Advertisement

ಎಳ್ಳು-ಬೆಲ್ಲದ ಹಬ್ಬ ಮಕರ ಸಂಕ್ರಾಂತಿ

10:08 PM Jan 12, 2020 | Sriram |

ಕುಂದಾಪುರ: ಲೋಕಾ ಲೋಕ ಪ್ರಕಾಶಾಯ| ಸರ್ವ ಲೋಕೈಕ ಚಕ್ಷುವೇ| ಲೋಕೋತ್ತರ ಚರಿತ್ರಾಯ| ಭಾಸ್ಕರಾಯ ನಮೋ ನಮಃ|| ಮಕರ ಸಂಕ್ರಾಂತಿಯನ್ನು ಎಳ್ಳು -ಬೆಲ್ಲದ ಹಬ್ಬ ಎನ್ನುತ್ತಾರೆ. ಎಳ್ಳು-ಬೆಲ್ಲ-ಒಣ ಕೊಬ್ಬರಿ-ಸೆಕ್ಕರೆ ಅಚ್ಚು- ಹುರಿಗಡಲೆ ಮಿಶ್ರಣ ಮಾಡಿ ಮಹಿಳೆಯರು ಹೊಸ ಬಟ್ಟೆ ಧರಿಸಿ ಕೊಂಡು ಮನೆ-ಮನೆಗೆ ಹೋಗಿ ಈ ಎಳ್ಳು ಬೆಲ್ಲದ ಇವುಗಳನ್ನು ನೀಡುವುದು ಇದನ್ನು ಎಳ್ಳು ಬೀರುವುದು ಎನ್ನುತ್ತಾರೆ. ಅಕ್ಕ ಪಕ್ಕದ ಮನೆಗಳಲ್ಲಿ ಎಳ್ಳು ಬೆಲ್ಲ ನೀಡುತ್ತಾ ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುವಾಗ “ಎಳ್ಳು ಬೆಲ್ಲ ತಿನ್ನಿ ಒಳ್ಳೆಯ ಮಾತಾಡಿ’ ಎಂಬ ನುಡಿ ಎಷ್ಟೊಂದು ಅರ್ಥಪೂರ್ಣ ಅಲ್ಲವೇ?

Advertisement

ಜಗತ್ತಿಗೆ ಬೆಳಕನ್ನು ನೀಡುವ ದೇವರು ಭಗವಾನ್‌ ಶ್ರೀ ಸೂರ್ಯ ದೇವರು. ಸೂರ್ಯ ದೇವರ ಚಲನೆಯ ವಿಶೇಷ ಹಬ್ಬವೇ ಈ ಮಕರ ಸಂಕ್ರಾಂತಿ ಹಾಗೂ ಉತ್ತರಾಯಣ ಪುಣ್ಯ ಕಾಲ. ವಿಶ್ವದೆಲ್ಲೆಡೆ ಒಂದಲ್ಲ ಒಂದು ರೀತಿಯಿಂದ “ಸೂಯೊìàಪಾಸನೆ’ ನಡೆಯುತ್ತಿರುತ್ತದೆ.”ಆರೋಗ್ಯಂ ಭಾಸ್ಕರಾದಿಚ್ಛೇತ್‌’ ಎಂಬಂತೆ ಸೂರ್ಯ ಆರೋಗ್ಯದ ಅಧಿದೇವತೆಯೂ ಆಗಿರುವುದು ವಿಶೇಷ. ಪ್ರತಿ ನಿತ್ಯ ಉತ್ತಮ ಆರೋಗ್ಯಕ್ಕಾಗಿ ಸೂರ್ಯ ನಮಸ್ಕಾರ ಮಾಡುವುದಾಗಿದೆ.ಆರೋಗ್ಯ ವೃದ್ಧಿಗಾಗಿ “ಆದಿತ್ಯ ಹೃದಯ’ ಪಾರಾಯಣ ಮಾಡಿಸುವುದು. ದೂರ್ವಾಸರ ಶಾಪದಿಂದ ಶ್ರೀ ಕೃಷ್ಣನ ಪುತ್ರನಾದ ಸಾಂಬನಿಗೆ ಕುಷ್ಟ ರೋಗ ಬಂದಾಗ ಆತ ಸೂರ್ಯನ ವಿಗ್ರಹವನ್ನು ಪೂಜಿಸಿ ತನ್ನ ರೋಗ ನಿವಾರಣೆ ಮಾಡಿಕೊಂಡ ಮಾಹಿತಿ ಪುರಾಣದಲ್ಲಿ ತಿಳಿಸಲಾಗಿದೆ. ಸ್ಕಂದ ಪುರಾಣದ ನಾಗರ ಖಂಡದಲ್ಲಿ ಮೂರು ಸೂರ್ಯ ವಿಗ್ರಹಗಳ ಬಗ್ಗೆ ವರ್ಣನೆಯಿದೆ. ಮುಂಡೀರ (ಪ್ರಥಮ) ಕಾಲಪ್ರಿಯ (ದ್ವಿತೀಯ) ಮೂಲಸ್ಥಾನ (ತೃತೀಯ) ಇವೇ ಸೂರ್ಯ ದೇವರ ಮೂರು ವಿಶಿಷ್ಟ ವಿಗ್ರಹಗಳಾಗಿವೆ. ಭಗವಾನ್‌ ಶ್ರೀ ಸೂರ್ಯದೇವರು ಪ್ರಾತಃಕಾಲದಲ್ಲಿ ಮುಂಡೀರದಲ್ಲಿ, ಮಧ್ಯಾಹ್ನದಲ್ಲಿ ಕಾಲಪ್ರಿಯನಲ್ಲಿ, ಸಂಜೆ ಮೂಲಸ್ಥಾನದಲ್ಲಿ ಸೇರುತ್ತಾನೆ. ಯಾವ ಮನುಜ ಆಯಾ ಕಾಲದಲ್ಲಿ ಈ ಮೂರು ಸೂರ್ಯ ವಿಗ್ರಹಗಳಲ್ಲಿ ಒಂದರ ದರ್ಶನವನ್ನು ಭಕ್ತಿ ಪೂರ್ವಕ ನೋಡುತ್ತಾನೆಯೋ ಆತನು ಸರ್ವ ವಿಧ ರೋಗಗಳಿಂದ ಬಿಡುಗಡೆ ಹೊಂದಿ ಮೋಕ್ಷವನ್ನು ಪಡೆದುಕೊಳ್ಳುತ್ತಾನೆ.

