Advertisement

Sankranti; ಅಬ್ಬೆ ತುಮಕೂರಿನ ಸೀಮಾಂತರದ ಭೀಮಾನದಿ ತಟದಲ್ಲಿ ಮಕರ ಸಂಕ್ರಾಂತಿ ಆಚರಣೆ

05:14 PM Jan 15, 2024 | Team Udayavani |

ಯಾದಗಿರಿ: ಅನ್ನವನ್ನು ಇಕ್ಕುವ ಒಕ್ಕಲಿಗ ಚೆನ್ನಾಗಿದ್ದರೆ ನಾಡೆಲ್ಲ ಚೆನ್ನಾಗಿರುತ್ತದೆ. ಆತನ ಬದುಕಿನ ಬೆಳಕಾಗಿ ಸಂಕ್ರಾಂತಿ ಹಬ್ಬ ಸಂಭ್ರಮವನ್ನು ತರುವಂತಾಗಲಿ. ಸಂಕ್ರಾಂತಿ ಹಬ್ಬ ರೈತರ ಪಾಲಿಗೆ ಸುಗ್ಗಿಯ ಹಿಗ್ಗನ್ನು ತರುವ ಹಬ್ಬವಾಗಿದೆ. ರೈತ ಉತ್ತಿ ಬಿತ್ತಿ ಬೆಳೆದ ಫಸಲನ್ನು ರಾಶಿ ಮಾಡಿಕೊಳ್ಳುವ ಸಂದರ್ಭದಲ್ಲಿ ಬರುವ ಸಂಕ್ರಾಂತಿ ರೈತರಿಗೆ ಉತ್ತಮ ಬೆಳೆಯನ್ನು ತರಲಿ ಎಂದು ಅಬ್ಬೆತುಮಕೂರಿನ ಪೀಠಾಧಪತಿ ಡಾ. ಗಂಗಾಧರ ಮಹಾಸ್ವಾಮಿಗಳು ನುಡಿದರು.

Advertisement

ಶ್ರೀಮಠದ ವತಿಯಿಂದ ಅಬ್ಬೆತುಮಕೂರಿನ ಸೀಮಾಂತರದ ಭೀಮಾ ನದಿಯ ತಟದಲ್ಲಿ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಹೋಳಿ ಜಾತ್ರೆಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.

ನೂತನ ವರ್ಷದ ಮೊದಲ ಹಬ್ಬವಾಗಿರುವ ಸಂಕ್ರಾಂತಿ ರೈತರ ಬದುಕಿಗೆ ಸಮೃದ್ಧಿಯನ್ನು ತರುವ ಹಬ್ಬವಾಗಿದೆ. ಈ ಹಬ್ಬ ಅನ್ನದಾತ ರೈತ ಜನಾಂಗಕ್ಕೆ ಹಿಗ್ಗನ್ನು ತರಲಿ ಎಂದು ಶುಭ ಹಾರೈಸಿದರು.

ಸಂಕ್ರಾಂತಿ ಉತ್ತರಾಯಣದ ಪುಣ್ಯಕಾಲವಾಗಿದೆ. ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ಪರ್ವ ಕಾಲವಾಗಿದೆ. ಇಂತಹ ವಿಶೇಷ ದಿನದಂದು ನದಿಗಳಿಗೆ ತೆರಳಿ ಪುಣ್ಯ ಸ್ನಾನ ಮಾಡುವದರಿಂದ ಜೀವನದಲ್ಲಿ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ. ಇದೇ ಸಂದರ್ಭದಲ್ಲಿ ಎಳ್ಳು ದಾನ ಮಾಡುವದರಿಂದಲೂ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯಿಂದ ಜನರು ಎಳ್ಳು ಬೆಲ್ಲವನ್ನು ಪರಸ್ಪರ ಕೊಡುಕೊಳ್ಳುವ ಪರಂಪರೆ ನಮ್ಮಲ್ಲಿದೆ ಎಂದರು.

