Advertisement

ಮಧುಕರ ಶೆಟ್ಟಿ ಸಾವು ಸಂಭ್ರಮಿಸುವವರೂ ಇದ್ದಾರೆ!

06:52 AM Jan 07, 2019 | |

ಬೆಂಗಳೂರು: ಐಪಿಎಸ್‌ ಅಧಿಕಾರಿ ಡಾ.ಮಧುಕರ ಶೆಟ್ಟಿ ಅವರ ಸಾವನ್ನು ಕೂಡ ಸಂಭ್ರಮಿಸುವ ಅಧಿಕಾರಿಗಳು ಆಡಳಿತ ವ್ಯವಸ್ಥೆಯಲ್ಲಿ ಮತ್ತು ರಾಜಕೀಯದಲ್ಲಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಬಂಟರ ಸಂಘ ಭಾನುವಾರ ವಿಜಯನಗರದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಭವನದಲ್ಲಿ ಆಯೋಜಿಸಿದ್ದ ಡಾ.ಮಧುಕರ ಶೆಟ್ಟಿ ಅವರಿಗೆ “ನುಡಿ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧುಕರ ಶೆಟ್ಟಿ ಸಾವಿನಿಂದ ತಾವು ಬಚಾವಾಗಿದ್ದೇವೆ. ಇನ್ಯಾವ ಕಂಟಕಗಳೂ ತಮಗಿಲ್ಲ ಎಂದು ಖುಷಿ ಪಡುವ ವ್ಯಕ್ತಿಗಳು ಸಮಾಜದಲ್ಲಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ದಕ್ಷ, ಪ್ರಾಮಾಣಿಕ ಅಧಿಕಾರಿ ಮಧುಕರ ಶೆಟ್ಟಿ ಅವರನ್ನು 2-3 ತಿಂಗಳಿಗೊಮ್ಮೆ ವರ್ಗಾವಣೆ ಮಾಡುತ್ತಿದ್ದುದಲ್ಲದೆ, ರಾಜ್ಯಪಾಲರ ಎಡಿಸಿಯಾಗಿ ನೇಮಕ ಮಾಡಿದ್ದರು. ಅಂತಹ ವರ್ಗಾವಣೆಗಳನ್ನು ಸಹಿಸಿಕೊಂಡೇ ಅವರು ಇಲಾಖೆ ಮತ್ತು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಕೆಲ ನಿವೇಶನಗಳನ್ನು ಅಲ್ಲಿನ ಮಾಲೀಕರನ್ನು ಬೆದರಿಸಿ ಸಚಿವರೊಬ್ಬರು ಅವುಗಳನ್ನು ಕಬಳಿಸಲು ಮುಂದಾಗಿದ್ದರು. ಈ ಮಾಹಿತಿ ಪಡೆದ ಮಧುಕರ ಶೆಟ್ಟಿ ಪ್ರಕರಣ ದಾಖಲಿಸಿಕೊಂಡು ಸಚಿವ ಹಾಗೂ ಅವರ ಪುತ್ರನನ್ನು ಜೈಲಿಗೆ ಕಳುಹಿಸಿದ್ದರು. ಅಲ್ಲದೆ, ರಾಜ್ಯದ ಅಕ್ರಮ ಗಣಿಗಾರಿಕೆ ಬಯಲಿಗೆಳೆಯುವಲ್ಲಿ ಶೆಟ್ಟಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್‌ ಶೆಟ್ಟಿ ಅವರು ಮಾತನಾಡಿ, ಸಮಾಜಕ್ಕಾಗಿ ದುಡಿದ ಐಪಿಎಸ್‌ ಅಧಿಕಾರಿ ಮಧುಕರ ಶೆಟ್ಟಿ, ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುವಾಗ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದರು. ಅಂತಹ ಮತ್ತೂಬ್ಬ ಅಧಿಕಾರಿ ಸಿಗುವುದು ಕಷ್ಟ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಮಧುಕರ್‌ ಶೆಟ್ಟಿ ಹೆಸರಿನಲ್ಲಿ ಸಂಶೋಧನ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯ ತೆರೆಯುವಲ್ಲಿ ಬಂಟರ ಸಂಘ ಮುಂದಾಗಬೇಕು. ಇದಕ್ಕೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಗಿರೀಶ್‌ ಹೇಳಿದರು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯ ಉಮೇಶ್‌ ಶೆಟ್ಟಿ, ಗೌರವ ಕಾರ್ಯದರ್ಶಿ ಮಧುಕರ್‌ ಎಂ. ಶೆಟ್ಟಿ ಇತರರು ಇದ್ದರು.

