Advertisement

ಸರ್ಕಾರಿ, ಖಾಸಗಿ ಶಾಲೆಯಲ್ಲೂ ಏಕ ರೂಪ ಶಿಕ್ಷಣ ಜಾರಿಯಾಗಲಿ

07:35 AM Feb 17, 2019 | Team Udayavani |

* ಸಾಹಿತ್ಯ ಸಮ್ಮೇಳನಗಳು ಏಕೆ ಬೇಕು? ಸಮ್ಮೇಳನಗಳ ಅವಶ್ಯಕತೆ ಇದೆಯೇ?
ಡಾ.ಎಸ್‌.ಶಿವರಾಜಪ್ಪ:
ದೈನಂದಿನ ಚಟುವಟಿಕೆಗಳಿಗೆ ನಮಗೆ ಅನ್ನ ಆಹಾರ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಸಾಹಿತ್ಯ, ಜೀವನದಲ್ಲಿ ನಾಡು, ನುಡಿ, ಸಂಸ್ಕೃತಿ ಬಹಳ ಮುಖ್ಯವಾದವು. ಸಾಹಿತ್ಯ ಇರುವುದೇ ಮಾನವೀಯ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ. ಹೀಗಿರುವಾಗ ಸಾಹಿತ್ಯದ ಬಗ್ಗೆ ಚರ್ಚಿಸುವ ವೇದಿಕೆಯಾದ ಸಾಹಿತ್ಯ ಸಮ್ಮೇಳನಗಳು ಅವಶ್ಯಕ. ನಾಡು ನುಡಿಯ ಬಗ್ಗೆ ಒಲವುಳ್ಳವರು, ಸಾಹಿತ್ಯ ಪ್ರೇಮಿಗಳು, ಸಾಮಾನ್ಯ ಜನರು, ಸಾಹಿತ್ಯ ಸಂಸ್ಕೃತಿ, ಬಗ್ಗೆ ತಿಳಿದುಕೊಳ್ಳಲು, ಸಾಹಿತ್ಯ ಸಮ್ಮೇಳನಗಳು ಅವಶ್ಯಕ. ಕೇವಲ ಸಾಹಿತ್ಯ ಮಾತ್ರವಲ್ಲದೇ ಒಂದು ನಾಡಿನ, ಜಿಲ್ಲೆಯ ಜನರ ಸಮಸ್ಯೆಗಳು ಕೂಡ ಸಮ್ಮೇಳನದಲ್ಲಿ ಚರ್ಚೆಯಾಗುತ್ತದೆ. ಈ ಚರ್ಚೆಗಳು ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಸಹಾಯಕವಾಗುತ್ತದೆ.

Advertisement

* ಸಾಹಿತ್ಯದಿಂದ ಜನ ವಿಮುಖರಾಗುತ್ತಿದ್ದಾರೆ, ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತುಗಳಿವೆಯಲ್ಲ?
ಡಾ.ಶಿವರಾಜಪ್ಪ: 
ಜನರು ಸಾಹಿತ್ಯದಿಂದ ವಿಮುಖರಾಗುತ್ತಿಲ್ಲ. ಆದರೆ, ಜನರು ಓದುವಂಥ ಸಾಹಿತ್ಯ ಬರೆಯಬೇಕು. ಜನರಿಗೆ ಮೌಲ್ಯಗಳನ್ನು ತಿಳಿಸುವ ಸಾಹಿತ್ಯ ಬೇಕಾಗಿದೆ. ಉತ್ತಮ ಸಾಹಿತ್ಯ ಬಂದರೆ ಜನರು ಈಗಲೂ ಓದುತ್ತಿದ್ದಾರೆ. ಪ್ರಖ್ಯಾತ ಸಾಹಿತಿಗಳ ಪುಸ್ತಕಗಳು ಹೆಚ್ಚು ಮುದ್ರಣವಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಜನರಿಗೆ ಸಾಹಿತ್ಯದ ಬಗ್ಗೆ ಒಲವು ಇದ್ದೇ ಇದೆ. ಜನಮುಖೀಯಾದ ಸಾಹಿತ್ಯ ಬರವಣಿಗೆ ಕಡಿಮೆಯಾಗಿರುವುದರಿಂದ ಓದುವಿಕೆ ಸ್ವಲ್ಪ ಕಡಿಮೆಯಾಗಿರಬಹುದು. ಸಾಹಿತ್ಯ ಒಂದೇ ಅಲ್ಲ ಎಲ್ಲದರ ಬಗ್ಗೆಯೂ ಮೊದಲಿನಿಂದಲೂ ಇದೇ ಮಾತುಗಳಿವೆ. 

