ಸೇಡಂ: ತಮ್ಮ 86ನೇ ಜನ್ಮದಿನ ಮತ್ತು ಗುರುಪೂರ್ಣಿಮೆ ನಿಮಿತ್ತ ಮಾತಾ ಮಾಣಿಕೇಶ್ವರಿ ಅಮ್ಮನವರು ಸಾವಿರಾರು ಭಕ್ತರಿಗೆ ದರ್ಶನ ನೀಡಿದರು.
ತಾಲೂಕಿನ ಯಾನಾಗುಂದಿ ಮಾಣಿಕ್ಯಗಿರಿ ಬೆಟ್ಟದಲ್ಲಿ ನೆಲೆಸಿರುವ ಮಾತಾ ಮಾಣಿಕೇಶ್ವರಿ ಅಮ್ಮನವರು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಬೆಟ್ಟದ ಹಿಂಬದಿ ಕಟ್ಟಡದ ಗ್ಯಾಲರಿಯಲ್ಲಿ ವ್ಹೀಲ್ಚೇರ್ ಸಹಾಯದಿಂದ ಆಗಮಿಸಿ ಭಕ್ತರಿಗೆ ದರ್ಶನ ನೀಡಿದರು.
ಮಧ್ಯಾಹ್ನ 1ರ ಸುಮಾರಿಗೆ ಮಾತಾ ಮಾಣಿಕೇಶ್ವರಿ ಅಮ್ಮನವರು ದರ್ಶನ ನೀಡುವುದಿಲ್ಲ. ವೀØಲ್ಚೇರ್ ಮೇಲೆ ಕೂರಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇದರಿಂದ ಭಕ್ತರಲ್ಲಿ ನಿರಾಸೆ ಮೂಡಿತ್ತು, ಅನೇಕ ಭಕ್ತರು ಹಿಂದಿರುಗಲು ಮುಂದಾಗಿದ್ದರು.
ನಂತರ ಕೆಲ ನಿಮಿಷಗಳಲ್ಲೇ ಅಮ್ಮ ದರ್ಶನ ನೀಡಲಿದ್ದಾರೆ ಎಂಬ ಸಂದೇಶ ಬಂದಿತು. ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಭಕ್ತರು ಅಮ್ಮನವರ ದರ್ಶನ ಪಡೆದರು. ಬೆಳಗ್ಗೆಯಿಂದಲೇ ಬೆಟ್ಟದ ತುಂಬೆಲ್ಲ ಓಂಕಾರ, ಜೈಕಾರಗಳು ಮೊಳಗುತ್ತಿದ್ದವು.
ಮಾತೆಗೆ ಜರ್ಮನ್ ವಾಟರ್ ಬೆಡ್: ಮಾತಾ ಮಾಣಿಕೇಶ್ವರಿ ಅಮ್ಮನವರ ಮುಕ್ತ ದರ್ಶನ ಭಕ್ತರಿಗೆ ದೊರೆಯಬೇಕು, ಅವರಿಗೆ ವೈದ್ಯರ ಸೇವೆ ಕಲ್ಪಿಸಬೇಕು ಮತ್ತು ಮಹಿಳಾ ಸೇವಕಿ ನೇಮಿಸುವಂತೆ ಸಾಮಾಜಿಕ ಕಾರ್ಯಕರ್ತ ಶಿವಕುಮಾರ ನಿಡಗುಂದಾ ಇತ್ತೀಚೆಗೆ ಹೈಕೋರ್ಟ್ ಮೆಟ್ಟಿಲೇರಿದ್ದರು. ನಂತರ ಮಾತಾ ಮಾಣಿಕೇಶ್ವರಿ ಅಮ್ಮನವರಿಗೆ ಜರ್ಮನ್ ತಂತ್ರಜ್ಞಾನದ ವಾಟರ್ ಬೆಡ್ ಸೌಕರ್ಯ ಕಲ್ಪಿಸಲಾಗಿತ್ತು. ಈಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ.
ಮಹಾಮೃತ್ಯುಂಜಯ ಹೋಮ: ಮಾತಾ ಮಾಣಿಕೇಶ್ವರಿ ಹುಟ್ಟೂರು ತಾಲೂಕಿನ ಮಲ್ಲಾಬಾದನಲ್ಲಿ ಎರಡು ದಿನಗಳಿಂದ ಮಾತಾ ಮಾಣಿಕೇಶ್ವರಿ ಅಮ್ಮನವರ ಆರೋಗ್ಯ ವೃದ್ಧಿಯಾಗಲಿ ಮತ್ತು ಭಕ್ತರಿಗೆ ದರ್ಶನ ನೀಡಲಿ ಎಂದು ಮಾತಾ ಮಾಣಿಕೇಶ್ವರಿ ಜನ್ಮಸ್ಥಳ ಸೇವಾ ಟ್ರಸ್ಟ್ ವತಿಯಿಂದ ಮಹಾಮೃತ್ಯುಂಜಯ ಹೋಮ ನಡೆಯುತ್ತಿದೆ.