Advertisement

ಮಲಾಡ್‌ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ 11ನೇ ವರ್ಧಂತಿ ಉತ್ಸವ

12:08 PM Apr 30, 2018 | |

ಮಲಾಡ್‌: ಜೀವನದಲ್ಲಿ ನಾವು ಸಂಪತ್ತನ್ನು ಸಂಪಾದಿಸಬಹುದು, ಹೆಸರು ಗಳಿಸ ಬಹುದು. ಆದರೆ ಜೀವನದ ಮೂಲಸಂಪತ್ತು ನಮ್ಮ ಆಚಾರ-ವಿಚಾರ, ನಡೆ-ನುಡಿ, ಆದರ್ಶ, ಮಾನವೀಯತೆಯ ಬದುಕು ಆಗಿದೆ. ಹುಟ್ಟುವಾಗ ಎಲ್ಲರಂತೆ ಈ ಭೂಮಿಗೆ ಕಾಲಿಡುವ ನಮಗೆ ನಮ್ಮ ತಂದೆ ತಾಯಿ, ಗುರು ಹಿರಿಯರು ಯಾವ ಶಿಕ್ಷಣ, ಸಂಸ್ಕೃತಿ ಮತ್ತು ಜೀವನ ಮೌಲ್ಯಗಳ ಅಡಿಪಾಯ ಹಾಕಿಕೊಟ್ಟಿದ್ದಾರೋ ಅದು ನಮ್ಮ ಸರ್ವ ಸಂಪತ್ತು. ನಾವು ಹೋಗುವಾಗ ಯಾವುದನ್ನೂ ಕೊಂಡುಹೋಗುವುದಿಲ್ಲ. ನಮ್ಮ ಜೀವನದಲ್ಲಿ ಶಾಶ್ವತವಾಗಿ ಉಳಿಯುವುದು ನಮ್ಮ ಜೀವನದ ಮಾನವೀಯತೆಯ ಶೈಲಿ ಮಾತ್ರ ಎಂದು ಮೀರಾ ಭಾಯಂದರ್‌ ಕಾರ್ಪೊರೇಟರ್‌ ಅರವಿಂದ ಎ. ಶೆಟ್ಟಿ ಅವರು ನುಡಿದರು.  ಮಲಾಡ್‌ನ‌ ತಾನಾಜಿ ನಗರದ ಕುರಾರ್‌ ವಿಲೇಜಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಎ. 20ರಿಂದ ಎ.22ರ ತನಕ ಮೂರು ದಿನಗಳ ಕಾಲ ಹಮ್ಮಿಕೊಂಡ 11ನೇ ವರ್ಧಂತಿ ಉತ್ಸವದ ನಿಮಿತ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಅವರು,  ಇಂದಿನ ಅವಿಶ್ರಾಂತ ಆಧುನಿಕ ಯುಗದಲ್ಲಿ ಜೀವನವು ಯಂತ್ರಮಯವಾಗುತ್ತಿದ್ದು ಇವು ಎಲ್ಲವೂ ಕ್ಷಣಿಕವಾಗಿದೆ. ನಮ್ಮ ದೇಶವು ಧರ್ಮ-ಶಾಂತಿಗಳ ನೆಲೆಬೀಡು. ಇದನ್ನು ನಾವು ಪರಂಪರಾಗತವಾಗಿರಸಬೇಕು ಎಂದರು.