* ಸಾಹಿತ್ಯ ಸಮ್ಮೇಳನಗಳು ಕೇವಲ ಜಾತ್ರೆಗಳಾಗುತ್ತಿವೆ. ಇದರಿಂದ ಸಾಹಿತ್ಯಕ್ಕೆ ಏನೂ ಪ್ರಯೋಜನವಿಲ್ಲ ಎಂಬ ಆರೋಪಗಳಿವೆ?
ಡಾ.ಶಿವರಾಜಪ್ಪ: 
ಸಾಹಿತ್ಯ ಸಮ್ಮೇಳನಗಳು ಜಾತ್ರೆ ಎಂಬುದನ್ನು ಒಪ್ಪುತ್ತೇನೆ. ಸಮ್ಮೇಳನಗಳು ಹಾಗೆಯೇ ನಡೆಯಬೇಕು. ಜನರು ಜಾತ್ರೆಗೆ ಬರುವ ರೀತಿಯಲ್ಲಿ ಸಮ್ಮೇಳನಕ್ಕೆ ಬರಬೇಕು. ನೆಗಡಿ ಎಂದು ಮೂಗು ಕತ್ತರಿಸಲಾಗುವುದಿಲ್ಲ. ಪರಿಹಾರದ ದಿಕ್ಕಿನಲ್ಲಿ ಪ್ರಯತ್ನಶೀಲರಾಗಬೇಕೇ ಹೊರತು. ಅದು ಬೇಡವೇ ಬೇಡ ಎನ್ನುವುದು ಸರಿಯಲ್ಲ. ನಮ್ಮ ಭಾಷೆ ವಿಜೃಂಭಿಸಬೇಕು. ಚಾಮರಾಜನಗರ ಜಿಲ್ಲೆ ಜನಪದ ಸಾಹಿತ್ಯದಲ್ಲಿ ಖಜಾನೆ ಇದ್ದಂತೆ. ಮಹದೇಶ್ವರ ಕಾವ್ಯ, ಮಂಟೇಸ್ವಾಮಿ ಕಾವ್ಯ, ಸಿದ್ದಪ್ಪಾಜಿ ಕಾವ್ಯಗಳಿವೆ. ಇದನ್ನು ದೇಶಕ್ಕೇ ಹಂಚಬಹುದು. ಅವರೇ ಸಾಹಿತ್ಯವಾದರು. ಅವರ ಬದುಕೇ ಸಾಹಿತ್ಯವಾಯಿತು. ಇಂತಲ್ಲಿ ಸಾಹಿತ್ಯ ಜಾತ್ರೆ ನಡೆಯಬೇಕು.

* ಕನ್ನಡ ಮಾಧ್ಯಮ ಶಾಲೆಗಳು ಕಡಿಮೆಯಾಗುತ್ತಿವೆ. ರಾಜ್ಯ ಸರ್ಕಾರವೇ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ತೆರೆಯಲು ಹೊರಟಿದೆ?
ಡಾ. ಶಿವರಾಜಪ್ಪ: 
ರಾಜ್ಯದಲ್ಲಿ ಏಕರೂಪ ಶಿಕ್ಷಣ ಬರಬೇಕು. ಸರ್ಕಾರಿ ಶಾಲೆಯಲ್ಲಿ, ಖಾಸಗಿ ಶಾಲೆಯಲ್ಲೂ ಒಂದೇ ರೀತಿ ಶಿಕ್ಷಣ ಇರಬೇಕು. ಎಲ್ಲ ಶಾಲೆಗಳಲ್ಲೂ 1 ರಿಂದ 5ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಇರಬೇಕು. ಇಂಗ್ಲಿಷ್‌ ಇರಲೇಬಾರದು. 5ನೇ ತರಗತಿ ನಂತರ ಬೇಕಾದರೆ ಇಂಗ್ಲಿಷ್‌ ಕಲಿಸಲಿ. ಈ ಮಾದರಿಯನ್ನು ಅನುಷ್ಠಾನಕ್ಕೆ ತಂದರೆ ಕನ್ನಡಕ್ಕೂ ಒಳಿತು. ಮಕ್ಕಳ ವ್ಯಾಸಂಗಕ್ಕೂ ಒಳಿತು.

