Advertisement

ಮಲೆ ಮಹದೇಶ್ವರ ಬೆಟ್ಟ: ಭಕ್ತಾದಿಗಳ ನಿಷೇಧದ ನಡುವೆಯೂ ಸರಳ ಮತ್ತು ಸಂಭ್ರಮದ ತೆಪ್ಪೋತ್ಸವ

05:56 PM Oct 27, 2020 | sudhir |

ಹನೂರು (ಚಾಮರಾಜನಗರ): ಭಕ್ತಾದಿಗಳ ನಿಷೇಧದ ನಡುವೆಯೂ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಜಯ ದಶಮಿಯ ಬಲಿಪೂಜೆ, ಬಿಳಿಕುದುರೆ ಉತ್ಸವ ಮತ್ತು ತೆಪ್ಪೋತ್ಸವ ಪೂಜಾ ಕೈಂಕರ್ಯಗಳು ವಿಧಿವಿಧಾನಗಳೊಂದಿಗೆ ಸರಳವಾಗಿ ಬೇಡಗಂಪಣ ಅರ್ಚಕ ಪದ್ಧತಿಯಂತೆ ಜರುಗಿದವು.

Advertisement

ಬಿಳಿಕುದುರೆ ಉತ್ಸವ: ವಿಜಯದಶಮಿಯ ಹಿನ್ನೆಲೆ ಸೋಮವಾರ ತಡರಾತ್ರಿ 8 ಗಂಟೆಯ ವೇಳೆಗೆ ಉತ್ಸವಮೂರ್ತಿಯನ್ನು ಬಿಳಿಕುದುರೆಯ ಮೇಲೆಇಟ್ಟು ಉಪವಾಸವಿದ್ದ ಸರದಿ ಸಾಲಿನ ಅರ್ಚಕರು ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯ ನೆರವೇರಿಸಿದರು. ಬಳಿಕ ಆಯುಧಪೂಜೆಯಂದು ವಿಶೇಷವಾಗಿ ಪೂಜೆ ನೆರವೇರಿಸಿ ಇಡಲಾಗಿದ್ದ ಮಹದೇಶ್ವರರ ಪಟ್ಟದ ಕತ್ತಿಗೆ ಬೂದುಗುಂಬಳಕಾಯಿಯನ್ನು ಬಲಿಕೊಡುವ ಮೂಲಕ ಬಿಳಿಕುದುರೆ ಉತದವಕ್ಕೆ ಚಾಲನೆ ನೀಡಲಾಯಿತು. ಬಳಿಕ ದೊಡ್ಡಸತ್ತಿಗೆ ಸತ್ತಿಗೆ, ಸುರಪಾನಿ, ಮಂಗಳವಾದ್ಯ. ತಮಟೆ, ಜಾಗಟೆ ಸಮೇತ ಬನ್ನಿಮರದವರೆಗೆ ಮೆರವಣಿಗೆ ಮೂಲಕ ಸಾಗಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಬಳಿಕ ಉತ್ಸವಮೂರ್ತಿಯನ್ನು ಮೆರವಣಿಗೆ ಮೂಲಕ ಮತ್ತೆ ದೇವಾಲಯಕ್ಕೆ ತಂದು ನೈವೇದ್ಯ ಪೂಜಾ ಕೈಂಕರ್ಯ ನೆರವೇರಿಸಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು.

