Advertisement

ಹಲವು ಅಚ್ಚರಿಗಳ ಆಚರಣೆ ಮಕರ ಸಂಕ್ರಾಂತಿ

12:03 AM Jan 14, 2023 | Team Udayavani |

ಮಾನವ ಉತ್ಸವಪ್ರಿಯ. ದೇವತಾ ಉತ್ಸವಗಳನ್ನು ನಡೆಸುವುದು, ಹಬ್ಬಹರಿದಿನಗಳನ್ನು ಆಚರಿಸುವುದು ಎಂದರೆ ಎಲ್ಲಿಲ್ಲದ ಸಡಗರ. ಆದ್ದರಿಂದಲೇ ಕಾಳಿದಾಸ ಉತ್ಸವಪ್ರಿಯಾಃ ಖಲು ಮನುಷ್ಯಾಃ ಎಂದಿದ್ದಾನೆ.ನಾವು ಆಚರಿಸುವ ಉತ್ಸವಗಳಾಗಲಿ, ಹಬ್ಬಗಳಾಗಲಿ ವಿಶೇಷ ಅರ್ಥವನ್ನೊಳಗೊಂಡಿದೆ, ಪ್ರಾಕೃತಿಕ ಸಂಬಂಧ ವಿದೆ. ಅಧ್ಯಾತ್ಮದ ಹಿನ್ನೆಲೆಯಿದೆ. ವೈಜ್ಞಾನಿಕ ಪರಿಕಲ್ಪನೆ ಯಿದೆ. ಸುಸಂಸ್ಕೃತ ಮನುಕುಲದ ಹಂಬಲವಿದೆ. ಪಶುತ್ವ ವನ್ನು ಕಳೆದು ಮಾನವತ್ವದಿಂದ ದೈವತ್ವಕ್ಕೇ ರಿಸುವ ಉದಾತ್ತ ಭಾವವಿದೆ. ಪ್ರಾಕೃತಿಕ ಬದಲಾವಣೆಯನ್ನು ಗುರುತಿಸಿ ಅದು ಮನುಕುಲದ ಮೇಲೆ ಬೀರುವ ಪ್ರಭಾವವನ್ನು ನೆನಪಿಸುವು ದಕ್ಕಾಗಿ ಹಬ್ಬಗಳನ್ನು ಆಚರಿಸು ತ್ತೇವೆ. ಸಂಕ್ರಾಂತಿಯು ಸೌರ ಮಂಡಲದಲ್ಲಿ ಆಗುವ ಬದಲಾ ವಣೆ. ಆದ್ದರಿಂದ ಇದು ಸೌರ ಮಾನದ ಹಬ್ಬ. ಅದರಲ್ಲಿಯೂ ಮಕರ ಸಂಕ್ರಾಂತಿಯೆಂದರೆ ಬಹುವಿಶೇಷ. ಇಂದಿನಿಂದ ಉತ್ತರಾ ಯಣ ಪುಣ್ಯಕಾಲ ಆರಂಭ.

Advertisement

ಭಾರತೀಯರಾದ ನಾವು ಎರಡು ರೀತಿಯಲ್ಲಿ ಕಾಲ ಗಣನೆ ಮಾಡುತ್ತೇವೆ. ಸೂರ್ಯನ ಚಲನೆಯನ್ನು ಅನು ಲಕ್ಷಿಸಿ ಮಾಡುವ ಕಾಲಗಣನೆ ಸೌರಮಾನ ಪದ್ಧತಿ. ಚಂದ್ರನ ಚಲನೆಯನ್ನು ಗುರುತಿಸುವುದು ಚಾಂದ್ರಮಾನ ಪದ್ಧತಿ. ಚಂದ್ರನ ಚಲನೆಯನ್ನು ಚೈತ್ರಾದಿ ಮಾಸಗಳ ಮೂಲಕ ಲೆಕ್ಕಹಾಕುತ್ತೇವೆ. ಸೂರ್ಯನ ಸಂಚಾರವನ್ನು ಮೇಷಾದಿ ರಾಶಿಗಳ ಮೂಲಕ ಗುರುತಿಸುತ್ತೇವೆ.

