Advertisement

ಮಂಗಳೂರು ವಿಮಾನ ನಿಲ್ದಾಣ: ಆತಂಕಕ್ಕಿಂತ ಅವಕಾಶಗಳೇ ಅಧಿಕ

09:42 AM Dec 10, 2018 | |

ಕೇರಳದ 4ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಣ್ಣೂರಿನಲ್ಲಿ  ಡಿ. 9ರಂದು ಉದ್ಘಾಟನೆಗೊಂಡಿದೆ. ಮಂಗಳೂರಿನಿಂದ 180 ಕಿ.ಮೀ. ದೂರದಲ್ಲಿ ಈ ಹೊಸ ಏರ್‌ಪೋರ್ಟ್‌ ಕಾರ್ಯಾರಂಭ ಸಮೀಪದ ಏರ್‌ಪೋರ್ಟ್‌ ಗಳಿಗೆ ಪ್ರಯಾಣಿಕರ ಸಂಖ್ಯೆಯ ವಿಚಾರದಲ್ಲಿ ಆತಂಕ ಮೂಡುವುದು ಸಹಜ. ಈ ಹಿನ್ನೆಲೆಯಲ್ಲಿ ಹೊಸ ಏರ್‌ಪೋರ್ಟ್‌ ನಮ್ಮ ಮಂಗಳೂರು ನಿಲ್ದಾಣಕ್ಕೆ ಎಷ್ಟರಮಟ್ಟಿಗೆ ಪ್ರತಿಸ್ಪರ್ಧಿ ಎಂಬ ಬಗ್ಗೆ ಕಣ್ಣೂರು ಏರ್‌ಪೋರ್ಟ್‌ ವ್ಯವಸ್ಥಾಪಕ ನಿರ್ದೇಶಕ ವಿ. ತುಳಸೀದಾಸ್‌ “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆೆ. ಇನ್ನೊಂದೆಡೆ ಮಂಗಳೂರು ಏರ್‌ಪೋರ್ಟ್‌ ನಿರ್ದೇಶಕ ವಿ.ವಿ. ರಾವ್‌ ಕೂಡ ಮಾತನಾಡಿದ್ದಾರೆ.

Advertisement

1.ಕಣ್ಣೂರು ಏರ್‌ಪೋರ್ಟ್‌ನಿಂದ ಮಂಗಳೂರಿಗೆ ತೊಂದರೆಯಾಗುವುದಿಲ್ಲ. ಆದರೆ ಬಹಳ ಹತ್ತಿರವಿರುವ ಕಲ್ಲಿಕೋಟೆ ಏರ್‌ಪೋರ್ಟ್‌ಗೆ ಬರುವ ಪ್ರಯಾಣಿಕರನ್ನು ಇದು ಹೆಚ್ಚು ಸೆಳೆಯಬಹುದು. ದೇಶದಲ್ಲಿ ಶೇ.20ರಿಂದ 25ರಷ್ಟು ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಕಾರಣ ಹೊಸ ನಿಲ್ದಾಣಗಳು ಹತ್ತಿರದವಕ್ಕೆ ಅಷ್ಟೊಂದು ಬಾಧಕವಲ್ಲ. ಇನ್ನು, ನಮ್ಮಲ್ಲಿ ಸಂಪರ್ಕ ರಸ್ತೆಗಳು ಹಾಗೂ ರೈಲ್ವೇ ಸಂಪರ್ಕ ಉತ್ತಮವಾಗಿರುವ ಕಾರಣ ಪ್ರಯಾಣಿಕರ ಸಂಖ್ಯೆ ಕುಸಿತ ಸಾಧ್ಯತೆ ತೀರಾ ಕಡಿಮೆ. 2020ರ ವೇಳೆಗೆ ಮಂಗಳೂರು ನಿಲ್ದಾಣ ಹೊಸ ಸವಲತ್ತುಗಳೊಂದಿಗೆ ಹೆಚ್ಚು ಜನಾಕರ್ಷಣೆ ಪಡೆಯಲಿದೆ. ನಿಲ್ದಾಣದ ವಿಸ್ತರಣೆ ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ. ಭವಿಷ್ಯದ ಅಗತ್ಯಗಳನ್ನು ಪೂರೈಸುವ ಪ್ರಯಾಣಿಕರ ಸೇವಾ ಸವಲತ್ತು ನಮ್ಮಲ್ಲಿಯೂ ಬರುತ್ತದೆ. 

