Advertisement

ದೇಶಕ್ಕೆ ಸ್ವಾತಂತ್ರ್ಯದ ಅಮೃತ ಮಹೋತ್ಸವ: ಹುತಾತ್ಮ ಮಹದೇವಪ್ಪನ ಅಮೃತ ಸಾಹಸ

12:27 AM Aug 06, 2022 | Team Udayavani |

ಆ. 9ರಂದು ಕ್ವಿಟ್‌ ಇಂಡಿಯಾ ದಿನ ಆಚರಣೆಯಾಗುತ್ತಿದೆ. ಹಾವೇರಿ ಜಿಲ್ಲೆಯ ಮೈಲಾರ ಮಹದೇವಪ್ಪ ಮಾರ್ತಾಂಡ ಅವರು ಕ್ವಿಟ್‌ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಭೂಗತವಾಗಿ ಹೋರಾಡಿ ಹುತಾತ್ಮರಾದರು. ಗಾಂಧೀಜಿಯವರ ದಂಡೀಯಾತ್ರೆಯಲ್ಲಿ ಪಾಲ್ಗೊಂಡ ಕರ್ನಾಟಕದ ಏಕೈಕ ವ್ಯಕ್ತಿ ಇವರು. ಇತ್ತೀಚಿನ ವರ್ಷಗಳಲ್ಲಿ ಇವರ ಇತಿಹಾಸ ಬೆಳಕು ಕಂಡಿದೆ.

Advertisement

1930ರ ಮಾ. 12ರಿಂದ ಎ. 5ರ ವರೆಗೆ ಗುಜರಾತಿನ ಸಾಬರ್ಮತಿಯಿಂದ ದಂಡಿವರೆಗೆ ಗಾಂಧೀಜಿ ನೇತೃತ್ವದಲ್ಲಿ ಉಪ್ಪಿನ ಕಾನೂನು ಮುರಿಯುವ ದಂಡೀ ಯಾತ್ರೆ ನಡೆಯಿತು. ಎ. 6ರಂದು ಉಪ್ಪಿನ ಕಾನೂನು ಮುರಿದರು. ಇದು ದೇಶಾದ್ಯಂತ ಪ್ರತಿಧ್ವನಿಸಿ ಜಗತ್ತಿನ ಗಮನ ಸೆಳೆಯಿತು. ಒಟ್ಟು 240 ಮೈಲು ದೂರ ಕಾಲ್ನಡಿಗೆಯಲ್ಲಿದ್ದ 78 ಸತ್ಯಾಗ್ರಹಿಗಳಲ್ಲಿ ಈಗಿನ ಕರ್ನಾಟಕದ ಭಾಗದಿಂದ ಪಾಲ್ಗೊಂಡ ಏಕೈಕ ವ್ಯಕ್ತಿ ಹಾವೇರಿಯ ಮೈಲಾರ ಮಹದೇವಪ್ಪ ಮಾರ್ತಾಂಡ. ಇದೇ ಮಹದೇವಪ್ಪನವರು 1942ರ ಆಗಸ್ಟ್‌ 9ರಂದು ಗಾಂಧೀಜಿಯವರು ಕರೆ ನೀಡಿದ ಕ್ವಿಟ್‌ ಇಂಡಿಯಾ ಚಳವಳಿಯ ಹೋರಾಟದಲ್ಲಿಯೇ ಅಸುನೀಗಿದರು. ಗಾಂಧೀ ಅನುಯಾಯಿಯಾದರೂ ಬ್ರಿಟಿಷರ ವಿರುದ್ಧ ಅವರು ನಡೆಸಿದ ಹೋರಾಟ ಮಾತ್ರ ತುಸು ಉಗ್ರ ಸ್ವರೂಪದ್ದೂ, ಜತೆಗೆ ಭಿನ್ನ ಸ್ವರೂಪದ ಅಹಿಂಸಾತ್ಮಕವೂ ಆಗಿತ್ತು. ಅವರು 32ನೆಯ ವಯಸ್ಸಿನಲ್ಲಿ 1943ರ ಎ. 1ರಂದು (ಜನನ 1911ರ ಜೂ. 8) ಬ್ರಿಟಿಷ್‌ ಪೊಲೀಸರ ಗುಂಡೇಟಿಗೆ ಬಲಿಯಾಗಬೇಕಾಯಿತು.