ಸೌರಮಾನದ ಪ್ರಕಾರ ಸಂಕ್ರಾಂತಿ ಬರುತ್ತದೆ. ಒಂದು ರಾಶಿಯಲ್ಲಿ ಮೂವತ್ತು ದಿನಗಳ ಕಾಲವಿದ್ದು ಅನಂತರ ಮುಂದಿನ ರಾಶಿಗೆ ಸೂರ್ಯನು ಸಂಕ್ರಮಿಸುತ್ತಾನೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗುವ ಸಂಧಿಕಾಲವೇ ಸಂಕ್ರಾಂತಿ. ತಿಂಗಳಿಗೊಮ್ಮೆ ರಾಶಿ ಬದಲಿಸುವುದರಿಂದ ವರ್ಷಕ್ಕೆ ಹನ್ನೆರಡು ಸಂಕ್ರಾಂತಿಗಳು ಬರುತ್ತವೆ. ಇದರಲ್ಲಿ ಪ್ರಸಿದ್ಧವಾದುದು ಮಕರ ಸಂಕ್ರಾಂತಿ ಹಾಗೂ ಕರ್ಕ ಸಂಕ್ರಾಂತಿ. ಮಕರ ಸಂಕ್ರಾಂತಿಯಿಂದ ಆರು ತಿಂಗಳುಗಳ ಕಾಲ ಉತ್ತರಾಯಣವೆಂದು ಕರ್ಕ ಸಂಕ್ರಾಂತಿಯಿಂದ ಆರು ತಿಂಗಳುಗಳ ಕಾಲ ದಕ್ಷಿಣಾಯನವೆಂದೂ ಕರೆಯುತ್ತಾರೆ.

ಭೂಮಧ್ಯ ರೇಖೆಯ ದಕ್ಷಿಣದಲ್ಲಿ ಸಂಚರಿಸುವ ಸೂರ್ಯ ಮಕರ ಸಂಕ್ರ ಮಣದಂದು ತನ್ನ ಪಥವನ್ನು ಬದಲಿಸಿ ಉತ್ತರಾಭಿಮುಖ ವಾಗಿ ಸಾಗುತ್ತಾನೆ. ಇದರಿಂದಾಗಿ ಉತ್ತರ ಭಾಗದಲ್ಲಿ ಚಳಿಯು ಕಡಿಮೆ ಯಾಗಿ ಉಷ್ಣತೆ ಜಾಸ್ತಿಯಾಗುತ್ತದೆ. ಹಗಲು ದೊಡ್ಡದಾಗುತ್ತದೆ. ಪ್ರಕೃತಿಯ ಮಡಿಲಲ್ಲಿ ಬೆಳೆದುನಿಂತ ಧಾನ್ಯಾದಿಗಳು ಮನೆಸೇರಿ ಧಾನ್ಯ ಲಕ್ಷ್ಮೀಯ ಆವಾಸಸ್ಥಾನವಾಗುತ್ತದೆ. ಹೆಚ್ಚಿನ ಪರಿಶ್ರಮಕ್ಕೂ, ಅಧ್ಯಯನಕ್ಕೂ, ಸಾಧನೆಗೂ ಪ್ರಶಸ್ತ ಕಾಲವೆನಿಸುತ್ತದೆ.