ಅವರು ನಿವೇಶನಕ್ಕೆ ಅರ್ಜಿ ಹಾಕಲಿಲ್ಲ: ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್‌ ಮಾತನಾಡಿ, ಪ್ರೊಬೇಷನರಿ ಅವಧಿಯಿಂದಲೇ ಮಧುಕರ ಶೆಟ್ಟಿ ಆದರ್ಶವಾದಿಯಾಗಿದ್ದರು. ತಮ್ಮ 36 ವರ್ಷದ ಸೇವಾ ಅವಧಿಯಲ್ಲಿ ನೂರಾರು ಮಂದಿ ಐಪಿಎಸ್‌ ಅಧಿಕಾರಿಗಳ ಜತೆ ಕೆಲಸ ಮಾಡಿದ್ದೇನೆ. ಆದರೆ, ಮಧುಕರ ಶೆಟ್ಟಿ ನಡವಳಿಕೆ, ಮಾತುಗಳು ನನ್ನ ಮನಸ್ಸಿಗೆ ಹತ್ತಿರವಾಗಿತ್ತು.

ವೀರಪ್ಪನ್‌ ಕಾರ್ಯಾಚರಣೆ ಬಳಿಕ ನಿವೇಶನದ ಆಸೆಗಾಗಿ ಐಪಿಎಸ್‌ ಅಧಿಕಾರಿಗಳು ಸೇರಿ ಅನೇಕರು ನಾವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದೇವೆ ಎಂದು ನೂರಾರು ಅರ್ಜಿಗಳನ್ನು ಹಾಕಿದ್ದರು. ಆದರೆ, ಮಧುಕರ್‌ ಶೆಟ್ಟಿ ಇದ್ಯಾವುದನ್ನೂ ಬಯಸದೇ ಎಲ್ಲದರಿಂದ ದೂರು ಉಳಿದು ತಮ್ಮ ಕರ್ತವ್ಯಕ್ಕೆ ನಿಷ್ಠರಾಗಿದ್ದರು ಎಂದು ಸ್ಮರಿಸಿದರು. ಅಲ್ಲದೆ, ಮಧುಕರ ಶೆಟ್ಟಿ ನಕ್ಸಲರ ಮನಪರಿವರ್ತನೆಗೆ ಮುಂದಾಗಿದ್ದು, ಜತೆಗೆ ನಕ್ಸಲ್‌ ಕುರಿತ ಪುಸ್ತಕ ಕೂಡ ಬರೆದಿದ್ದರು. ಬಹುಶಃ ಆ ಪುಸ್ತಕ ಎಲ್ಲಿಯೂ ಪ್ರಕಟವಾದಂತಿಲ್ಲ ಎಂದು ಹೇಳಿದರು.