Advertisement

ಪಲಿಮಾರು ಮಠದ ಮೀರಾ ರೋಡ್‌ನ‌ ಪ್ರಧಾನ ಅರ್ಚಕ ರಾಧಾಕೃಷ್ಣ ಭಟ್‌ ತಮ್ಮ ಆಶೀರ್ವಚನದಲ್ಲಿ, ನಮ್ಮ ಹಿರಿಯರು ಪ್ರತಿಪಾದಿಸಿಕೊಂಡು ಬಂದಂತಹ ಆದರ್ಶಮಯ ಜೀವನದಲ್ಲಿ ಸ್ವಾರಸ್ಯಗಳಿವೆ. ದೇವದೇವರುಗಳು ಆರಾಧನೆಯಿಂದ ಮಾನವನು ಸಂತೃಪ್ತಿ ಹಾಗೂ ಶಾಂತಿಮಯ ಜೀವನವನ್ನು ನಡೆಸಬಹುದು. ನಮ್ಮ ಪೀಳಿಗೆಗಳಿಗೆ ಧಾರ್ಮಿಕ ಒಲುಮೆಯನ್ನು ಮೂಡಿಸುವಲ್ಲಿ ನಾವೆಲ್ಲಾ ಜಾಗೃತರಾಗಬೇಕು. ಈ ಕ್ಷೇತ್ರಕ್ಕೆ ಬರುವ ಎಲ್ಲರಿಗೂ ದೇವರು ಆನಂದದ ಬಾಳ್ವೆಯನ್ನು ಕರುಣಿಸಲು ಎಂದು ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿ ಪ್ರದೇಶದ ಶಾಸಕ ಸುನೀಲ್‌ ಪ್ರಭು ಅವರು ಮಾತನಾಡಿ, ಪರಿಸರದಲ್ಲಿ ಸಾಕಷ್ಟು ಕೆಲಸ ಕಾರ್ಯಗಳು ಆಗಿದ್ದು, ಇನ್ನೂ ಆಗಬೇಕಾದ ಕೆಲಸಗಳು ಇಲ್ಲಿ ಸಾಕಷ್ಟಿವೆ. ಇಲ್ಲಿನ ಜನತೆಯ ಜೀವನಮಟ್ಟವನ್ನು ಯೋಗ್ಯ ರೀತಿಯಲ್ಲಿ ಕಾಪಾಡಿಕೊಳ್ಳುವ ನನ್ನ ಪ್ರಯತ್ನಕ್ಕೆ ಎಲ್ಲರ ಸಹಕಾರ ಇರಲಿ. ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ನಿರಂತರ ಸಾಗುವುದಕ್ಕೆ ನಾನು ಸದಾ ಸಹಕಾರ ಮತ್ತು ಬೆಂಬಲವನ್ನು ನೀಡಲು ಸಿದ್ಧನಾಗಿದ್ದೇನೆ ಎಂದರು.

ಅತಿಥಿ ಅಡ್ವೊಕೇಟ್‌ ಸೋಮನಾಥ ಬಿ. ಅಮೀನ್‌  ಅವರು ಮಾತನಾಡಿ, ನಮ್ಮೂರಿನ ಧಾರ್ಮಿಕ ಪರಂಪರೆಯ ಕೆಲಸ ಕಾರ್ಯಗಳನ್ನು ಇಲ್ಲಿನ ಜನರು ಒಗ್ಗಟ್ಟಿನಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಎಲ್ಲರಿಗೂ ಶಾಂತಿ ನೆಮ್ಮದಿ ಮೂಡುವಲ್ಲಿ ಕ್ಷೇತ್ರದ ಸದಾಶೀರ್ವಾದ ಎಲ್ಲರಿಗೂ ದೊರಕುವಂತಾಗಲಿ ಎಂದರು ಆಶಿಸಿದರು.

ಸ್ಥಳೀಯ ಎನ್‌ಸಿಪಿ ನಾಯಕ ವೈಭವ್‌ ಬಾರಡ್ಕರ್‌, ಸುನೀಲ್‌ ಗುಜ್ಜರ್‌, ಕೃಷ್ಣ ಉದ್ಯಾವರ್‌ ಧಾರ್ಮಿಕತೆಯ ಬಗ್ಗೆ ಸಮಯೋಚಿತವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂದಿರದ ಅಧ್ಯಕ್ಷ ರಘುನಾಥ ಕೊಟ್ಟಾರಿ ಅವರು ಮಾತನಾಡುತ್ತ, ಮಂದಿರದ ಏಳಿಗೆಗಾಗಿ ದುಡಿದ ಎಲ್ಲರನ್ನೂ ನೆನೆಯುತ್ತ ಧಾರ್ಮಿಕ ಶಕ್ತಿಗಳಲ್ಲೊಂದಾದ ಕ್ಷೇತ್ರದ ಮಂದಿರದ ಕೆಲಸ ಕಾರ್ಯಗಳಲ್ಲಿ ಎಲ್ಲರೂ ಭಾಗವಹಿಸಿ, ಕ್ಷೇತ್ರವನ್ನು ನಮ್ಮ ಪೀಳಿಗೆಗಳಲ್ಲೂ ಅಜರಾಮರವಾಗಿರಿಸುವಲ್ಲಿ ಎಲ್ಲರ ಸಹಕಾರ ಯಾಚಿಸಿದರು.