ಉತ್ತರಾಯಣ ಪುಣ್ಯಕಾಲವೆಂದೇ ಪ್ರಸಿದ್ಧಿ. ಸ್ವರ್ಗದ ಬಾಗಿಲು ತೆರೆಯಲ್ಪಡುವುದು ಉತ್ತರಾಯಣದಲ್ಲಿ. ಉತ್ತರಾಯಣದಲ್ಲಿ ತೀರಿಕೊಂಡರೆ ಮೋಕ್ಷ ಪ್ರಾಪ್ತಿ, ಸ್ವರ್ಗ ಪ್ರಾಪ್ತಿ ಎನ್ನುತ್ತಾರೆ. ಕುರುಕ್ಷೇತ್ರದ ರಣಾಂಗಣದಲ್ಲಿ ಶರಶಯೆಯಲ್ಲಿ ಮಲಗಿದ್ದ ಭೀಷ್ಮನು ಉತ್ತರಾಯಣ ವನ್ನು ಕಾಯುತ್ತಿದ್ದು ಇಚ್ಛಾಮರಣಿಯಾದ ಅವನು ಉತ್ತರಾಯಣದಲ್ಲಿ ಪ್ರಾಣ ತ್ಯಾಗ ಮಾಡಿದ. ಉತ್ತರಾಯಣದಲ್ಲಿ ದೇವತೆಗಳಿಗೆ ಹಗಲು, ರಾಕ್ಷಸರಿಗೆ ಕತ್ತಲೆ ಎಂಬುದು ಪುರಾಣದಲ್ಲಿದೆ.

Advertisement

ಮಕರ ಸಂಕ್ರಾಂತಿ ಸೂರ್ಯನನ್ನು ಪ್ರಧಾನವಾಗಿರಿಸಿ ಆಚರಿಸುವ ಹಬ್ಬ. ಸೂರ್ಯ ಚಂದ್ರರು ಪ್ರತ್ಯಕ್ಷವಾಗಿ ಕಣ್ಣಿಗೆ ಕಾಣುವ ದೇವರುಗಳು. ಸೂರ್ಯ ಚರಾಚರ ಪ್ರಕೃತಿಯಲ್ಲಿ ಚೈತನ್ಯ ತುಂಬುವ ದೇವರು. “ಸೂರ್ಯ ಆತ್ಮಾ ಜಗತಸ್ತಸುತಶ್ಚ’ – ಸೂರ್ಯ ಸ್ಥಾವರ ಜಂಗಮಗಳ ಆತ್ಮ ಹಾಗೂ ಜಗತ್ತಿನ ಕಣ್ಣು. “ಹೃದ್ರೋಗಂ ಮಮ ಸೂರ್ಯ ಹರಿಮಾಣಂ ಚ ನಾಶಯ’ – ಹೃದ್ರೋಗದ ನಿವಾರಣೆಗಾಗಿ ಆಸ್ತಿಕ ಪ್ರಪಂಚ ಸೂರ್ಯನನ್ನು ಪ್ರಾರ್ಥಿಸುತ್ತದೆ. ಸರ್ವ ರೋಗಗಳ ನಿವಾರಣೆಗಾಗಿ ಆಸನಗಳ ರಾಜ ಸೂರ್ಯ ನಮ ಸ್ಕಾರವನ್ನು ಮಾಡುತ್ತೇವೆ. ಲೋಕದ ಬೌದ್ಧಿಕ ವಿಕಾಸ ಕ್ಕಾಗಿ “ಗಾಯತ್ರಿ ಮಂತ್ರ’ವನ್ನು ಪಠಿಸುತ್ತೇವೆ. ಮಗುವಿನ ಶರೀರದಲ್ಲಿ ವಿಟಮಿನ್‌ ವರ್ಧನೆಗೆ ಎಳೆಬಿಸಿಲು ಬೇಕು.
ಹೀಗಾಗಿ ನಿಸರ್ಗದ ದಿವ್ಯ ಆರಾಧನೆಯಲ್ಲಿ ಸೂರ್ಯನಿಗೆ ಮುಖ್ಯವಾದ ಸ್ಥಾನ. ಪ್ರಾಚೀನ ಯಾವ ಮತ-ಸಿದ್ಧಾಂತ ಗಳೂ ಸೂರ್ಯನನ್ನು ಬಿಟ್ಟಿಲ್ಲ. ಉತ್ಕರ್ಷ, ಜ್ಞಾನ, ಸಮೃದ್ಧಿ, ಸಂತೋಷ…ಇವೆಲ್ಲಕ್ಕೂ ಸೂರ್ಯಾನುಗ್ರಹ ಬೇಕೆಂದು ಜಗದಗಲದ ದೇವರು ನಂಬಿದ್ದಾರೆ ಮತ್ತು ನಡೆದುಕೊಳ್ಳುತ್ತಿದ್ದಾರೆ. ಮಕರ ಸಂಕ್ರಾಂತಿಯಂದು ಭಾರತದ ಎಲ್ಲೆಡೆ ಸುಗ್ಗಿಯ ಹಿಗ್ಗು ಆವರಿಸುತ್ತದೆ. ಭಾರತದ ಉದ್ದಗಲಕ್ಕೂ ಮಕರ ಸಂಕ್ರಾಂತಿಯನ್ನು ವೈವಿಧ್ಯಮಯವಾಗಿ ಆಚರಿಸುತ್ತಾರೆ.