ಇದಕ್ಕು ಮುನ್ನ ಶ್ರೀಗಳು ಅಪಾರ ಭಕ್ತ ವೃಂದದೊಂದಿಗೆ, ಅಬ್ಬೆತುಮಕೂರಿನ ಶ್ರೀ ಮಠದಿಂದ ಸೀಮಾಂತರದ ಭೀಮಾ ನದಿಯವರೆಗೆ ಡೊಳ್ಳು, ಹಲಗೆ, ಬಾಜಾ ಭಜಂತ್ರಿ, ವಿವಿಧ ಮಂಗಲ ವಾದ್ಯಗಳು ಮತ್ತು ಸುಮಂಗಲೆಯರ ಕಳಸದೊಂದಿಗೆ ಮೆರವಣಿಗೆಯೊಂದಿಗೆ ತೆರಳಿದರು. ಅಲ್ಲಿ ಶ್ರೀಗಳು ಹೂವಿನಿಂದ ಅಲಂಕೃತವಾದ ತೆಪ್ಪದಲ್ಲಿ ಭೀಮಾನದಿಯ ಮಧ್ಯಭಾಗಕ್ಕೆ ತೆರಳಿ ಪುಣ್ಯ ಸ್ನಾನವನ್ನು ಮಾಡಿ, ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ಗಂಗಾದೇವಿಗೆ ವಿಶೇಷ ಪೂಜೆ ನೆರವೇರಿಸಿದರು.

Advertisement

ಪುನಃ ಶ್ರೀಗಳು ತೆಪ್ಪದಲ್ಲಿ ನದಿಯ ಮಧ್ಯಭಾಗದಿಂದ ದಡಕ್ಕೆ ಆಗಮಿಸಿದರು. ದಡದಲ್ಲಿ ನೆರೆದಿದ್ದ ಸಹಸ್ರಾರು ಭಕ್ತರು ಶ್ರೀಗಳ ಪಾದದಿಂದ ನದಿಯ ನೀರನ್ನು ಪ್ರೋಕ್ಷಿಸಿಕೊಂಡು ಪುನೀತರಾದರು. ನಂತರ ಭಕ್ತರು ಶ್ರೀಗಳ ಪಾದಪೂಜೆ ನೆರೆವೇರಿಸಿದರು.

ಚೆನ್ನಪ್ಪಗೌಡ ಮೋಸಂಬಿ, ನರಸನಗೌಡ ರಾಯಚೂರ, ಡಾ. ಸುಭಾಶ್ಚಂದ್ರ ಕೌಲಗಿ, ವಿಶ್ವನಾಥ ಸಿರಿವಾರ ಸೇರಿದಂತೆ ಅಬ್ಬೆತುಮಕೂರು ಹಾಗೂ ರಾಜ್ಯದ ವಿವಿಧ ಭಾಗದಿಂದ ಅಪಾರ ಭಕ್ತರು ಆಗಮಿಸಿ ಜಾತ್ರೆಯಲ್ಲಿ ಭಾಗಿಯಾಗಿದ್ದರು.

ಹೊಳಿ ಜಾತ್ರೆಗೆ ಆಗಮಿಸಿದ ಎಲ್ಲ ಭಕ್ತರು ಬಿಳಿ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಶೇಂಗಾ ಹೋಳಿಗೆ, ಕರಿಗಡಬು, ಪುಂಡಿಪಲ್ಯ, ಹಿಂಡಿಪಲ್ಯ, ಎಣ್ಣೆ ಬದನೆಕಾಯಿ, ಶೇಂಗಾ ಹಿಂಡಿ, ಬಜ್ಜಿ, ಭರ್ತಾ, ಚಿತ್ರಾನ್ನ. ಹೀಗೆ ವಿವಿಧ ಬಗೆಯ ಸಂಕ್ರಾಂತಿಯ ಭಕ್ಷ್ಯ ಭೋಜನವನ್ನು ಸವಿದರು. ಯರಗೋಳದ ಭೀಮಜ್ಯೋತಿ ಕಲಾ ತಂಡದವರು ನಡೆಸಿಕೊಟ್ಟ ಜನಪದ ಗೀತೆಗಳ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next