ಈಗಿನ ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಮಹದೇವಪ್ಪ ದೇಶಭಕ್ತಿ ಪರ ಸಾಹಿತ್ಯ ಓದಿ ಹೋರಾಟಕ್ಕಾಗಿಯೇ ಎಂಬಂತೆ ಗರಡಿಮನೆಗೆ ಹೋಗಿ ಗಟ್ಟಿಮುಟ್ಟಾದ ಶರೀರವನ್ನು ಸಂಪಾದಿಸಿದ್ದರು. ಮೋಟೆಬೆನ್ನೂರು, ಹಂಸಭಾವಿಯಲ್ಲಿ ಶಾಲೆಗೆ ಹೋದ ಮಹದೇವರಿಗೆ ಹರ್ಡೇಕರ್‌ ಮಂಜಪ್ಪನವರು ಶಾಲೆಗೆ ಭೇಟಿ ನೀಡಿ ಸ್ವದೇಶಿ, ಖಾದಿ, ದೇಶಭಕ್ತಿ ವಿಚಾರ ಬೋಧಿಸುತ್ತಿದ್ದುದು ಪರಿಣಾಮ ಬೀರಿತ್ತು. ಖಾದಿ ತಯಾರಿ ಕುರಿತು ತರಬೇತಿ ಪಡೆದ ಮಹದೇವಪ್ಪ ಸಾಬರ್ಮತಿ ಆಶ್ರಮಕ್ಕೆ ಹೋಗಿ ಖಾದಿ ಮತ್ತು ಆಶ್ರಮ ವಾಸದ ಪರಿಣತಿ ಸಂಪಾದಿಸಿದ್ದರು. ಅದೇ ಸಂದರ್ಭ ದಂಡಿಯಾತ್ರೆಯಲ್ಲಿ ಪಾಲ್ಗೊಂಡು ಒಂದು ವರ್ಷ ಜೈಲುವಾಸ ಅನುಭವಿಸಿದರು. ಬಳಿಕ ಊರಿನಲ್ಲಿದ್ದ ಪತ್ನಿ ಸಿದ್ದಮ್ಮನ ಜತೆ ಮತ್ತೆ ಸಾಬರ್ಮತಿಗೆ ಹೋಗಿ ಸೇವೆ ಸಲ್ಲಿಸಿದರು. 1932ರಲ್ಲಿ ಚಳವಳಿ ಕಾರಣಕ್ಕೆ ಮತ್ತೆ ಎರಡು ವರ್ಷ ಜೈಲುವಾಸಿಯಾದಾಗ ಪತ್ನಿಆಶ್ರಮದಲ್ಲಿದ್ದರು, ಕಸ್ತೂರ್ಬಾ ಅವರಿಗೆ ಪ್ರೀತಿಪಾತ್ರರಾಗಿದ್ದರು. ಊರಿಗೆ ಬಂದ ದಂಪತಿ ಅಸ್ಪೃಶ್ಯತೆ ನಿವಾರಣ ಚಳವಳಿಯಲ್ಲಿ ಪಾಲ್ಗೊಂಡರು. ಮರಡೂರಿನಲ್ಲಿ ಆಶ್ರಮ ಸ್ಥಾಪಿಸಿ ದಂಪತಿ ದಲಿತರ ಕೇರಿಗಳಲ್ಲಿ ಸ್ವತ್ಛ ಮಾಡುವುದು, ನೇಕಾರಿಕೆ ಕಲಿಸುವುದು, ರೈತ ಮಹಿಳೆಯರಿಗೂ ನೇಕಾರಿಕೆ ಕಲಿಸುವುದೇ ಮೊದಲಾದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿದರು. ಖಾದಿ ಕೆಲಸಕ್ಕೆ 1,000 ರೂ. ಸಾಲ ಕೊಟ್ಟಿದ್ದ ಮಹಿಳೆ ನಿಧನ ಹೊಂದಿದ ಬಳಿಕ ಅವರ ಮಗನ ಮದುವೆ ಸಮಯದಲ್ಲಿ ಆ ಹಣವನ್ನು ಹಿಂದಕ್ಕೆ ಕೊಟ್ಟ ಆದರ್ಶ ವ್ಯಕ್ತಿ ಮಹದೇವಪ್ಪ.

