Advertisement

ರಾಜಕೀಯ ಬದಿಗಿಟ್ಟರೆ ಮಹದಾಯಿಗೆ ಪರಿಹಾರ

12:16 PM Feb 04, 2018 | Team Udayavani |

ಮಹದೇವಪುರ: ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ರಾಜಕಾರಣ ಮಾಡದೆ ಪ್ರಮಾಣಿಕ ಪ್ರಯತ್ನ ಮಾಡಿದ್ದೇ ಆದರೆ ಕೆಲವೇ ತಾಸುಗಳಲ್ಲಿ ವಿವಾದಕ್ಕೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

Advertisement

ಕಾಡುಗುಡಿಯ ಸರ್ಕಾರಿ ಮಾದರಿ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಕಸಾಪ ವತಿಯಿಂದ ಆಯೋಜಿಸಿದ್ದ 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯಿಂದ ಕೂಡಿರುವ ಭಾರತದಲ್ಲಿ ವಿವಿಧ ವಿಚಾರಗಳಿಂದ ಬಿಕ್ಕಟ್ಟು ಮೂಡುತ್ತಿದೆ.

ಪ್ರಸ್ತುತ ಮಹದಾಯಿ, ಕಳಸಾ ಬಂಡೂರಿ ವಿಚಾರ ರಾಜ್ಯಗಳ ನಡುವೆ ಬಿಕ್ಕಟ್ಟು ಮೂಡಿಸಿದೆ. ರಾಜಕೀಯ ಪಕ್ಷಗಳು ಜನರ ಹಿತಕ್ಕೆ ನಿರ್ಣಯ ಕೈಗೊಳ್ಳುವ ಮನಸ್ಸು ಮಾಡಿದ್ದರೆ ಕೆಲವೇ ಗಂಟೆಗಳಲ್ಲಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬಹುದಿತ್ತು ಎಂದರು.

ತುಂಬಾ ನೋವಾಗಿದೆ: ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪರ ಹೋರಾಟಗಾರರು ಯಾವುದೇ ಪಕ್ಷದ ಏಜೆಂಟರಲ್ಲ. ಯಾರ ಗುಲಾಮರೂ ಅಲ್ಲ. ಆದರೆ, ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸಲು ಇತ್ತೀಚೆಗೆ ಕರೆ ನೀಡಲಾಗಿದ್ದ ಬಂದ್‌ “ರಾಜಕೀಯ ಪ್ರೇರಿತ’ ಎಂದು ಪಕ್ಷವೊಂದರ ಸಣ್ಣ ಮನಸ್ಸಿನ ನಾಯಕರು ಆಡಿದ ಮಾತುಗಳಿಂದ ತುಂಬಾ ನೋವಾಗಿದೆ,’ ಎಂದು ಚಂಪಾ ಬೇಸರ ವ್ಯಕ್ತಪಡಿಸಿದರು.

ಪ್ರಧಾನಿ ಬಗ್ಗೆ ಗೌರವವಿದೆ: ಪಕ್ಷಗಳ ಸಿದ್ಧಾಂತಗಳು ಬೇರೆ ಬೇರೆ ಇರಬಹುದು. ಆದರೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾದ ನಂತರ ಸಿದ್ಧಾಂತಗಳನ್ನು ಬದಿಗಿರಿಸಿ ಜನಪರ ನಿಲುವುಗಳಿಗೆ ಬದ್ಧವಾಗಬೇಕು. ಆದರೆ, ಮಹದಾಯಿ ವಿಚಾರದಲ್ಲಿ ಯಾವ ನಾಯಕರೂ ತಮ್ಮ ಪಕ್ಷದ ಇತಿಮಿತಿ ಮೀರಿ ನಿರ್ಧಾರ ಕೈಗೊಳ್ಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ.

Advertisement

ಅವರ ಪಕ್ಷದ ಸಿದ್ಧಾಂತದ ಬಗ್ಗೆ ನಮಗೆ ಭಿನ್ನಾಭಿಪ್ರಯ ಇರಬಹುದು. ಆದರೆ, ಅವರು ಹೋರಾಟದ ಹಿನ್ನೆಲೆಯಿಂದ ಬಂದವರು. ಮೇಲಾಗಿ ಇಡೀ ದೇಶಕ್ಕೆ ಅವರೇ ಪ್ರಧಾನಮಂತ್ರಿ. ಹೀಗಾಗಿ ಮಹದಾಯಿಗೆ ಸಂಬಂಧಿಸಿದ ರಾಜ್ಯಗಳನ್ನು ಂದೆಡೆ ಸೇರಿಸಿ, ಚರ್ಚಿಸಿ ಸಮಸ್ಯೆ ಪರಿಹರಿಸಬೇಕು. ಈ ಮೂಲಕ ಮನೆ ಯಜಮಾನನ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಚಂಪಾ ಹೇಳಿದರು.