ಸಂಕ್ರಮಣ
ಜಗತ್ತಿಗೆ ಕಣ್ಣಾದ ಶ್ರೀ ಸೂರ್ಯ ದೇವರು ಚಲಿಸುವ ಚಲನೆಯ ಹಬ್ಬ ಸಂಕ್ರಾಂತಿ ಅಥವಾ ಸಂಕ್ರಮಣ ಎನ್ನುತ್ತಾರೆ. ಸಂಸ್ಕೃತದಲ್ಲಿ “ಕ್ರಮಣ’ ಎಂದರೆ ಹೆಜ್ಜೆ ಇಡುವುದು ಎಂಬುದಾಗಿ, ಸೂರ್ಯ ದೇವರು ಒಂದು ರಾಶಿಯಿಂದ ಇನ್ನೊಂದು ರಾಶಿಯನ್ನು ಕ್ರಮಿಸುವ(ಹೆಜ್ಜೆಯಿಡುವ) ಪ್ರಕ್ರಿಯೆ ಸಂಕ್ರಮಣ. ಈ ಸಂಕ್ರಾಂತಿ ವರುಷಕ್ಕೆ ಹನ್ನೆರಡು ಬರುತ್ತದೆ, ಏಕೆಂದರೆ ರಾಶಿಗಳು ಹನ್ನೆರಡು ಹಾಗೆಯೇ ಸೌರಮಾಸಗಳೂ ಹನ್ನೆರಡು. ಆದರೆ ಈ ಹನ್ನೆರಡು ಸಂಕ್ರಮಣಗಳಲ್ಲಿ ಎರಡು ಸಂಕ್ರಾಂತಿಗೆ ವಿಶೇಷ ಪ್ರಾಶಸ್ತÂ ನೀಡಲಾಗಿದೆ. ಅವುಗಳಲ್ಲಿ ಒಂದು ಸೂರ್ಯದೇವರು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶಿಸುವ “ಕರ್ಕಾಟಕ ಸಂಕ್ರಮಣ’ ಇನ್ನೊಂದು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ “ಮಕರ ಸಂಕ್ರಾಂತಿ’ಗೆ. ಕರ್ಕಾಟಕ ಸಂಕ್ರಾಂತಿ “ದಕ್ಷಿಣಾಯನ’ ಸೂಚಿಸುತ್ತದೆ. ಮಕರ ಸಂಕ್ರಾಂತಿ “ಉತ್ತರಾಯಣ’ವನ್ನು ಸೂಚಿಸುತ್ತದೆ. ದಕ್ಷಿಣಾಯನವನ್ನು “ಪಿತೃಯಾನ’ ಎನ್ನುತ್ತಾರೆ. ಅದೇ ಉತ್ತರಾಯಣವನ್ನು “ದೇವಯಾನ’ ಎಂದು ವೇದಗಳು ತಿಳಿಸುತ್ತವೆ. ಭಗವದ್ಗೀತೆ ಮತ್ತು ಮಹಾಭಾರತಗಳಲ್ಲಿ ದೇವಯಾನವನ್ನು ಪ್ರಶಂಸಿಸಲಾಗಿದೆ.
ಈ ಉತ್ತರಾಯಣ ಪುಣ್ಯ ಕಾಲದಲ್ಲಿ ಸ್ವರ್ಗದ ಬಾಗಿಲು ತೆಗೆಯುವುದಾಗಿ ಪುರಾಣಗಳಲ್ಲಿ ತಿಳಿಸಲಾಗಿದೆ.