ಎರಡನೆಯ ಮಹಾಯುದ್ಧದ ವೇಳೆ ವೈಯಕ್ತಿಕ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಒಂದು ವರ್ಷ ಸೆರೆಮನೆ ವಾಸ ಅನುಭವಿಸಿದ ಮಹದೇವಪ್ಪ, 1942ರಲ್ಲಿ ಗಾಂಧೀಜಿ ಮತ್ತು ಇತರ ನಾಯಕರು ಕ್ವಿಟ್‌ ಇಂಡಿಯಾ ಚಳವಳಿಯಿಂದ ಬಂಧಿತರಾದಾಗ 40-50 ಜನರೊಂದಿಗೆ ಭೂಗತ ಹೋರಾಟ ನಡೆಸಿದರು. ಇವರ ಕಾರ್ಯವೈಖರಿ ಹೇಗಿತ್ತೆಂದರೆ ರೈಲುಗಳನ್ನು ಓಡಾಡದಂತೆ ನೋಡುವುದು, ಸರಕಾರದ ಕಚೇರಿಗಳು ನಡೆಯದಂತೆ ಮಾಡುವುದು, ಸರಕಾರ ವಸೂಲಿ ಮಾಡುತ್ತಿದ್ದ ಭೂಕಂದಾಯವನ್ನು ದೋಚಿ ಬಡವರಿಗೆ ಹಂಚುವುದು ಇತ್ಯಾದಿ… ಹಾವೇರಿಯ ಟಪಾಲು ಲೂಟಿ, ಹರಪನಹಳ್ಳಿ ಬಸ್‌ ಲೂಟಿ, ನೆಗಳೂರಿನ ಲೂಟಿ ಪ್ರಕರಣಗಳೆಲ್ಲ ಸರಕಾರಕ್ಕೆ ಸವಾಲಾಗಿತ್ತು. ಸರಕಾರದ ಆದಾಯಕ್ಕೆ ಕಲ್ಲು ಹಾಕಿದ ಇವರ ಸುಳಿವನ್ನು ನೀಡಿದವರಿಗೆ 300 ರೂ. ಬಹುಮಾನ ನೀಡುವುದಾಗಿ ಬ್ರಿಟಿಷ್‌ ಸರಕಾರ ಘೋಷಿಸಿತ್ತು.

ತಂಡಗಳು ಹಗಲಿನಲ್ಲಿ ಗುಡ್ಡಗಾಡುಗಳಲ್ಲಿ ಅಡಗಿ ರಾತ್ರಿ ವೇಳೆ ವಿಧ್ವಂಸಕ ಕಾರ್ಯಾಚರಣೆ ಮಾಡುತ್ತಿದ್ದವು. ಹಳ್ಳಿಗಳ ಜನರು ಊಟವನ್ನು ಕಳುಹಿಸುತ್ತಿದ್ದರು. ಕೆಲವೊಮ್ಮೆ ಉಪವಾಸ ವ್ರತವೂ ಅನಿವಾರ್ಯವಾಗುತ್ತಿತ್ತು. ಬ್ಯಾಡಗಿ ರೈಲ್ವೇ ನಿಲ್ದಾಣವನ್ನು ಸುಟ್ಟರು. ಗ್ರಾಮಚಾವಡಿಗಳನ್ನೂ ಸುಟ್ಟರು. ಯಾವ ಚಳವಳಿಗಾರರೂ ಯಾರಿಗೂ ದೈಹಿಕ ಹಾನಿ ಮಾಡುತ್ತಿರಲಿಲ್ಲ, ಇವರ ಬಳಿ ಇದ್ದ ಪಿಸ್ತೂಲು ಸರಕಾರಿ ನೌಕರರು, ಅಧಿಕಾರಿಗಳನ್ನು ಹೆದರಿಸಲು ಮಾತ್ರ ಬಳಕೆಯಾಗುತ್ತಿತ್ತು. ಭಾರತೀಯರೇ ಆದ ಪೊಲೀಸರನ್ನು ಕೊಲ್ಲಲು ಸುತಾರಾಂ ಸಿದ್ಧವಿರಲಿಲ್ಲ, ಸಾಯುವ ಹೊತ್ತಿಗೂ…