ಕೃತಿಗಳ ಮೆರವಣಿಗೆ ಮಾಡಿ: ಸಮ್ಮೇಳನಾಧ್ಯಕ್ಷ ಕೋಟಗಾನಹಳ್ಳಿ ರಾಮಯ್ಯ ಅವರು ಮಾತನಾಡಿ, “ಅದ್ಧೂರಿತನದಿಂದ ಭಾಷೆ ಬೆಳೆಯುವುದಿಲ್ಲ. ಇದೇ ಉದ್ದೇಶದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಮಾಡದಂತೆ ತಿಳಿಸಿದ್ದೆ. ಹಿಂದೆ ಕೋಲಾರದಲ್ಲಿ ನಡೆದ ಸಮ್ಮೇಳನದಲ್ಲೂ ನಾನು ಸಾರೋಟು ಏರಿರಲಿಲ್ಲ.

ಸಾರೋಟಿನಲ್ಲಿ ಕವಿ ಕೂರುವ ಅಗತ್ಯವಿಲ್ಲ. ಆತನ ಬದಲಿಗೆ ಮೇರು ಕೃತಿಗಳನ್ನಿರಿಸಿ ಮೆರವಣಿಗೆ ಮಾಡಬೇಕು. ಯಾವುದೇ ಸಮಾರಂಭ, ಸಮ್ಮೇಳನ, ಸಮಾವೇಶ ಆಯೋಜಿಸಿದರೂ ಸಂಪ್ರದಾಯ, ಅದ್ಧೂರಿತನ ಬಿಟ್ಟು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಬೇಕು,’ ಎಂದು ಸಲಹೆ ನೀಡಿದರು.

ಕಾಡುಗುಡಿಯಲ್ಲಿ 20 ವರ್ಷಗಳ ಹಿಂದೆ ಮಕ್ಕಳ ಮೇಳ ನಡೆಸಿದ ನೆನಪಿದೆ. ಬಿ.ವಿ.ಕಾರಂತರು, ಇಕ್ಬಾಲ್‌ ಅನ್ಸಾರಿ ಅವರು ನಟಕ ರಚಿಸಿದ್ದ ವೇದಿಕೆ ಇದು. ಇಂಥ ಖ್ಯಾತನಾಮರ ನೇತೃತ್ವದಲ್ಲಿ ಕಾಡುಗುಡಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ನಾಟಕಗಳು, ರಂಗಮಂಟಪಕ್ಕೆ ಮಾದರಿ ಎಂಬಂತೆ ಮೂಡಿಬರುತ್ತಿದ್ದವು. ಹಾಗೇ ರಂಗಾಯಣ ಕಲಾವಿದರು ಮಕ್ಕಳ ಮೇಳಕ್ಕೆ ದೊಡ್ಡ ಕಾಣಿಕೆ ನೀಡಿದ್ದಾರೆ ಎಂದು ಸ್ಮರಿಸಿದರು.

ಚನ್ನಸಂದ್ರ ಸರ್ಕಾರಿ ಶಾಲೆಯಿಂದ ಕಾಡುಗುಡಿಯಲ್ಲಿ ಸಿದ್ಧಪಡಿಸಿದ್ದ ಸಾಹಿತ್ಯ ಸಮ್ಮೇಳನದ ವೇದಿಕೆವರೆಗೂ ಕನ್ನಡ ಜಾಗೃತಿ ಮೆರವಣಿಗೆ ನಡೆಯಿತು. ವಿವಿಧ ಜನಪದ ಕಲಾತಂಡಗಳು ಮೆರವಣಿಗೆಗೆ ಸಾಥ್‌ ನೀಡಿದವು. ಸಮ್ಮೇಳನದ ಅಂಗವಾಗಿ ಶಾಲೆ ಆವರಣದಲ್ಲಿ ಕನ್ನಡ ಪುಸ್ತಕ ಮಳಿಗೆಗಳನ್ನು ತೆರೆಯಲಾಗಿತ್ತು.

ಇದೇ ವೇಳೆ ಬೆಳ್ಳಂದೂರು ವಾರ್ಡ್‌ ಕಸಾಪ ವತಿಯಿಂದ ಆಯೋಜಿಸಿದ್ದ ಸಾಲುಮರದ ತಿಮ್ಮಕ್ಕ ಅವರ ಸ್ತಬ್ಧ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿದ್ದವು.
ಚಿತ್ರ ನಟಿ, ವಿಧಾನ ಪರಿಷತ್‌ ಸದಸ್ಯೆ ತಾರಾ ಅನುರಾಧಾ, ನಾಡೋಜ ಡಾ.ಮಹೇಶ್‌ ಜೋಷಿ, ಡಾ.ಬಾನಂದೂರು ಕೆಂಪಯ್ಯ, ಸಾಹಿತಿ ಬಿ.ಆರ್‌.ಲಕ್ಷ್ಮಣರಾವ್‌, ಬೈರಮಂಗಲ ರಾಮೇಗೌಡ, ಅಜಿತ್‌ ಕುಮಾರ್‌, ಪಾಲಿಕೆ ಸದಸ್ಯರಾದ ಎಸ್‌.ಮುನಿಸ್ವಾಮಿ, ಶ್ವೇತಾ ವಿಜಯ್‌ ಕುಮಾರ್‌, ಪರಿಸರ ಮಂಜುನಾಥ್‌ ಇತರರು ಪಾಲ್ಗೊಂಡಿದರು.

Advertisement

Udayavani is now on Telegram. Click here to join our channel and stay updated with the latest news.

Next