2.ಪ್ರಯಾಣಿಕರು ನೀಡುವ ರೇಟಿಂಗ್‌ ಆಧರಿಸಿ ನಮ್ಮದು ದೇಶದ ಅತ್ಯುತ್ತಮ ಏರ್‌ಪೋರ್ಟ್‌ಗಳ ಪೈಕಿ ಈಗ 3ನೇ ಸ್ಥಾನದಲ್ಲಿದೆ. ಇದು ದೊಡ್ಡ ಸಾಧನೆ. ಆದರೆ ಈ ರೇಟಿಂಗ್‌ ಪ್ರಕ್ರಿಯೆಯ ಎರಡು ಹಂತಗಳಷ್ಟೇ ಮುಗಿದಿದ್ದು, 3ನೇ ಹಂತದ ಪ್ರಕ್ರಿಯೆ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ. ಆ ಫಲಿತಾಂಶ ಬಂದರೆ, ಮಂಗಳೂರು ಏಷ್ಯಾದಲ್ಲೇ ಮುಂಚೂಣಿಯ ಏರ್‌ಪೋರ್ಟ್‌ ಆಗಿ ಆಯ್ಕೆಯಾಗಬಹುದು.


ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ.ರಾವ್

3.
ಈಗ ಪ್ರತಿದಿನ 30 ವಿಮಾನಗಳು ಹಾರಾಟ ನಡೆಸುತ್ತಿವೆ. ತಾಂತ್ರಿಕ ಕಾರಣಗಳಿಂದಾಗಿ ಹಾರಾಟದಲ್ಲಿ ವಿಳಂಬವಾಗುತ್ತಿರುವುದು ನಿಜ. ಆದರೆ ಅದನ್ನು ಆಯಾ ಏರ್‌ಲೈನ್ಸ್‌ಗಳು ನೋಡಿಕೊಳ್ಳಬೇಕು, ಅದು ಏರ್‌ಪೋರ್ಟ್‌ ಸಮಸ್ಯೆ ಅಲ್ಲ. ಅತ್ಯಾಧುನಿಕ ನ್ಯಾವಿಗೇಷನ್‌ ವ್ಯವಸ್ಥೆ ಹಾಗೂ “ಇನ್‌ಸ್ಟ್ರೆಮೆಂಟ್‌ ಲೈಟಿಂಗ್‌ ಸಿಸ್ಟಮ್‌ (ಐಎಲ್‌ಎಸ್‌) ದೀಪ ಅಳವಡಿಸಿರುವ ಕಾರಣ ಈಗ ದಟ್ಟ ಮೋಡ ಅಥವಾ ಮಂದ ಬೆಳಕಿನಿಂದಾಗಿ ಲ್ಯಾಂಡಿಂಗ್‌ ಅಡಚಣೆಯೂ ಕಡಿಮೆಯಾಗಿದೆ. 

Advertisement

4.ಮಂಗಳೂರಿಗೆ ದೊಡ್ಡ ಗಾತ್ರದ ವಿಮಾನಗಳ ಹಾರಾಟ ಅಗತ್ಯವಿಲ್ಲ. ನಾವು ಕೂಡ ಗಲ್ಫ್ ಪ್ರಯಾಣಿಕರನ್ನೇ ಹೆಚ್ಚು ಅವಲಂಬಿಸಿದ್ದು, ಅಲ್ಲಿಗೆ ಎ320 ಏರ್‌ಬಸ್‌ ಮಾದರಿ ವಿಮಾನಗಳು ಹೆಚ್ಚು ಸೂಕ್ತ. ಅವುಗಳ ಹಾರಾಟಕ್ಕೆ ಈಗಿರುವ 2,450 ಮೀ. ರನ್‌ವೇ ಸಾಕು. ಈಗ ಗಲ್ಫ್ ದೇಶಗಳಿಗೆ ಸೇವೆ ಹೆಚ್ಚಿಸುವುದಕ್ಕೆ ರನ್‌ವೇಯಲ್ಲಿ ವಿಮಾನಗಳ ಹಾರಾಟ ನಿರ್ವಹಣ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗುವುದು. ಅದೇ ರೀತಿ, ಮಂಗಳೂರು ಏರ್‌ಪೋರ್ಟ್‌ನ ಪ್ರತ್ಯೇಕ ವೆಬ್‌ಸೈಟ್‌ ಹಾಗೂ ಆ್ಯಪ್‌ ಕೂಡ ರೆಡಿಯಾಗಲಿದೆ.