ಮಹಾಭಾರತದ ಭೀಷ್ಮರು ಶರಶಯೆÂಯಲ್ಲಿ ಮಲಗಿದವರು ತಮ್ಮ ದೇಹತ್ಯಾಗಕ್ಕಾಗಿ ಉತ್ತರಾಯಣವನ್ನೇ ಆಯ್ಕೆ ಮಾಡಿ ಕೊಂಡಿದ್ದರು. ಈ ಉತ್ತರಾಯಣ ಪುಣ್ಯಕಾಲದ ತೀರ್ಥ ಯಾತ್ರೆ, ತೀರ್ಥ ಸ್ನಾನ, ದೇವಾಲಯಗಳ ಪುನರ್‌ ಪ್ರತಿಷ್ಠೆ, ನಾಗಾಲಯಗಳಲ್ಲಿ ಶ್ರೀ ನಾಗದೇವರ ಪ್ರತಿಷ್ಠೆಯಂತಹ ಧಾರ್ಮಿಕ ಕಾರ್ಯಗಳಿಗೆ ಪ್ರಶಸ್ತವಾಗಿದೆ. ಶುಭ ಕಾರ್ಯಕ್ರಮಗಳಾದ ಗೃಹಪ್ರವೇಶ-ಉಪನಯನದಂತಹ ಮಂಗಳ ಕಾರ್ಯಗಳಿಗೂ ಈ ಉತ್ತರಾಯಣ ಪ್ರಶಸ್ತವಾಗಿದೆ. ಈ ಮಕರ ಸಂಕ್ರಮಣದಲ್ಲಿ ಶ್ರೀ ಸೂರ್ಯದೇವರು ಉತ್ತರಕ್ಕೆ ಚಲಿಸುತ್ತಾರೆ, ಈ ಸುಂದರ ಕಾಲವನ್ನು ವಸಂತಕಾಲ ಎಂದು ಸ್ವಾಗತಿಸುತ್ತಾರೆ.

ದಿನದ ವಿಶೇಷ
ಈ ಮಕರ ಸಂಕ್ರಾಂತಿಯಂದು ಪ್ರಾತಃಕಾಲದಲ್ಲಿ ಎದ್ದು ಎಳ್ಳೆಣ್ಣೆ ಮೈಗೆಲ್ಲಾ ಹಚ್ಚಿಕೊಂಡು ಸ್ನಾನ ಮಾಡಿ, ದೇವರಿಗೆ ಎಳ್ಳೆಣ್ಣೆ ದೀಪ ಬೆಳಗಿಸುವುದು, ಎಳ್ಳಿನ ಹೋಮ (ತಿಲ ಹೋಮ) ಎಳ್ಳುದಾನ ನೀಡುವುದು ಈದಿನದ ವಿಶೇಷ. ಎಳ್ಳು ಯಾವಾಗಲೂ ಪಾಪಗಳನ್ನು ಪರಿಹರಿಸುವುದರೊಂದಿಗೆ ಮಾನವನ ದೇಹಕ್ಕೆ ಬಲ-ಶಕ್ತಿ ನೀಡುತ್ತದೆ.

Advertisement

ಆಚರಣೆ
ಈ ಮಕರಸಂಕ್ರಮಣದಂದು ಶುದ್ಧ ಮನಸ್ಸಿನಿಂದ ಭಕ್ತಿ ಶ್ರದ್ಧಾಪೂರ್ವಕವಾಗಿ ಈ ಶ್ರೀ ಸೂರ್ಯದೇವರ ಸ್ತೋತ್ರ ಪಠಿಸಬೇಕು. ಮಕರ ಸಂಕ್ರಮಣವನ್ನು ತಮಿಳುನಾಡಿನಲ್ಲಿ “ಪೊಂಗಲ್‌’ಎಂದು ಮೂರು ದಿನ ಆಚರಿಸುತ್ತಾರೆ.ನಮ್ಮ ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಶ್ರೀ ರಾಮದೇವರನ್ನು ವಿಶೇಷವಾಗಿ ಪೂಜಿಸಿ ಆರಾಧಿಸುತ್ತಾರೆ. ಶ್ರೀ ರಾಮಚಂದ್ರ ಸ್ವಾಮಿ ಲೋಕಕಂಟಕನಾದ ರಾವಣನನ್ನು ಸಂಹರಿಸಿ ಸೀತಾದೇವಿಯನ್ನು ಅಯೋಧ್ಯೆಗೆ ಕರೆತಂದ ದಿನ ಎಂಬ ನೆನಪಿಗೆ ಈ ಮಕರಸಂಕ್ರಾಂತಿಯನ್ನು ಈ ರೀತಿಯಾಗಿ ಆಚರಿಸುತ್ತಾರೆ.

- ವೈ. ಎನ್‌. ವೆಂಕಟೇಶಮೂರ್ತಿ ಭಟ್ಟರು
ಪ್ರಧಾನ ಅರ್ಚಕರು, ಶ್ರೀ ಮುಖ್ಯ ಪ್ರಾಣದೇವಸ್ಥಾನ, ದೊಡ್ಮನೆಬೆಟ್ಟು , ಕೋಟೇಶ್ವರ.

Advertisement

Udayavani is now on Telegram. Click here to join our channel and stay updated with the latest news.

Next