* ಚಾಮರಾಜನಗರದ ಗಡಿಯಲ್ಲಿರುವ ತಾಳವಾಡಿ ಕನ್ನಡಿಗರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರವೇನು?
ಡಾ.ಶಿವರಾಜಪ್ಪ: 
ತಾಳವಾಡಿ ಕನ್ನಡಿಗರ ಪರಿಸ್ಥಿತಿ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು. ಸರ್ಕಾರ ನಾಡಿನ ಶಾಲೆಗಳಿಗಿಂತ ಗಡಿನಾಡ ಶಾಲೆಗಳಿಗೆ ಎರಡರಷ್ಟು ಆಸಕ್ತಿ ವಹಿಸಬೇಕು. ಅಲ್ಲಿನ ಕನ್ನಡಿಗರು ತಮ್ಮ ಸಮಸ್ಯೆಯನ್ನು ಅಲ್ಲಿ ಹೇಳಿಕೊಳ್ಳಲಾಗುವುದಿಲ್ಲ. ನಾವೆಲ್ಲ ಅವರಿಗೆ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಸಮನ್ವಯ ಸಭೆ ನಡೆಸಬೇಕು. ತಾಳವಾಡಿಯಂಥ ಪ್ರದೇಶಗಳಲ್ಲಿ ಮುಂದಿನ ಪೀಳಿಗೆಗೂ ಕನ್ನಡ ಉಳಿಯುವ ಕೆಲಸ ಮಾಡಬೇಕು. 

Advertisement

* ಕನ್ನಡಿಗರು ನಿರಭಿಮಾನಿಗಳು, ಪರಭಾಷಿಕರ ಜೊತೆ ಕನ್ನಡದಲ್ಲಿ ವ್ಯವಹರಿಸುವುದಿಲ್ಲ ಎಂಬ ಮಾತಿದೆ. ಇದಕ್ಕೆ ಪರಿಹಾರ ಹೇಗೆ?
ಡಾ.ಶಿವರಾಜಪ್ಪ: 
ಪರಭಾಷಿಗರು ಕನ್ನಡ ಕಲಿಯಲು ಗಡುವು ನೀಡಬೇಕು. ಕನ್ನಡ ಬಳಸದಿದ್ದರೆ ಗಡಿಪಾರು ಮಾಡಬೇಕು. ನಮ್ಮ ನಾಡಿನಲ್ಲಿದ್ದಾಗ ಕನ್ನಡಿಗರು ಪರಭಾಷಿಗರ ಜೊತೆ ಕನ್ನಡದಲ್ಲೇ ಮಾತನಾಡಬೇಕು. ಕನ್ನಡಿಗರಿಗೆ ಸಮ್ಮೇಳನಗಳ ಮೂಲಕ, ಸಮಾವೇಶದ ಮೂಲಕ ಸ್ವಾಭಿಮಾನದ ಅರಿವು ಜಾಗೃತಿ ಮೂಡಿಸಲು.

* ಜಿಲ್ಲೆಯಲ್ಲಿ ನೆಲೆಸದೇ ಇಲ್ಲಿನ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳದೇ ಮೈಸೂರಿನಲ್ಲಿರುವವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂಬ ದೂರುಗಳಿವೆ…
ಡಾ.ಶಿವರಾಜಪ್ಪ: ವೃತ್ತಿಯ ಸಲುವಾಗಿ, ಜೀವನೋಪಾಯಕ್ಕಾಗಿ ನಾನು ಮೈಸೂರಿಗೆ ಬಂದಿದ್ದೇನೆಯೇ ಹೊರತು, ನನ್ನ ಊರನ್ನಾಗಲೀ, ಜಿಲ್ಲೆಯನ್ನಾಗಲೀ ಯಾವತ್ತೂ ಮರೆತಿಲ್ಲ. ಹನೂರು ತಾಲೂಕಿನ ಗಂಗಾಧರನಕಟ್ಟೆ ಹೊಸೂರು ನನ್ನೂರು. ಇದು ಲೊಕ್ಕನಹಳ್ಳಿ ಉದ್ದನೂರು ಮಧ್ಯ ಇದೆ.

ಮಹದೇಶ್ವರ ಬೆಟ್ಟ ದೇವಸ್ಥಾನದಿಂದ ಹೊರತರುವ ಮಹದೇಶ್ವರ ದರ್ಶನ ಮಾಸಪತ್ರಿಕೆಗೆ 20 ವರ್ಷಗಳಿಂದ ಸಂಪಾದಕನಾಗಿದ್ದೇನೆ. ಚಾಮರಾಜನಗರ ಜಿಲ್ಲೆಯಲ್ಲೂ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ನಾನೆಲ್ಲೇ ಇದ್ದರೂ ನಮ್ಮೂರಿನ ಬಗ್ಗೆ ಸೆಳೆತ ಇದ್ದೇ ಇರುತ್ತದೆ. ಜಿಲ್ಲೆಯ ಬಗ್ಗೆ ಹೆಚ್ಚಿನ ಒಡನಾಟ ಇಟ್ಟುಕೊಂಡವನು ನಾನು. ಎಲ್ಲೇ ಇದ್ದರೂ ಚಾಮರಾಜನಗರ ಜಿಲ್ಲೆಯವನೇ.

* ಸಂದರ್ಶನ: ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next