5.ವಿದೇಶಿ ವೈಮಾನಿಕ ಕಂಪೆನಿಗಳ ಸೇವೆಗೆ ಅನುಮತಿಯನ್ನು ನಾವು ಕೂಡ ಕೇಳಿದ್ದು, ಇನ್ನೂ ಸಿಕ್ಕಿಲ್ಲ. ಆಂಧ್ರದ ಹೊಸ ರಾಜಧಾನಿ ವಿಜಯವಾಡಕ್ಕೆ ಕೂಡ ವಿದೇಶಿ ವಿಮಾನಗಳ ಹಾರಾಟಕ್ಕೆ ಅನುಮತಿ ಸಿಕ್ಕಿಲ್ಲ. ಹೀಗಿರುವಾಗ ಕಣ್ಣೂರಿನಿಂದ ವಿದೇಶಿ ವಿಮಾನ ಹಾರಾಟಕ್ಕೆ ಅನುಮತಿ ಸಿಗುವುದಾದರೆ, ಮಂಗಳೂರಿಗೂ ದೊರೆಯುತ್ತದೆ. ನಮ್ಮ ನಿಲ್ದಾಣದ ಸದ್ಯದ ಮೂಲಸೌಕರ್ಯವು ವಿದೇಶಿ ಕಂಪೆನಿಗಳ ಸೇವೆಗೆ ತಕ್ಕುದಾಗಿದೆ. ಆದರೆ ಅನುಮತಿಯ ನಿರ್ಧಾರ ಕೇಂದ್ರ ಸರಕಾರದ್ದು.

6.ಕೇರಳದ ಉತ್ತರ ಮಲಬಾರಿಗೆ ವಿಮಾನ ನಿಲ್ದಾಣ ಬೇಕೆಂಬುದು ದಶಕಗಳ ಬೇಡಿಕೆ. 1930ರಲ್ಲಿ ಟಾಟಾ ಏರ್‌ಲೈನ್ಸ್‌ ವಾಣಿಜ್ಯ ಸೇವೆ ಪ್ರಾರಂಭಿಸಿದ್ದಾಗ ಆಗಿನ ಮುಂಬಯಿ-ತಿರುವನಂತಪುರ ವಿಮಾನವನ್ನು ಕಣ್ಣೂರಿನಲ್ಲಿ ನಿಲ್ಲಿಸಲಾಗುತ್ತಿತ್ತು.


ಕಣ್ಣೂರು ವಿಮಾನ ನಿಲ್ದಾಣ ಎಂ .ಡಿ ತುಳಸೀದಾಸ್ 

7.
ಕಣ್ಣೂರು ಏರ್‌ಪೋರ್ಟ್‌ನಿಂದ ಸಮೀಪದ‌ ನಿಲ್ದಾಣಗಳಲ್ಲಿ ಸ್ವಲ್ಪ ಮಟ್ಟಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು. ಅದು ಕಲ್ಲಿಕೋಟೆ ಅಥವಾ ಮಂಗಳೂರು ಇರಬಹುದು.ಆದರೆ ಅದು ತಾತ್ಕಾಲಿಕ. ತಿರುವನಂತಪುರದ ಅನಂತರ ಕೊಚ್ಚಿ, ಬಳಿಕ ಕಲ್ಲಿಕೋಟೆ, ಈಗ ಕಣ್ಣೂರು ವಿಮಾನ ನಿಲ್ದಾಣ ಬಂದಿದೆ. ಸದ್ಯಕ್ಕೆ ಕೇರಳದ ಎಲ್ಲ ಮೂರು ನಿಲ್ದಾಣಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆಯೇ ವಿನಾ ಕಮ್ಮಿಯಾಗಿಲ್ಲ. 

8.ಪ್ರಯಾಣ ಸವಲತ್ತು ಹೆಚ್ಚಿದಂತೆ ವಿಮಾನಯಾನಿಗಳ ಸಂಖ್ಯೆಯೂ ಏರಿದೆ. ಮನೆ ಸಮೀಪ ವಿಮಾನ ನಿಲ್ದಾಣ ಆದಾಗ ಪ್ರಯಾಣಿಸಲು ಬಯಸುವುದು ಸಹಜ. ಹೀಗಾಗಿ ಹೊಸ ನಿಲ್ದಾಣಗಳು ಹುಟ್ಟಿಕೊಂಡಾಗ ಹತ್ತಿರದ ನಿಲ್ದಾಣಗಳು ಅದನ್ನು ಒಂದು ಸವಾಲು ಅಥವಾ ಆತಂಕವಾಗಿ ಪರಿಗಣಿಸಬೇಕಿಲ್ಲ. ಕಣ್ಣೂರು ಏರ್‌ಪೋರ್ಟ್‌ ಅನ್ನು ಮಂಗಳೂರು ಸವಾಲಿನ ಬದಲು ಬೆಳವಣಿಗೆಯ ಅವಕಾಶವಾಗಿ ಪರಿಗಣಿಸಬೇಕು. ಈ ಏರ್‌ಪೋರ್ಟ್‌ನಿಂದಾಗಿ ಕರ್ನಾಟಕ-ಕೇರಳಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಇಷ್ಟು ದಿನ ಪ್ರವಾಸಿಗರು ಮಡಿಕೇರಿಗೆ ಬೆಂಗಳೂರು ಅಥವಾ ಮಂಗಳೂರಿಗೆ ಬಂದು ರಸ್ತೆ ಮೂಲಕ ಹೋಗಬೇಕಿತ್ತು. ಕಣ್ಣೂರಿನಿಂದ ಮಡಿಕೇರಿಗೆ ಕೇವಲ 80 ಕಿ.ಮೀ. ಇರುವ ಕಾರಣ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಇದು ಉಭಯ ರಾಜ್ಯಗಳಲ್ಲಿ ವ್ಯಾಪಾರ-ವಹಿವಾಟಿಗೆ ಉತ್ತೇಜನ ನೀಡಲಿದೆ.

