Advertisement

ಮಡಿಕೇರಿ: ಕೇಂದ್ರದ ವಿರುದ್ಧ ಮಹಿಳಾ ಕಾಂಗ್ರೆಸ್‌ ಪ್ರತಿಭಟನೆ

10:21 PM Feb 19, 2020 | Sriram |

ಮಡಿಕೇರಿ: ಅಡುಗೆ ಅನಿಲದ ಸಹವಾಸ ಬೇಡವೆಂದು ಸೌದೆಯಲ್ಲೇ ಅಡುಗೆ ಮಾಡಿದರು, ಖಾಲಿ ಸಿಲಿಂಡರ್‌ ಗಳನ್ನು ಜಿಲ್ಲಾಡಳಿತದ ಭವನಕ್ಕೆ ತಂದರು. ಕೇಂದ್ರ ಸರ್ಕಾರದ ವಿರುದ್ಧ ಮಹಿಳೆಯರು ಘೋಷಣೆಗಳನ್ನು ಕೂಗಿದರು.

Advertisement

ಹೀಗೆ, ಅಡುಗೆ ಅನಿಲದ ಬೆಲೆಯನ್ನು ದುಬಾರಿ ಮಾಡಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ಸಿಗರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಹಿಳಾ ಕಾರ್ಯಕರ್ತರು ಸೌದೆ ಒಲೆಯಲ್ಲಿ ಕಾಫಿ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಮಹಿಳಾ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷೆ ಡಾ.ಪುಷ್ಪ ಅಮರನಾಥ್‌, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ದೊಡ್ಡ ಭರವಸೆಗಳೊಂದಿಗೆ ಅಧಿಕಾರಕ್ಕೆ ಬಂದು, ಉತ್ತಮ ಆಡಳಿತ ನೀಡುವ ವಿಶ್ವಾಸ ಮೂಡಿಸಿದಂತೆ ಮಾಡಿ ಈಗ ಶ್ರೀಮಂತರ ಪರವಾದ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರ ಆಳ್ವಿಕೆಯ ಸಂದರ್ಭ ಜನಸಮಾನ್ಯರಿಗೆ ಕಡಿಮೆ ದರದಲ್ಲಿ ಅಡುಗೆ ಅನಿಲ ವಿತರಣೆಯಾಗುತ್ತಿತ್ತು. ಮಹಿಳೆಯರು ನೆಮ್ಮದಿಯಿಂದ ಜೀವನ ಸಾಗಿಸುವ ವಾತಾವರಣ ದೇಶದಲ್ಲಿ ಸೃಷ್ಟಿಯಾಗಿತ್ತು. ಆದರೆ ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೈಲೋತ್ಪನ್ನಗಳು ಮಾತ್ರವಲ್ಲದೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಲೇ ಬರುತ್ತಿದ್ದು, ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸಂಸದರ ವಿರುದ್ಧ ಅಸಮಾಧಾನ
ಎರಡು ಭಾರಿ ಕೊಡಗನ್ನು ಪ್ರತಿನಿಧಿಸಿದ ಸಂಸದ ಪ್ರತಾಪ್‌ ಸಿಂಹ ಅವರು ಚುನಾವಣೆ ಸಂದರ್ಭ ಮತಗಳಿಕೆಗಾಗಿ ತೋರಿದ ಕಾಳಜಿಯನ್ನು ಈಗ ತೋರುತ್ತಿಲ್ಲ. ಗೆದ್ದು ಬಂದ ನಂತರ ಜಿಲ್ಲೆಯ ಜನರ ಸಮಸ್ಯೆಗಳನ್ನು ಆಲಿಸಲು ತಿರುಗಿಯೂ ನೋಡುತ್ತಿಲ್ಲವೆಂದು ಡಾ.ಪುಷ್ಪ ಅಮರನಾಥ್‌ ಟೀಕಿಸಿದರು. ನೆರೆ ಸಂತ್ರಸ್ತರು ಮನೆಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದು, ಬಿಜೆಪಿಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ ತಪ್ಪಿಗೆ ಇಂದು ಕಣ್ಣೀರು ಹಾಕಿಕೊಂಡು ಬೀದಿಯಲ್ಲಿ ಪ್ರತಿಭಟನೆ ನಡೆಸಬೇಕಾದ ದುಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದರು.ಜಿಲ್ಲಾಡಳಿತ ಮಳೆಗಾಲಕ್ಕೂ ಮೊದಲು ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ಕಲ್ಪಿಸಬೇಕು, ಜಿಲ್ಲಾಡಳಿತಕ್ಕೆ ಸರಕಾರ ಅಗತ್ಯ ಸಹಕಾರವನ್ನು ನೀಡಬೇಕು. ತಪ್ಪಿದಲ್ಲಿ ಮಹಿಳಾ ಕಾಂಗ್ರೆಸ್‌ ವತಿಯಿಂದ ಸಂತ್ರಸ್ತರ ಪರವಾದ ಹೋರಾಟ ತೀವ್ರಗೊಳ್ಳಲಿದೆ ಎಂದು ಡಾ| ಪುಷ್ಪಾ ಅಮರನಾಥ್‌ ಎಚ್ಚರಿಕೆ ನೀಡಿದರು.

ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿತ
ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್‌ ಕುಮಾರ್‌ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಅನಂತರ ದೇಶದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಕುಸಿದು ಹೋಗಿದೆ. ಮತ್ತೂಂದೆಡೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡವರು, ಶ್ರೀಮಂತರು ಎಂಬ ತಾರತಮ್ಯದ ಕಂದಕವನ್ನು ದೊಡ್ಡದು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆ ಯುಪಿಎ ನೇತೃತ್ವದ ಸರ್ಕಾರವಿದ್ದಾಗ ದೇಶದಲ್ಲಿ ಆರ್ಥಿಕ ಸ್ವಾತಂತ್ರ್ಯವಿತ್ತು, ಜನರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತಿತ್ತು, ಆದರೆ ಇಂದು ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಆರ್ಥಿಕ ಪದ್ಧತಿ ಮತ್ತು ಅರ್ಥಹೀನ ನಿಯಮಗಳನ್ನು ಜಾರಿಗೆ ತರುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಅರಾಜಕತೆಯನ್ನು ಮೂಡಿಸುತ್ತಿದೆ ಎಂದು ಮಂಜುನಾಥ್‌ ಕುಮಾರ್‌ ಟೀಕಿಸಿದರು.

ಮಹಿಳಾ ಕಾಂಗ್ರೆಸ್‌ನ ರಾಜ್ಯ ಉಪಾಧ್ಯಕ್ಷೆ ಪುಷ್ಪವಲ್ಲಿ, ಕೆಪಿಸಿಸಿ ಮುಖಂಡರಾದ ಕೆ.ಪಿ.ಚಂದ್ರಕಲಾ, ತಾರಾಯ್ಯಮ್ಮ, ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್‌, ಪ್ರಧಾನ ಕಾರ್ಯದರ್ಶಿ ಮಿನಾಜ್‌ ಪ್ರವೀಣ್‌, ಜಿ.ಪಂ. ಸದಸ್ಯೆ ಸುನೀತ ಮಂಜುನಾಥ್‌, ಮಡಿಕೇರಿ ನಗರ ಅಧ್ಯಕ್ಷೆ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ, ವಿರಾಜಪೇಟೆ ಬ್ಲಾಕ್‌ ಅಧ್ಯಕ್ಷೆ ಪೊನ್ನಕ್ಕಿ, ಸೋಮವಾರಪೇಟೆ ಬ್ಲಾಕ್‌ ಅಧ್ಯಕ್ಷೆ ಶೀಲಾ ಡಿಸೋಜ, ಮಹಿಳಾ ಘಟಕದ ಕಾರ್ಯಕಾರಿ ಸಮಿತಿಯ ಅಧ್ಯಕ್ಷೆ ಫೀಲೋಮಿನ, ಸೇವಾದಳದ ಅಧ್ಯಕ್ಷೆ ಪ್ರೇಮಾ ಕೃಷ್ಣಪ್ಪ, ಜಿಲ್ಲಾ ಕಾಂಗ್ರೆಸ್‌ ವಕ್ತಾರ ಟಿ.ಈ.ಸುರೇಶ್‌, ನಗರಸಭಾ ಮಾಜಿ ಅಧ್ಯಕ್ಷೆ ಜುಲೇಕಾಬಿ, ಸಾಮಾಜಿಕ ಜಾಲತಾಣದ ಮಹಿಳಾ ಅಧ್ಯಕ್ಷೆ ಕೈರುನ್ನಿಸಾ, ಡಿಸಿಸಿ ಸದಸ್ಯೆ ಗೀತಾ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್‌, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ.ಉಸ್ಮಾನ್‌, ರಾಜೀವ್‌ಗಾಂಧಿ ಪಂಚಾಯತ್‌ ರಾಜ್‌ ಅಧ್ಯಕ್ಷ ತೆನ್ನಿರಮೈನಾ, ನಗರ ಯುವ ಕಾಂಗ್ರೆಸ್‌ ಅಧ್ಯಕ್ಷ ಸದಾಮುದ್ದಪ್ಪ, ನಗರ ಪ್ರಧಾನ ಕಾರ್ಯದರ್ಶಿ ಆರ್‌.ಪಿ.ಚಂದ್ರಶೇಖರ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next