Advertisement

ಮಂಗಳೂರು-ಕಾರ್ಕಳ ಹೆದ್ದಾರಿ 1,800 ಮರಗಳಿಗೆ ಕೊಡಲಿ

05:52 PM Feb 20, 2023 | Team Udayavani |

ಮಹಾನಗರ: ಮಂಗಳೂರು-ಕಾರ್ಕಳ ಹೆದ್ದಾರಿ 1,800 ಮರಗಳಿಗೆ ಕೊಡಲಿ ಮಹಾನಗರ: ಮಂಗಳೂರಿನ ಬಿಕರ್ನಕಟ್ಟೆ-ಕಾರ್ಕಳದ ಸಾಣೂರು ನಡುವಿನ
ಬಹುನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿ 169ರ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ ರಸ್ತೆ ಬದಿಯ ಮರ ತೆರವುಗೊಳಿಸಲು ಅರಣ್ಯ ಇಲಾಖೆ ಹಂತ ಹಂತವಾಗಿ ಅನುಮತಿ ನೀಡುತ್ತಿದ್ದು, ಮೊದಲ ಹಂತದಲ್ಲಿ 1800 ಮರಗಳು ತೆರವುಗೊಳ್ಳಲಿದೆ.

Advertisement

ಕುಡುಪು ಗ್ರಾಮದಲ್ಲಿ 4 ಕಿ.ಮೀ ವ್ಯಾಪ್ತಿ ಯಲ್ಲಿ 583 ಮರಗಳು ಮತ್ತು ಗುರುಪುರ ದಿಂದ ಬಡಗ ಎಡಪದವು (ಮಿಜಾರು) ವರೆಗೆ 9.5ಕಿ.ಮೀ ವ್ಯಾಪ್ತಿಯಲ್ಲಿ 1,223
ಮರಗಳು ಸೇರಿ ಒಟ್ಟು 13.5 ಕಿ.ಮೀ. ನಲ್ಲಿ 1806 ಮರಗಳು ತೆರವುಗೊಳಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಅರಣ್ಯ ಇಲಾಖೆ ಅನುಮತಿ ಈಗಾಗಲೇ ನೀಡಿದೆ. ಈ ಪೈಕಿ ಕುಡುಪು ಗ್ರಾಮದಲ್ಲಿ 316 ಮರ ಮತ್ತು ಎಡಪದವು ವ್ಯಾಪ್ತಿಯಲ್ಲಿ 448 ಮರಗಳನ್ನು ಅರಣ್ಯ ಇಲಾಖೆ ಸೂಚನೆಯಂತೆ ಹೆದ್ದಾರಿ ಇಲಾಖೆ ಕಡಿದು ವಿಲೇವಾರಿ ಮಾಡಿದೆ.

ಖಾಸಗಿ ಜಾಗದಲ್ಲಿರುವ ಮರಗಳನ್ನು ಜಾಗದ ಮಾಲಕರು ಜಮೀನು ಬಿಟ್ಟು ಕೊಡುವಾಗಲೇ ಹೆದ್ದಾರಿ ಅಲ್ಲಿರುವ ಇಲಾಖೆ ಮರಗಳ ಮೌಲ್ಯವನ್ನೂ ಅಂದಾಜು ಮಾಡಿ ಪರಿಹಾರ ಮೊತ್ತ ಪಾವತಿಸುತ್ತದೆ. ಹಾಗಾಗಿ ಮರ ತೆರವಿಗೆ ಸಮಸ್ಯೆಯಾಗುವುದಿಲ್ಲ. ಅದರೆ ಸರಕಾರಿ ಜಾಗದಲ್ಲಿರುವ ಮರ ಕಡಿಯಬೇಕಾದರೆ ವಿರೋಧ ವ್ಯಕ್ತವಾಗುತ್ತದೆ. ಮಂಗಳೂರು ನಗರ ವ್ಯಾಪ್ತಿಯ ಕುಲಶೇಖರ ಭಾಗದಲ್ಲಿ ಮರ ತೆರವು ಸಂಬಂಧಿಸಿದಂತೆ ಅಹವಾಲು ಸ್ವೀಕಾರ ಸಭೆಯಲ್ಲಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇಲ್ಲಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಇನ್ನಷ್ಟೇ ಅನುಮತಿ ನೀಡಬೇಕಾಗಿದೆ. ಮಾತ್ರವಲ್ಲದೆ ಈ ಭಾಗದಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿ ಪ್ರಕ್ರಿಯೆಯೂ ಇನ್ನಷ್ಟೇ ಆಗಬೇಕಿದೆ.