9. ದುಬಾೖ, ಅಬುಧಾಬಿ, ಶಾರ್ಜಾ, ಬಹ್ರೈನ್‌, ಸೌದಿ, ಒಮಾನ್‌, ಕುವೈಟ್‌ ಮುಂತಾದ ದೇಶಗಳಿಂದ ಹೆಚ್ಚು ಪ್ರಯಾಣಿಕರನ್ನು ನಾವು ನಿರೀಕ್ಷಿಸುತ್ತಿದ್ದೇವೆೆ. ಸಿಂಗಾಪುರ, ಮಲೇಶಿಯಾಗಳಿಗೂ ವಿಮಾನ ಸೇವೆಗೆ ಬೇಡಿಕೆ ಬಂದಿದೆ. ವಿದೇಶಿ ವೈಮಾನಿಕ ಕಂಪೆನಿಗಳ ಸೇವೆಗೂ ಅನುಮತಿ ಕೋರಲಾಗಿದೆ. ಐದಾರು ವರ್ಷಗಳಿಂದೀಚೆಗೆ ದೇಶೀಯ ಮಟ್ಟದ ವಿಮಾನಯಾನದಲ್ಲಿ ಶೇ.20ರಷ್ಟು ಏರಿಕೆಯಾದ ಕಾರಣ ನಾವು ದಕ್ಷಿಣ ಭಾರತದ ಬಹುತೇಕ ಎಲ್ಲ ಮೆಟ್ರೊ ನಗರಕ್ಕೂ ಈಗ ಸೇವೆ ಆರಂಭಿಸುತ್ತಿದ್ದೇವೆ. ಗೋ ಏರ್‌, ಇಂಡಿಗೊದವರು ಹೈದರಾಬಾದ್‌, ಬೆಂಗಳೂರು, ಚೆನ್ನೈ, ತಿರುವನಂತಪುರ, ಹುಬ್ಬಳ್ಳಿಗೆ ಸೇವೆ ನೀಡಲಿದ್ದು, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನವರು ಅಬುಧಾಬಿ, ರಿಯಾದ್‌, ದೋಹಾ, ಶಾರ್ಜಾಗೆ ಸೇವೆ ನೀಡಲಿದ್ದಾರೆ. ಮುಂದೆ ಸಿಂಗಾಪುರ, ಮಸ್ಕತ್‌ಗೂ ಆರಂಭಿಸಲಾಗುವುದು. 

10.ನನ್ನ ಪ್ರಕಾರ, ಮಂಗಳೂರು ಏರ್‌ಪೋರ್ಟ್‌ ಮೇಲ್ದರ್ಜೆಗೇರಬೇಕಾದರೆ ರನ್‌ವೇ ಉದ್ದ ಹೆಚ್ಚಿಸಬೇಕು. ಅದಕ್ಕೆ ಭೂಮಿ ಲಭ್ಯವಿದೆಯೇ -ಗೊತ್ತಿಲ್ಲ. ಮಂಗಳೂರಿನದು ಅಂತಾರಾಷ್ಟ್ರೀಯ ಸೇವೆಯ ಜತೆಗೆ ದೇಶೀಯ ವಿಮಾನ ಹಾರಾಟ ಹೆಚ್ಚಿಸುವುದಕ್ಕೆ ವಿಪುಲ ಅವಕಾಶವಿರುವ ಒಳ್ಳೆಯ ಏರ್‌ಪೋರ್ಟ್‌. ಒಳ್ಳೆಯ ಏರ್‌ಪೋರ್ಟ್‌ ಎಂದು ಗುರುತಿಸಬೇಕಾದರೆ, ಮುಖ್ಯವಾಗಿ ಪ್ರಯಾಣಿಕ ನಿಲ್ದಾಣಕ್ಕೆ ಬಂದರೆ ಆತನಿಗೆ ಸಂತೃಪ್ತಿ ಸಿಗಬೇಕು. ಒಮ್ಮೆ ಬಂದವರಿಗೆ ಮತ್ತೆ ಬರುವುದಕ್ಕೆ ಪ್ರೇರಣೆಯಾಗುವ ವಾತಾವರಣವಿರಬೇಕು.

ಸುರೇಶ್ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next