Advertisement

ಸೇನೆ ಸೇರಿದ ಹುತಾತ್ಮ ಮೇಜರ್‌ನ ಪತ್ನಿ : ಮೇ|ದೌಂಡಿಯಾಲ್‌ ಮಡದಿ ನಿಕಿತಾ ಸಾಹಸ

12:49 AM May 30, 2021 | Team Udayavani |

ಹೊಸದಿಲ್ಲಿ: ಅವರು ಸೇನೆಯ ಸಮರ್ಥ ಅಧಿಕಾರಿ. 2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದರು. ಅದೇ ವರ್ಷ ಅವರಿಗೆ ದೇಶವು ಮರಣೋತ್ತರ ಶೌರ್ಯಚಕ್ರ ನೀಡಿ ಗೌರವಿಸಿತು. ತಮ್ಮ ಪತಿಯ ಸಾವಿನ ಬೆನ್ನಲ್ಲೇ ಹುತಾತ್ಮ ಮೇಜರ್‌ ಅವರಷ್ಟೇ ದೇಶಭಕ್ತೆ, ಧೈರ್ಯಶಾಲಿಯಾಗಿರುವ ಪತ್ನಿ ಸೇನಾ ಪರೀಕ್ಷೆಗಳಿಗೆ ತಯಾರಿ ನಡೆಸಿ, ಉತ್ತೀರ್ಣರಾಗಿ ಈಗ ಸೇನೆಗೆ ಸೇರ್ಪಡೆಯಾಗಿದ್ದಾರೆ.

Advertisement

ಇದು ಮೇ| ವಿಭೂತಿ ಶಂಕರ್‌ ದೌಂಡಿಯಾಲ್‌ ಅವರ ಪತ್ನಿ ನಿಕಿತಾ ಕೌಲ್‌ ಅವರ ಸಾಹಸಗಾಥೆ.

ಅಧಿಕೃತ ಸೇರ್ಪಡೆ
ದೇಶ ಸೇವೆಯ ಮೂಲಕವೇ ತಮ್ಮ ಪತಿಗೆ ಸೂಕ್ತ ಶ್ರದ್ಧಾಂಜಲಿ ಸಲ್ಲಿಸಲು ಸಾಧ್ಯ ಎಂಬ ದೃಢ ನಿಶ್ಚಯದೊಂದಿಗೆ ಶಾರ್ಟ್‌ ಸರ್ವೀಸ್‌ ಕಮಿಷನ್‌ (ಎಸ್‌ಎಸ್‌ಸಿ) ಪರೀಕ್ಷೆಗಳಿಗೆ ತಯಾರಿ ನಡೆಸಿದ 28 ವರ್ಷದ ನಿಕಿತಾ, 2020ರಲ್ಲಿ ಸೇನಾ ನೇಮಕಾತಿಯ ಸಂದರ್ಶನವನ್ನು ಎದುರಿಸಿದ್ದರು. ಎರಡೂ ಹಂತಗಳನ್ನು ಪೂರೈಸಿದ ಅನಂತರ ಮೇ 26ರಂದು ಸೇನಾ ತರಬೇತಿಗೆ ದಾಖಲಾದರು. ಭಾರತೀಯ ಸೇನೆಯ ನಾದರ್ನ್ ಕಮಾಂಡರ್‌ ಲೆ|ಜ| ವೈ.ಕೆ. ಜೋಷಿಯವರು ಮೇ 29ರಂದು ನಿಕಿತಾ ಅವರನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳಿಸಿದರು.

ಅಂದು ಮಾಡಿದ್ದ ಪ್ರತಿಜ್ಞೆ
ಪತಿಯ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕಾಗಿ ಬೀಳ್ಕೊಡುವ ಮುನ್ನವೇ ನಿಕಿತಾ ಸೇನೆ ಸೇರುವ ಪ್ರತಿಜ್ಞೆ ಮಾಡಿದ್ದರು. ಪತಿ ಪಾರ್ಥಿವ ಶರೀರದ ಮುಂದೆ ಕಣ್ಣೀರಿಡುತ್ತ, “ನೀವು ಯಾವಾಗಲೂ ನನ್ನನ್ನು ತುಂಬಾ ಪ್ರೀತಿಸುವುದಾಗಿ ಹೇಳುತ್ತಿದ್ದಿರಿ. ನಿಜ ಹೇಳಬೇಕೆಂದರೆ, ನೀವು ನನಗಿಂತ ಹೆಚ್ಚು ದೇಶವನ್ನು ಪ್ರೀತಿಸಿದಿರಿ. ಇಂದು ದೇಶಕ್ಕಾಗಿ ನೀವು ಬಲಿದಾನಗೈದಿದ್ದೀರಿ. ನಿಮ್ಮಂಥ ಶೂರ ಯೋಧನನ್ನು ಪತಿಯಾಗಿ ಪಡೆದ ನಾನು ಧನ್ಯ. ನಿಮ್ಮ ದೇಶಸೇವೆಯನ್ನು ಪೂರ್ಣಗೊಳಿಸುವ ಸಲುವಾಗಿ ನಾನೂ ಸೇನೆ ಸೇರುತ್ತೇನೆ’ ಎಂದಿದ್ದರು. ಆ ಪ್ರತಿಜ್ಞೆ ಯನ್ನು ನಿಕಿತಾ ನೆರವೇರಿಸಿದ್ದಾರೆ, ತಮ್ಮ ಪ್ರೀತಿಯ ಪತಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next