Advertisement

ಮಗು ಕೊಂದ ಪ್ರಿಯಕರ!

11:02 PM May 05, 2019 | Team Udayavani |

ರಾಯಬಾಗ: ಪ್ರೀತಿ ಬಲೆಗೆ ಬಿದ್ದ ವಿವಾಹಿತ ಮಹಿಳೆ ತನ್ನ ಮಗುವಿನೊಂದಿಗೆ ಪ್ರಿಯಕರನ ಜತೆಗೆ ತೆರಳಿದ್ದಳು. ಆದರೆ ಪ್ರಿಯಕರ ತಾಯಿಯೊಂದಿಗೆ ಬಂದಿದ್ದ ನಾಲ್ಕು ವರ್ಷದ ಗಂಡು ಮಗುವನ್ನು ಕೊಲೆಗೈದ ಹೃದಯ ವಿದ್ರಾವಕ ಘಟನೆ ತಾಲೂಕಿನ ಯಡ್ರಾಂವ ಗ್ರಾಮದಲ್ಲಿ ನಡೆದಿದೆ.

Advertisement

ಮಹೇಶ ಅಶೋಕ ಬಾಗಡಿ (4) ಕೊಲೆಯಾದ ಮಗು. ಮಗುವಿನ ತಾಯಿ ಲಕ್ಷ್ಮೀ ಬಾಗಡಿ ಮನೆಯಲ್ಲಿಲ್ಲದ ವೇಳೆ ಪ್ರಿಯಕರ ಪರಶುರಾಮ ಜಾಧವ ಮಗುವನ್ನು ಲಟ್ಟಣಿಗೆಯಿಂದ ಹೊಡೆದು ಕೊಲೆಗೈದಿದ್ದಾನೆ. ನಂತರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ನಾಟಕವಾಡಿ ಪರಾರಿಯಾಗಿದ್ದಾನೆ.

18 ವರ್ಷದ ಹಿಂದೆ ಚಿಕ್ಕಪಡಸಲಗಿ ಗ್ರಾಮದ ಲಕ್ಷ್ಮೀ ಜತೆ ರಾಯಬಾಗ ಪಟ್ಟಣದ ಭೀಮ ನಗರದ ವಾಸಿ ಅಶೋಕ ಬಾಗಡಿ ಅವರ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳಿದ್ದಾರೆ. ಅಶೋಕ ಬಾಗಡಿ ಕುಟುಂಬ ಕಾಗದ, ಕಬ್ಬಿಣ ತುಂಬುವ ಕೆಲಸ ಮಾಡುತ್ತಿದ್ದು, ಈತನ ಪತ್ನಿ ಲಕ್ಷ್ಮೀ ಬಟ್ಟೆ, ಪಾತ್ರೆ ವ್ಯಾಪಾರ ಮಾಡುತ್ತಿದ್ದಳು.

ಈ ವೇಳೆ ತಾಲೂಕಿನ ಶಾಹುಪಾರ್ಕ್‌ ಗ್ರಾಮದ ಪರಶುರಾಮ ಜಾಧವನ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿದೆ. ವಯಸ್ಸಿನಲ್ಲಿ ಲಕ್ಷ್ಮೀಗಿಂತ 5 ವರ್ಷ ಚಿಕ್ಕವನಾದ ಪರಶುರಾಮ ಈಕೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಾನೆ.

ಈ ವಿಷಯ ಲಕ್ಷ್ಮೀ ಪತಿ ಅಶೋಕ ಬಾಗಡಿಗೆ ಗೊತ್ತಾದ ನಂತರ ಕಾನೂನ ಬಾಹಿರವಾಗಿ ವಿಚ್ಛೇದನ ನೀಡಿದ್ದೆನೆಂದು ಬಾಂಡ್‌ ಬರೆದುಕೊಟ್ಟು ಕೊನೆಯ ಮಗ ಮಹೇಶನೊಂದಿಗೆ ಪ್ರಿಯಕರ ಪರಶುರಾಮನ ಜೊತೆ ತಾಲೂಕಿನ ಯಡ್ರಾಂವ ಗ್ರಾಮದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದಳು. ಮಗು ಕರೆದುಕೊಂಡು ಬಂದಿದ್ದು ಪರಶುರಾಮನಿಗೆ ಇಷ್ಟವಾಗಿರಲಿಲ್ಲ.

Advertisement

ಮಗುವನ್ನು ಅವನ ಅಪ್ಪನ ಜೊತೆ ಬಿಟ್ಟು ಬರುವಂತೆ ಪದೇ ಪದೆ ಪೀಡಿಸುತ್ತಿದ್ದ. ಇದಕ್ಕೆ ಲಕ್ಷ್ಮೀ ಒಪ್ಪದ ಕಾರಣ ಲಟ್ಟಣಿಗೆಯಿಂದ ಮಗುವಿಗೆ ಹೊಡೆದು ಕೊಲೆ ಮಾಡಿದ್ದಾನೆ.
ಈ ಕುರಿತು ರಾಯಬಾಗ ಠಾಣೆಯಲ್ಲಿ ದೂರು ದಾಖಲಾಗಿದೆ. ಪರಾರಿಯಾಗಿದ್ದ ಪರಶುರಾಮ ಜಾಧವ ಹಾಗೂ ಲಕ್ಷ್ಮೀ ಬಾಗಡಿ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಯಾರದೋ ತಪ್ಪಿಗೆ ಏನೂ ಅರಿಯದ ಪುಟ್ಟ ಕಂದಮ್ಮ ಮಹೇಶನನ್ನು (ನನ್ನ ಮೊಮ್ಮಗ) ಕೊಲೆ ಮಾಡಿರುವ ಪರಶುರಾಮ ಜಾಧವನಿಗೆ ಗಲ್ಲು ಶಿಕ್ಷೆ ನೀಡಬೇಕು. ಆಗ ಮಾತ್ರ ನಮಗೆ ನೆಮ್ಮದಿ ಸಿಗುತ್ತದೆ.
-ಅಕ್ಕತಾಯಿ ಬಾಗಡಿ, ಕೊಲೆಯಾದ ಮಹೇಶನ ಅಜ್ಜಿ

Advertisement

Udayavani is now on Telegram. Click here to join our channel and stay updated with the latest news.

Next