Advertisement

ಜಿಲ್ಲಾದ್ಯಂತ ಸಂಭ್ರಮದ ಮಹಾಲಯ ಅಮಾವಾಸ್ಯೆ

09:31 PM Sep 28, 2019 | Lakshmi GovindaRaju |

ಹನೂರು: ಮಹಾಲಯ ಅಮಾವಾಸ್ಯೆ ಹಿನ್ನೆಲೆ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಎಣ್ಣೆಮಜ್ಜನಸೇವೆ ಮತ್ತು ಅಮಾವಾಸ್ಯೆ ಪೂಜಾ ಕೈಂಕರ್ಯಗಳು ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿದವು. ಮಹಾಲಯ ಅಮಾವಾಸ್ಯೆ ಹಿನ್ನೆಲೆ ಶುಕ್ರವಾರ ಸಂಜೆ 6.30ರಿಂದ 8.30ರ ಶುಭ ವೇಳೆಯಲ್ಲಿ ಎಣ್ಣೆಮಜ್ಜನ ಸೇವೆ ಮತು ತೈಲಾಭಿಷೇಕ ಪೂಜಾ ಕೈಂಕರ್ಯಗಳು ನೆರವೇರಿದವು. ಶನಿವಾರ ಬೆಳಿಗ್ಗೆ 3.30ರಿಂದ 6.30ರ ವೇಳೆಯಲ್ಲಿ ಶ್ರೀಸ್ವಾಮಿಗೆ ರುದ್ರಾಭಿಷೇಕ, ವಿಭೂತಿ ಅಭಿಷೇಕ ಬಿಲ್ವಾರ್ಚನೆ ಸೇರಿದಂತೆ ವಿವಿಧ ಅರ್ಚನೆ ಪೂಜೆಗಳು ಬೇಡಗಂಪಣ ಅರ್ಚಕ ವೃಂದದಿಂದ ಜರುಗಿದವು.

Advertisement

ವಿವಿಧ ಉತ್ಸವಗಳಲ್ಲಿ ಭಾಗಿ: ಮಹಾಲಯ ಅಮಾವಾಸ್ಯೆಯ ಹಿನ್ನೆಲೆ ಪಾದಯಾತ್ರೆ ಮತ್ತು ವಾಹನಗಳ ಮೂಲಕ ಕಳೆದೆರಡು ದಿನಗಳಿಂದಲೇ ಆಗಮಿಸಿದ್ದ ಭಕ್ತಾದಿಗಳು ಉರುಳು ಸೇವೆ, ಮುಡಿಸೇವೆಗಳನ್ನು ಸಮರ್ಪಿಸಿ ಪುಣ್ಯಸ್ನಾನ ಮಾಡಿ, ಸರದಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಹರಕೆ ಹೊತ್ತ ಭಕ್ತಾದಿಗಳು ಹುಲಿವಾಹನ, ಬಸವವಾಹನ, ಬೆಳ್ಳಿ ಕಿರಿಟೋತ್ಸವ, ರುದ್ರಾಕ್ಷಿ ಮಂಟಪೋತ್ಸವ ಸೇವೆಗಳಲ್ಲಿ ಭಾಗವಹಿಸಿ ಹರಕೆ ಸಲ್ಲಿಸಿದರು.

ಭಕ್ತಾದಿಗಳು ದಂಡಿನ ಕೋಲನ್ನು ಹೊತ್ತು ಮೆರವಣಿಗೆಯುದ್ದಕ್ಕೂ ಸಾಗಿದರು. ಉತ್ಸವದ ವೇಳೆ ಹರಕೆ ಹೊತ್ತ ಭಕ್ತಾದಿಗಳು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಧವಸ-ಧಾನ್ಯಗಳು, ಚಿಲ್ಲರೆ ಹಣ, ಫ‌ಲ-ಪುಷ್ಪಗಳನ್ನು ಎಸೆದು ಭಕ್ತಿ ಸಮರ್ಪಿಸಿದರು. ಸತ್ತಿಗೆ-ಸುರಪಾನಿ ವಾದ್ಯಮೇಳಗಳ ನಡುವೆ ನಡೆದ ಉತ್ಸವದಲ್ಲಿ ಭಕ್ತರು ವಾದ್ಯದ ಶಬ್ದಕ್ಕೆ ತಕ್ಕಂತೆ ಕುಣಿತ ಹಾಕಿ ಸಂಭ್ರಮಿಸಿದರು. ಬಳಿಕ ಪಂಜಿನಸೇವೆ, ರಜಾ ಒಡೆಯುವ ಸೇವೆಗಳಲ್ಲಿ ಭಾಗವಹಿಸಿದರು.

