Advertisement

Mangaluru: ಸಿಆರ್‌ಝಡ್‌ ಮರಳು ವಿಘ್ನ ಶೀಘ್ರ ನಿವಾರಣೆ ಸಾಧ್ಯತೆ

01:56 AM Sep 01, 2024 | Team Udayavani |

ಮಂಗಳೂರು: ಸಿಆರ್‌ಝಡ್‌ ಪ್ರದೇಶದ ಮರಳಿನ ವಿಘ್ನ ಶೀಘ್ರ ನಿವಾರಣೆ ಯಾಗುವ ಲಕ್ಷಣ ಕಂಡು ಬರುತ್ತಿದೆ.

Advertisement

ಸಿಆರ್‌ಝಡ್‌ ಪ್ರದೇಶದ ಮರಳು ದಿಬ್ಬ ತೆರವುಗೊಳಿಸುವ ಕುರಿತ ನಿರ್ಣಯ ಸುಮಾರು ಎರಡೂವರೆ ವರ್ಷಗಳಿಂದ ಕೇಂದ್ರ ಸರಕಾರದ ಪರಿಸರ ಮತ್ತು ಅರಣ್ಯ ಇಲಾಖೆಯಲ್ಲೇ ಬಾಕಿಯಾಗಿತ್ತು. ಹಾಗಾಗಿ ರಾಜ್ಯದ ಕರಾವಳಿ ನಿರ್ವಹಣ ಪ್ರಾಧಿಕಾರ ಜಿಲ್ಲಾಡಳಿತಕ್ಕೆ ಸಿಆರ್‌ಝಡ್‌ ಪ್ರದೇಶದಿಂದ ಮರಳು ತೆಗೆಯುವುದಕ್ಕೆ ಅನುಮೋದನೆ ನೀಡಲಾಗಿರಲಿಲ್ಲ. ಕೇಂದ್ರ ಸರಕಾರದ ಅನುಮೋದನೆ ಬಳಿಕವೇ ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆ ಮಾಡಬಹುದು ಎಂಬ ಆದೇಶದ ಹಿನ್ನೆಲೆಯಲ್ಲಿ ಈ ವಿಷಯ ಹಲವು ತಿಂಗಳುಗಳಿಂದ ಕಗ್ಗಂಟಾಗಿತ್ತು.

ಪ್ರಸ್ತುತ ದ.ಕ. ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಉಡುಪಿಯ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ನಿಯಮಾನುಸಾರ ಮರಳುಗಾರಿಕೆ ನಡೆಸುತ್ತಿರುವ ಕೆಲವರು ದಿಲ್ಲಿಯಲ್ಲಿ ಅರಣ್ಯ ಮತ್ತು ಪರಿಸರ ಸಚಿವಾ ಲಯದ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಸಿಆರ್‌ಝಡ್‌ ಮರಳುಗಾರಿಕೆಗೆ ಇರುವ ಕಾನೂನಿನ ಕೆಲವು ತೊಡಕುಗಳನ್ನು ವಿಲೇವಾರಿ ಮಾಡುವಂತೆ ಆಗ್ರಹಿಸಿದ್ದಾರೆ. ಆ ಬಳಿಕ ಸಂಸದ ಕೋಟ ಅವರಿಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧಿಕಾರಿ ಪತ್ರ ಬರೆದಿದ್ದು, ಸಿಆರ್‌ಝಡ್‌ ಮಾರ್ಗಸೂಚಿಗಳ ಕುರಿತು ಕರಾವಳಿ ರಾಜ್ಯಗಳಿಂದ ಈಗಾಗಲೇ ಸಲಹೆ ಕೇಳಲಾಗಿದೆ.

ಆ.8ರಂದು ಸಮಿತಿಯೊಂದನ್ನು ರಚಿಸಲಾಗಿದ್ದು, ಇದು ರಾಜ್ಯಗಳ ಸಲಹೆಗಳನ್ನು ಪರಾಮರ್ಶಿಸಲಿದೆ. ಮಾರ್ಗಸೂಚಿ ರಚಿಸಿದ ಕೂಡಲೇ ರಾಜ್ಯಗಳಿಗೆ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ. ಅಧಿಕಾರಿಗಳು ದಿಲ್ಲಿಗೆ ಬರಹೇಳಿದ್ದು, ಮರಳುಗಾರಿಕೆಗೆ ಬೇಗನೆ ಅನುಮೋದನೆ ಸಿಗುವ ನಿರೀಕ್ಷೆ ಇದೆ ಎಂದು ಉಡುಪಿ ಜಿಲ್ಲಾ ಮರಳು ಹೋರಾಟ ಸಮಿತಿ ಅಧ್ಯಕ್ಷ ಸತ್ಯರಾಜ್‌ ಬಿರ್ತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next