Advertisement

ನನ್ನ ಶಿಷ್ಯ ಎಂದಿದ್ದ ಗಾಂಧಿ
ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವ (75ನೆಯ ಆಚರಣೆ). ನಾನಾ ಕಡೆ ಸರಕಾರವನ್ನು ದೋಚುತ್ತಿದ್ದ ಮಹದೇವಪ್ಪನವರು 74 ಸಾಹಸಗಳನ್ನು ಮಾಡಿ, 75ನೆಯ ಸಾಹಸವನ್ನು ಹೊಸರಿತ್ತಿಯಲ್ಲಿ ನಡೆಸಲು ಯೋಜಿಸಿದಾಗ ಅಸುನೀಗಿದರು. ಗಾಂಧೀಜಿಯವರ 75ನೆಯ ವರ್ಷಕ್ಕೆ 75 ಸಾಹಸಗಳನ್ನು ನಡೆಸುವುದಾಗಿ ಪಣ ತೊಟ್ಟಿದ್ದರಂತೆ. 1943ರ ಎ. 1ರಂದು ಬೆಳಗ್ಗೆ ಕಂದಾಯದ ಹಣ ಕಸಿಯಲು 20 ಜನರ ತಂಡ ಅಲ್ಲಿಗೆ ಹೋಯಿತು. ದೇವಸ್ಥಾನದ ಹುಂಡಿ ಕಳ್ಳತನದ ಆರೋಪ ಹೊರಿಸಲು ಅನುಕೂಲವಾಗುವಂತೆ ಬ್ರಿಟಿಷರು ವೀರಭದ್ರ ದೇವಸ್ಥಾನದಲ್ಲಿ ಸರಕಾರದ ತಿಜೋರಿ ಇರಿಸಿ ಆ ಮಾಹಿತಿ ಮಹದೇವಪ್ಪನವರಿಗೆ ತಿಳಿಯುವಂತೆ ಮಾಡಿದರು. ಅಲ್ಲಿ ತಂಡ ಕಾರ್ಯಾಚರಣೆ ಮಾಡುವಾಗ ಅಡಗಿದ್ದ ಪೊಲೀಸರು ಹಾರಿಸಿದ ಗುಂಡಿಗೆ ಮಹದೇವಪ್ಪನವರು ಮೃತಪಟ್ಟರು. ಹುತಾತ್ಮರಾದ ಇನ್ನಿಬ್ಬರು ತಿರುಕಪ್ಪ ಮಡಿವಾಳ ಮತ್ತು ವೀರಯ್ಯ ಹಿರೇಮs…. ಆ ದಿನ ಪುಣೆಯಲ್ಲಿದ್ದ ಗಾಂಧಿಯವರು “ಮಹದೇವ ನನ್ನ ಶಿಷ್ಯ’ ಎಂದು ದುಃಖದಿಂದ ಉದ್ಗರಿಸಿದರಂತೆ.

ತಡವಾಗಿ ತಿಳಿದ ಮಹದೇವಪ್ಪ
ಮಹದೇವಪ್ಪನವರಿಗೆ ಊಟ ಹಾಕಿದ ಸೊರಬ ತಾಲೂಕು ಆನವಟ್ಟಿ ನಿವಾಸಿ ಕಮಲಮ್ಮನವರ ಮೊಮ್ಮಗ ಸದಾನಂದ ಗೌಡರ (ಶಿವಮೊಗ್ಗ ಡಯಟ್‌ ಉಪನ್ಯಾಸಕರು) ಪ್ರಕಾರ 2008ರ ವರೆಗೆ ಮಹದೇವಪ್ಪನವರ ಬಗೆಗೆ ಕರ್ನಾಟಕದಲ್ಲಿ ಹೆಚ್ಚಿನ ಬೆಳಕು ಹರಿದಿರಲಿಲ್ಲ. ಮಹಾರಾಷ್ಟ್ರದ ಪಠ್ಯಕ್ರಮದಲ್ಲಿತ್ತು. 2013ರಿಂದ ಕರ್ನಾಟಕದ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಯಿತು. ಈಗ 7ನೆಯ ತರಗತಿ ಪಠ್ಯದಲ್ಲಿ ಇವರ ವಿವರ ಇದೆ.

ಎಂತೆಂಥವರ ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ್ಯ ಬಂತು? ಇಂತಹವರ ಸಾಹಸವೂ ಪ್ರಜೆಗಳಿಗೆ ತಿಳಿಯಲು ಇಷ್ಟು ತಡವಾಯಿತೇಕೆ? ಪಠ್ಯ ಪುಸ್ತಕ ವಿಚಾರದಲ್ಲಿ ಬಡಿದಾಡಿಕೊಳ್ಳುವ ಜನರು ಚಿಂತಿಸಬೇಕಾಗಿದೆ…

ಸ್ಮಾರಕ: ಮೈಲಾರ ಮಹದೇವಪ್ಪನವರ ಹೆಸರನ್ನು ಹಾವೇರಿ ರೈಲ್ವೇ ನಿಲ್ದಾಣಕ್ಕೆ 2020ರಲ್ಲಿ ರೈಲ್ವೇ ಇಲಾಖೆ ಇರಿಸಿತು. ಮಡಿದ ಮೂವರ ಅಂತ್ಯಕ್ರಿಯೆಯನ್ನು ನಡೆಸಿದ ಹಾವೇರಿ ಹೊರಭಾಗದ ಸ್ಥಳದಲ್ಲಿ ಸರಕಾರ ವೀರಸೌಧವನ್ನು ನಿರ್ಮಿಸಿದೆ. 2018ರಲ್ಲಿ ಕೇಂದ್ರ ಸರಕಾರ ಅಂಚೆ ಚೀಟಿಯನ್ನು ಬಿಡುಗಡೆಮಾಡಿತು.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next