ಭಕ್ತರ ದಂಡು: ಮಹಾಲಯ ಅಮಾವಾಸ್ಯೆ ಸರ್ಕಾರಿ ರಜಾ ಇದ್ದ ಹಿನ್ನೆಲೆ ಮತ್ತು ವಾರಾಂತ್ಯದ ಹಿನ್ನೆಲೆ ಭಕ್ತಾದಿಗಳ ದಂಡೇ ಶ್ರೀ ಕ್ಷೇತ್ರದತ್ತ ಆಗಮಿಸಿತ್ತು. ಅಮಾವಾಸ್ಯೆ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಲು ನೆರೆಯ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ ಕನಕಪುರ, ಕೆ.ಆರ್‌.ಪೇಟೆ, ಸಾತನೂರು, ಚಿಕ್ಕಬಳ್ಳಾಪುರ, ಹುಣಸೂರು ಸೇರಿದಂತೆ ಭಕ್ತಾದಿಗಳು ಆಗಮಿಸಿದ್ದರು.

ಕೆಲ ಭಕ್ತಾದಿಗಳು ಶ್ರೀಕ್ಷೇತ್ರದಲ್ಲಿ ದರ್ಶನ ಮುಗಿಸಿ ನಾಗಮಲೆ ಕ್ಷೇತ್ರಕ್ಕೂ ಭೇಟಿ ನೀಡಿದ್ದರು. ಇನ್ನು ಕೆಲ ಭಕ್ತಾದಿಗಳು ಶ್ರೀಸ್ವಾಮಿಯ ದರ್ಶನದ ಬಳಿಕ ಜಿಲ್ಲೆಯ ಪ್ರವಾಸಿತಾಣಗಳಾದ ಹೊಗೇನಕಲ್ಲು ಜಲಪಾತ, ಶಿವನ ಸಮುದ್ರದ ಸಮೂಹ ದೇವಾಲಯಗಳು, ಗಗನಚುಕ್ಕಿ ಜಲಪಾತ, ಭರಚುಕ್ಕಿ ಜಲಪಾತ, ಬಿಳಿಗಿರಿರಂಗನಬೆಟ್ಟಗಳತ್ತ ತೆರಳುತ್ತಿದ್ದುದು ಕಂಡುಬಂದಿತು.

Advertisement

ಪ್ರಾಧಿಕಾರದಿಂದ ಸಕಲ ಸೌಕರ್ಯ: ಮಹಾಲಯ ಅಮಾವಾಸ್ಯೆ ಹಿನ್ನೆಲೆ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಪ್ರಾಧಿಕಾರದವತಿಯಿಂದ ಸಕಲ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಭಕ್ತಾದಿಗಳ ಅನುಕೂಲಕ್ಕಾಗಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿತ್ತು. ನಿರ‌ಂತರ ದಾಸೋಹ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಿಶೇಷ ಅಲಂಕಾರ: ಮಹಾಲಯ ಅಮಾವಾಸ್ಯೆ ಹಿನ್ನೆಲೆ ದೇವಾಲಯದ ರಾಜಗೋಪುರ, ಗರ್ಘಾಂಗಣದ ಗೋಪುರ, ದೇವಾಲಯದ ರಾಜಬೀದಿ ಸೇರಿದಂತೆ ಶ್ರೀ ಕ್ಷೇತ್ರದ ಆಯಾಕಟ್ಟಿನ ಸ್ಥಳಗಳಲ್ಲಿ ವಿಶೇಷವಾಗಿ ವಿದ್ಯುದ್ದೀಪಾಲಂಕಾರ ಮಾಡಲಾಗಿತ್ತು. ದೇವಾಲಯದ ಗರ್ಭಗುಡಿಯನ್ನು ವಿಶೇಷವಾಗಿ ವಿವಿಧ ವರ್ಣದ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next