ಬಸವನಬಾಗೇವಾಡಿ: ಸರಕಾರದ ತೊಗರಿ ಖರೀದಿ ಕೇಂದ್ರದಲ್ಲಿ ತೊಗರಿ ಮಾರಾಟ ಮಾಡಿದ ರೈತರ ಖಾತೆಗೆ
ಹಣ ಜಮೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದ ಪ್ರಮುಖ ರಸ್ತೆಯಿಂದ ಬೈಕ್ ರ್ಯಾಲಿ ನಡೆಸಿದ ಕಾರ್ಯಕರ್ತರು
ತಹಶೀಲ್ದಾರ್ ಕಚೇರಿ ಮುಂಭಾಗದ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ
ರಸ್ತೆ ತಡೆ ನಡೆಸಿದರು. ನಂತರ ಸ್ಥಳಕ್ಕೆ ಬಂದ ಶಿರಸ್ತೇದಾರ್ ಕಲಾಲ್ ಅವರಿಗೆ ಮನವಿ ಸಲ್ಲಿಸಿದರು. ನಂತರ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಕರವೇ ತಾಲೂಕು ಘಟಕದ ಅಧ್ಯಕ್ಷ ಅಶೋಕ ಹಾರಿವಾಳ, ಜಿಲ್ಲಾ ಘಟಕದ ಉಪಾಧ್ಯಕ್ಷ ಕಲ್ಲು ಸೊನ್ನದ, ಸಿದ್ದು ಮೇಟಿ ಮಾತನಾಡಿ, ತಾಲೂಕಿನ ರೈತರು ಖರೀದಿ ಕೇಂದ್ರದಲ್ಲಿ ತೊಗರಿ ಮಾರಾಟ ಮಾಡಿದ್ದಾರೆ. ಮಾರಾಟ ಮಾಡಿದ ಅರ್ಧದಷ್ಟು ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದ್ದರೇ ಇನ್ನೂ ಅರ್ಧದಷ್ಟು ಹಣ ಜಮೆಯಾಗಿಲ್ಲ.
ರೈತರ ಬಳಿಯಿದ್ದ ಹಣವನ್ನು ಮುಂಗಾರು ಕೃಷಿ ಚಟುವಟಿಕೆಗೆ ಖರ್ಚು ಮಾಡಿಕೊಂಡಿದ್ದಾರೆ. ಸದ್ಯ ಕೈಯಲ್ಲಿ ಬಿಡಿಗಾಸು ಇಲ್ಲದೇ ಇರುವುದರಿಂದ ಮುಂದಿನ ಕೃಷಿ ಚಟುವಟಿಕೆ ಹಾಗೂ ಜೀವನ ನಿರ್ವಹಣೆಗಾಗಿ ತೊಂದರೆ ಅನುಭವಿಸುವ ಸ್ಥಿತಿ ಒದಗಿದೆ. ತಕ್ಷಣ ರೈತರ ಖಾತೆಗೆ ಹಣ ಜಮೆ ಯಾಗುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕರವೇ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಉಮೇಶ ಅವಟಿ, ರಫಿಕ್ ಜೈನಾಪುರ, ಸಂತೋಷ ಕೂಡಗಿ, ಭೀಮು ನಿಕ್ಕಂ, ಶ್ರೀಶೈಲ ಹೆಬ್ಟಾಳ, ಪ್ರದೀಪ ಗೊಳಸಂಗಿ, ಅಬ್ಬು ಚೌದ್ರಿ, ಸುಭಾಷ್ ಬೂದಗೊಳ, ರವಿ ವಡ್ಡರ, ಉಮೇಶ ವಾಲೀಕಾರ, ಸುರೇಶ ಚವ್ಹಾಣ, ರಾಮನಗೌಡ ಬಿರಾದಾರ, ಹನುಮಂತ್ರಾಯಗೌಡ ಪಾಟೀಲ, ನರಸಪ್ಪ ವಾಲೀಕಾರ, ವಿಜಯಕುಮಾರ ಯಂಭತ್ನಾಳ, ರಾಜು ರಾಠೊಡ, ಸತೀಶ ನರಸರಡ್ಡಿ, ಬೂತಾಳಿ ಪೂಜಾರಿ, ಮಹಾಂತೇಶ ಚಕ್ರವರ್ತಿ, ಸಲಿಂ ನಂದವಾಡಗಿ ಇದ್ದರು.