Advertisement

ಕಸಮಯ ಸಂತೋಷ

01:25 AM Jan 19, 2019 | |

ಕಸವಿಂಗಡಣೆ ಎಂಬುದು ಈಗ ಪ್ರತಿಯೊಂದು ನಗರವನ್ನು ಕಾಡುತ್ತಿರುವ ಸಮಸ್ಯೆ. ಇಂಥ ಸಂದರ್ಭದಲ್ಲಿ ಕಸ ವಿಂಗಡಣೆಯಿಂದ ಪರಿಸರ ಕಾಪಾಡುವ ಹಾಗೂ ಆದಾಯವನ್ನು ಗಳಿಸುವ ಯೋಜನೆಯೊಂದನ್ನು ಮಧುಗಿರಿ ಪುರಸಭೆಯ ಮುಖ್ಯಾಧಿಕಾರಿಗಳು ರೂಪಿಸಿದ್ದಾರೆ. ಮೊದಲು ಹಂತದಲ್ಲಿ ನಿರೀಕ್ಷಿಸಿದ ಯಶಸ್ಸನ್ನು ಕಂಡಿದ್ದಾರೆ. 

Advertisement

  ಮಧುಗಿರಿ ಸ್ವತ್ಛನಗರಿ. ಪ್ರಧಾನಿಗಳ ಘೋಷಣೆಯಾದ “ಸ್ವತ್ಛ ಭಾರತ್‌’ನ ಜಪ ಇಲ್ಲಿ ಅನುರಣಿಸುತ್ತಿದೆ. ಹೇಗೆ ಎಂದಿರಾ ಕೇಳಿ;

ಪ್ಲಾಸ್ಟಿಕ್‌ ಮಹಾಮಾರಿಯನ್ನು ಬೇರು ಸಮೇತ ಕೀಳಬೇಕು ಅಂತ ಇಲ್ಲಿ ಪುರಸಭೆ ಯೋಜಿಸಿದೆ. ಹೀಗಾಗಿ, ಕಸವಿಲೇವಾರಿ ಮಾಡಲು ಇಲ್ಲಿ ಪ್ಲಾಸ್ಟಿಕ್‌ ಡಸ್ಟ್‌ಬಿನ್‌ಗಳಿಲ್ಲ. ಬದಲಾಗಿ ಬಿದಿರಿನ ಬುಟ್ಟಿಗಳು ಬಂದಿವೆ. 

 ಪ್ಲಾಸ್ಟಿಕ್‌ ಬಳಸಬೇಡಿ ಅಂತ ಜನಗಳಿಗೆ ಹೇಳಿ, ಈಗ ನಾವೇ ಆ ಕೆಲಸ ಮಾಡಿದರೆ ಹೇಗೆ? ಅನ್ನೋದು ಪುರಸಭೆ ಮುಖ್ಯಾಧಿಕಾರಿ ಲೋಹಿತ್‌ ಅವರ ಪ್ರಶ್ನೆ. ಹೀಗಾಗಿ, ತಾವೇ ಪುರಸಭೆಯಿಂದಲೇ ಸ್ವತ್ಛತಾ ಅಭಿಯಾನದ ಕೆಲಸ ಶುರುವಾಗಬೇಕು ಎಂದು ನಿರ್ಧರಿಸಿರುವ ಅವರು,  ಬಿದಿರಿನ ಬಳಕೆ ಶುರು ಮಾಡಿದ್ದಾರೆ. ಇದಕ್ಕಾಗಿ, ಹೆಚ್ಚುಕಮ್ಮಿ 500  ಬುಟ್ಟಿಗಳನ್ನು ತರಿಸಿದ್ದಾರೆ. 

