Advertisement

ಸರ್ಕಾರಿ ಶಾಲೆಯಲ್ಲಿ ಶಿಕ್ಷಣಕ್ಕೆ ಸಂಕಲ್ಪ ಮಾಡಿ

01:33 PM Aug 28, 2019 | Suhan S |

ಚನ್ನಪಟ್ಟಣ: ಗ್ರಾಮೀಣ ಭಾಗದ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಓದಿಸುವ ದೃಢ ಸಂಕಲ್ಪ ಮಾಡಬೇಕು ಎಂದು ನುಣ್ಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚಂದ್ರು ಮನವಿ ಮಾಡಿದರು.

Advertisement

ತಾಲೂಕಿನ ನುಣ್ಣೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಕೊರತೆಯಿಂದ ಕರ್ನಾಟಕದ ವಿವಿಧೆಡೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಹಳ್ಳಿಗಾಡಿನಲ್ಲಿಯೂ ಖಾಸಗಿ ಶಾಲೆಗಳ ಭರಾಟೆ ಹೆಚ್ಚಾಗುತ್ತಿದೆ. ಕೆಲವು ಪೋಷಕರು ಉಳ್ಳವರನ್ನು ಅನುಕರಣೆ ಮಾಡಲೋ, ಪ್ರತಿಷ್ಟೆಗಾಗಿಯೋ ಅಥವಾ ಖಾಸಗಿ ಶಾಲೆಗಳ ಅಬ್ಬರದ ಪ್ರಚಾರಕ್ಕೆ ಮರುಳಾಗಿಯೋ ತಮ್ಮ ಮಕ್ಕಳನ್ನು ಸಾಲ ಮಾಡಿ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಾರೆ. ಆನಂತರ ತಮ್ಮ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಭರಿಸಲು ಇನ್ನಿಲ್ಲದ ಪರದಾಟ ಮಾಡುವುದನ್ನು ಕಾಣುತ್ತಿದ್ದೇವೆ. ಯಾವ ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳು ಕಡಿಮೆಯಲ್ಲ. ವಿದ್ಯಾರ್ಥಿಗಳ ಅಭಿವೃದ್ಧಿಗೆ ಬೇಕಾದ ಎಲ್ಲಾ ಅನುಕೂಲಗಳು ಇಂದು ಸರ್ಕಾರಿ ಶಾಲೆಗಳಲ್ಲಿ ಇವೆ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ಗ್ರಾಮೀಣರಲ್ಲಿ ತಪ್ಪು ಕಲ್ಪನೆ ಬೇಡ: ನಿವೃತ್ತ ಸರ್ಕಾರಿ ಅಧಿಕಾರಿ ದೊಡ್ಡಕೆಂಪೇಗೌಡ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಓದಿದ ಮಕ್ಕಳು ದೊಡ್ಡ ವ್ಯಕ್ತಿಗಳಾಗುತ್ತಾರೆ. ಉಳಿದವರು ಹಿಂದುಳಿಯುತ್ತಾರೆ ಎಂಬ ತಪ್ಪು ಕಲ್ಪನೆ ನಮ್ಮ ಗ್ರಾಮೀಣ ಭಾಗದಲ್ಲಿಯೂ ಇಂದು ಹೆಚ್ಚಾಗುತ್ತಿದೆ. ಇದರ ಪರಿಣಾಮ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ, ವಾಸ್ತವ ಸ್ಥಿತಿಯೇ ಬೇರೆಯೇ ಇದೆ. ನಾವು ಸರ್ಕಾರಿ ಶಾಲೆಗಳಲ್ಲಿಯೇ ಓದಿ, ಹುದ್ದೆಗಳನ್ನು ಪಡೆದುಕೊಂಡು ನಿಮ್ಮ ಕಣ್ಣ ಮುಂದೆಯೇ ಉತ್ತಮ ಉದಾಹರಣೆಗಳಾಗಿ ನಿಂತಿದ್ದೇವೆ ಎಂಬುದನ್ನು ನಮ್ಮ ಗ್ರಾಮೀಣ ಪೋಷಕರು ಮನಗಾಣಬೇಕು ಎಂದು ತಿಳಿಸಿದರು.

ಪರಿಶ್ರಮದಿಂದ ಶೈಕ್ಷಣಿಕ ಸಾಧನೆ ಸಾಧ್ಯ: ಉಪನ್ಯಾಸಕ ಎನ್‌.ಟಿ.ರಾಮಚಂದ್ರ ಮಾತನಾಡಿ, ಕಳೆದ ಸಾಲಿನ ಎಸ್‌ಎಸ್‌ಎಲ್ಸಿಯಲ್ಲಿ ನಮ್ಮ ಜಿಲ್ಲೆ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ವಿದ್ಯಾರ್ಥಿಗಳ ಶ್ರದ್ಧೆ, ಸರ್ಕಾರಿ ಶಾಲಾ ಶಿಕ್ಷಕರ ಅರ್ಪಣಾಭಾವ, ಅಧಿಕಾರಿ ವರ್ಗದವರ ಸಹಕಾರ, ಪೋಷಕರ ಪ್ರೋತ್ಸಾಹ ಹಾಗೂ ಇಡೀ ಜಿಲ್ಲಾಡಳಿತದ ಪರಿಶ್ರಮದ ಫಲವಾಗಿ ರಾಮನಗರ ಜಿಲ್ಲೆ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನುಣ್ಣೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಬಹುಮಾನ ವಿತರಿಸಲಾಯಿತು.

Advertisement

ಈ ವೇಳೆ ಎಂಪಿಸಿಎಸ್‌ ಅಧ್ಯಕ್ಷ ಚಂದ್ರು, ಕಾರ್ಯದರ್ಶಿ ನಾಗರಾಜು, ಎಸ್‌ಡಿಎಂಸಿ ಅಧ್ಯಕ್ಷ ನಿಂಗಾಚಾರಿ ಹಾಗೂ ಸದಸ್ಯರು, ಕ್ಷೇತ್ರ ಸಮನ್ವಯಾಧಿಕಾರಿ ಕುಸುಮ ಲತಾ, ಸಿಆರ್‌ಪಿ ಕೆ.ವೆಂಕಟೇಶ್‌, ಮುಖ್ಯ ಶಿಕ್ಷಕಿ ಪಾರ್ವತಮ್ಮ, ಸಹ ಶಿಕ್ಷಕಿ ಲಕ್ಷೀದೇವಮ್ಮ, ಗ್ರಾಪಂ ಸದಸ್ಯ ಎನ್‌.ಆರ್‌. ರವಿ, ಮಾಜಿ ಸದಸ್ಯ ಎನ್‌.ಎಲ್.ಶಿವಕುಮಾರ್‌, ಮುಖಂಡ ಪೊಲೀಸ್‌ ಕೃಷ್ಣೇಗೌಡ, ಹಾರೋಕೊಪ್ಪ ಕ್ಲಸ್ಟರ್‌ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next