ಭಾರತದಲ್ಲಿ ಮಕರ ಸಂಕ್ರಾಂತಿಯನ್ನು ವೈವಿಧ್ಯಮಯ ವಾಗಿ ಆಚರಿಸುವ ಪರಂಪರೆಯೇ ಇದೆ.ಪ್ರಕೃತಿಯಲ್ಲಿ ಹಾಗೂ ಸೌರಮಂಡಲದಲ್ಲಾಗುವ ಬದಲಾವಣೆ ಮಾನವ ಬದುಕನ್ನು ಪರಿವರ್ತಿಸುತ್ತದೆ. ಈ ಸಂದರ್ಭ ವಿಶೇಷವಾಗಿ ಎಳ್ಳು-ಬೆಲ್ಲ ಹಂಚಿ ತಿನ್ನುತ್ತಾರೆ. ಸಿಹಿಯಾದ ಒಳ್ಳೆಯ ಮಾತನ್ನಾಡಬೇಕು ಎಂಬು ದರ ಸಂಕೇತ ಬೆಲ್ಲವಾದರೆ ಸ್ನೇಹಪೂರ್ಣವಾಗಿ ಬದು ಕುವ ಸಂದೇಶವನ್ನು ಎಳ್ಳುನೀಡುತ್ತದೆ. ಸಿಹಿ ಹಾಗೂ ಸ್ನೇಹಮಯ ಬದುಕಾಗಲಿ ಎಂಬ ಹಾರೈಕೆ ಇದೆ.

ಎಳ್ಳು-ಬೆಲ್ಲ ಸೇವನೆ, ತೈಲಾಭ್ಯಂಜನ, ದಾನಾದಿಗಳನ್ನು ನಡೆಸುತ್ತಾರೆ. ಇದೊಂದು ಪುರಾಣೋಕ್ತ ಕಥೆಯಾದರೂ ಸ್ಮರಣೀಯ ಅಂಶಗಳಿವೆ. ಉತ್ತಮ ನಡೆನುಡಿಯೇ ಬದುಕನ್ನು ಸುಖಮಯವಾಗಿಸುತ್ತದೆ. ಮಾಧವತ್ವಕ್ಕೆ ಏರುವುದಕ್ಕೆ ಬದುಕನ್ನು ಸಂಸ್ಕರಿಸಿಕೊಳ್ಳಬೇಕು. ಸಮಸ್ಯೆ ಗಳನ್ನು ಮೆಟ್ಟಿನಿಂತು ಬದುಕನ್ನು ಕಟ್ಟಿಕೊಳ್ಳಬೇಕು ಇತ್ಯಾದಿ ಸಂದೇಶಗಳಿವೆ. ಸಂಕ್ರಾಂತಿಯ ಶುಭಗಳಿಗೆ ನಮ್ಮೆಲ್ಲರ ಜೀವನದಲ್ಲಿ ಬದಲಾವಣೆಯನ್ನು ತರಲಿ, ಸಮ್ಯಕ್‌ ಕ್ರಾಂತಿಯನ್ನುಂಟು ಮಾಡಲಿ ಎಂದು ಆಶಿಸೋಣ.

ಡಾ|ಸೋಂದಾ ಭಾಸ್ಕರ ಭಟ್‌

 

Advertisement

Udayavani is now on Telegram. Click here to join our channel and stay updated with the latest news.

Next