ಪರಿಸರ ಇಲಾಖೆಯ ನಿಯಮಾವಳಿ ಪ್ರಕಾರ ಒಂದು ಪ್ರದೇಶದಲ್ಲಿ 50 ಮರಕ್ಕಿಂತ ಹೆಚ್ಚು ಮರಗಳಿದ್ದಲ್ಲಿ ಅದನ್ನು ತೆರವುಗೊಳಿಸಲು ಸಾರ್ವಜನಿಕ ಅಹವಾಲು ಸ್ವೀಕರಿಸುವುದು ಕಡ್ಡಾಯ. ಆದರೂ ಅಭಿವೃದ್ಧಿ ಕಾಮಗಾರಿಗೆ ಮರ ತೆರವುಗೊಳಿಸುವುದು ಅನಿವಾರ್ಯ. ಅರಣ್ಯ ಇಲಾಖೆ 25 ಸೆಂ.ಮೀ.ಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಸಣ್ಣ ಗಿಡವನ್ನೂ ಮರ ಎಂದು ಪರಿಗಣಿಸುತ್ತದೆ. ಸೂಕ್ತ ಸ್ಥಳ ಮತ್ತು ನಿರ್ವಹಣೆಗೆ ಅವಕಾಶವಿದ್ದಲ್ಲಿ ಸ್ಥಳಾಂತರಿಸಲು ಸಾಧ್ಯವಿರುವ ಮರಗಳನ್ನು ಬೇರೆ ಕಡೆಯಲ್ಲಿ ನೆಡುವುದು ಕೂಡಾ ಇದೇ ವೇಳೆ ನಡೆಯುತ್ತದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಕೈಕಂಬ, ಗಂಜಿಮಠದಲ್ಲಿ ಕಾಮಗಾರಿ ಚುರುಕು

Advertisement

ರಾ.ಹೆದ್ದಾರಿ ಪ್ರಾಧಿಕಾರ ಭೂ ಸ್ವಾಧೀನ ಪಡಿಸಿಕೊಂಡ ಭಾಗದಲ್ಲಿ ಕಾಮಗಾರಿ ಚುರುಕುಗೊಂಡಿದ್ದು, ಮರಗಳನ್ನು ತೆರವು ಗೊಳಿಸಿ ನೆಲ ಸಮತಟ್ಟುಗೊಳಿಸಿ ಒಂದು ಹಂತದ ಡಾಮರೀಕರಣ ನಡೆಸಲಾಗಿದೆ. ಸುಮಾರು 2-3 ಕಿ.ಮೀ. ನಷ್ಟು ಡಾಮರು ಕಾಮಗಾರಿ ಈ ಭಾಗದಲ್ಲಿ ನಡೆದಿದೆ. ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ವಿಪರೀತ ಧೂಳಿನಿಂದ ಅಂಗಡಿ- ಮನೆಯವರು ಸಂಕಷ್ಟ ಅನುಭವಿಸುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ 169ರ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ 1,800ರಷ್ಟು ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಮರ ತೆರವುಗೊಳಿಲು ಅರಣ್ಯ ಇಲಾಖೆಗೆ ನಿಗದಿತ ಮೊತ್ತವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಪಾವತಿಸಿದ್ದು, ಪರ್ಯಾಯವಾಗಿ ಗಿಡಗಳನ್ನು ನೆಡುವ ಕುರಿತಂತೆಯೂ ಸೂಚನೆ ನೀಡಲಾಗಿದೆ.
-ಡಾ| ದಿನೇಶ್‌ ಕುಮಾರ್‌ ವೈ.ಕೆ.,
ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು

*ಭರತ್ ಶೆಟ್ಟಿಗಾರ್

Advertisement

Udayavani is now on Telegram. Click here to join our channel and stay updated with the latest news.

Next