Advertisement

ಒಂದು ಪಕ್ಷ ನಿಮ್ಮ ಯೋಜನೆ ಗೆದ್ದರೆ? ಅಂದರೆ…

 “ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರದ್ದೇ 13 ಎಕರೆ ಜಮೀನು ಇದೆ. ಅಲ್ಲಿ ಬಿದಿರು ಬೆಳೆಸಿ, ಅದನ್ನು ಬುಟ್ಟಿಗಳಿಗೆ ಉಪಯೋಗಿಸಿದರೆ ಆಯ್ತು ಬಿಡಿ.  ಅರಣ್ಯ ಇಲಾಖೆ ಜೊತೆ ಕೈ ಜೋಡಿಸಿದರೆ ಸಾಕು’ ಅಂತಾರೆ ಲೋಹಿತ್‌.  ಹಿಂದೆ, ಮನೆ ಮನೆಗೂ  35 ಸಾವಿರ ಪ್ಲಾಸ್ಟಿಕ್‌ ಡಬ್ಬಗಳನ್ನು ಪುರಸಭೆವತಿಯಿಂದಲೇ ವಿತರಣೆ ಮಾಡಿತು. ಇದರಲ್ಲಿ ಒಣ ಕಸ, ಹಸಿ ಕಸ ವಿಂಗಡಣೆ ಮಾಡಬೇಕಿತ್ತು. ಈಗ ಐದು ಡಬ್ಬಗಳನ್ನು ಕೊಟ್ಟಿದ್ದಾರೆ. ಹಸಿಕಸ, ಒಣಕಸ, ಪ್ಲಾಸ್ಟಿಕ್‌, ಸ್ಯಾನಿಟರಿ, ಬಟ್ಟೆ, ಎಲೆಕ್ಟ್ರಾನಿಕ್‌ ವಸ್ತುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಆದರೆ, ಈ ಮೊದಲು ಪ್ರಾಯೋಗಿಕವಾಗಿ ಪ್ರತಿ ಬೀದಿಯಲ್ಲೂ ಬಿದಿರಿನಿಂದ ತಯಾರಿಸಿದ ಬುಟ್ಟಿಗಳನ್ನು ಜೋಡಿಸಿ ಹಸಿಕಸ-ಒಣಕಸ ಎಂಬುದಾಗಿ ವಿಂಗಡಣೆ ಮಾಡಿ, ನಂತರ ಬೃಹತ್‌ ಬಿದಿರಿನ ತೊಟ್ಟಿಯಲ್ಲಿ ಕಸವನ್ನು ಬೇರ್ಪಡಿಸುತ್ತಿದ್ದಾರೆ.  ಸಗಣಿ ನೀರಿನಿಂದ ಗೋಣಿಚೀಲ ಬಳಸಿ ಉತ್ಕೃಷ್ಟ  ಸಾವಯವ ಗೊಬ್ಬರವನ್ನು ತಯಾರಿಸಲು ಮುಂದಾಗಿದ್ದಾರೆ. 

ಕಸ ಸಂಗ್ರಹಣೆ ಹೇಗೆ? 
ಕಸ ಬೀಳುವ ಸೂಕ್ಷ್ಮ ಜಾಗಗಳಲ್ಲಿ ಬಿದಿರಿನಿಂದ ತಯಾರಿಸಿದ ಎರಡು ಬುಟ್ಟಿಗಳನ್ನು ಅಳವಡಿಸಲಾಗಿದೆ.  ಹಸಿಕಸ-ಒಣಕಸ ವಿಂಗಡಣೆಯಾಗುತ್ತದೆ. ಅಲ್ಲದೆ ಪ್ರತಿ ಮನೆಯಿಂದ ಬರುವ ಕಸವನ್ನು ಮನೆಯ ಮುಂಭಾಗವೇ ಬೇರ್ಪಡಿಸಿ ನಾಲ್ಕು ಡಬ್ಬ ಅಥವಾ ಬುಟ್ಟಿಗಳಲ್ಲಿ ಸಂಗ್ರಹಿಸಿ, ಪಟ್ಟಣದ ಪ್ರಮುಖ ಕಡೆಗಳಲ್ಲಿ ನೆಲಕ್ಕೆ ತಾಗುವಂತೆ, ಅದರೊಳಗೆ ಶುದ್ಧಗಾಳಿ ಓಡಾಡುವಂತೆ ಬೃಹತ್‌ ಚೌಕಾಕಾರದ ಬಿದಿರಿನ ತೊಟ್ಟಿಯನ್ನು ಇರಿಸಲಾಗುತ್ತದೆ. ಅದಕ್ಕೆ  ಸಗಣಿ ನೀರು ಚಿಮುಕಿಸಿ, 30 ದಿನ ಕೊಳೆಸಲಾಗುತ್ತಿದೆ. ಇದರಿಂದ ಯಾವುದೇ ರಾಸಾಯನಿಕವಿಲ್ಲದ ಸಾವಯವ ಗೊಬ್ಬರ ತಯಾರಾಗುತ್ತದೆ.  “ಈಗಾಗಲೇ ಪುರಸಭೆವತಿಯಿಂದ ಎರೆಹುಳು ಗೊಬ್ಬರವನ್ನು ತಯಾರು ಮಾಡುತ್ತಿದ್ದು, ಈ ರೀತಿಯ ಸಾವಯವ ಗೊಬ್ಬರದ ಕಲ್ಪನೆ ಇಡೀ ದೇಶದಲ್ಲೇ ಪ್ರಥಮ ‘ ಎನ್ನುತ್ತಾರೆ ಮುಖ್ಯಾಧಿಕಾರಿ ಲೋಹಿತ್‌. 