ಮಧುಕರ ಶೆಟ್ಟಿ ಹೆಸರಿನಲ್ಲಿ ಪ್ರಶಸ್ತಿ: ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದ ಮಧುಕರ ಶೆಟ್ಟಿ ಹೆಸರಿನಲ್ಲಿ ಬಂಟರ ಸಂಘ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿದೆ ಎಂದು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಹೇಳಿದರು. ಪ್ರತಿ ವರ್ಷ ಪ್ರಾಮಾಣಿಕ ಪೊಲೀಸ್‌ ಅಧಿಕಾರಿಗಳನ್ನು ಗುರುತಿಸಿ ಅವರಿಗೆ “ಮಧುಕರ ಶೆಟ್ಟಿ’ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಹೆಡ್‌ ಕಾನ್‌ಸ್ಟೆಬಲ್‌ಗೆ ಕ್ಲಾಸ್‌!: ಮಧುಕರ ಶೆಟ್ಟಿ ಅವರ ಜತೆ ಕರ್ತವ್ಯ ನಿರ್ವಹಿಸಿದ ದಿನಗಳನ್ನು ನೆನೆದ ಕೇಂದ್ರ ಅಪರಾಧ ವಿಭಾಗದ ಡಿಸಿಪಿ ಎಸ್‌.ಗಿರೀಶ್‌, ಮಧುಕರ ಶೆಟ್ಟಿ ಅವರು ಸಂಚಾರ ಡಿಸಿಪಿಯಾಗಿದ್ದಾಗ ಹೆಡ್‌ಕಾನ್‌ಸ್ಟೆಬಲ್‌ ಒಬ್ಬರು ಕಡಲೇ ಕಾಯಿ ವ್ಯಾಪಾರಿಯಿಂದ 100 ರೂ. ಲಂಚ ಪಡೆಯುವುದನ್ನು ನೋಡಿದ್ದರು.

ಸಾರ್ವಜನಿಕವಾಗಿ ಅವಮಾನಿಸುವುದು ಬೇಡ ಎಂದು, ವ್ಯಾಪಾರಿ ಹಾಗೂ ಹೆಡ್‌ಕಾನ್‌ಸ್ಟೆàಬಲ್‌ನನ್ನು ತಮ್ಮ ಕಚೇರಿಗೆ ಕರೆಸಿಕೊಂಡು, ವಿಚಾರಣೆ ನಡೆಸಿದರು. ಕಡಲೇ ಕಾಯಿ ವ್ಯಾಪಾರಿ ಮಕ್ಕಳು ಕೂಲಿ ಮಾಡುತ್ತಿದ್ದರೆ, ಕಾನ್‌ಸ್ಟೆಬಲ್‌ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದರು. ದಿನದಲ್ಲಾಗುವ 500 ರೂ. ವಹಿವಾಟು ನೆಚ್ಚುಕೊಂಡು ವ್ಯಾಪಾರಿ ಜೀವನ ಸಾಗಿಸಿದರೆ, ಕಾನ್‌ಸ್ಟೆಬಲ್‌ಗೆ ಸಂಬಳವಿತ್ತು.

ಇದನ್ನು ಕಾನ್‌ಸ್ಟೆಬಲ್‌ಗೆ ತಿಳಿಸಿ ಬುದ್ಧಿ ಹೇಳಿದ ಮಧುಕರ್‌ ಶೆಟ್ಟಿ, ತಮ್ಮ ಪರ್ಸ್‌ನಿಂದ ನಲ್ಲಿದ್ದ 1,300 ರೂ. ಪೈಕಿ 800 ರೂ.ಗಳನ್ನು ವ್ಯಾಪಾರಿಗೆ ಕೊಟ್ಟು, ಇನ್ನೊಮ್ಮೆ ಯಾರಿಗೂ ಲಂಚ ಕೊಡಬೇಡ ಎಂದು ಸೂಚಿಸಿದರು. ಉಳಿದ 500 ರೂ.ಗಳನ್ನು ಹೆಡ್‌ಕಾನ್‌ಸ್ಟೆಬಲ್‌ಗೆ ನೀಡಿ ಲಂಚಕ್ಕೆ ಕೈಚಾಚದಂತೆ ಎಚ್ಚರಿಸಿದ್ದರು. ಇಂತಹ ಆದರ್ಶಗಳೊಂದಿಗೆ ಬದುಕಿದ ಅವರಲ್ಲಿ ಶೇ.1ರಷ್ಟು ತಪ್ಪನ್ನು ಗುರುತಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next