Advertisement

ಪ್ರಾರಂಭದಲ್ಲಿ ಮಂದಿರದ ಗೌರವ ಕಾರ್ಯದರ್ಶಿ ಎಸ್‌. ಕೆ. ಕೋಟ್ಯಾನ್‌ ಮಂದಿರವು ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಇತರರಾಗಿ ಅಭ್ಯುದಯ ಬ್ಯಾಂಕ್‌ನ ಎಂಡಿ ಪ್ರೇಮನಾಥ ಸಾಲ್ಯಾನ್‌, ಮೀರಾ ಭಾಯಂದರ್‌ನ ತುಳು-ಕನ್ನಡ ಅಸೋಸಿಯೇಶನ್‌ನ ಅಧ್ಯಕ್ಷ ಎ. ಕೆ. ಹರೀಶ್‌, ಮೀರಾ ಭಾಯಂದರ್‌ ಬಿಜೆಪಿ ನಾಯಕಿ ಶಾಲಿನಿ ಎಸ್‌. ಶೆಟ್ಟಿ, ಸಾಹಿಲಿ ಸುನೀಲ್‌ ಪ್ರಭು ಆಸೀನರಾಗಿದ್ದರು. ಗಣೇಶ್‌ ಕುಂದರ್‌, ನರೇಶ್‌ ಕೋಟ್ಯಾನ್‌, ಗೋಪಾಲ್‌ ಬಿ. ಕೋಟ್ಯಾನ್‌, ಮುರಳೀಧರ್‌ ಐ. ಪೂಜಾರಿ, ರಮೇಶ್‌ ಶೆಟ್ಟಿ, ಬಾಬು ಸುವರ್ಣ, ಗೀತಾ ಜತ್ತನ್‌, ದೇವು ಬಿ. ಕೋಟ್ಯಾನ್‌, ಆಶಾ ಆರ್‌. ಕೊಟ್ಟಾರಿ, ವತ್ಸಲಾ ಕೋಟ್ಯಾನ್‌, ಲತಾ ಕುಂದರ್‌, ಕಲಾವತಿ ಕೋಟ್ಯಾನ್‌, ರೇಖಾ ಜತ್ತನ್‌ ಹಾಗೂ ಮಂದಿರದ ಸಮಿತಿ ಸದಸ್ಯರು ಸಹಕರಿಸಿದರು.

ಆರಂಭದಲ್ಲಿ ನಾರಾಯಣ್‌ ರಾವ್‌ ನೇತೃತ್ವದ ಬಳಗದವರಿಂದ ಮೆಲೋಡಿ ಬೀಟ್ಸ್‌ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಮಂದಿರದ ಅಧ್ಯಕ್ಷ ರಘುನಾಥ್‌ ಕೊಟ್ಟಾರಿ ಧನ್ಯವಾದ ಗೈದರೆ, ಪತ್ರಕರ್ತ ವೈ. ಟಿ. ಶೆಟ್ಟಿ ಹೆಜಮಾಡಿ ಮತ್ತು ಕಮಲೇಶ್‌ ಅವರು ನಿರೂಪಿಸಿದರು. 3 ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕಲಾಪಗಳು ಶಂಕರನಾರಾಯಣ ತಂತ್ರಿ ಮತ್ತು ರಾಘವೇಂದ್ರ ಭಟ್‌ ಪೌರೋಹಿತ್ಯದಲ್ಲಿ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next