲ್‌ ತನಕ ಇರುವ 520 ದೀಪಗಳಲ್ಲಿ ಹಾಗೂ ಸಾಸ್ತಾನದಿಂದ ಕುಂದಾಪುರ ತನಕ ಇರುವ 300 ದೀಪಗಳಲ್ಲಿ ಶೇ. 50 ಉರಿಯುತ್ತಿಲ್ಲ. ನಡುವೆ ಹಲವು ಮಿನಿ ಪೇಟೆಗಳಿದ್ದು,ಇಲ್ಲೆಲ್ಲ ರಾತ್ರಿ ಕತ್ತಲು. ಇದರಿಂದಾಗಿ ಅಪರಾಧವೂ ಅಪಘಾತವೂ ಹೆಚ್ಚಿದೆ. ಸರಗಳ್ಳರ ಹಾವಳಿ, ಕಿರುಕುಳ, ಗುಂಪು ಹಲ್ಲೆ, ಹಿಟ್‌ ಆ್ಯಂಡ್‌ ರನ್‌ ಇತ್ಯಾದಿ ನಿತ್ಯ ವರದಿಯಾಗುತ್ತಿವೆ.

ಹೆದ್ದಾರಿಯಲ್ಲಿ ದೀಪಗಳು ಉರಿಯದೆ ಚಾಲಕರು, ಪಾದಚಾರಿಗಳಿಗೆ ತೊಂದರೆ ಆಗುತ್ತಿದೆ. ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆ ಹೆಚ್ಚು. 
ಮಲ್ಲಿಕಾರ್ಜುನ್‌ ರಿಕ್ಷಾ ಚಾಲಕ, ಕೊಲಾ°ಡು

ನಿರ್ವಹಣೆ ಕೊರತೆಯಿಂದ ಅಪಘಾತಗಳು ಸಂಭವಿಸುತ್ತಿವೆ. ಗುತ್ತಿಗೆದಾರರು ಮತ್ತು ಆಧಿಕಾರಿಗಳು ಸಭೆಯಲ್ಲಿ ಹೇಳುವುದು ಒಂದು, ಮಾಡುವುದು ಮತ್ತೂಂದು.
ಕಾಪು ದಿವಾಕರ ಶೆಟ್ಟಿ, ಹೋರಾಟ ಸಮಿತಿ  ಮುಖಂಡ

ಮುಕ್ಕದಿಂದ ಕುಂದಾಪುರ, ನಂತೂರಿನಿಂದ ತಲಪಾಡಿವರೆಗೆ ದಾರಿ ದೀಪಗಳ ಅಳವಡಿಕೆ ನಮ್ಮ ಜವಾಬ್ದಾರಿ, ನಿರ್ವಹಣೆಯನ್ನು ಟೋಲ್‌ಗೇಟ್‌ ನಿರ್ವಾಹಕರಿಗೆ ನೀಡಲಾಗಿದೆ.
ಶಂಕರ್‌, ಚೀಪ್‌ ಪ್ರಾಜೆಕ್ಟ್ ಮ್ಯಾನೇಜರ್‌, ನವಯುಗ ಕಂಪೆನಿ ಪ್ರೈ. ಲಿ.

*ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next