ಬಿದಿರಿಗೆ ಬೆಂಬಲ 
ಈ ಕಾರ್ಯದಿಂದ ಗೊಬ್ಬರಕ್ಕೂ, ಬಿದಿರಿಗೂ ಬಹಳ ಬೇಡಿಕೆ ಹುಟ್ಟಲಿದೆ.  ಬಿದಿರು ಬೆಳೆಯಲು ರೈತರಿಗೆ ಉತ್ತೇಜನ ನೀಡುವುದಲ್ಲದೆ, ಪ್ರಕೃತಿಯ ಬಗ್ಗೆ ಕಾಳಜಿವಹಿಸಬಹುದು.  13 ಎಕರೆ ಪುರಸಭೆಯ ಜಾಗದಲ್ಲಿ ಕಸ ವಿಲೇವಾರಿ ಘಟಕವಿದ್ದು, ಅದರ ಉಳಿಕೆ ಜಮೀನಿನನಲ್ಲಿ ಇದೇ ಗೊಬ್ಬರ ಬಳಸಿ ತರಕಾರಿ, ಸೊಪ್ಪು ಬೆಳೆಯುತ್ತಿದ್ದಾರೆ. ಉಳಿದಂತೆ ಗೊಬ್ಬರಕ್ಕಾಗಿ ಸಗಣಿಯ ಅವಶ್ಯಕತೆ ಇದ್ದು, ಅದರ ಸಲುವಾಗಿಯೇ ಹಸುಗಳನ್ನು ಸಹ ಸಾಕಲಾಗುತ್ತಿದೆ.  ಅವುಗಳಿಗೆ ಮೇವಿನ ಕೊರತೆಯಾಗದಂತೆ ಪುರಸಭೆಯ ಜಾಗದಲ್ಲೇ ಸೀಮೆಹುಲ್ಲು ಹಾಗೂ ಜೋಳವನ್ನೂ ಬೆಳೆಯಲಾಗುತ್ತಿದೆ.  ಇನ್ನು ಪಟ್ಟಣದ ಕೋಳಿ ಮತ್ತು ಮೀನಿನ ಅಂಗಡಿಗಳಿಂದ ಬರುವ ತ್ಯಾಜ್ಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಮುಖ್ಯಾಧಿಕಾರಿ ಸೂಪರ್‌ ಐಡಿಯಾ ಮಾಡಿದ್ದಾರೆ. ಅದೇನೆಂದರೆ,  ಬಾತುಕೋಳಿಗಳ ಸಾಕಣೆಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.  ಇವು ಆ ತ್ಯಾಜ್ಯವನ್ನು ತಿನ್ನುವುದರಿಂದ ಪರಿಸರಕ್ಕೂ ಹಾನಿಯಾಗುವುದಿಲ್ಲ. ಜೊತೆಗೆ ಬಾತುಕೋಳಿ ಸಾಕಣೆಯನ್ನೂ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ.  

ಕಸದಿಂದ ರಸ
 ಮಧುಗಿರಿ ಪುರಸಭೆ ಮುಖ್ಯಾಧಿಕಾರಿಯ ಚಿಂತನೆ ಎಲ್ಲರಿಗೂ ಮಾದರಿ. ಹೇಗೆಂದರೆ, ಈ ನಗರದಲ್ಲಿ ದಿನಕ್ಕೆ ಮೂರು ಟನ್‌ ಕಸ ಬೀಳುತ್ತಿದೆ. ಪಟ್ಟಣದಲ್ಲಿರುವ ಶಿರಾಗೇಟ್‌, ಪಂಪ್‌ಹೌಸ್‌ ಹತ್ತಿರ, ಹಳೇ ಡಿವೈಎಸ್‌ಪಿ ಕಾಂಪೌಂಡ್‌ನ‌ಲ್ಲಿ, ಮುನಿಸಿಪಲ್‌ ಕಾಂಪೌಂಡ್‌ ಆವರಣದಲ್ಲಿ… ಹೀಗೆ ಐದು ಕಡೆ ಡಂಪಿಂಗ್‌ ಯಾರ್ಡ್‌ಗಳಿವೆ. 

ಹೆಚ್ಚು ಕಮ್ಮಿ ಹಸಿಕಸವೇ ಸರಾಸರಿ ದಿನಕ್ಕೆ ಎರಡು ಟನ್‌ ಸಿಗುತ್ತಿದೆಯಂತೆ. ಅಂದರೆ, ತಿಂಗಳಿಗೆ 60 ಟನ್‌ ಕಸವಾಯ್ತು. ಇದಕ್ಕೆ ಗಂಜಲ, ಸಗಣಿ ನೀರು ಚುಮುಕಿಸಿ ಇಟ್ಟುಬಿಡುತ್ತಾರಂತೆ.  30 ದಿನದ ನಂತರ ತೆರೆದರೆ ಕನಿಷ್ಠ ಎಂದರೂ 10ರಿಂದ 15 ಟನ್‌ ಗೊಬ್ಬರ ಸಿಗುತ್ತಿದೆ. ಇದನ್ನು ಆರಂಭದಲ್ಲಿ ರೈತರ ವ್ಯವಸಾಯಕ್ಕೆ, ಪುರಸಭೆ ವ್ಯಾಪ್ತಿಯಲ್ಲಿ ಮನೆಗಳಲ್ಲಿ ಕುಂಡ ಕೃಷಿ ಮಾಡುವವರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಒಂದು ಪಕ್ಷ ಮಾರಾಟ ಮಾಡಿದರೆ, ಟನ್‌ಗೆ ಮೂರು, ನಾಲ್ಕು ಸಾವಿರ ಅಂತಿಟ್ಟುಕೊಂಡರೂ ತಿಂಗಳಿಗೆ 60 ಸಾವಿರ ಆದಾಯವಾಗುತ್ತದೆ.  ಕಸದಿಂದ ರಸ ತೆಗೆಯುವುದು ಅಂದರೆ ಹೀಗೇ ಅಲ್ಲವೇ? 

 ಮಧುಗಿರಿ ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next