ನರಗುಂದ: ಕುಡಿಯುವ ನೀರಿನ ಯೋಜನೆಗಾಗಿ ನಡೆಯುತ್ತಿರುವ ಮಹದಾಯಿ ಮತ್ತು ಕಳಸಾ-ಬಂಡೂರಿ ಚಳವಳಿ ಮೂರು ವರ್ಷ ಪೂರೈಸಿದೆ.
ನ್ಯಾಯಾಧಿಕರಣ ವಿಳಂಬ,ಸರ್ಕಾರಗಳ ನಿರ್ಲಕ್ಷÂ, ರಾಜಕೀಯ ಪಕ್ಷಗಳ ತಾತ್ಸಾರ, ಮೆಟ್ಟಿ ನಿಂತ ಮಲಪ್ರಭೆ ಮಕ್ಕಳ ಕೂಗು ಸೋಮವಾರ ನಾಲ್ಕನೇ ವರ್ಷಕ್ಕೆ ದಾಪುಗಾಲಿಟ್ಟು ಬಂಡಾಯ ನಾಡಿನ ಹೋರಾಟಕ್ಕೆ ಸಾಕ್ಷಿಯಾಗಿ ನಿಂತಿದೆ!
ಐದು ದಶಕಗಳ ಬೇಡಿಕೆ ಯಾಗಿರುವ ಮಹದಾಯಿ ನದಿ ನೀರು ಮಲಪ್ರಭೆಗೆ ಸೇರಿಸುವಂತೆ ಒತ್ತಾಯಿಸಿ 2015, ಜು.16ರಂದು ಚಳವಳಿ ಆರಂಭವಾಗಿದೆ.
1980ರ ರೈತ ಬಂಡಾಯದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಹುತಾತ್ಮ ರೈತ ದಿ|ಈರಪ್ಪ ಕಡ್ಲಿಕೊಪ್ಪರ ವೀರಗಲ್ಲಿನ(ಪಟ್ಟಣದ ಹೆದ್ದಾರಿ ಬದಿಗೆ) ಎದುರು ವೇದಿಕೆ ನಿರ್ಮಿಸಿ ವಿವಿಧ ಸಂಘಟನೆಗಳೊಂದಿಗೆ ರೈತ ಸೇನಾ- ಕರ್ನಾಟಕ ನಿರಂತರ ಚಳವಳಿ ಪ್ರಾರಂಭಿಸಿತು.
ಮಹದಾಯಿ ನದಿಯ 45 ಟಿಎಂಸಿ ಅಡಿ ಮತ್ತು ಕಳಸಾ-ಬಂಡೂರಿ ನಾಲೆಗಳ 7.56 ಟಿಎಂಸಿ ಅಡಿ ನೀರಿನ ಬೇಡಿಕೆಯೊಂದಿಗೆ ಬೆರಳೆಣಿಕೆ ರೈತರೊಂದಿಗೆ ಚಾಲನೆ ಪಡೆದ ಹೋರಾಟದ ಮಹತ್ವ, ಉದ್ದೇಶ, ಬಹುದಿನಗಳ ಬೇಡಿಕೆ ಈಡೇರದ ಕೊರಗು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಜಾಗೃತಿ ಮೂಡಿಸಿತು. ದಿನದಿಂದ ದಿನಕ್ಕೆ ಕಾವು ಪಡೆದುಕೊಂಡು ದಿನ ಕಳೆದಂತೆ ಮಣ್ಣಿನ ಮಕ್ಕಳು ಸಮರೋಪಾದಿಯಲ್ಲಿ ಸಾಗಿಬಂದು ಹೋರಾಟದ ರೂಪವನ್ನೇ ಬದಲಿಸಿದ್ದು ದಾಖಲಾರ್ಹ ಚಳವಳಿ ಎನಿಸಿಕೊಂಡಿತು.
ಚಳವಳಿ ಗಂಭೀರವಾದಂತೆ ರೈತರ ಕೂಗಿಗೆ ಎಚ್ಚೆತ್ತ ಕ್ಷೇತ್ರದ ಹಾಲಿ ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಜಂಟಿಯಾಗಿ ವೇದಿಕೆಯೇರಿ ರೈತ ಸಮುದಾಯಕ್ಕೆ ನೈತಿಕ ಬೆಂಬಲ ನೀಡಿದ್ದೇ ತಡ ಚಳವಳಿ ಜನಾಂದೋಲನ ಸ್ವರೂಪ ಪಡೆಯಿತು.