ಸಂಭ್ರಮದ ತೆಪ್ಪೋತ್ಸವ: ಬಳಿಕ ಸೋಮವಾರ ತಡರಾತ್ರಿ 10 ಗಂಟೆಯ ವೇಳೆಗೆ ಉತ್ಸವಮೂರ್ತಿಯನ್ನು ಬಸವ ವಾಹನದ ಮೇಲಿಟ್ಟು ಸತ್ತಿಗೆ ಸುರಪಾನಿ, ಛತ್ರಿ-ಚಾಮರ ಸಮೇತ ದೊಡ್ಡ ಕೆರೆಯ ಸಮೀಪಕ್ಕೆ ತರಲಾಯಿತು. ಬಳಿಕ ವಿವಿಧ ವರ್ಣಗಳ ಪುಷ್ಪಾಲಂಕಾರ ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದ್ದ ತೆಪ್ಪದಲ್ಲಿ ಉತ್ಸವಮೂರ್ತಿಯನ್ನು ಇಡಲಾಯಿತು. ಬಳಿಕ ತೆಪ್ಪೋತ್ಸವದ ದೊಡ್ಡಕೆರೆಯನ್ನು 3 ಸುತ್ತು ಹಾಕುವ ಮೂಲಕ ತೆಪ್ಪೋತ್ಸವವನ್ನು ನೆರವೇರಿಸಲಾಯಿತು.

ಮಹಾನವಮಿ ಜಾತ್ರೆಗೆ ತೆರೆ: ಶ್ರೀ ಕ್ಷೇತ್ರದ ಮಲೆ ಮಾದಪ್ಪನ ತೆಪ್ಪೋತ್ಸವದ ಮೂಲಕ ಮಹಾನವಮಿ ಜಾತ್ರೆಗೆ ಅಂತಿಮ ತೆರೆ ಎಳೆಯಲಾಯಿತು. ಮಹಾನವಮಿ ಜಾತ್ರೆ ಹಿನ್ನೆಲೆ ಶ್ರೀ ಕ್ಷೇತ್ರದ ರಾಜಗೋಪುರ, ಗರ್ಭಾಂಗಣ ಗೋಪುರ, ಪ್ರವೇಶದ್ವಾರ, ದೇವಾಲಯದ ಪ್ರವೇಶ ರಸ್ತೆಗಳನ್ನು ಕಳೆದ 10 ದಿನಗಳಿಂದಲೇ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.

Advertisement

ಇದನ್ನೂ ಓದಿ:ಕೋವಿಡ್ 19: ಖ್ಯಾತ ಗುಜರಾತಿ ಸ್ಟಾರ್ ನಟ, ರಾಜಕಾರಣಿ ನರೇಶ್ ಕನೋಡಿಯಾ ವಿಧಿವಶ

ಸರಳ ಆಚರಣೆ: ಪ್ರತಿ ವರ್ಷವೂ ಮಲೆ ಮಹದೇಶ್ವರ ಬೆಟ್ಟದ ಆಯುಧಪೂಜೆ, ವಿಜಯ ದಶಮಿಯ ಪೂಜೆಗಳು ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಗುತಿತ್ತು. ಆದರೆ ಈ ಬಾರಿ ಕೋವಿಡ್-19ರ ಕರಿಛಾಯೆ ಆವರಿಸಿರುವ ಹಿನ್ನೆಲೆ ದೇವಾಲಯಕ್ಕೆ ಅ.25 ಮತ್ತು 26 ರಂದು ಭಕ್ತಾದಿಗಳ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿತ್ತು. ಪ್ರತಿ ಬಾರಿಯೂ ವಿಜಯ ದಶಮಿಯ ತೆಪ್ಪೋತ್ಸವವು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಉಘೇ ಮಾದಪ್ಪ, ಉಘೇ ಮಹತ್ಮಲಯ ಘೋಷ ವಾಕ್ಯಗಳೊಂದಿಗೆ ಜರುಗುತ್ತಿದ್ದರು. ಆದರೆ ಈ ಬಾರಿ ಬೆರಳೆಣಿಕೆಯಷ್ಟು ಅರ್ಚಕರು, ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ನೆರವೇರಿತು.

ಶ್ರೀ ಕ್ಷೇತ್ರದ ಪೂಜಾ ಕೈಂಕರ್ಯಗಳಲ್ಲಿ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಪ್ರಾಧಿಕಾರಿದ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪಕಾರ್ಯದರ್ಶಿ ಬಸವರಾಜು, ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಮತ್ತು ಬೇಡಗಂಪಣ ಅರ್ಚಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next