ಮುಂಬೈ:ದಿನಂಪ್ರತಿ ಓಡಾಡುತ್ತಿದ್ದ ಹೊಂಡ,ಗುಂಡಿಯಿಂದ ಕೂಡಿರುವ ರಸ್ತೆಯಿಂದ ರೋಸಿ ಹೋದ ಮಹಿಳೆಯೊಬ್ಬರು ತನಗೆ ಮಾನಸಿಕ, ದೈಹಿಕ ಹಾಗೂ ಆರ್ಥಿಕವಾಗಿ ಕಿರುಕುಳವಾಗುತ್ತಿದ್ದು, ಕೂಡಲೇ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ದೂರಿ ಸೋಮವಾರ(ಡಿಸೆಂಬರ್ 07, 2020) ಪೊಲೀಸರಿಗೆ ದೂರು ನೀಡಿರುವ ಘಟನೆ ಮಹಾರಾಷ್ಟ್ರದ ಔರಂಗಬಾದ್ ನಗರದಲ್ಲಿ ನಡೆದಿದೆ.
ಈ ಕುರಿತು ಪಿಟಿಐಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ನಾವು ಮಹಿಳೆ ನೀಡಿರುವ ದೂರನ್ನು ಪರಿಶೀಲಿಸಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸುವುದಾಗಿ ತಿಳಿಸಿದ್ದಾರೆ.
ದೂರು ನೀಡಿರುವ ಸಂಧ್ಯಾ ಘೋಳ್ವೆ ಅವರು ಔರಂಗಾಬಾದ್ ನಗರದಲ್ಲಿ ವಾಸವಾಗಿದ್ದು, ಈಕೆ ಇಲ್ಲಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಫುಲಾಂಬ್ರಿ ತೆಹಸಿಲ್ ಪ್ರದೇಶದಲ್ಲಿರುವ ಕಚೇರಿಗೆ ದಿನಂಪ್ರತಿ ಹೋಗುತ್ತಿರುವುದಾಗಿ ವರದಿ ತಿಳಿಸಿದೆ.
ಸಂಧ್ಯಾ ಸಂಚರಿಸುತ್ತಿರುವ ಔರಂಗಾಬಾದ್-ಅಜಂತಾ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದು, ಹಾಲಿಯಲ್ಲಿನ ಹೊಂಡ, ಗುಂಡಿಯಿಂದಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿರುವುದಾಗಿ ಅಸಮಧಾನ ವ್ಯಕ್ತಪಡಿಸಿದ್ದರು. ವಿಶ್ವವಿಖ್ಯಾತ ಅಜಂತಾ ಗುಹೆಗೆ ಭೇಟಿ ನೀಡಲು ತುಂಬಾ ಪ್ರಯಾಸಕರವಾಗಿದೆ ಎಂದು ವಿದೇಶಿ ಪ್ರವಾಸಿಗರು ಅಸಮಾಧಾನ ಹೊರಹಾಕಿರುವುದಾಗಿ ವರದಿ ತಿಳಿಸಿದೆ.
ಪೊಲೀಸರು ಕೂಡಲೇ ರಸ್ತೆ ದುರಸ್ತಿ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ದೂರಿ ಘೋಳ್ವೆ ದೂರು ನೀಡಿದ್ದರು. ರಸ್ತೆಯಲ್ಲಿನ ಹೊಂಡ ಗುಂಡಿಯಿಂದಾಗಿ ಮಾನಸಿಕ, ದೈಹಿಕ ಹಾಗೂ ಆರ್ಥಿಕ ಕಿರುಕುಳ ಆಗುತ್ತಿದೆ. ಆದರೆ ಪೊಲೀಸರು ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಂಧ್ಯಾ ಸುದ್ದಿಗಾರರ ಜತೆ ಮಾತನಾಡುತ್ತ ದೂರಿದ್ದಾರೆ.
ರಸ್ತೆಯನ್ನು ದುರಸ್ತಿ ಮಾಡುತ್ತಾರೆ ಎಂಬ ನಿರೀಕ್ಷೆ ತನ್ನದಾಗಿದೆ ಎಂದು ಹೇಳಿರುವ ಸಂಧ್ಯಾ, ಇಲ್ಲದಿದ್ದರೆ ದಿನದಿಂದ ದಿನಕ್ಕೆ ರಸ್ತೆ ಮತ್ತಷ್ಟು ಹದಗೆಡಲಿದ್ದು, ದ್ವಿಚಕ್ರ ಸೇರಿದಂತೆ ವಾಹನ ಸವಾರರು ಸಂಚರಿಸುವುದೇ ತ್ರಾಸದಾಯವಾಗಲಿದೆ ಎಂದು ಆರೋಪಿಸಿದ್ದಾರೆ.